ಗೋಲ್ಡನ್ ಸ್ಟಾರ್ ಗಣೇಶ್ ಈಗ ಹೊಸ ಆಟೋರಾಜ
ಅವರ ಹೆಸರಿನಲ್ಲಿ ಈಗಾಗಲೆ ಹಲವಾರು ಚಿತ್ರಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಹಿಂದೆ ಅನಿಮೇಷನ್ನಲ್ಲಿ ಪ್ರವಾದಿ, ಕರವೇಲ ಚಿತ್ರಗಳು ನಿರ್ಮಿಸಲಾಗಿತ್ತು. ನಿಮ್ಮ ಶಂಕರ್ ನಾಗ್, ಶಂಕರ್ ನಾಗ್ ಸರ್ಕಲ್ ಎಂಬ ಚಿತ್ರಗಳೂ ಸೆಟ್ಟೇರಿದ್ದವು. ಶಂಕರ್ ನಾಗ್ ಅಭಿನಯದ ಅಮೋಘ ಚಿತ್ರಗಳಲ್ಲಿ ಒಂದಾದ 'ಆಟೋ ರಾಜ' ಚಿತ್ರ ಈಗ ಮತ್ತೆ ನಿರ್ಮಿಸಲಾಗುತ್ತಿದೆ.
ಈ ಹೊಸ 'ಆಟೋ ರಾಜ'ನಿಗೆ ಅಜಯ್ ರಾವ್ ನಾಯಕ ನಟ ಎಂದು ಈ ಹಿಂದೆ ಘೋಷಿಸಲಾಗಿತ್ತು. ಆದರೆ ಅಜಯ್ ರಾವ್ ಡೇಟ್ಸ್ ಹೊಂದಾಣಿಕೆಯಾಗುತ್ತಿಲ್ಲ ಎಂಬ ಕಾರಣ ನೀಡಿ ಚಿತ್ರದಿಂದ ಹೊರಬಿದ್ದಿದ್ದಾರೆ. ಹೊಸ 'ಆಟೋ ರಾಜ'ನಾಗಿ ಗೋಲ್ಡನ್ ಸ್ಟಾರ್ ಗಣೇಶ್ ಅವರನ್ನು ಕರೆತರಲು ಚಿತ್ರದ ನಿರ್ಮಾಪಕರು ಮುಂದಾಗಿದ್ದಾರೆ.
ಗೋಲ್ಡನ್ ಸ್ಟಾರ್ ಗಣೇಶ್ ಚಿತ್ರಕ್ಕೆ ಓಕೆ ಎನ್ನುವುದೊಂದು ಬಾಕಿ ಇದೆ. ಒಂದು ವೇಳೆ ಗಣೇಶ್ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟರೆ ಇನ್ನು ಮುಂದೆ ಆಟೋ ಚಾಲಕರ ಶಂಕರ್ ನಾಗ್ ಫೋಟೋ ಪಕ್ಕದಲ್ಲಿ ಗಣೇಶ್ ಫೋಟೋವನ್ನೂ ಸೇರಿಸಿಕೊಳ್ಳಬಹುದು. ಆದರೆ ಅಜಯ್ ರಾವ್ ಹೀಗೆ ಏಕಾಏಕಿ ಕೈ ಎತ್ತಿದ್ದು ಯಾಕೆ ಎಂಬ ಪ್ರಶ್ನೆ ಕಾಡುತ್ತಿದೆ.
ಯೋಗಿ, ಕಳ್ಳ ಮಳ್ಳ ಸುಳ್ಳ' ಖ್ಯಾತಿಯ ಉದಯ್ ಪ್ರಕಾಶ್ ಅವರು 'ಆಟೋ ರಾಜ' ಪಾತ್ರಕ್ಕೆ ಹೀರೋ ಹೆಸರನ್ನು ಸೂಚಿಸಲು ಕೋರಿದ್ದರು. ಪ್ರೇಕ್ಷಕರು ಒಕ್ಕೊರಲಿನಿಂದ ಅಜಯ್ ರಾವ್ ರನ್ನು ಆಯ್ಕೆ ಮಾಡಿದ್ದರು. ಅಜಯ್ ಕೂಡ ಆಟೋ ರಾಜನಾಗಲು ತಮ್ಮ ಸಂಪೂರ್ಣ ಒಪ್ಪಿಗೆಯನ್ನು ಕೊಟ್ಟಿದ್ದರು. ಆದರೆ ಈಗ ಡೇಟ್ಸ್ ಕಾರಣ ನೀಡಿ ಆಗಲ್ಲ ಎಂದಿರುವುದು ಅಚ್ಚರಿ ಮೂಡಿಸಿದೆ.
ಇಡೀ ಕನ್ನಡ ಚಿತ್ರರಂಗದಲ್ಲಿ ಆ ಪಾತ್ರವನ್ನು ಮತ್ತೆ ಮಾಡುವುದಿದ್ದರೆ, ಅದು ಅಜಯ್ರಿಂದ ಮಾತ್ರ ಅಂತ ತೀರ್ಪು ಹೊರಬಿದ್ದಿತ್ತು. ಇದರಿಂದ ಸಾಕಷ್ಟು ಖುಷಿ ಹೆಚ್ಚಿಸಿಕೊಂಡಿದ್ದ ಅಜಯ್ ತಮ್ಮ ಮೇಲಿರುವ ಜವಾಬ್ದಾರಿ ಹೆಚ್ಚಾಗಿದೆ. "ಇದಕ್ಕೆ ಖಂಡಿತವಾಗಿಯೂ ನ್ಯಾಯ ಸಲ್ಲಿಸುವ ಭರವಸೆ ನನ್ನಲ್ಲಿದೆ" ಅಂತ ಇಷ್ಟುದ್ದ ಹೇಳಿಕೊಂಡಿದ್ದರು ಅಜಯ್.
ಇದೇ ಸಂದರ್ಭದಲ್ಲಿ ಚಿತ್ರದ ನಿರ್ಮಾಪಕರು ಗಿರೀಶ್ ಮತ್ತು ವಿಶ್ವ ತಮ್ಮ ಚಿತ್ರದ ಹೀರೋನ ಆಯ್ಕೆಮಾಡಿದವರಿಗೆ ಸೈಟ್ ಕೊಡಲಾಗುತ್ತದೆ ಎಂದಿದ್ದರು. ಅದರಂತೆ ಒಟ್ಟು ಸ್ಪರ್ಧಿಗಳಲ್ಲಿ ಚೀಟಿ ಎತ್ತುವ ಮೂಲಕ ಅದೃಷ್ಟಶಾಲಿಯನ್ನು ಪತ್ರಿಕಾಗೋಷ್ಠಿಯಲ್ಲಿ ಆಯ್ಕೆ ಮಾಡಿದರು. ಕುಮಾರಿ ಮಂಜುಳಾ ಎಂಬುವವರು ಲಕ್ಕಿ ಡಿಪ್ನಲ್ಲಿ ಆಯ್ಕೆಯಾಗಿದ್ದು ಅವರ ಹೆಸರಿಗೆ 30X40 ನಿವೇಶನವನ್ನು ಹಸ್ತಾಂತರಿಸಲಾಯಿತು.
ವಿಚಿತ್ರವೆಂದರೆ ಶಂಕರ್ ನಾಗ್ ಮೇಲೆ ಬಂದಂತಹ ಚಿತ್ರಗಳು ಇದುವರೆಗೂ (ಆಟೋ ಶಂಕರ್) ತೆರೆಯ ಮೇಲೆ ಬಂದಿಲ್ಲ. ಸ್ಯಾನ್ ವಿಶನ್ಸ್ ಸಂಸ್ಥೆ ಮೂಲಕ ನಿರ್ಮಾಣಗೊಳ್ಳುತ್ತಿರುವ ಈ ಚಿತ್ರ ಹಾಗಾಗದಿರಲಿ ಎಂದು ಆಶಿಸೋಣ. ಜೈ ಶಂಕರ್ ನಾಗ್ ಜೈ ಕರ್ನಾಟಕ ಮಾತೆ. (ಒನ್ಇಂಡಿಯಾ ಕನ್ನಡ)


Click it and Unblock the Notifications












