ಮಗನ ಮದುವೆ ಕರೆಯೋಲೆಯಲ್ಲಿದೆ ಜನತೆಗೆ ಕುಮಾರಸ್ವಾಮಿ ಬರೆದಿರುವ ಸುದೀರ್ಘ ಪತ್ರ.!
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮೊಮ್ಮಗ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಗ ನಿಖಿಲ್ ಮದುವೆ ಫಿಕ್ಸ್ ಆಗಿದೆ. ಬೆಂಗಳೂರಿನ ವಿಜಯನಗರದ ಕಾಂಗ್ರೆಸ್ ಶಾಸಕ ಕೃಷ್ಣಪ್ಪ ಅವರ ಸಂಬಂಧಿ ರೇವತಿ ಜೊತೆಗೆ ನಿಖಿಲ್ ಕಲ್ಯಾಣ ನಡೆಯಲಿದೆ.
ಏಪ್ರಿಲ್ 17 ರಂದು ಬೆಂಗಳೂರು-ಮೈಸೂರು ರಸ್ತೆಯಲ್ಲಿರುವ ಜಾನಪದ ಲೋಕದ ಹತ್ತಿರ ಸಪ್ತಪದಿ ಮಂಟಪದಲ್ಲಿ ನಿಖಿಲ್-ರೇವತಿ ವಿವಾಹ ಮಹೋತ್ಸವ ಜರುಗಲಿದೆ. ಮದುವೆಗೆ ಒಂದುವರೆ ತಿಂಗಳು ಮಾತ್ರ ಉಳಿದಿದ್ದು, ಭರ್ಜರಿ ಸಿದ್ಧತೆಯಲ್ಲಿ ಕುಟುಂಬಸ್ಥರು ತೊಡಗಿದ್ದಾರೆ.
ಸದ್ಯ ನಿಖಿಲ್-ರೇವತಿ ಮದುವೆಯ ಕರೆಯೋಲೆ ತಯಾರಾಗಿದ್ದು, ಮದುವೆಗೆ ಆಮಂತ್ರಣ ನೀಡುವ ಕೆಲಸಕ್ಕೆ ಎಚ್.ಡಿ.ಕುಮಾರಸ್ವಾಮಿ ಚಾಲನೆ ಕೊಟ್ಟಿದ್ದಾರೆ. ತುಂಬಾ ಸಿಂಪಲ್ ಆಗಿರುವ ನಿಖಿಲ್-ರೇವತಿ ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ನಾಡಿನ ಜನತೆಗೆ ಎಚ್.ಡಿ.ಕುಮಾರಸ್ವಾಮಿ ಬರೆದಿರುವ ಸುದೀರ್ಘ ಪತ್ರ ಕೂಡ ಇದೆ. ಪತ್ರದ ಮುಖಾಂತರ ಮಗನ ಮದುವೆಗೆ ನಾಡಿನ ಜನರನ್ನು ಎಚ್.ಡಿ.ಕುಮಾರಸ್ವಾಮಿ ಆತ್ಮೀಯವಾಗಿ ಆಹ್ವಾನಿಸಿದ್ದಾರೆ.
ಪತ್ರದ ಮೂಲಕ ಎಚ್.ಡಿ.ಕುಮಾರಸ್ವಾಮಿ ಬರೆದಿರುವ ಸಾಲುಗಳು ಇಲ್ಲಿವೆ...

ಪತ್ರದಲ್ಲಿ ಏನಿದೆ.?
ನನ್ನ ಪ್ರೀತಿಯ ಎಲ್ಲರಿಗೂ ಸಪ್ರೇಮ ನಮಸ್ತೆ,
ನಿಮಗೊಂದು ಪ್ರೀತಿಯ ಕರೆಯೋಲೆ,
ನಾನು ಹುಟ್ಟಿದ್ದು ಹಾಸನ ಜಿಲ್ಲೆಯಲ್ಲಿ. ರಾಜಕೀಯವಾಗಿ ಹರಸಿ, ಆಶೀರ್ವದಿಸಿ, ರಾಜಕೀಯವಾಗಿ ಪುನರ್ಜನ್ಮ ನೀಡಿದವರು ನಾಡಿನ ಜನತೆ. ವಿಶೇಷವಾಗಿ ರಾಮನಗರ ಜಿಲ್ಲೆಯ ತಂದೆ-ತಾಯಂದಿರು, ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರು. ನಿಮಗೆಲ್ಲ ನಾನು ಮತ್ತು ನಮ್ಮ ಕುಟುಂಬ ಸದಾ ಋಣಿ. ರಾಜಕೀಯ ನನಗೊಂದು ಆಕಸ್ಮಿಕವಾಗಿ ಸಿಕ್ಕ ಬದುಕು. ಅದನ್ನು ನೀವು ಸಾಕಿ ಸಲಹುತ್ತಾ ಬಂದಿರುವ ನಿಮ್ಮಗಳ ಪ್ರೀತಿ ಸದಾ ಕೃತಜ್ಞತೆಯಿಂದ ಸ್ಮರಿಸುವಂತದ್ದು. ಈ ನಾಡಿನ ಜನರಿಂದ ಪಡೆದ ಅಧಿಕಾರ, ಗೌರವಗಳನ್ನು ನಿಮಗಾಗಿಯೇ ಸಮರ್ಪಿಸುತ್ತಾ ಬಂದಿದ್ದೇನೆ. ಅದರ ಹಕ್ಕು ರಾಜರು ನೀವೇ ಆಗಿರುತ್ತೀರಾ.

ನಿಮ್ಮ ವಿವೇಚನೆಗೆ ಬಿಟ್ಟಿದ್ದು
ರಾಜಕೀಯ ಬದುಕಿನಲ್ಲಿ ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗುವ ಸೌಭಾಗ್ಯ ನಾಡಿನ ಜನತೆಯ ಮನೋಭಿಲಾಷೆಯಂತೆ ನನಗೆ ದಕ್ಕಿದ್ದು ನಿಮ್ಮಗಳ ಆಶೀರ್ವಾದದ ಫಲ. ಮುಖ್ಯಮಂತ್ರಿಯಾಗಿದ್ದುಕೊಂಡು ಸಾಮಾನ್ಯನಂತೆ ಬದುಕುವುದನ್ನು ಮರೆಯಲಿಲ್ಲ. ಅಸಹಾಯಕರು ಮತ್ತು ಬಡವರ ಬದುಕಿನ ಕಷ್ಟ-ಕಾರ್ಪಣ್ಯಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಆತ್ಮಸಾಕ್ಷಿಯಂತೆ ನಡೆದುಕೊಂಡಿದ್ದೇನೆ. ಇದನ್ನು ನನ್ನ ಆತ್ಮಬಲವೂ ದೌರ್ಬಲ್ಯವೂ ಎಂದು ಭಾವಿಸುವಲ್ಲಿ ಹಿಂಜರಿಕೆ ಇಲ್ಲ. ತನ್ನಂತೆಯೇ ಇರುವ ಮನುಷ್ಯರು ಕಷ್ಟ ಕೋಟಲೆಗಳಿಂದ ಕೊರಗುವುದ ಕಂಡಾಗ ನನ್ನ ಕರುಳು ಮಿಸುಕಾಡುತ್ತದೆ. ಹೀಗಾಗಿಯೇ ನನ್ನ ಪದವಿ, ಸ್ಥಾನ-ಮಾನ, ಸಂದರ್ಭಗಳ ಲೆಕ್ಕಿಸದೆ ಮತ್ತೆ ಮತ್ತೆ ನನ್ನ ಕಣ್ಣುಗಳು ನೀರಾಗಿ ಬಿಡುತ್ತವೆ. ಜನರಿಗಾಗಿ ಮಿಡಿದ ನನ್ನ ಪಾಲಿನ ಕರ್ತವ್ಯದಲ್ಲಿ ಎಷ್ಟು ಸಫಲ, ಎಷ್ಟು ವಿಫಲ ಎಂಬುದು ನಿಮ್ಮ ವಿವೇಚನೆಗೆ ಬಿಟ್ಟಿದ್ದು.

ನೋವು ಕಾಡುತ್ತಿದೆ
ಎರಡು ಸಲವೂ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿ ಆಗಿದ್ದರಿಂದ ನನ್ನ ಹೆಬ್ಬಯಕೆಯಂತೆ ಜನಸಾಮಾನ್ಯನ ದುಃಖ ದುಮ್ಮಾನಗಳಿಗೆ ಗರಿಷ್ಠ ಮಟ್ಟದಲ್ಲಿ ಸ್ಪಂದಿಸಲು ಆಗಲಿಲ್ಲವೆಂಬ ನೋವು ಎರಡು ಬಾರಿ ಹೃದಯ ಚಿಕಿತ್ಸೆಗೆ ಒಳಗಾದ ನನ್ನನ್ನು ಈಗಲೂ ಕಾಡುತ್ತಿದೆ. ನನ್ನನ್ನು ಕಂಡರೆ ಅದ್ಯಾಕೋ ಪಕ್ಷಾತೀತವಾಗಿ ಜನಸಾಮಾನ್ಯರು ಬಲು ಇಷ್ಟಪಡುತ್ತಾರೆ. ಪ್ರೀತಿ ಎಂಬುದನ್ನು ದಕ್ಕಿಸಿಕೊಳ್ಳಲು ಪ್ರೀತಿಯನ್ನಷ್ಟೇ ಧರಿಸಿದಾಗ ಮಾತ್ರ ಸಾಧ್ಯ. ಕರುಣೆ ಸ್ನೇಹದ ಮನೋಗತವೇ ನಾನು ಸಾಮಾನ್ಯನೊಳಗೆ ಸಾಮಾನ್ಯನಂತೆ ಬದುಕಲು ಸಾಧ್ಯವಾಯಿತೇನೋ ಎಂಬ ತೃಪ್ತಿ ಇದೆ. ಈ ಬದುಕೆ ನನಗಿಷ್ಟ.

ಅಪೂರ್ವ ಸಂದರ್ಭ ಕೂಡಿ ಬಂದಿದೆ
ಈ ನಾಡಿನ ನಿಮ್ಮೆಲ್ಲರ ಪ್ರೀತಿಯನ್ನು ಕಣ್ತುಂಬಿಕೊಳ್ಳಲು, ಅದರೊಳಗೆ ಮಿಂದು ಮಗುವಾಗಲು ಅಪೂರ್ವವಾದ ಸಂದರ್ಭವೊಂದು ಕೂಡಿ ಬಂದಿದೆ. ಏಪ್ರಿಲ್ 17 ರಂದು ನನ್ನ ಮಗನ ವಿವಾಹ ರಾಮನಗರದಲ್ಲಿ ನಡೆಯಲಿದೆ. ಇದು ನಿಮ್ಮ'ಕುಮಾರಣ್ಣ'ನ ಮನೆಯ ಸಂಭ್ರಮ. ಈ ಸಮಾರಂಭದಲ್ಲಿ ನೀವಿದ್ದು, ನನ್ನ ಮಗ-ಸೊಸೆಯನ್ನು ಹರಸಿದರೆ, ನಿಮ್ಮ ಆ ಪ್ರೀತಿ ನನ್ನ ಹೃದಯವನ್ನು ಇನ್ನಷ್ಟು ಚೈತನ್ಯಪೂರ್ಣಗೊಳಿಸಲಿದೆ. ಇದನ್ನು ವೈಯುಕ್ತಿಕ ಆಮಂತ್ರಣ ಎಂದು ಪರಿಭಾವಿಸಿ, ನೀವು ಮತ್ತು ನಿಮ್ಮ ಕುಟುಂಬದವರು ಬರಲೇಬೇಕು. ಜತೆಯಲ್ಲೇ ಕೂತು ಊಟ ಮಾಡೋಣ. ಇದಕ್ಕಿಂತ ದೊಡ್ಡ ಸೌಭಾಗ್ಯ ನನಗೆ ಸಿಗಲ್ಲ. ನಿಮ್ಮ ಆಗಮನದ ನಿರೀಕ್ಷೆಯಲ್ಲಿ ನಿಮಗಾಗಿಯೇ ಕಾಯುತ್ತಿರುತ್ತೇನೆ.
ನಿಮ್ಮ ಮನೆ ಮಗ,
ಹೆಚ್.ಡಿ.ಕುಮಾರಸ್ವಾಮಿ


Click it and Unblock the Notifications











