ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾಕ್ಕೆ ಜಾಕ್ ಮಂಜು ಕೈ: ಇರಲಿದ್ದಾರೆ ಹಾಲಿವುಡ್ ನಟರು!
'ವಿಕ್ರಾಂತ್ ರೋಣ' ಸಿನಿಮಾದ ಯಶಸ್ಸಿನಿಂದ ಥ್ರಿಲ್ ಆಗಿದ್ದ ನಿರ್ಮಪಕ ಜಾಕ್ ಮಂಜು ಇದೀಗ ಹೊಸ ಪ್ರಾಜೆಕ್ಟ್ ಹಿಡಿದು ಬಂದಿದ್ದಾರೆ. ಆದರೆ ಈ ಬಾರಿ ಒಂದು ಹೊಸ ಪ್ರಯತ್ನಕ್ಕೆ ಮಂಜು ಕೈ ಹಾಕಿದ್ದಾರೆ.
ಕೋವಿಡ್ ಬಳಿಕ ಚಿತ್ರರಂಗವು ಕಂಟೆಂಟ್ ಕಡೆ ಹೊರಳಿಕೊಂಡಿದ್ದು, ಉತ್ತಮ ಕತೆ, ಚಿತ್ರಕತೆಯ ಅವಶ್ಯಕತೆಯನ್ನು ನಿರ್ದೇಶಕರು, ನಿರ್ಮಾಪಕರು ಮನಗಂಡಿದ್ದಾರೆ. ಇದೇ ಕಾರಣಕ್ಕೆ ಸಿನಿಮಾ ಪ್ರಾರಂಭಿಸುವ ಮುನ್ನ ಚಿತ್ರಕತೆಯ ಮೇಲೆಯೇ ಹೆಚ್ಚು ಗಮನ ವಹಿಸಿ, ಉತ್ತಮ ಚಿತ್ರಕತೆ ಪಡೆಯಲು ಬಂಡವಾಳ ಹೂಡಿದ್ದಾರೆ ಜಾಕ್ ಮಂಜು.
ನಿರ್ದೇಶಕ ನಾಗಶೇಖರ್ ನಿರ್ದೇಶಿಸಲಿರುವ ಸಿನಿಮಾವನ್ನು ಜಾಕ್ ಮಂಜು ನಿರ್ಮಾಣ ಮಾಡಲಿದ್ದಾರೆ. ಆದರೆ ಸಿನಿಮಾ ಪ್ರಾರಂಭಕ್ಕೂ ಮುನ್ನ ಚಿತ್ರಕತೆಯನ್ನು ಹಲವು ದಿಗ್ಗಜರನ್ನು ಒಟ್ಟು ಗೂಡಿಸಿ ಅವರಿಂದ ಬರೆಸಲಾಗುತ್ತಿದೆ!

ನಾಗಶೇಖರ್ ಅವರು ಸಿನಿಮಾದ ಒಂದೆಳೆ ಕತೆಯನ್ನು ಜಾಕ್ ಮಂಜುಗೆ ಹೇಳಿದ್ದಾರೆ ಈಗ ಅದೇ ಒಂದೆಳೆ ಕತೆಯನ್ನು ಪರಿಪೂರ್ಣ ಚಿತ್ರಕತೆಯನ್ನಾಗಿ ಮಾಡುವ ಪ್ರಯತ್ನ ಚಾಲ್ತಿಯಲ್ಲಿದ್ದು, ಇದಕ್ಕಾಗಿ ಕನ್ನಡ ಚಿತ್ರರಂಗದ ಕೆಲವು ಪ್ರತಿಭಾನ್ವಿತ ನಿರ್ದೆಶಕರನ್ನು, ಸಿನಿಮಾ ಕರ್ಮಿಗಳನ್ನು ಹಾಗೂ ಪೊಲೀಸ್, ನ್ಯಾಯಾಂಗ ವಿಭಾಗದ ಕೆಲವರನ್ನು ಒಂದೆಡೆ ಸೇರಿಸಿದ್ದಾರೆ ಜಾಕ್ ಮಂಜು ಹಾಗೂ ನಾಗಶೇಖರ್.
ನಿರ್ದೇಶಕಿ ಸುಮನಾ ಕಿತ್ತೂರು, ಚಕ್ರವರ್ತಿ ಚಂದ್ರಚೂಡ್, ಸಿನಿಮಾಟೊಗ್ರಾಫರ್ ಸತ್ಯ ಹೆಗಡೆ, ನಿರ್ದೇಶಕ ರಾಘು ಕೋವಿ ಅವರುಗಳ ಜೊತೆಗೆ ಮಾಜಿ ಪೊಲೀಸ್ ಆಯುಕ್ತ ಬಿಬಿ ಅಶೋಕ್ ಕುಮಾರ್, ಜನಪ್ರಿಯ ಕ್ರಿಮಿನಲ್ ಲಾಯರ್ ದಿಲೀಪ್ ಇವರುಗಳೆಲ್ಲ ಸೇರಿ ಚಿತ್ರಕತೆ ಸಿದ್ಧಪಡಿಸಲಿದ್ದಾರೆ. ಕೇವಲ ಒಂದು ತಿಂಗಳಲ್ಲಿ ಚಿತ್ರಕತೆ ಪೂರ್ಣಗೊಳ್ಳುವ ಉಮೇದು ಜಾಕ್ ಮಂಜು ಅವರದ್ದು.

ರಾಷ್ಟ್ರೀಯ ಸಮಸ್ಯೆಯೊಂದರ ಹಿನ್ನೆಲೆಯಲ್ಲಿರುವ ಪ್ರೇಮಕತೆಯನ್ನು ಸಿನಿಮಾ ಒಳಗೊಂಡಿದೆಯಂತೆ. ಈ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆಗಿರಲಿದ್ದು. ದೊಡ್ಡ ಬಜೆಟ್ನಲ್ಲಿ ಸಿನಿಮಾವನ್ನು ನಿರ್ಮಾಣ ಮಾಡಲಿದ್ದಾರೆ. ನಿರದೇಶಕ ನಾಗ್ಶೇಖರ್ ಹೇಳಿರುವಂತೆ, ಸಿನಿಮಾಕ್ಕಾಗಿ ಕೆಲವು ದೊಡ್ಡ ನಟರನ್ನು ತಲೆಯಲ್ಲಿಟ್ಟುಕೊಂಡಿದ್ದೇನೆ, ಚಿತ್ರಕತೆ ತಯಾರಾದ ಮೇಲೆ ಅವರನ್ನು ಸಂಪರ್ಕಿಸಲಾಗುವುದು ಎಂದಿದ್ದಾರೆ. ಸಿನಿಮಾಕ್ಕೆ ಸ್ಥಳೀಯ ನಟರು ಮಾತ್ರವೇ ಅಲ್ಲದೆ ಹಾಲಿವುಡ್ನ ಕೆಲವು ನಟರನ್ನೂ ಕರೆಸಲಿದ್ದಾರಂತೆ.


Click it and Unblock the Notifications











