ಡಬ್ಬಿಂಗ್ ಮೂಲಕ ರಾಜ್ ಮಕ್ಕಳನ್ನು ಮುಗಿಸುವ ಷಡ್ಯಂತ್ರ

ಇಲ್ಲಿ ಸಂಭಾವನೆ ಜಾಸ್ತಿ ಅಂತ ನೆಪ ಹೇಳಿ ತೆಲುಗು, ತಮಿಳು ಚಿತ್ರವನ್ನು ಡಬ್ ಮಾಡೋ ಬಗ್ಗೆ ಮಾತಾಡುತ್ತಾ ಇದ್ದಾರೆ. ಈಗಾಗಲೇ ನೂರು ಭಾಷೆಯ ಚಿತ್ರಗಳನ್ನು ಡಬ್ ಮಾಡಲಾಗಿದೆ ಎನ್ನುವ ಸುದ್ದಿಯಿದೆ. ಡಬ್ಬಿಂಗ್ ಅನುಮತಿ ಸಿಕ್ಕಿದರೆ ಆ ಚಿತ್ರಗಳನ್ನು ಬಿಡುಗಡೆ ಮಾಡುತ್ತಾರೆ. ಪದೇ ಪದೇ ಡಬ್ಬಿಂಗ್ ವಿಚಾರವನ್ನು ಕೆಣಕುತ್ತಾ ಇದ್ದಾರೆ. ಇದು ಬಹಳ ದಿನ ನಡೆಯೋಲ್ಲ ಎಂದು ಜಗ್ಗೇಶ್ ಹೇಳಿದ್ದಾರೆ.
ಡಾ. ರಾಜ್ ಮಕ್ಕಳಿಗೆ ಕೆಚ್ಚಿದೆ. ಸದ್ಯಕ್ಕೆ ಅವರು 'ಮೂಗನ ಕಾಡಿದರೇನು ಸವಿ ಮಾತನು ಆಡುವನೇನು' ಅಂತ ತಂದೆ ಹಾಡನ್ನು ಹಾಡುತ್ತಾ ಇದ್ದಾರೆ. ಸ್ವಲ್ಪ ರಾಂಗ್ ಆದರೂ 'ಹೊಡಿ ಮಗ ಹೊಡಿ ಮಗ' ಹಾಡುತ್ತಾರೆ. ಡಬ್ಬಿಂಗ್ ಹಿಂದೆ ಒಂದು ವ್ಯವಸ್ಥಿತ ಷಡ್ಯಂತ್ರವಿದೆ ಎಂದು ಜಗ್ಗೇಶ್ ನೀಡಿದ ಹೇಳಿಕೆ ಉದಯವಾಣಿ ಪತ್ರಿಕೆಯಲ್ಲಿ ವರದಿಯಾಗಿದೆ.
ಉದ್ಯಮದ ಕೆಲವರು ಜುರಾಸಿಕ್ ಪಾರ್ಕ್ ಚಿತ್ರವನ್ನು ತಮ್ಮ ಅಜ್ಜಿಗೆ ಕನ್ನಡದಲ್ಲಿ ತೋರಿಸಬೇಕೆಂದು ಅಪೇಕ್ಷೆ ಮಾಡುತ್ತಾರೆ. ಡಿಸ್ಕವರಿ ಚಾನಲ್ ಕಾರ್ಯಕ್ರಮವನ್ನು ಕನ್ನಡಕ್ಕೆ ಡಬ್ ಮಾಡಿ ಎನ್ನುತ್ತಿದ್ದಾರೆ. ಇಷ್ಟು ದಿನ ಸುಮ್ಮನಿದ್ದ ಇವರು ಈಗ ಸುದ್ದಿ ಮಾಡುತ್ತಿರುವುದು ಏಕೆ ಎಂದು ಜಗ್ಗೇಶ್ ಪ್ರಶ್ತ್ನಿಸಿದ್ದಾರೆ.
ಸಮಯ ಬಂದಾಗ ಈ ವಿಷಯದ ಬಗ್ಗೆ ಮಾತನಾಡೋಣ ಎಂದು ಸುಮ್ಮನಿದ್ದೆ. ನಾನು ದುಡ್ಡು ಕೊಡ್ತೀನಿ, ಬೇಕಾದ್ದು ನೋಡುವ ಸ್ವಾತಂತ್ರ್ಯ ನನಗಿದೆ ಎನ್ನುವ ದುರಹಂಕಾರ ಬೇಡ. ನಮ್ಮಲ್ಲಿ ಇಲ್ಲಿ ಏನು ಕಮ್ಮಿ ಆಗಿದೆ. ಕನ್ನಡತನ ಉಳಿಯಲಿ ಎನ್ನುವ ಕಾರಣಕ್ಕೆ ಡಬ್ಬಿಂಗ್ ಬೇಡ ಎಂದು ನಿಲ್ಲಿಸಿದ್ದರು. ಅವರೆಲ್ಲರ ಹೋರಾಟದಿಂದ ನಾವು ಸ್ವಲ್ಪ ನೆಮ್ಮದಿಯಾಗಿದ್ದೇವೆ ಎನ್ನುವ ಸತ್ಯವನ್ನು ನಾವು ಮರೆಯಬಾರದು ಎಂದು ಜಗ್ಗೇಶ್ ಕೋರಿದ್ದಾರೆ.
ಡಬ್ಬಿಂಗ್ ಬಗ್ಗೆ ಹೆಚ್ಚಿನವರಿಗೆ ಅಷ್ಟು ಆಸಕ್ತಿಯಿಲ್ಲ. ಇದು ನಮ್ಮೊಳಗಿನ ಕೆಲ ನಿರ್ಮಾಪಕರು ಪಿತೂರಿ. ತಮಿಳು, ತೆಲುಗಿನಲ್ಲಿ ಅವರಿಗೆ ಕನೆಕ್ಷನ್ ಚೆನ್ನಾಗಿದೆ. ಕನ್ನಡವನ್ನು ಉದ್ದಾರ ಮಾಡ್ತೀವಿ ಅಂತ ಅಲ್ಲಿಂದ ಡಬ್ಬಿಂಗ್ ರೈಟ್ಸ್ ತರುತ್ತಿರುವುವರು ಅವರೇ.ಹಿಂದೆ ನಿಂತು ಎಲ್ಲವನ್ನೂ ಆಡಿಸ್ತಾರೆ, ಒಳಗಡೆಯೇ ಕೂತು ಗುಳಿ ತೋಡುವ ಕೆಲಸವನ್ನು ಅವರು ಮಾಡುತ್ತಿದ್ದಾರೆ ಎಂದು ಹೆಸರು ಹೇಳದೆ ಕನ್ನಡ ನಿರ್ಮಾಪಕರನ್ನು ಜಗ್ಗೇಶ್ ತರಾಟೆಗೆ ತೆಗೆದುಕೊಂಡಿದ್ದಾರೆ.
ಕೆಲವರಿಗೆ ವಾದ ಮಾಡುವುದು ಒಂದು ಚಟ. ಏನಾದರೂ ವಾದ ಮಾಡುತ್ತಿರಬೇಕು, ಚಟಕ್ಕೆ ವಾದ ಮಾಡುವವರು ಯಾರೂ ಕನ್ನಡ ಸಿನಿಮಾ ನೋಡೋಲ್ಲ.ಇವತ್ತು ಮಲ್ಟಿಪ್ಲೆಕ್ಸ್ ನಲ್ಲಿ ಹಿಂದಿ, ತೆಲುಗು, ತಮಿಳು ಸಿನಿಮಾ ಹೌಸ್ ಫುಲ್ ಮಾಡುತ್ತಿರುವವರಲ್ಲಿ ಕನ್ನಡಿಗರ ಪಾಲೂ ಕೂಡಾ ಇದೆ. ಮಾತಿಗೆ ಮುನ್ನ ಕನ್ನಡ ಸಿನಿಮಾ ಚೆನ್ನಾಗಿಲ್ಲ ಅಂತಾರೆ. ಚಿತ್ರ ನೋಡದೆ ಕನ್ನಡ ಚಿತ್ರಗಳು ಚೆನ್ನಾಗಿಲ್ಲ ಎಂದು ನಿರ್ಣಯಕ್ಕೆ ಬರುವ ಇಂತವರಿಂದಲೇ ಬೇರೆ ಭಾಷೆಯ ಚಿತ್ರಗಳು ಕರ್ನಾಟಕದಲ್ಲಿ ಹತ್ತು ಕೋಟಿ ವ್ಯಾಪಾರ ಮಾಡುವುದು ಎಂದು ಜಗ್ಗೇಶ್ ಬೇಸರ ವ್ಯಕ್ತ ಪಡಿಸಿದ್ದಾರೆ.
ಕನ್ನಡಕ್ಕೆ ತೊಂದರೆ ಬಂದಾಗ ನಾವು ಸುಮ್ಮನಿರುವುದಿಲ್ಲ. ಸದಾಶಿವನಗರದಿಂದ ಶಿವಣ್ಣ ಬರ್ತಾರೆ, ಮಲ್ಲೇಶ್ವರಂನಿಂದ ನಾನು ಬರ್ತೀನಿ. ಬೇರೆಯವರು ಬೇರೆ ಕಡೆಯಿಂದ ಬರ್ತಾರೆ ಎಂದು ಜಗ್ಗೇಶ್ ಹೇಳಿದ್ದಾರೆ.


Click it and Unblock the Notifications











