ಸಾವನ್ನ ಗೆದ್ದು ಬಂದು ಗಳಗಳನೆ ಅತ್ತ ಬುಲ್ಲೆಟ್ ಪ್ರಕಾಶ್
ಸದಾ ನಗುತ್ತಾ, ಎಲ್ಲರನ್ನ ನಲಿಸುತ್ತಾ ಇದ್ದ ಹಾಸ್ಯನಟ ಬುಲ್ಲೆಟ್ ಪ್ರಕಾಶ್ ಇಂದು ಭಾವುಕರಾದರು. ಇವತ್ತು ನಡೆದ ಸುದ್ದಿಗೋಷ್ಠಿಯಲ್ಲಿ ಗಳಗಳನೆ ಅತ್ತುಬಿಟ್ಟರು. ನಿನ್ನೆ ನಡೆದ ಘಟನೆಯನ್ನ ನೆನೆದು ಬುಲ್ಲೆಟ್ ಪ್ರಕಾಶ್ ಕಣ್ಣೀರು ಹಾಕಿದರು.
''ನಿನ್ನೆ ಆದ ಘಟನೆ ನನ್ನ ಜೀವನದಲ್ಲಿ ಮರೆಯೋಕ್ಕಾಗಲ್ಲ. ಯಾರಿಗೂ ಇಂತಹ ಸನ್ನಿವೇಶ ಬೇಡ. ನಿನ್ನೆ ನಾನೆಷ್ಟು ನೊಂದಿದ್ದೆ ಅಂತ ನನಗೊಬ್ಬನಿಗೇ ಗೊತ್ತು. ಅನ್ನ ಹಾಕಿದ ಜನ ಎಲ್ಲೋ ಇದ್ದಾರೆ. ನನ್ನ ಸಾಕಿದವರು, ನನಗೆ ಪ್ರೀತಿ ನೀಡಿದ ಜನ ಎಲ್ಲೋ ಇದ್ದಾರೆ. ನಾನು ಬದುಕಿದ್ದೇನೆ.''

- ಹೀಗಂತ ಹೇಳ್ತಾ ಬುಲ್ಲೆಟ್ ಪ್ರಕಾಶ್ ಕಣ್ಣಾಲಿ ಒದ್ದೆ ಆಯ್ತು. ಕಾಮಿಡಿ ಸನ್ನಿವೇಶಗಳನ್ನ ಬಿಟ್ಟರೆ ಬುಲ್ಲೆಟ್ ಪ್ರಕಾಶ್ ಸ್ಟಂಟ್ ಮಾಡಿರುವುದು ತೀರಾ ವಿರಳ. ಅಂಥದ್ರಲ್ಲಿ ಪ್ರಜ್ವಲ್ ದೇವರಾಜ್ ಅಭಿನಯದ 'ಭುಜಂಗ' ಚಿತ್ರಕ್ಕಾಗಿ ಬುಲ್ಲೆಟ್ ಪ್ರಕಾಶ್ ಬೈಕ್ ಸ್ಟಂಟ್ ಮಾಡುವುದಕ್ಕೆ ಮುಂದಾದರು. [ಹಾಸ್ಯನಟ ಬುಲ್ಲೆಟ್ ಪ್ರಕಾಶ್ ಪ್ರಾಣಾಪಾಯದಿಂದ ಪಾರು]
ಡ್ಯೂಪ್ ಹಾಕಿಸೋಣ ಅಂತ ಚಿತ್ರತಂಡ ಹೇಳಿದರೂ, ಅದಕ್ಕೆ ಒಪ್ಪದ ಬುಲ್ಲೆಟ್ ಪ್ರಕಾಶ್ ತಾವೇ ರಿಸ್ಕ್ ತೆಗೆದುಕೊಂಡರು. ಅಷ್ಟಕ್ಕೂ, ಪ್ರಜ್ವಲ್ ದೇವರಾಜ್ ಮತ್ತು ಬುಲ್ಲೆಟ್ ಪ್ರಕಾಶ್ ಬೈಕ್ ನಲ್ಲಿ ಮಾತನಾಡಿಕೊಂಡು ಬರುವಾಗ, ಮಧ್ಯದಲ್ಲಿ ಹಂಪ್ ಸಿಕ್ಕಿ ಇಬ್ಬರು ಗಾಳಿಯಲ್ಲಿ ಬೈಕ್ ಓಡಿಸುವ ಸೀನ್ ಅದು.

ಗಾಳಿಯಲ್ಲಿ ತೇಲಾಡಿದ ನಂತ್ರ ಭಯಪಟ್ಟುಕೊಂಡು 40 ಅಡಿ ಎತ್ತರದಿಂದ ಬುಲ್ಲೆಟ್ ಪ್ರಕಾಶ್ ಬೀಳಬೇಕು. ಅದಕ್ಕೆ ಸುರಕ್ಷತೆಗೆ ಅಂತ ಬುಲ್ಲೆಟ್ ಪ್ರಕಾಶ್ ಮತ್ತು ಪ್ರಜ್ವಲ್ ದೇವರಾಜ್ ಗೆ ರೋಪ್ ಕಟ್ಟಲಾಗಿತ್ತು.
ಆದ್ರೆ, ಅಷ್ಟರಲ್ಲಿ ಬುಲ್ಲೆಟ್ ಪ್ರಕಾಶ್ ಗೆ ಭುಜಕ್ಕೆ ಕಟ್ಟಿದ್ದ ರೋಪ್ ಕಟ್ ಆಯ್ತು. ಸೊಂಟಕ್ಕೆ ಕಟ್ಟಿದ್ದ ರೋಪ್ ನಿಂದ ಪ್ರಾಣಾಪಾಯದಿಂದ ಬಚಾವ್ ಆದರು. ಅವಘಡ ನಡೆದರೂ, ಪ್ಲಾನ್ ಮಾಡಿದ ಶಾಟ್ ಓಕೆ ಆಗಿರುವುದು ಸಮಾಧಾನಕರ ಸಂಗತಿ. ಆದರೂ ನಡೆದ ಘಟನೆ ಬುಲ್ಲೆಟ್ ಪ್ರಕಾಶ್ ಮನಸ್ಸಿಗೆ ಆಘಾತ ನೀಡಿದೆ. (ಫಿಲ್ಮಿಬೀಟ್ ಕನ್ನಡ)


Click it and Unblock the Notifications











