ಕೆ ಶಿವರಾಮು ಪುತ್ರಿ ಕೈಹಿಡಿಯುತ್ತಿರುವ ನಟ ಪ್ರದೀಪ್
ಕನ್ನಡ ನಟ ಪ್ರದೀಪ್ ಗೆ ಕಂಕಣಬಲ ಕೂಡಿಬಂದಿದೆ. 'ಜಾಲಿ ಡೇಸ್', 'ಪರೋಲ್' ಚಿತ್ರಗಳಲ್ಲಿ ಅಭಿನಯಿಸಿರುವ ಪ್ರದೀಪ್ ಈಗ 'ರಂಗನ್ ಸ್ಟೈಲ್' ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕ ನಟನಾಗಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.
ಕನ್ನಡ ಚಿತ್ರ ನಟ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಮು (60) ಅವರ ಪುತ್ರಿ ಇಂಚರಾ ಅವರ ಕೈಹಿಡಿಯುತ್ತಿದ್ದಾರೆ ಪ್ರದೀಪ್. ಶಿವರಾಮು ಅವರು ಹಲವಾರು ಸಾಮಾಜಿಕ ಕಾರ್ಯಗಳ ಜೊತೆಗೆ ಚಿತ್ರ ನಿರ್ಮಾಪರಾಗಿಯೂ ಗುರುತಿಸಿಕೊಂಡವರು.
ಇತ್ತೀಚೆಗಷ್ಟೇ ಇಂಚರಾ ಹಾಗೂ ಪ್ರದೀಪ್ ನಿಶ್ಚಿತಾರ್ಥ ನಡೆದಿದೆ. ಇನ್ನೊಂದು ತಿಂಗಳಲ್ಲಿ ಇಬ್ಬರೂ ಸಪ್ತಪದಿ ತುಳಿಯುತ್ತಿದ್ದಾರೆ. ಕನ್ನಡ ಚಿತ್ರರಂಗ ತಾರೆಗಳ ಮದುವೆಯನ್ನು ಕಂಡು ಬಹಳ ದಿನಗಳೇ ಆಗಿವೆ. ಈಗ ಒಂಥರಾ ಮತ್ತೆ ಮದುವೆ ಕಳೆ ಚಿತ್ರರಂಗದಲ್ಲಿ ಕಾಣುತ್ತಿದೆ.ಇನ್ನೊಂದು ವಿಶೇಷ ಎಂದರೆ ಪ್ರದೀಪ್ ಅಭಿನಯದ 'ರಂಗನ್ ಸ್ಟೈಲ್' ಚಿತ್ರವೂ ಡಿಸೆಂಬರ್ ನಲ್ಲೇ ಬಿಡುಗಡೆಯಾಗುತ್ತಿರುವುದು. ಪ್ರದೀಪ್ ಅವರ ಪಾಲಿಗೆ ಡಬಲ್ ಸಂಭ್ರಮ. 'ರಂಗನ್ ಸ್ಟೈಲ್' ಚಿತ್ರದಲ್ಲಿ ಕಿಚ್ಚ ಸುದೀಪ್ ಅವರು ಅತಿಥಿ ಪಾತ್ರ ಪೋಷಿಸಿದ್ದಾರೆ.
ದಾಂಪತ್ಯ ಜೀವನಕ್ಕೆ ಅಡಿಯಿಡುತ್ತಿರುವ ಪ್ರದೀಪ್ ಅವರಿಗೆ ಸುದೀಪ್ ಅವರು ಕಿವಿಮಾತನ್ನೂ ಹೇಳಿದ್ದಾರೆ, ಮದುವೆ ಬಳಿಕ ಹೆಂಡತಿಯನ್ನು ಚೆನ್ನಾಗಿ ನೋಡಿಕೋ. ನಮ್ಮಂತೆ ಬಹಳಷ್ಟು ಜನ ತಪ್ಪುಗಳನ್ನು ಮಾಡುತ್ತಿರುತ್ತೇವೆ. ಆದರೆ ನೀನು ಮಾತ್ರ ಆ ರೀತಿ ಮಾಡಬೇಡ. ಪ್ರೀತಿ ಪ್ರೇಮದಲ್ಲಿ ಕಡಿಮೆ ಆಗದಂತೆ ನೋಡಿಕೋ ಎಂದಿದ್ದಾರೆ.
ಗುರುಕಿರಣ್ ಅವರ ಸಂಗೀತ ಇರುವ 'ರಂಗನ್ ಸ್ಟೈಲ್' ಚಿತ್ರಕ್ಕೆ ಮಂಗಳೂರಿನ ಪ್ರಶಾಂತ್ ಎಸ್ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಮಂಜು ಸಂಭಾಷಣೆ ಬರೆದಿದ್ದಾರೆ. ಸಿನಿಟೆಕ್ ಸೂರಿ ಕ್ಯಾಮೆರಾ ಹಿಡಿಯುತ್ತಿದ್ದಾರೆ.
ಚಿತ್ರದಲ್ಲಿ ಸಾಧುಕೋಕಿಲ, ಶರತ್ ಲೋಹಿತಾಶ್ವ ಮತ್ತಿತರರು ಇದ್ದಾರೆ. ಕಾರ್ಕಳದ ಖ್ಯಾತ ಯುವ ಉದ್ಯಮಿಗಳಾದ ಅಜಿತ್ ಕಾಮತ್, ಬೋಳ ಶ್ರೀನಿವಾಸ ಕಾಮತ್ ಮತ್ತು ಬೋಳ ಶ್ರೀಪತಿ ಕಾಮತ್ ಅವರು ತಮ್ಮ ಆರೆಂಜ್ ಸಿನಿಮಾಸ್ ಬ್ಯಾನರ್ನಡಿ ನಿರ್ಮಿಸುತ್ತಿದ್ದಾರೆ.


Click it and Unblock the Notifications












