ನಾಯಕ ನಟ ರಾಮ್ ಆತ್ಮಹತ್ಯೆ ಯತ್ನ
'ಸಿದ್ದಾಪುರ' ಕನ್ನಡ ಚಿತ್ರದ ನಾಯಕ, ನಿರ್ಮಾಪಕ ನಟ ರಾಮ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಭಾನುವಾರ ರಾತ್ರಿ ತಮ್ಮ ಕಚೇರಿಯಲ್ಲಿ ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಮೇ 24ರ ಭಾನುವಾರ ರಾತ್ರಿ ಬೆಂಗಳೂರಿನ ಕತ್ರಿಗುಪ್ಪೆ ಸಮೀಪವಿರುವ ತಮ್ಮ ಕಚೇರಿಯಲ್ಲಿ ರಾಮ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ. ಕಚೇರಿಯಲ್ಲಿದ್ದ ಸ್ನೇಹಿತರು ಅವರನ್ನು ರಕ್ಷಿಸಿ ಮೈಸೂರು ರಿಂಗ್ ರೋಡ್ನಲ್ಲಿರುವ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದಾರೆ. ['ಸಿದ್ದಾಪುರ' ಸಿನಿಮಾದ ಚಿತ್ರಪಟಗಳು]

'ಹಣಕಾಸಿನ ತೊಂದರೆಯಿಂದಾಗಿ ರಾಮ್ ಅವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಎರಡು ದಿನಗಳ ಕಾಲ ಅವರ ಆರೋಗ್ಯದ ಬಗ್ಗೆ ಏನು ಹೇಳಲು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ' ಎಂದು ಚಿತ್ರದ ನಿರ್ದೇಶಕ ಕೃಷ್ಣ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
'ಭಾನುವಾರ ರಾತ್ರಿ ಕಚೇರಿಯಲ್ಲಿ ರಾಮ್ ಸ್ನೇಹಿತರೊಂದಿಗೆ ಮಾತುಕತೆ ನಡೆಸುತ್ತಿದ್ದರು. ಈ ಸಮಯದಲ್ಲಿ ಅಲ್ಲಿಂದ ಕೊಠಡಿಯೊಂದಕ್ಕೆ ತೆರಳಿದ ಅವರು ವಿಷ ಸೇವಿಸಿದರು. ಇದನ್ನು ಗಮನಿಸಿದ ನಾವು ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದೆವು' ಎಂದು ಕೃಷ್ಣ ಅವರು ಹೇಳಿದ್ದಾರೆ.
2014ರ ಅಕ್ಟೋಬರ್ನಲ್ಲಿ 'ಸಿದ್ದಾಪುರ' ಚಿತ್ರದ ಶೂಟಿಂಗ್ ಆರಂಭವಾಗಿತ್ತು. ಆದರೆ, ಮೊದಲು ನಿರ್ಮಾಪಕರಾಗಿದ್ದ ಶ್ರೀನಿವಾಸ್ ಮಧ್ಯದಲ್ಲಿ ಚಿತ್ರ ಮಾಡುವುದಿಲ್ಲ ಎಂದು ಘೋಷಿಸಿದರು. ನಂತರ ರಾಮ್ ಸ್ವತಃ ಚಿತ್ರ ನಿರ್ಮಾಣದ ಹೊಣೆ ಹೊತ್ತುಕೊಂಡರು. ಚಿತ್ರ ನಿರ್ಮಿಸಿ ಅನುಭವವಿಲ್ಲದ ಅವರು ಇದರಿಂದ ನಷ್ಟ ಅನುಭವಿಸಿದ್ದರು.
'ಸಿದ್ದಾಪುರ' ಪಕ್ಕಾ ರೌಡಿಸಂ ಚಿತ್ರ. ಬೆಂಗಳೂರಿನ ಸಿದ್ದಾಪುರ ಪ್ರದೇಶದಲ್ಲಿ ಸುಮಾರು ಇಪ್ಪತ್ತು ವರ್ಷಗಳ ಹಿಂದಿದ್ದ ರೌಡಿಸಂ ಅನ್ನು ಚಿತ್ರದ ಮೂಲಕ ತೋರಿಸಲು ಹೊರಟಿದ್ದಾರೆ ನಿರ್ದೇಶಕ ಕೃಷ್ಣ. ಅನು ಶೆಟ್ಟಿ ಮತ್ತು ನವ್ಯಾ ಚಿತ್ರದ ನಾಯಕಿಯರು.


Click it and Unblock the Notifications











