ಕೊಲ್ಲೂರಿನಲ್ಲಿ ನಟಿ ಶ್ರುತಿಗೆ ಎರಡನೇ ಮದುವೆ
ಮನಮಿಡಿಯುವ ಪಾತ್ರಗಳ ಮೂಲಕ ಹೆಂಗೆಳೆಯರ ಮನಗೆದ್ದಿರುವ ನಟಿ ಶ್ರುತಿ ಅವರು ಗುರುವಾರ(ಜೂ.6) ನೂತನ ದಾಂಪತ್ಯಕ್ಕೆ ಅಡಿಯಿಟ್ಟಿದ್ದಾರೆ. ಖ್ಯಾತ ನಿರ್ದೇಶಕ ಎಸ್ ಮಹೇಂದರ್ ಅವರ ಜೊತೆ ವಿವಾಹ ವಿಚ್ಛೇದನ ಪಡೆದಿರುವ ಶ್ರುತಿ (38) ಎರಡನೇ ಬಾರಿ ಹಸೆಮಣೆ ಏರಿದ್ದಾರೆ.
ಉಡುಪಿ ಜಿಲ್ಲೆ ಕೊಲ್ಲ್ಲೂರು ಕ್ಷೇತ್ರದಲ್ಲಿ ಶ್ರುತಿ ಅವರ ಮದುವೆ ಇಂದು ಬೆಳಗ್ಗೆ 7.45ಕ್ಕೆ ನೆರವೇರಿತು. ಕಳೆದ ಕೆಲ ವರ್ಷಗಳಿಂದ ಶ್ರುತಿ ಅವರು ಪತ್ರಕರ್ತ ಚಂದ್ರಚೂಡ ಚಕ್ರವರ್ತಿ ಅಲಿಯಾಸ್ ಚಂದ್ರಶೇಖರ್ ಅವರ ಜೊತೆ ಅನ್ಯೋನ್ಯವಾಗಿದ್ದರು. ಈಗ ಮದುವೆ ಮೂಲಕ ಇವರಿಬ್ಬರೂ ಇನ್ನೂ ಹತ್ತಿರವಾಗಿದ್ದಾರೆ.
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಬಾಣಿಗ ಗ್ರಾಮದಲ್ಲಿ ಶ್ರುತಿ-ಚಂದ್ರಶೇಖರ್ ಅವರ ಮದುವೆ ನಿಗದಿಯಾಗಿತ್ತು. ಗ್ರಾಮದ ಪ್ರಸಿದ್ಧ ಬಾಣೇಶ್ವರ, ವೆಂಕಟರಮಣ, ಆಂಜನೇಯ ಸ್ವಾಮಿ (ಒಟ್ಟಿಗೆ ಇರುವ ದೇವಸ್ಥಾನಗಳು) ದೇವಸ್ಥಾನದಲ್ಲಿ ನಿಗದಿಯಾಗಿತ್ತು. ಬುಧವಾರ ರಾತ್ರಿ ವರಪೂಜೆ ಸಹ ನಡೆದಿತ್ತು.ಆದರೆ ದೇವಸ್ಥಾನದ ಅನುಮತಿ ಪಡೆಯದೆ ಇದ್ದ ಕಾರಣ ಮದುವೆಗೆ ಅವಕಾಶ ಮಾಡಿಕೊಟ್ಟಿರಲಿಲ್ಲ. ಅಲ್ಲಿಂದ ಶ್ರುತಿ ಅವರು ತಮ್ಮ ಭಾವಿ ಪತಿ ಜೊತೆ ಕೊಲ್ಲೂರಿಗೆ ತೆರಳಿ ಶಾಸ್ತ್ರೋಕ್ತವಾಗಿ ಮದುವೆ ಮಾಡಿಕೊಂಡಿದ್ದಾರೆ ಎನ್ನುತ್ತವೆ ಮೂಲಗಳು.
ಬೆಂಗಳೂರಿನ ಪುರೋಹಿತರೊಬ್ಬರ ನೇತೃತ್ವದಲ್ಲಿ ಇವರಿಬ್ಬರ ಮದುವೆ ಧಾರ್ಮಿಕ ವಿಧಿವಿಧಾನಗಳು ನಡೆದಿವೆ. ಕೇವಲ ಬಂಧು ಮಿತ್ರರಷ್ಟೇ ಈ ಮದುವೆಗೆ ಸಾಕ್ಷಿಯಾಗಿದ್ದಾರೆ. ಈ ಮೂಲಕ ಶ್ರುತಿ ಅವರು ಸಾಂಸಾರಿಕ ಜೀವನದಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ.
ನಟಿ ಶ್ರುತಿ ಅವರಿಂದ ವಿಚ್ಛೇದನ ಪಡೆದ ಬಳಿಕ ಎಸ್ ಮಹೇಂದರ್ ಅವರು ಎರಡನೇ ಮದುವೆ ಮಾಡಿಕೊಂಡರು. ತಮ್ಮ ಸಂಬಂಧಿ ಯಶೋಧಾ ಅವರನ್ನು ಮದುವೆಯಾಗಿ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ. ನಾಗರಭಾವಿಯ ಮನೆಯಲ್ಲಿ ಮಹೇಂದರ್ ಅವರ ಹೊಸ ಸಂಸಾರ ಹಾಯಾಗಿ ಸಾಗುತ್ತಿದೆ. (ಏಜೆನ್ಸೀಸ್)


Click it and Unblock the Notifications












