ಗೌರಿ ಲಂಕೇಶ್ ಹತ್ಯೆ: ಶೋಕ ಸಾಗರದಲ್ಲಿ ಮುಳುಗಿದ ಚಿತ್ರರಂಗ
ಹಿರಿಯ ಪತ್ರಕರ್ತೆ, 'ಲಂಕೇಶ್ ಪತ್ರಿಕೆ' ಸಂಪಾದಕಿ ಗೌರಿ ಲಂಕೇಶ್ ಅವರ ಹತ್ಯೆಗೆ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ನಿರ್ಭೀತ ಪತ್ರಕರ್ತೆಯ ಹತ್ಯೆ ಹಲವರಲ್ಲಿ ದಿಗ್ಭ್ರಮೆ ಉಂಟು ಮಾಡಿದೆ.
ಗೌರಿ ಲಂಕೇಶ್ ಇನ್ನಿಲ್ಲ ಎಂಬ ಕಹಿ ಸತ್ಯವನ್ನ ಅರಗಿಸಿಕೊಳ್ಳಲು ಹಲವರಿಗೆ ಕಷ್ಟವಾಗಿದೆ. ಸಾಮಾಜಿಕ ಬದಲಾವಣೆಗೆ ಸದಾ ತುಡಿಯುತ್ತಿದ್ದ ಗೌರಿ ಲಂಕೇಶ್ ರವರನ್ನ ಹತ್ತಿರದಿಂದ ಬಲ್ಲವರು ಶೋಕ ಸಾಗರದಲ್ಲಿ ಮುಳುಗಿದ್ದಾರೆ. ವಿಚಾರವಾದಿ, ದಿಟ್ಟ ಮಹಿಳೆ ಗೌರಿ ಲಂಕೇಶ್ ಅವರ ಸಾವಿಗೆ ಕನ್ನಡ ಚಿತ್ರರಂಗ ಕೂಡ ಕಂಬನಿ ಮಿಡಿದಿದೆ. ಮುಂದೆ ಓದಿ....

ಕಂಬನಿ ಮಿಡಿದ 'ಉಪೇಂದ್ರ'
''ಗೌರಿ ಲಂಕೇಶ್ ಅವರ ಮೇಲೆ ಆಗಿರುವ ಈ ಹೇಯ ಕೃತ್ಯ ನನಗೆ ದಿಗ್ಭ್ರಮೆ ಮೂಡಿಸಿದೆ. ಈ ಕೃತ್ಯವನ್ನು ನಾನು ಬಲವಾಗಿ ಖಂಡಿಸುತ್ತೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ'' ಎಂದು ಉಪೇಂದ್ರ ಟ್ವೀಟ್ ಮಾಡಿದ್ದಾರೆ.

ದುಃಖತಪ್ತರಾದ 'ಪ್ರಕಾಶ್ ರೈ'
''ಒಂದು ಧ್ವನಿ ಮೌನವಾಯಿತು. ಹತಾಶ ಕೊಲೆಗಾರರಿಗೆ ನಾಚಿಕೆಯಾಗಬೇಕು. ಆ ಧ್ವನಿಯನ್ನ ನೀವು ಬಲಗೊಳಿಸಿದ್ದೀರಾ'' - ಪ್ರಕಾಶ್ ರೈ, ನಟ

ಪ್ರಿಯಾಂಕಾ ಉಪೇಂದ್ರ
''ಗೌರಿ ಲಂಕೇಶ್ ಅವರ ಭೀಕರ, ಕ್ರೂರವಾದ ಹತ್ಯೆ ನನಗೆ ಆಘಾತ ಮತ್ತು ನೋವುಂಟು ಮಾಡಿದೆ. ಅವರ ಕುಟುಂಬಕ್ಕೆ ನೋವನ್ನ ಭರಿಸುವ ಶಕ್ತಿ ನೀಡಲಿ, ಗೌರಿ ಲಂಕೇಶ್ ಅವರ ಆತ್ಮಕ್ಕೆ ಶಾಂತಿ ಸಿಗಲಿ'' - ಪ್ರಿಯಾಂಕಾ ಉಪೇಂದ್ರ, ನಟಿ

ಆಕ್ರೋಶಗೊಂಡ ರಕ್ಷಿತಾ ಪ್ರೇಮ್
''ಗೌರಿ ಲಂಕೇಶ್ ರವರ ಹತ್ಯೆ ನಿಜಕ್ಕೂ ಹೃದಯ ವಿದ್ರಾವಕ ಘಟನೆ. ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಅದರಲ್ಲೂ, ಬೆಂಗಳೂರು ನಗರ ತುಂಬಾ ಸುರಕ್ಷಿತ ಎಂದು ಎಲ್ಲರೂ ಭಾವಿಸುತ್ತಾರೆ. ಅಂಥದ್ರಲ್ಲಿ ಒಬ್ಬರ ಹತ್ಯೆ ಆಗಿದೆ. ಅದು ಆಕೆಯ ಮನೆಯ ಮುಂದೆ. ನಮಗೆ ರಕ್ಷಣೆ ಇದ್ಯಾ ಅನ್ನೋದೇ ಈಗ ಪ್ರಶ್ನೆಯಾಗಿದೆ. ಗೌರಿ ಅಮ್ಮ ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ'' ಎಂದು ನಟಿ, ನಿರ್ಮಾಪಕಿ ರಕ್ಷಿತಾ ಪ್ರೇಮ್ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.

ಕಿಡಿ ಕಾರಿದ ಜಗ್ಗೇಶ್
''ಗೌರಿ ಲಂಕೇಶ್ ಹತ್ಯೆ ಹೇಯ ಕೃತ್ಯ. ಬೆಂಗಳೂರಿಗೆ ಗನ್ ಚಾಕು, ಚೂರಿ ಸಂಸ್ಕೃತಿ ತುಂಬ ಅಪಾಯಕಾರಿ. ಇದನ್ನ ಸರ್ಕಾರ ಆರಕ್ಷಕರು ಈಗಲೆ ಮಟ್ಟ ಹಾಕದಿದ್ದರೆ ಕಿಡಿ ಕಾಡ್ಗಿಚ್ಚಾಗುವುದು'' - ಜಗ್ಗೇಶ್, ನಟ

ಸಂತಾಪ ಸೂಚಿಸಿದ ದುನಿಯಾ ವಿಜಯ್
'ಹಿರಿಯ ಪತ್ರಕರ್ತೆ ವಿಚಾರವಾದಿ ಚಿಂತಕಿ ಗೌರಿ ಲಂಕೇಶ್ ಆತ್ಮಕ್ಕೆ ಶಾಂತಿ ಸಿಗಲಿ. ಕೊಲೆಗಡುಕರಿಗೆ ಶಿಕ್ಷೆಯಾಗಲಿ. ವಿಚಾರವಾದಿಗಳನ್ನ ಕೊಲ್ಲಬಹುದು, ವಿಚಾರಗಳನ್ನಲ್ಲ. ಸತ್ಯಕ್ಕೆ ಸಾವಿಲ್ಲ'' ಎಂದು ನಟ ದುನಿಯಾ ವಿಜಯ್ ಹೇಳಿದ್ದಾರೆ.


Click it and Unblock the Notifications











