ಸಂತೋಷದ 'ಕ್ಷಣ ಕ್ಷಣಂ' ಕೊಟ್ಟ ಶ್ರೀದೇವಿಗೆ ನಮನ: ಟಿಎನ್ನೆಎಸ್
ರಾಮ್ ಗೋಪಾಲ್ ವರ್ಮಾ ನಿರ್ದೇಶನ 1991ರಲ್ಲಿ ತೆರೆ ಕಂಡ ಸೂಪರ್ ಹಿಟ್ ಚಿತ್ರ ಕ್ಷಣ ಕ್ಷಣಂ ಚಿತ್ರದಲ್ಲಿನ ಶ್ರೀದೇವಿ ಅಭಿನಯವನ್ನು ನೆನಪಿಸಿಕೊಂಡಿರುವ ಕನ್ನಡ ಚಿತ್ರ ನಿರ್ದೆಶಕ ಟಿ.ಎನ್ ಸೀತಾರಾಮ್ ಅವರು ಫೇಸ್ ಬುಕ್ ಪೋಸ್ಟ್ ಮೂಲಕ ತಮ್ಮ ಅಂತಿಮ ನಮನ ಸಲ್ಲಿಸಿದ್ದಾರೆ.
ದುಬೈನಲ್ಲಿ ಸಂಬಂಧಿಕರೊಬ್ಬರ ಮದುವೆ ಸಂಭ್ರಮದಲ್ಲಿದ್ದ ಸೂಪರ್ ಸ್ಟಾರ್ ಶ್ರೀದೇವಿ ಅವರು ತೀವ್ರ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ. ಅವರ ಸಾವಿಗೆ ದುಃಖ ವ್ಯಕ್ತಪಡಿಸಿ ಅಭಿಮಾನಿಗಳು, ಸೆಲೆಬ್ರಿಟಿಗಳು, ಚಿತ್ರರಂಗದ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪತ್ರಕರ್ತ ರವಿ ಬೆಳೆಗೆರೆ ಕೂಡಾ ಟ್ವೀಟ್ ಮಾಡಿ ಹಳೆ ಸಿನಿಮಾವೊಂದರ ಬಗ್ಗೆ ಹೇಳಿದ್ದಾರೆ.

ಟಿಎನ್ ಸೀತಾರಾಮ್ ಅವರ ಫೇಸ್ ಬುಕ್ ಪೋಸ್ಟ್ ಹೀಗಿದೆ:
ಕ್ಷಣಂ ಕ್ಷಣಂ ಚಿತ್ರವನ್ನು ಅದು ಬಿಡುಗಡೆಯಾದ ಹೊಸದರಲ್ಲಿ ನಮ್ಮ ಮನೆಯಲ್ಲಿ ವಿ.ಸಿ.ಆರ್. ಮತ್ತು ಕ್ಯಾಸೆಟ್ ತಂದು ವಾರಕ್ಕೊಮ್ಮೆಯಾದರೂ ನೋಡುತ್ತಿದ್ದೆವು...ಶ್ರೀದೇವಿಯ ಪಾತ್ರಕ್ಕಾಗಿ, ಅವರ ತಮಾಷೆಯ ಟೈಮಿಂಗ್ ಗಾಗಿ...
ನಾವು ಅತ್ಯಂತ ದುರ್ಬರ ದಿನಗಳನ್ನು ಎದುರಿಸುತ್ತಿದ್ದ ಕಾಲ..ಚಾಪ್ಲಿನ್ ನ ಮಾಡರ್ನ್ ಟೈಮ್ಸ್, ಅಣ್ಣಾವ್ರ ಭಾಗ್ಯದ ಲಕ್ಷ್ಮೀ ಬಾರಮ್ಮ, ಶ್ರೀದೇವಿಯ ಕ್ಷಣ ಕ್ಷಣಂ ಇವುಗಳನ್ನು ಹುಚ್ಚು ಹಿಡಿದಂತೆ ಪದೇ ಪದೇ ನೋಡುತ್ತಿದ್ದೆವು...ನಮಗೆ ಉಲ್ಲಾಸ ಕೊಟ್ಟಿದ್ದು, ಬದುಕು ಸಹ್ಯವಾಗುವಂತೆ ಮಾಡಿದ್ದು ಇವರುಗಳೇ..
ಇತ್ತೀಚಿನ ಶ್ರೀದೇವಿಯವರ ಇಂಗ್ಲಿಷ್ ವಿಂಗ್ಲೀಷ್ ಕೂಡಾ ನಮ್ಮ ಮನೆಯ ಎಲ್ಲರ ಫೇವರಿಟ್..
ಜಗತ್ತಿನ ಎಷ್ಟು ಕೋಟಿ ಜನಗಳ ಬದಕಿನ ಕತ್ತಲಲ್ಲಿ ಉಲ್ಲಾಸದ ಬೆಳಕನ್ನು ಕೊಟ್ಟಿದ್ದಾರೋ ಶ್ರೀದೇವಿಯವರು..
ತಮಾಷೆಯ ಟೈಮಿಂಗ್ ಎನ್ನುವುದು ಅತ್ಯಂತ ಕಷ್ಟದ್ದು...ಅದು ಅತ್ಯಂತ ಸಹಜವಾಗಿತ್ತು ಶ್ರೀದೇವಿಯವರಿಗೆ..
ಗ್ರೇಟ್ ಎಂದು ನಿಸ್ಸಂದೇಹವಾಗಿ ಹೇಳಬಹುದಾಗಿದ್ದ ದೈತ್ಯ ಪ್ರತಿಭೆ ಅವರದು..
ನೀವು ಇಷ್ಟು ಬೇಗ ಹೋಗುತ್ತೀರಿ ಎಂದು ನಾವು ಯಾರೂ ಭಾವಿಸಿರಲಿಲ್ಲ...
ನಿಮ್ಮ photo ನೋಡಿದರೆ ಯಾವಾಗಲೂ ಲಾಸ್ಯ ತುಂಬುತ್ತಿದ್ದ ಮನಸ್ಸಿಗೆ ಇವತ್ತು ವಿಷಾದ ತುಂಬುತ್ತಿದೆ.
ನಮಗೆ ಕಷ್ಟ ಕಾಲದಲ್ಲಿ ಕೊಟ್ಟ ಸಂತೋಷದ ಕ್ಷಣಗಳಿಗೆ ನಿಮಗೆ ಕೋಟಿ ನಮನ


Click it and Unblock the Notifications










