ಬರ್ತಿದ್ದಾರೆ 'ತರ್ಲೆ ನನ್ ಮಕ್ಳು' ಹುಷಾರು ಗುರು
ಕನ್ನಡ ಚಿತ್ರರಂಗದ ಮಟ್ಟಿಗೆ 'ತರ್ಲೆ ನನ್ ಮಗ' (1992) ಚಿತ್ರ ವಿಭಿನ್ನ ಪ್ರಯತ್ನ ಎಂದೇ ಹೇಳಬೇಕು. ಕಾರಣ ಈ ಚಿತ್ರ ಉಪೇಂದ್ರ ನಿರ್ದೇಶಕರಾಗಿ ಬೆಳಕಿಗೆ ಬರಲು, ನವರಸ ನಾಯಕ ಜಗ್ಗೇಶ್ ಅವರಿಗೆ ಟರ್ನ್ ನೀಡಿದ ಚಿತ್ರ. ಹಾಗೆಯೇ ರಾಮ್ ಬಾಬು ಬ್ಯಾನರ್ಗೂ ಆರ್ಥಿಕ ಶಕ್ತಿ ತುಂಬಿತ್ತು. ಈಗ ಅದೇ ಶೀರ್ಷಿಕೆಯನ್ನು ಕೊಂಚ ಬದಲಾಯಿಸಿ 'ತರ್ಲೆ ನನ್ ಮಕ್ಳು' ಚಿತ್ರ ಮಾಡುತ್ತಿದ್ದಾರೆ.
'ತರ್ಲೆ ನನ್ ಮಕ್ಳು' ಚಿತ್ರದ ಮೊದಲ ವಿಶೇಷ ಅಂದರೆ ಉಪೇಂದ್ರ ಹಾಗು ಜಗ್ಗೇಶ್ ಅವರು ಈ ಚಿತ್ರಕ್ಕೆ ತಲಾ ಒಂದು ಹಾಡನ್ನು ಹಾಡುತ್ತಿದ್ದಾರೆ. ಇದೆ ಅಲ್ಲದೆ ಐವರು ನಿರ್ದೇಶಕರು ಬರೆದ ಹಾಡನ್ನು ಐವರು ನಾಯಕರು ಹಾಡುತ್ತಿದ್ದಾರೆ.
ನಿರ್ದೇಶಕರಾದ ವಿ ನಾಗೇಂದ್ರಪ್ರಸಾದ್, ಮಳವಳ್ಳಿ ಸಾಯಿಕೃಷ್ಣ, ಎ ಪಿ ಅರ್ಜುನ್, ಸುನಿ ಹಾಗೂ ವಿ ಮನೋಹರ್ ರಚಿಸಿರುವ ಹಾಡನ್ನು ಉಪೇಂದ್ರ, ಜಗ್ಗೇಶ್, ನೆನಪಿರಲಿ ಪ್ರೇಮ್ ಕುಮಾರ್, ಶ್ರೀನಗರ ಕಿಟ್ಟಿ ಹಾಗೂ ನಟ ನಿರ್ದೇಶಕ ಪ್ರೇಮ್ ಧ್ವನಿಗೂಡಿಸಲಿದ್ದಾರೆ. ಅಂದಹಾಗೆ 'ತರ್ಲೆ ನನ್ ಮಕ್ಳು' ಚಿತ್ರದ ಹಾಡಿನ ಸಂಯೋಜನೆ ಮುಹೂರ್ತ ಕಳೆದ ಶುಕ್ರವಾರ ವರಮಹಾಲಕ್ಷ್ಮಿ ಹಬ್ಬದ ದಿನದಂದು ನೆರವೇರಿತು.

ಅಂದಿನ ಹಾಡುಗಳ ಸಂಯೋಜನೆ ಮುಹೂರ್ತದಲ್ಲಿ ಅಶ್ವಿನಿ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಹಾಜರಿದ್ದ ಉಪೇಂದ್ರ ಅವರು ಸಹ ಕಾಗೆಗೆ ಕರಡಿಗೆ ಫೇರ್ ಅಂಡ್ ಲವ್ಲಿ ಯಾಕ್ಲ.. ಹಿಟ್ಟಿಲ್ಲ ಹೊಟ್ಟೆಗೆ ಲವ್ವು ಡವ್ವು ಬೆಕ್ಲಾ... ಎಂದು ಪ್ರಾರಂಭ ಆಗುವ ಹಾಡನ್ನು ಹೇಳುವುದಾಗಿ ತಿಳಿಸಿದರು.
ಉಪೇಂದ್ರ ಹಾಗೂ ಜಗ್ಗೇಶ್ ಅವರ ಉಪಸ್ಥಿತಿಯಲ್ಲಿ ಪ್ರಾರಂಭವಾದ 'ತರ್ಲೆ ನನ್ ಮಕ್ಳು' ಹಾಡುಗಳ ಸಂಯೋಜನೆ ಮುಹೂರ್ತ ಸಮಾರಂಭ ಹೆಚ್ಚು ಕಳೆ ಕಟ್ಟಿತು. ಅಂದಹಾಗೆ ಹೊಸ ಕನಸುಗಳನ್ನು ಹೊತ್ತು ನಿರ್ದೇಶಕ ಪ್ರೇಮ್ ಅವರ ಶಿಷ್ಯ ರಾಕೇಶ್ ಸ್ವತಂತ್ರ ನಿರ್ದೇಶಕರಾಗಿ ಆಗಮಿಸುತ್ತ್ತಿದ್ದಾರೆ.
ಜೋಗಿ, ಪ್ರೀತಿ ಏಕೆ ಭೂಮಿಮೇಲಿದೆ, ರಾಜ್ ದಿ ಶೋ ಮ್ಯಾನ್ ಹಾಗೂ ಜೋಗಯ್ಯ ಚಿತ್ರಗಳಿಗೆ ಸಹಾಯಕರಾಗಿ ದುಡಿದ ಅನುಭವ ಇರುವ ರಾಕೇಶ್ ಮೂಲತಃ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನವರು. ಹಾಸ್ಯ ಚಿತ್ರಗಳ ನೆನಪಿನಲ್ಲಿ ಯೋಚಿಸುತ್ತ ಇದ್ದಾಗ ಅವರಿಗೆ ಮೊದಲು ನೆನಪಾಗುವುದು ಜಗ್ಗೇಶ್ ಅವರ 'ತರ್ಲೆ ನನ್ನ ಮಗ'.
ಅದರ ಶೀರ್ಷಿಕೆ ಇಟ್ಟುಕೊಂಡೇ ಅವರು ತಮ್ಮ ಯೋಚನೆಗಳನ್ನು ಅಭಿವೃದ್ಧಿಗೊಳಿಸಿ ನಿರ್ಮಾಪಕ ಸಚ್ಚಿದಾನಂದ್ ಮತ್ತು ಸುರೇಶ್ ಕುಮಾರ್ ಅವರನ್ನು ಸಂಪರ್ಕಿಸಿದರು. ಗ್ರೀನ್ ಲೈನ್ ಟ್ರಾವೆಲ್ಸ್ ಅಡಿಯಲ್ಲಿ ಈ 'ತರ್ಲೆ ನನ್ ಮಕ್ಳು' ಸೆಪ್ಟೆಂಬರ್ ಮೊದಲ ವಾರದಲ್ಲಿ ಸೆಟ್ಟೇರಲಿದೆ.
ಇದೊಂದು ನೈಜ ಕಥೆಯನ್ನು ಆಧಾರವಾಗಿಟ್ಟುಕೊಂಡು ಸಿದ್ಧಪಡಿಸಿದ ಚಿತ್ರಕಥೆ. ಮನರಂಜನೆಯೇ ಮೂಲ ಉದ್ದೇಶ. ಬೆಂಗಳೂರಿನಲ್ಲಿ ಮಾತಿನ ಭಾಗದ ಹಾಗೂ ಮೂರು ಹಾಡುಗಳನ್ನು ಚಿತ್ರೀಕರಣ ಮಾಡಿ ಎರಡು ಹಾಡುಗಳನ್ನು ಹಾಂಗ್ ಕಾಂಗ್ ಅಲ್ಲಿ ಚಿತ್ರೀಕರಿಸಲಾಗುವುದು.
ಈ ಚಿತ್ರದ ಮುಖಾಂತರ ಸೂರ್ಯವಂಶಿ -ಡೀಜೆ ಅವರ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಜೇರಾಲ್ಡ್ ಈ ಚಿತ್ರಕ್ಕೆ ಛಾಯಾಗ್ರಹಣ ಮಾಡಲಿದ್ದಾರೆ.
ಅಪ್ಪಟ ಕನ್ನಡ ಬಲ್ಲ ನಾಯಕಿಗಾಗಿ ಹುಡುಕಾಟ ನಡೆಯುತ್ತಿದೆ. ಪೋಷಕ ಕಲಾವಿದರ ಪಟ್ಟಿಯು ಸಿದ್ಧ ಆಗುತ್ತಿದೆ ಎನ್ನುತ್ತಾರೆ ನಿರ್ದೇಶಕ ರಾಕೇಶ್. (ಒನ್ಇಂಡಿಯಾ ಕನ್ನಡ)


Click it and Unblock the Notifications











