ಕನ್ನಡದ ರಿಯಲ್ ಟಾರ್ಜನ್ 'ಕೋತಿರಾಜ್'
ಇಂಡಿಯನ್ ಟಾರ್ಜನ್ ಅಂತಲೇ ಕರೆಸಿಕೊಳ್ಳುವ ಚಿತ್ರದುರ್ಗದ ಸಾಹಸಿಗ ಜ್ಯೋತಿರಾಜನ ಜೀವನ ಕಥೆ ಈಗ ಬೆಳ್ಳಿ ತೆರೆಯ ಮೇಲೆ ಬರುತ್ತಿದೆ. ಗಗನ ಚುಂಬಿ ಕಟ್ಟಡಗಳನ್ನು ಕೋತಿಯಂತೆ ನಿರಾಯಾಸವಾಗಿ ಏರುವ ಈ ವೀರನ ಬಗ್ಗೆ ಸಿನಿಮಾ ಮಾಡುತ್ತಿರುವವರು ವಿ.ಜಿ.ಸ್ಟುಡಿಯೋ ಮಾಲೀಕರಾದ ಸೆಬಾಸ್ಟಿನ್ ಡೇವಿಡ್.
ಈ ಹಿಂದೆ ಡೇವಿಡ್ 'ಕಳ್ಳ ಬಂದ ಕಳ್ಳ' ಸೇರಿದಂತೆ 2 ಚಿತ್ರಗಳನ್ನು ನಿರ್ಮಿಸಿದ್ದರು. ಜನವರಿ 23 ರಂದು ಗಾಂಧಿನಗರದ ಮೋತಿಮಹಲ್ ಹೋಟೆಲ್ ನಲ್ಲಿ ಈ ಚಿತ್ರದ ಮುಹೂರ್ತ ನೆರೆವೇರಿತು. ಚಿತ್ರದ ಪ್ರಥಮ ದೃಶ್ಯಕ್ಕೆ ವಾರ್ತಾಸಚಿವರಾದ ರೋಷಮ್ ಬೇಗ್ ಕ್ಯಾಮರಾ ಸ್ಚಿಚ್ ಆನ್ ಮಾಡಿದರೆ, ಲಯನ್ ರಮೇಶ್ ಬಾಬು ಕ್ಲಾಪ್ ಮಾಡಿದರು.
ಜ್ಯೋತಿರಾಜ (ಕೋತಿ ರಾಜ) ಜೊತೆ ನಾಯಕಿಯರಾಗಿ ದೀಪಿಕಾ ದಾಸ್ ಹಾಗೂ ಐಶಾನಿ ನಟಿಸುತ್ತಿದ್ದಾರೆ. ಮುಹೂರ್ತದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಡೇವಿಡ್, ಜ್ಯೋತಿರಾಜ್ ಅವರ ಅದ್ಭುತ ಸಾಹಸದ ವರದಿಗಳನ್ನು ಮಾಧ್ಯಮಗಳಲ್ಲಿ ನೋಡಿದಾಗ ಈ ವೃತ್ತಿಯ ಬಗ್ಗೆ ಒಂದು ಸಿನಿಮಾ ಮಾಡಬೇಕು ಎಂದು ಯೋಚಿಸಿ ಆತನ ಬಗ್ಗೆ ವಿವರಗಳನ್ನು ಸಂಗ್ರಹಿಸುತ್ತಾ ಹೋದಂತೆ ನನಗೆ ನಿಜಕ್ಕೂ ಆಶ್ಚರ್ಯವೆನಿಸಿತು.

ಜೋಗ್ ಫಾಲ್ಸ್ ನಲ್ಲಿ ಕೋತಿರಾಜ್ ಕ್ಲೈಮ್ಯಾಕ್ಸ್
ಒಬ್ಬ ಸಾಮಾನ್ಯ ಮನುಷ್ಯನ ಅಸಾಮಾನ್ಯ ಸಾಹಸದ ಕಥೆ ಇಟ್ಟುಕೊಂಡು ಈ ಸಿನಿಮಾ ಮಾಡಲು ಹೊರಟಿದ್ದು ನಿಜಕ್ಕೂ ಸಾರ್ಥಕ ಎನಿಸಿತು. ಆತನನ್ನು ಸಂಪರ್ಕಿಸಿ ನಿಜ ಜೀವನದ ಘಟನೆಗಳು ಹಾಗೂ ಕಾಲ್ಪನಿಕ ಕಥೆ ಸೇರಿಸಿ ಸ್ಕ್ರಿಪ್ಟ್ ಮಾಡಿಕೊಂಡಿದ್ದೇನೆ. ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯವನ್ನು ಜೋಗ್ ಫಾಲ್ಸ್ ನಲ್ಲಿ ಸುಮಾರು 9 ಕ್ಯಾಮರಾಗಳನ್ನು ಉಪಯೋಗಿಸಿಕೊಂಡು ಚಿತ್ರೀಕರಿಸಲಾಗುವುದು. ಕನ್ನಡದ ಮಟ್ಟಿಗೆ ಇದೊಂದು ವಿಶೇಷ ಚಿತ್ರವಾಗಲಿದೆ ಎಂದಿದ್ದಾರೆ.

ನನಗೆ ಅನ್ನ ನೀಡಿದ್ದು ಕನ್ನಡದ ಜನತೆ
ಕೋತಿರಾಜ ಈ ಚಿತ್ರದಲ್ಲಿ ಟಾರ್ಜನ್ ಶೈಲಿಯ ಸಾಹಸಗಳನ್ನು ಮಾಡಲಿದ್ದಾರೆ ಎಂದು ಹೇಳಿದರು. ಅಂದಿನ ಕೇಂದ್ರ ವ್ಯಕ್ತಿ ಕೋತಿರಾಜ್ ಮಾತನಾಡುತ್ತ, "ನಾನು ಹುಟ್ಟಿದ್ದು ತಮಿಳುನಾಡು. ಆದರೆ ನನಗೆ ಅನ್ನ ನೀಡಿದ್ದು ಕನ್ನಡ ಜನತೆ, ಚಿತ್ರದುರ್ಗದಲ್ಲಿ ನನ್ನ ಜೀವನ ಆರಂಭವಾಯಿತು. ಈ ಚಿತ್ರಕ್ಕಾಗಿ ಕುಂಗ್ಫು ಸೇರಿದಂತೆ ಹಲವಾರು ಸಾಹಸ ಕಲೆಗಳನ್ನು ಕಲಿತಿದ್ದೇನೆ. ನಾನೇನೆ ಮಾಡಿದರೂ ಅದರ ಕೀರ್ತಿ ಕರ್ನಾಟಕಕ್ಕೇ ಸಲ್ಲಬೇಕು ಎಂದರು.

ಪ್ರತಿ ಮನೆಮನೆಯಲ್ಲೂ ನನ್ನ ತರಹದ ಸಾಹಸಿಗ ಹುಟ್ಟಬೇಕು
ಈ ಹಿಂದೆ ಡಿಸ್ಕವರಿ ಚಾನೆಲ್ ನವರು ನನಗೆ ಒಂದು ಪ್ರೋಗ್ರಾಂ ನೀಡಲು ಆಹ್ವಾನಿಸಿದ್ದರು. ನಾನು ಒಪ್ಪಿದ್ದಿಲ್ಲ. ಈ ಚಿತ್ರ ನೋಡಿದವರಿಗೆ ಮನೆ ಮನೆಗಳಲ್ಲೂ ನನ್ನ ತರಹದ ಸಾಹಸಿಗ ಹುಟ್ಟಬೇಕು ಎಂದು ಅನಿಸುತ್ತದೆ. ವಿಧಾನಸೌಧದ ಬಳಿಯ ವಿಶ್ವೇಶ್ವರಯ್ಯ ಟವರ್, ಎಂ.ಜಿ.ರಸ್ತೆಯ ಯುಟಿಲಿಟಿ ಬಿಲ್ಡಿಂಗ್ ಹತ್ತಲು ಅನುಮತಿ ಕೇಳಿದ್ದೇವೆ. ನಾನೇನು ಎಂಬುದನ್ನು ಕರ್ನಾಟಕದ ಜನತೆ ನೋಡಬೇಕು. ಅನ್ನೋದೇ ನನ್ನ ನಿಜವಾದ ಆಸೆಯಾಗಿತ್ತು ಎಂದು ತನ್ನ ಬಗ್ಗೆ, ಚಿತ್ರದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು ಜ್ಯೋತಿರಾಜ್.

ಬುರ್ಜ್ ಖಲೀಫಾ ಕಟ್ಡಡವನ್ನು ಒಮ್ಮೆ ಏರಬೇಕೆಂಬ ಆಸೆ
ಮುಖ್ಯವಾಗಿ ದುಬೈನಲ್ಲಿ 1633 ಅಡಿ ಎತ್ತರವಿರುವ ಪ್ರಪಂಚದ ಅತಿ ಎತ್ತರದ ಬುರ್ಜ್ ಖಲೀಫಾ ಕಟ್ಡಡವನ್ನು ಒಮ್ಮೆ ಏರಬೇಕೆಂಬ ಆಸೆ ಇರುವುದಾಗಿಯೂ ಹೇಳಿಕೊಂಡರು. ಇವರಿಗೆ ಈಗಾಗಲೇ ಸಾಹಸಗಳನ್ನು ಮಾಡುವ ಸಂದರ್ಭದಲ್ಲಿ ದೇಹದ 28 ಕಡೆ ಪೆಟ್ಟಾಗಿದೆಯಂತೆ.

ಜೋಗದ ಗುಂಡಿಗೆ ಇಳಿಯಲಿರುವ ನಾಯಕಿ
ನಾಯಕಿ ಐಶಾನಿ ಬೆಂಗಳೂರಿನ ಹುಡುಗಿ. ಕ್ಲೈಮ್ಯಾಕ್ಸ್ ನಲ್ಲಿ ಜೋಗದ ಗುಂಡಿಯನ್ನು ನಾಯಕನ ಜೊತೆ ಇಳಿದು ಹತ್ತುವ ದೃಶ್ಯ ಅವರಿಗೂ ಇದೆಯಂತೆ. ಇನ್ನೊಬ್ಬ ನಾಯಕಿ ದೀಪಿಕಾ ದಾಸ್ ಚಿತ್ರದಲ್ಲಿ ಒಬ್ಬ ಪತ್ರಕರ್ತೆಯ ಪಾತ್ರ ನಿರ್ವಹಿಸುತ್ತಿದ್ದಾರೆ. ನಾಯಕನಿಗೆ ಬೆಂಬಲವಾಗಿ ನಿಲ್ಲುವ ಪಾತ್ರವಂತೆ.

ಎಲ್ಲೆಲ್ಲಿ ಜ್ಯೋತಿ ಅಲಿಯಾಸ್ ಕೋತಿರಾಜ್ ಚಿತ್ರೀಕರಣ?
ಬೆಂಗಳೂರು ಜೋಗ, ರಾಮನಗರ, ಚೆನ್ನಪಟ್ಟಣ ಹಾಗೂ ಚಿತ್ರದುರ್ಗದಲ್ಲಿ ಜ್ಯೋತಿ ಅಲಿಯಾಸ್ ಕೋತಿರಾಜ ಚಿತ್ರದ ಚಿತ್ರೀಕರಣ ನಡೆಯಲಿದೆ. ಚಿತ್ರಕ್ಕೆ ಸೆವೆನ್ ಸ್ಟಾರ್ ಭಾಸ್ಕರ್ ಸಂಗೀತ, ಮೋಹನ್ ಕುಮಾರ್ ಛಾಯಾಗ್ರಹಣ, ಕುಂಗ್ಫು ಬಾಲು ಸಾಹಸ, ತ್ರಿಭುವನ್, ಚಾಮರಾಜ್ ನೃತ್ಯ ನಿರ್ದೇಶನವಿದೆ.


Click it and Unblock the Notifications











