ಅಖಂಡ ಕರ್ನಾಟಕ: ಬೆಳಗಾವಿಯಲ್ಲಿ ಶಿವಣ್ಣ ಹೇಳಿದ್ದೇನು?
ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್ ಬೆಳಗಾವಿ ಮತ್ತು ಧಾರವಾಡ ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ ವಿವಿಧ ಕಾರ್ಯಕ್ರಮದಲ್ಲಿ ಸೋಮವಾರ (ಏ 27) ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ ಶಿವಣ್ಣ, ಅಖಂಡ ಕರ್ನಾಟಕ ಇಬ್ಬಾಗಕ್ಕೆ ನನ್ನ ಬೆಂಬಲವಿಲ್ಲ ಎಂದು ಹೇಳಿದ್ದಾರೆ.
ನವಲಗುಂದ, ಬೈಲಹೊಂಗಲ, ಬೆಳಗಾವಿಯಲ್ಲಿ ನಡೆದ ಬೇರೆ ಬೇರೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಶಿವಣ್ಣ, ಕಲಾವಿದರು ತಮ್ಮ ಅಭಿಮಾನಿಗಳನ್ನು ತಮ್ಮ ಸ್ನೇಹಿತರಂತೆ ಕಾಣಬೇಕು. ನಾವೆಲ್ಲಾ ಅಪ್ಪಾಜಿ ಮಾರ್ಗದರ್ಶನದಲ್ಲೇ ನಡೆಯುತ್ತಿದ್ದೇವೆ ಎಂದಿದ್ದಾರೆ. (ವಜ್ರಕಾಯ ಧ್ವನಿಸುರುಳಿ ವಿಮರ್ಶೆ)
ಬೆಳಗಾವಿಯ ಜಿಲ್ಲಾ 'ಕಲಾ ಕಂಠೀರವ' ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘ ಆಯೊಜಿಸಿದ್ದ 15ನೇ ವಾರ್ಷಿಕೋತ್ಸವ, ನೇತ್ರದಾನ ಶಿಬಿರ ಉದ್ಘಾಟಿಸಿ ಮಾತನಾಡುತ್ತಿದ್ದ ಶಿವಣ್ಣ, ಗಡಿಭಾಗದಲ್ಲಿ ಅಪ್ಪಾಜಿಯ ಸಾಕಷ್ಟು ಅಭಿಮಾನಿಗಳಿದ್ದಾರೆ. ಅಭಿಮಾನಿಗಳಿಂದ ದೂರ ಸರಿಯಬಾರದು ಎನ್ನುವ ಕಾರಣಕ್ಕಾಗಿಯೇ ಅಪ್ಪಾಜಿ ನೇತ್ರದಾನ ಮಾಡಿದ್ದು ಎಂದು ತಂದೆಯನ್ನು ನೆನಪಿಸಿಕೊಂಡಿದ್ದಾರೆ.
ನಮ್ಮ ಭಾಷೆಗಾಗಿ ಮತ್ತು ಅಭಿಮಾನಿಗಳಿಗಾಗಿ ಪ್ರಾಣ ಬೇಕಾದರೂ ಕೊಡಲು ನಾನು ಸದಾ ಸಿದ್ಧ ಎಂದ ಶಿವಣ್ಣ, ರಾಜ್ಯ ಉತ್ತರ ಮತ್ತು ದಕ್ಷಿಣ ಕರ್ನಾಟಕ ಎಂದು ಇಬ್ಭಾಗವಾವುದು ಬೇಡ. ಇದಕ್ಕೆ ನನ್ನ ಬೆಂಬಲವಿಲ್ಲ, ನಮ್ಮ ರಾಜ್ಯ ಅಖಂಡ ಕರ್ನಾಟಕವಾಗಿಯೇ ಉಳಿಯಬೇಕೆಂದು ಶಿವಣ್ಣ ಆಗ್ರಹಿಸಿದ್ದಾರೆ.
ಶಿವಣ್ಣನ ಅಭಿಮಾನಿಗಳ ಮೇಲೆ ಲಘು ಲಾಠಿಪ್ರಹಾರ..

ಬೈಲಹೊಂಗಲದ ಕಾರ್ಯಕ್ರಮ
ಬೈಲಹೊಂಗಲ ಪಟ್ಟಣದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್ ಭಾಗವಹಿಸಿದ್ದರು. ಶಿವಣ್ಣ ಆಗಮಿಸುತ್ತಿದ್ದಾರೆ ಎನ್ನುವ ಸುದ್ದಿ ತಿಳಿದು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. ಶಿವಣ್ಣ ಆಗಮಿಸುವ ವೇಳೆ ವಿಪರೀತ ನೂಕುನುಗ್ಗಲು ಉಂಟಾಗಿದ್ದರಿಂದ ಪೊಲೀಸರು ಲಘು ಲಾಠಿಪ್ರಹಾರ ನಡೆಸ ಬೇಕಾಯಿತು.

ರಾಜಕೀಯ ಸಹವಾಸ ಸಾಕು
ನಮ್ಮದು ಕಲಾವಿದರ ಕುಟುಂಬ. ಲೋಕಸಭೆ ಚುನಾವಣೆಗೆ ನನ್ನ ಪತ್ನಿ ಸ್ಪರ್ಧಿಸಿದ್ದಳು. ಸೋಲು, ಗೆಲುವು ಆಮೇಲಿನ ಲೆಕ್ಕಾಚಾರ, ಒಟ್ಟಾರೆ ನಮ್ಮ ಕುಟುಂಬಕ್ಕೆ ರಾಜಕೀಯ ಆಗಿ ಬರೋಲ್ಲ. ರಾಜಕೀಯದ ಸಹವಾಸವೇ ಬೇಡ ಎನ್ನುವ ನಿರ್ಧಾರಕ್ಕೆ ನಾವು ಬಂದಿದ್ದೇವೆ.

ಡಬ್ಬಿಂಗ್ ಚಳುವಳಿ
ಶಿವರಾಜ್ ಕುಮಾರ್ ಡಬ್ಬಿಂಗ್ ವಿರೋಧಿ ಚಳುವಳಿಯಲ್ಲಿ ಕನ್ನಡ ಚಿತ್ರೋದ್ಯಮದ ಪರವಾಗಿ ಮಂಚೂಣಿಯಲ್ಲಿ ನಿಂತು ಹೋರಾಟ ನಡೆಸಿದವರು. ಅವರ ಹೋರಾಟಕ್ಕೆ ಅಭೂತಪೂರ್ವ ಬೆಂಬಲವೂ ಸಿಕ್ಕಿತ್ತು. ಉತ್ತರ ಕರ್ನಾಟಕದ ಭಾಗದಲ್ಲಿ ಶಿವಣ್ಣ ನೀಡಿರುವ 'ಅಖಂಡ ಕರ್ನಾಟಕ' ಹೇಳಿಕೆಯ ಪರವಾಗಿ ಸ್ಯಾಂಡಲ್ ವುಡ್ ನಿಲ್ಲುವುದಂತೂ ಖಂಡಿತ.

ನವಲಗುಂದದಲ್ಲಿ ಕುಣಿದು ಕುಪ್ಪಳಿಸಿದ ಶಿವಣ್ಣ
ನವಲಗುಂದದಲ್ಲಿ ರಾಜ್ ಅಭಿಮಾನಿ ಬಳಗ ನಿರ್ಮಿಸಿದ "ಡಾ. ರಾಜಕುಮಾರ ಭವನ" ಉದ್ಘಾಟಿಸಿ, ಶಂಕರ ಕಾಲೇಜು ಮೈದಾನದಲ್ಲಿ ಅಭಿಮಾನಿಗಳ ಒತ್ತಾಯದ ಮೇರೆಗೆ ಹಾಡಿ, ಕುಣಿದು ಜನರನ್ನು ಶಿವಣ್ಣ ರಂಜಿಸಿದರು.

ಬೆಳಗಾವಿಯಲ್ಲಿ ಅಷ್ಟಾಗಿ ಜನ ಸೇರಿಲ್ಲ
ನಗರದ ಸಿಪಿಎಡ್ ಮೈದಾನದಲ್ಲಿ ಮಧ್ಯಾಹ್ನ ಸುಡು ಬಿಸಿಲಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಹಾಗಾಗಿ, ಅಲ್ಲಿ ಅಭಿಮಾನಿಗಳ ಕೊರತೆ ಎದ್ದು ಕಾಣುತ್ತಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ನಾಯಕಿ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, ಶಿವಣ್ಣ ಅವರನ್ನು ಹತ್ತಿರದಿಂದ ನೋಡುವ ಭಾಗ್ಯ ದೇವರು ಇಂದು ನನಗೆ ನೀಡಿದ್ದಾನೆ. ನಾನು ಅವರ ಅಭಿಮಾನಿ ಎಂದು ಅಭಿಮಾನದ ಮಾತನ್ನಾಡಿದ್ದಾರೆ. (ಚಿತ್ರದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್)


Click it and Unblock the Notifications











