ಕನ್ನಡ ಪ್ರತಿಭೆಗೆ ಮತ್ತೆ ಮಣೆ ಹಾಕಿದ ವರ್ಮಾ
ಕನ್ನಡ ಮಣ್ಣಿನ ಅಪ್ಪಟ ಪ್ರತಿಭೆ ಕಿಶೋರ್ ಅವರಿಗೆ ಅಪೂರ್ವ ಅವಕಾಶ ಒದಗಿ ಬಂದಿದೆ. ದಕ್ಷಿಣ ಭಾರತ ಚಿತ್ರರಂಗದಲ್ಲಿ ಪ್ರಕಾಶ್ ರೈ ನಂತರ ಸಮರ್ಥವಾಗಿ ಬೆಳೆಯುತ್ತಿರುವ ಕಿಶೋರ್ ಅವರ ಮೇಲೆ ಜನಪ್ರಿಯ ಚಿತ್ರಕರ್ಮಿ ರಾಮ್ ಗೋಪಾಲ್ ವರ್ಮಾ ಅವರ ಕಣ್ಣು ಬಿದ್ದಿದೆ.
ಕನ್ನಡದಲ್ಲಿ ಬಿಎಂ ಗಿರಿರಾಜ್ ಅವರ 'ಜಟ್ಟ' ದಲ್ಲಿ ಉತ್ತಮ ಅಭಿನಯ ನೀಡಿರುವ ಕಿಶೋರ್ ಅವರು 2014ರಲ್ಲಿ ಸಿಂಪಲ್ಲಾಗೊಂದ್ ಲವ್ ಸ್ಟೋರಿ ಖ್ಯಾತಿಯ ರಕ್ಷಿತ್ ಶೆಟ್ಟಿ ಅಭಿನಯಿಸಿ ನಿರ್ದೇಶಿಸಿರುವ 'ಉಳಿದವರು ಕಂಡಂತೆ' ಚಿತ್ರದಲ್ಲಿ ಸಾಫ್ಟ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರ ಬೆನ್ನಲ್ಲೇ ರಾಮ್ ಗೋಪಾಲ್ ವರ್ಮಾ ಅವರ ಮುಂದಿನ ಒಟ್ಟು(Ottu) ಒಪ್ಪಿಕೊಂಡಿದ್ದಾರೆ.
ಹೈದರಾಬಾದಿನಲ್ಲಿ ವರ್ಮಾ ಚಿತ್ರದ ಶೂಟಿಂಗ್ ಚಾಲ್ತಿಯಲ್ಲಿದೆ. 2013ರಲ್ಲಿ ಜಟ್ಟ, ಅಟ್ಟಹಾಸ, ಹರಿದಾಸ್ ಸೇರಿದಂತೆ ಉತ್ತಮ ಪಾತ್ರಗಳನ್ನು ನಿರ್ವಹಿಸಿರುವ ಕಿಶೋರ್ ಈಗ ವರ್ಮಾ ಫಿಲಂ ಫ್ಯಾಕ್ಟರಿ ಸೇರುತ್ತಿದ್ದಾರೆ.

ಬೆಂಗಳೂರು ಮಿರರ್ ವರದಿ ಮಾಡಿರುವಂತೆ ಒಟ್ಟು ಚಿತ್ರ ರಾಯಲಸೀಮೆಯ ಹಿನ್ನೆಲೆಯ ಕಥೆ ಹೊಂದಿದೆಯಂತೆ ಮೋಹನ್ ಬಾಬು ಅವರ ಮಗನ ಪಾತ್ರದಲ್ಲಿ ಕಿಶೋರ್ ಕಾಣಿಸಿಕೊಳ್ಳುತ್ತಿದ್ದಾರಂತೆ. ಚಿತ್ರದಲ್ಲಿ ನನ್ನ ಪಾತ್ರದ ಬಗ್ಗೆ ಈಗಲೇ ಏನೂ ಹೇಳಲಾರೆ. ಸಮರ್ಥವಾದ ಪಾತ್ರಸೃಷ್ಟಿಯಾಗಿದೆ ಎನ್ನಬಹುದು ಅಷ್ಟೇ ಎಂದು ಕಿಶೋರ್ ಪ್ರತಿಕ್ರಿಯಿಸಿದ್ದಾರೆ.
ರಾಮ್ ಗೋಪಾಲ್ ವರ್ಮಾ ಜತೆ ಕೆಲಸ ಮಾಡಿದ ಅನುಭವದ ಮೊದಲ ಕೆಲವು ದಿನಗಳಲ್ಲೇ ವರ್ಮಾ ಅವರ ನಿರ್ದೇಶನ, ಸಿನಿಮಾ ನಿರ್ಮಾಣದ ಕಲೆಗೆ ಕಿಶೋರ್ ಮಾರುಹೋಗಿದ್ದಾರೆ. ಪಾತ್ರಗಳ ಮೂಲಕ ಕಥೆಯನ್ನು ಹೇಳುವ ವರ್ಮಾ ಅವರ ಮೇಕಿಂಗ್ ಎಲ್ಲರಿಗೂ ಗೊತ್ತೇ ಇದೆ. ನನಗೆ ಇನ್ನಷ್ಟು ಕಲಿಕೆಗೆ ಒಳ್ಳೆ ವೇದಿಕೆ ಒದಗಿಸಿದೆ ಎಂದು ಕಿಶೋರ್ ಸಂತಸ ವ್ಯಕ್ತಪಡಿಸಿದ್ದಾರೆ.
ತಮಿಳಿನಲ್ಲಿ ಇತ್ತೀಚೆಗೆ ಅಜಿತ್, ಆರ್ಯ ಅಭಿನಯದ ಆರಂಭಂನಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಿಶೋರ್ ಮಿಂಚಿದ್ದರು. 2013 ನನಗೆ ತೃಪ್ತಿಕೊಟ್ಟ ವರ್ಷ ಎನ್ನುವ ಕಿಶೋರ್ ಅವರು ಅಟ್ಟಹಾಸ ಚಿತ್ರ ಫ್ಲಾಪ್ ಎಂದರೆ ಮಾತ್ರ ಬೇಜಾರು ಮಾಡಿಕೊಳ್ಳುತ್ತಾರೆ.


Click it and Unblock the Notifications










