ದೀಪಾವಳಿಗೆ ಪಟಾಕಿ ಹಚ್ಚಿದವರು ದುಷ್ಟರು ಎಂದ ಐಂದ್ರಿತಾ; 'ಕಾಡುಬೆಟ್ಟು ಶಿವ'ನ ಕೌಂಟರ್!
ಬೆಳಕಿನ ಹಬ್ಬ ದೀಪಾವಳಿಗೆ ದಿನಗಣನೆ ಆರಂಭವಾಗಿದೆ. ಅದರಂತೆ ದೀಪಾವಳಿ ಕುರಿತಾದ ಸಾಮಾಜಿಕ ಚರ್ಚೆಗಳು ಸಹ ಹೆಚ್ಚಾಗತೊಡಗಿವೆ.
ದೀಪಾವಳಿ ಸಮಯ ಹತ್ತಿರ ಬಂದಾಗ ಪಟಾಕಿ ಸಿಡಿಸಬೇಡಿ, ಪರಿಸರ ಮಾಲಿನ್ಯ ಮಾಡಬೇಡಿ ಹಾಗೂ ಅಸ್ತಮಾ ರೋಗಿಗಳಿಗೆ ತೊಂದರೆ ನೀಡಬೇಡಿ ಎಂದು ಪೋಸ್ಟ್ ಹಾಕುವ ನೆಟ್ಟಿಗರು ರೋಸ್ಟ್ ಆಗಿದ್ದೇ ಹೆಚ್ಚು! ಹಬ್ಬಗಳ ವಿಚಾರವಾಗಿ ಇಂಥ ಆಚರಣೆ ಬೇಡ ಎಂದಿದ್ದ ವಿರಾಟ್ ಕೊಹ್ಲಿಯನ್ನೇ ಬಿಡದ ಜನ ಸಿನಿಮಾ ಮಂದಿಯನ್ನು ಬಿಡ್ತಾರಾ. ಸದ್ಯ ಕನ್ನಡ ಚಿತ್ರರಂಗದ ವಿಚಾರವಾಗಿ ಸದ್ಯ ಆಗುತ್ತಿರುವುದೂ ಅದೇ.
ನಟ ದಿಗಂತ್ ಪತ್ನಿ ನಟಿ ಐಂದ್ರಿತಾ ರೇ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ದೇಶದ ಹಲವು ರಾಜ್ಯಗಳು ಪಟಾಕಿಯನ್ನು ನಿಷೇಧಿಸಿವೆ, ಅದೇ ರೀತಿ ಎಲ್ಲ ರಾಜ್ಯಗಳೂ ಸಹ ಪಟಾಕಿಯನ್ನು ಬ್ಯಾನ್ ಮಾಡಬೇಕು, ಇದರಿಂದ ಅಸ್ತಮಾ ರೋಗಿಗಳಿಗೆ ಮಕ್ಕಳಿಗೆ ಹಾಗೂ ಸಾಕು ಪ್ರಾಣಿಗಳಿಗೆ ತೊಂದರೆ ಉಂಟಾಗುತ್ತದೆ ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಹೀಗೆ ಐಂದ್ರಿತಾ ರೇ ಪೋಸ್ಟ್ ಹಂಚಿಕೊಳ್ಳುತ್ತಿದ್ದಂತೆ ನೆಟ್ಟಿಗರು ಸಾಲು ಸಾಲು ಪ್ರಶ್ನೆಗಳನ್ನು ನಟಿಗೆ ಹಾಕಿದ್ದಾರೆ. ಈ ಪ್ರಶ್ನೆಗಳ ಪೈಕಿ ಕೆಲವೊಂದಕ್ಕೆ ನಟಿ ಐಂದ್ರಿತಾ ರೇ ಸಮಾಧಾನಕರ ಉತ್ತರ ನೀಡಿದ್ದು ಇನ್ನೂ ಕೆಲ ಪ್ರಶ್ನೆಗಳಿಗೆ ಉತ್ತರ ನೀಡದೇ ಸುಮ್ಮನಾಗಿದ್ದಾರೆ. ಸದ್ಯ ಐಂದ್ರಿತಾ ರೇ ಟ್ವೀಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಈ ಕೆಳಕಂಡಂತೆ ನೆಟ್ಟಿಗರಿಂದ ರೋಸ್ಟ್ ಆಗಿದ್ದಾರೆ.

ಕ್ರಿಸ್ ಮಸ್, ಹೊಸ ವರ್ಷ, ಚಿತ್ರ ಬಿಡುಗಡೆಗೂ ಪಟಾಕಿ ಬ್ಯಾನ್ ಆಗಲಿ
ಹೀಗೆ ನಟಿ ಐಂದ್ರಿತಾ ರೇ ದೀಪಾವಳಿ ಪ್ರಯುಕ್ತ ಪಟಾಕಿ ಹಚ್ಚುವುದು ಬೇಡ ಪಟಾಕಿ ಹಚ್ಚುವುದನ್ನು ನಿಷೇಧಿಸಬೇಕು ಎಂದು ಟ್ವೀಟ್ ಮಾಡಿದ ಬೆನ್ನಲ್ಲೇ ನೆಟ್ಟಿಗನೋರ್ವ ಕಾಮೆಂಟ್ ಮಾಡಿದ್ದು, ಕ್ರಿಸ್ ಮಸ್ ಹಾಗೂ ಹೊಸ ವರ್ಷದ ಆಚರಣೆಗೂ ಪಟಾಕಿಯನ್ನು ಬ್ಯಾನ್ ಮಾಡಬೇಕು ಎಂದು ಬರೆದುಕೊಂಡಿದ್ದಾರೆ. ನೆಟ್ಟಿಗನ ಈ ಕಾಮೆಂಟ್ಗೆ ರಿಪ್ಲೈ ಮಾಡಿರುವ ಐಂದ್ರಿತಾ ರೇ ಖಂಡಿತವಾಗಿಯೂ ಆಗಬೇಕು ಎಂದಿದ್ದಾರೆ. ಐಂದ್ರಿತಾ ರೇ ಮಾಡಿರುವ ಈ ರಿಪ್ಲೈಗೆ ಮತ್ತೋರ್ವ ನೆಟ್ಟಿಗರು ಕಾಮೆಂಟ್ ಮಾಡಿದ್ದು, ಹಾಗಾದರೆ ಚಿತ್ರ ಬಿಡುಗಡೆ ಸಂದರ್ಭದಲ್ಲಿಯೂ ಪಟಾಕಿ ಹೊಡೆಯುವುದನ್ನು ಬ್ಯಾನ್ ಮಾಡಿ ಎಂದು ಐಂದ್ರಿತಾ ರೇಗೆ ಕೌಂಟರ್ ನೀಡಿದ್ದಾರೆ.

ಮೊದಲು ನೀವು ಬದಲಾಗಿ ನಂತರ ಜನರನ್ನು ಬದಲಾಯಿಸಿ
ಐಂದ್ರಿತಾ ರೇ ಹೀಗೆ ಉಪದೇಶದ ಪೋಸ್ಟ್ ಹಾಕುತ್ತಿದ್ದಂತೆ ನೆಟ್ಟಿಗನೋರ್ವ ಐಂದ್ರಿತಾ ರೇ 2013ರಲ್ಲಿ ಖರೀದಿಸಿದ್ದ ಕಾರ್ ಫೋಟೋವನ್ನು ಹಂಚಿಕೊಂಡು ಇದರಿಂದ ಪರಿಸರ ಮಾಲಿನ್ಯ ಆಗುವುದಿಲ್ಲವೇ ಎಂದು ಪ್ರಶ್ನೆ ಹಾಕಿದ್ದಾರೆ. ಇದಕ್ಕೆ ಉತ್ತರ ನೀಡಿರುವ ನಟಿ ಇದು 10 ವರ್ಷಗಳ ಹಳೆಯ ಕಾರ್ ಸದ್ಯ ನಾನು ಎಲೆಕ್ಟ್ರಿಕ್ ಕಾರ್ ಹೊಂದಿದ್ದೇನೆ ಮತ್ತು ನನ್ನ ಬಳಿ ಸೈಕಲ್ ಇದೆ ಎಂದು ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಮಾಂಸಾಹಾರ ತ್ಯಜಿಸಿ ಎಂದೂ ಬಂದಿರುವ ಕಾಮೆಂಟ್ ಕುರಿತು ಸಹ ಇದೇ ವೇಳೆ ರೀಪ್ಲೇ ಮಾಡಿರುವ ಐಂದ್ರಿತಾ ರೇ ನಾನು ಮಾಂಸಾಹಾರಿಯಲ್ಲ ಎಂದು ಬರೆದುಕೊಂಡಿದ್ದಾರೆ.

ಎಲೆಕ್ಟ್ರಿಕ್ ಕಾರು ಇದೆ ಎಂದ ಐಂದ್ರಿತಾ ರೇಗೆ ನೆಟ್ಟಿಗರ ಚಾಟಿ!
ಹತ್ತು ವರ್ಷಗಳ ಹಿಂದಿನ ಹಳೆಯ ಫೋಟೋ ಹಂಚಿಕೊಂಡಿದ್ದೀರಾ ನನ್ನ ಬಳಿ ಈಗ ಎಲೆಕ್ಟ್ರಿಕ್ ಕಾರ್ ಇದೆ ಎಂದಿದ್ದ ಐಂದ್ರಿತಾ ರೇಗೆ ಮತ್ತೋರ್ವ ನೆಟ್ಟಿಗ ಐಂದ್ರಿತಾ ರೇ ಮತ್ತು ದಿಗಂತ್ ಮಂಚಾಲೆ ಡೀಸೆಲ್ ವಾಹನಗಳ ಮುಂದೆಯೇ ನಿಂತು ಪೋಸ್ ನೀಡಿರುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ ಹಾಗೂ ಇದರಿಂದ ಎಷ್ಟರಮಟ್ಟಿಗಿನ ಪರಿಸರ ಮಾಲಿನ್ಯವಾಗುತ್ತದೆ ಎಂಬ ಅರಿವು ನಿಮಗಿದೆಯಾ ಎಂದು ಚಾಟಿ ಬೀಸಿದ್ದಾರೆ. ಹಳೆಯ ಕಾರ್ ಚಿತ್ರ ಹಂಚಿಕೊಂಡ ನೆಟ್ಟಿಗರಿಗೆ ರಿಪ್ಲೈ ಮಾಡಿದ ಐಂದ್ರಿತಾ ರೇ ಈ ನೆಟ್ಟಿಗನ ಕಾಮೆಂಟ್ ಕುರಿತು ತುಟಿ ಬಿಚ್ಚಿಲ್ಲ.

ಕಾಂತಾರ ಶೈಲಿಯಲ್ಲಿ ಐಂದ್ರಿತಾ ರೇಗೆ ಕ್ಲಾಸ್
ಇಲ್ಲಿ ಐಂದ್ರಿತಾ ರೇ ಹೇಗೆ ಪಟಾಕಿ ಹಚ್ಚಬೇಡಿ ಎಂದು ಹೇಳಿದ್ದಾರೋ ಅದೇ ರೀತಿ ಕಾಂತಾರ ಚಿತ್ರದಲ್ಲಿ ಕಾಡುಬೆಟ್ಟು ಗ್ರಾಮಸ್ಥರಿಗೆ ಉಪ ವಲಯ ಅರಣ್ಯಾಧಿಕಾರಿ ಮುರಳೀಧರ್ ಪಾತ್ರಧಾರಿ ಕಿಶೋರ್ ಪಟಾಕಿ ಹಚ್ಚಿ ಕಾಡಿನ ಪ್ರಾಣಿಗಳಿಗೆ ತೊಂದರೆ ಕೊಡಬೇಡಿ ಎಂದು ಡೈಲಾಗ್ ಹೊಡೆದಿದ್ದರು. ಆ ದೃಶ್ಯದಲ್ಲಿ ಕಿಶೋರ್ ನೀಡುವ ಉಪದೇಶಕ್ಕೆ ಶಿವ ಪಾತ್ರಧಾರಿ ರಿಷಬ್ ಶೆಟ್ಟಿ 'ಹಾಗಂತ ಪ್ರಾಣಿ ಪಕ್ಷಿಗಳು ನಿಮ್ ಹತ್ರ ಬಂದು ಕಂಪ್ಲೇಂಟ್ ಮಾಡಿದ್ವಾ' ಎಂದು ಕೌಂಟರ್ ನೀಡಿದ್ದರು. ಹೀಗೆ ಈ ಡೈಲಾಗ್ ಇದ್ದ ದೃಶ್ಯದ ವಿಡಿಯೋವನ್ನು ರಿಪ್ಲೈ ಮಾಡಿರುವ ನೆಟ್ಟಿಗನೋರ್ವ ಐಂದ್ರಿತಾ ರೇಗೆ ಪ್ರಾಣಿ ಪಕ್ಷಿ ಬಂದು ನಿಮ್ಮ ಹತ್ತಿರ ಕಂಪ್ಲೆಂಟ್ ಮಾಡಿದ್ವಾ ಎಂದು ಟಾಂಗ್ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಉಳಿದ ನೆಟ್ಟಿಗರು ಒಳ್ಳೆಯ ಪ್ರಶ್ನೆ ಇದಕ್ಕೆ ಉತ್ತರ ನೀಡುವವರು ಯಾರು ಎಂದು ಕಾಲೆಳೆದಿದ್ದಾರೆ.

ಪಟಾಕಿ ಹಚ್ಚಿ ದುಷ್ಟರಾಗುವುದು ಬೇಡ
ಇನ್ನು ನೆಟ್ಟಿಗರು ಇಷ್ಟೆಲ್ಲಾ ಕಾಮೆಂಟ್ ಮಾಡುತ್ತಿದ್ದರೆ ಅತ್ತ ಮತ್ತೊಂದು ರಿಪ್ಲೈ ಮಾಡಿರುವ ಐಂದ್ರಿತಾ ರೇ ದೀಪಾವಳಿಯಲ್ಲಿ ದೀಪವನ್ನು ಬೆಳಗಿಸಿ ಕತ್ತಲೆಯೆಂಬ ದುಷ್ಟತನವನ್ನು ಹೋಗಲಾಡಿಸಬೇಕು, ಅದನ್ನು ಬಿಟ್ಟು ನಾವೇ ಪಟಾಕಿ ಹೊಡೆದು ದುಷ್ಟರಾಬಾರದು ಎಂದು ಕಾಮೆಂಟ್ ಮಾಡಿದ್ದಾರೆ. ಹೀಗೆ ಪಟಾಕಿ ಹೊಡೆದವರು ದುಷ್ಟರು ಎಂಬರ್ಥದಲ್ಲಿ ಐಂದ್ರಿತಾ ರೇ ಮಾಡಿರುವ ಟ್ವೀಟ್ ವಿರುದ್ಧ ಇದೀಗ ಸಾಕಷ್ಟು ದೊಡ್ಡ ಮಟ್ಟದಲ್ಲಿ ಆಕ್ರೋಶ ಮತ್ತು ವಿರೋಧ ವ್ಯಕ್ತವಾಗಿದೆ.


Click it and Unblock the Notifications











