ಮಹತ್ವದ ಪಂದ್ಯ: ಭಾರತ ಕ್ರಿಕೆಟ್ ತಂಡಕ್ಕೆ ಕವಿರಾಜ್ ಕವಿತೆ
ಟಿ20 ವಿಶ್ವಕಪ್ ಟೂರ್ನಿಯ ಮಹತ್ವದ ಪಂದ್ಯ ಇಂದು ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವೆ ನಡೆಯಲಿದೆ. ಸೆಮಿಫೈನಲ್ ಪಂದ್ಯ ಇಂದು ಅಡಿಲೇಡ್ನಲ್ಲಿ ನಡೆಯಲಿದೆ.
ಇತ್ತಂಡಗಳಿಗೆ ಇದು ಅತ್ಯಂತ ಮಹತ್ವದ ಪಂದ್ಯವಾಗಿದೆ. ಗೆದ್ದವರು ಫೈನಲ್ ಆಡಲಿದ್ದಾರೆ. ಪಾಕಿಸ್ತಾನ ಈಗಾಗಲೇ ಫೈನಲ್ ಪ್ರವೇಶಿಸಿದೆ. ಪಾಕಿಸ್ತಾನವನ್ನು ಫೈನಲ್ನಲ್ಲಿ ಸೋಲಿಸಬೇಕೆಂದರೆ ಭಾರತ ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ. ಇಂಗ್ಲೆಂಡ್ ಸಹ ಇದು ಮಹತ್ವದ ಪಂದ್ಯ.
ಹಲವಾರು ನೆಟ್ಟಿಗರು ಈಗಾಗಲೇ ಭಾರತ ತಂಡಕ್ಕೆ ಶುಭ ಹಾರೈಸಿದ್ದಾರೆ. ಅಪ್ಪಟ ಕ್ರಿಕೆಟ್ ಪ್ರೇಮಿಯಾದ, ಚಿತ್ರ ಸಾಹಿತಿ, ನಿರ್ದೇಶಕ ಕವಿರಾಜ್ ಸಹ ಭಾರತ ತಂಡಕ್ಕೆ ಶುಭ ಕೋರಿ ತಮ್ಮದೇ ಶೈಲಿಯಲ್ಲಿ ಕವಿತೆಯೊಂದನ್ನು ರಚಿಸಿ ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದಾರೆ.

ಕ್ರಿಕೆಟ್ ಬಗ್ಗೆ ಕವಿ ಬಿ.ಆರ್.ಲಕ್ಷ್ಮಣರಾವ್ ಬರೆದಿದ್ದ ಕವಿತೆ ಹಿಂದೊಮ್ಮೆ ಬಹಳ ಜನಪ್ರಿಯವಾಗಿತ್ತು. ಹಲವು ಮಂದಿ ಇದೇ ಕವಿತೆಯನ್ನು ಆಯಾ ಕಾಲಘಟ್ಟದಲ್ಲಿ ಆಟಗಾರರ ಹೆಸರು ಬದಲಾಯಿಸಿ ಬರೆದಿದ್ದರು. ಆದರೆ ಆ ಕವಿತೆ ಭಾರತ ತಂಡ ಸೋತಿದ್ದರ ಬಗ್ಗೆಯಾಗಿತ್ತು. ಆದರೆ ಕವಿರಾಜ್ ಅವರು ಆ ಕವಿತೆಯ ಮಾದರಿಯಲ್ಲಿ ಅಲ್ಲದೆ, ಭಾರತ ತಂಡಕ್ಕೆ ಶುಭ ಕೋರಿ, ಯಾವ ಆಟಗಾರರು ಹೇಗೆ ಆಡಬೇಕು ಎಂಬುದನ್ನು ಅವರ ಹೆಸರುಗಳನ್ನು ಬಳಸಿ ಕವಿತೆಯೊಂದನ್ನು ಸೃಜಿಸಿದ್ದಾರೆ. ಕವಿರಾಜ್ ಹಂಚಿಕೊಂಡಿರುವ ಕವಿತೆ ಇಂತಿದೆ.
ಇವತ್ತಿಗೊಂದು 'ಹಳೇ ಖಯಾಲಿ'ಯ ಪ್ರಾರ್ಥನೆ
'Row -ಹಿತ'ವಾಗಲಿ
'Raw -ಹುಲಿ(ಲ್)' ಘರ್ಜಿಸಲಿ
'ವಿರಾಟ್' ರೂಪ ದರ್ಶನವಾಗಲಿ
'ಸೂರ್ಯ' ಪ್ರಜ್ವಲಿಸಲಿ
'ಕಾರ್ತಿಕ' ಮಾಸದಲ್ಲೇ
'ಹಾರ್ದಿಕ' ವಿಜಯ ಪ್ರಾಪ್ತಿಯಾಗಲಿ
'ಶಮೀ' (ವೃಕ್ಷ ) ಶತ್ರುವಿನಾಶಗೈಯಲಿ
ಅ(ಹ)ರ್ಶದೀಪ ಬೆಳಗಲಿ
'ಅಕ್ಷರ' ಪ್ರತಿಭೆಯು
'ಅಶ್ವಿನಿ(ನ್)' ನಕ್ಷತ್ರದಂತೆ ರಾರಾಜಿಸಲಿ
ಭಾರತ 'ಭುವನೇಶ್ವರ'ನಾಗುವತ್ತ
ಅಂತಿಮ ಚರಣಕ್ಕೆ
ಮುನ್ನಡೆಯಲಿ
(ಡ್ರೀಮ್ ಇಲೆವೆನ್ ಅಲ್ಲಿ
ಪಂಥ(ಥ್)ವಿದ್ದರೆ ನಿಮಗೂ ಗೆಲುವಾಗಲೀ)
-ಇಂತಿ ನಿಮ್ಮ ಕವಿರಾಜ್


Click it and Unblock the Notifications











