ಸದ್ಯಕ್ಕೆ ಮದುವೆ ಆಲೋಚನೆ ಕೈಬಿಟ್ಟ ಪೂಜಾಗಾಂಧಿ
ರಾಯಚೂರು ರಿಪೋರ್ಟರ್ಸ್ ಗಿಲ್ಡ್ ನಲ್ಲಿ ಪತ್ರಕರ್ತರೊಂದಿಗೆ ಮಾತಿಗೆ ಇಳಿದ ಅವರು, ಆಗಿದ್ದಾಗಿದೆ ಇನ್ನು ಮುಂದೆ ಇಲ್ಲಿಯೇ ನೆಲೆಸುತ್ತೇನೆ ಎಂದರು. ತಮಗೆ ಯಾರು ಓಟು ಹಾಕಲಿ ಬಿಟ್ಟಿರಲಿ ತಮಗೇನು ಬೇಜಾರಾಗಿಲ್ಲ. ಇದೂ ಒಂದು ಎಕ್ಸ್ ಪೀರಿಯನ್ಸ್ ಎಂದು ತಿಳಿಯುತ್ತೇನೆ ಎಂದರು.
ನನ್ನ ಸೋಲಿಗೆ ಯಾರನ್ನೂ ದೂಷಿಸುವುದಿಲ್ಲ. ಇನ್ನು ಮುಂದೆಯೂ ರಾಯಚೂರಿನಲ್ಲೇ ಉಳಿಯುತ್ತೇನೆ. ಇಲ್ಲಿನ ಜನರ ಸೇವೆ ಮುಂದುವರಿಸುತ್ತೇನೆ. ತಮ್ಮ ರಾಜಕೀಯ ಪಯಣವನ್ನು ಇಲ್ಲಿಗೆ ನಿಲ್ಲಿಸುವುದಿಲ್ಲ, ಮುಂದಿನ ವಿಧಾನಸಭೆ ಚುನಾವಣೆಗೂ ಸ್ಪರ್ಧಿಸುತ್ತೇನೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಅದೆಲ್ಲಾ ಸರಿ ಮೇಡಂ ಮದುವೆ ಯಾವಾಗ? ಎಂಬ ಪ್ರಶ್ನೆಗೆ ಅವರು ಕೈಜೋಡಿಸಿ ಪತ್ರಕರ್ತರಿಗೆ ಮುಗಿದರು. ಬಳಿಕ ಮಾತನಾಡುತ್ತಾ ಸದ್ಯಕ್ಕೆ ನನ್ನ ತಲೆಯಲ್ಲಿ ಮದುವೆ ವಿಚಾರ ಇಲ್ಲ. ಇನ್ನೂ ನಾಲ್ಕು ವರ್ಷ ಮದುವೆಯಾಗಲ್ಲ ಎಂದರು.
ಜನ ಸೇವೆಗಾಗಿ ತಾವು ಚಿತ್ರರಂಗವನ್ನೂ ತೊರೆಯಲು ಸಿದ್ಧ ಎಂಬ ಮಾತನ್ನು ಇಲ್ಲಿ ಮತ್ತೆ ಪುನರುಚ್ಚರಿಸಿದರು. ಚಿತ್ರರಂಗದಲ್ಲಿ ತಾನು ಸಾಕಷ್ಟು ಹಣ ಗಳಿಸಿದ್ದೇನೆ. ಉತ್ತಮ ಜೀವನವನ್ನೂ ನಡೆಸುತ್ತಿದ್ದೇನೆ. ಹಣ ಅಥವಾ ಹೆಸರುಗಳಿಸುವ ಉದ್ದೇಶದಿಂದ ನಾನು ರಾಜಕೀಯಕ್ಕೆ ಬರಲಿಲ್ಲ ಎಂದು ಅವರು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು. (ಒನ್ಇಂಡಿಯಾ ಕನ್ನಡ)


Click it and Unblock the Notifications












