ಕುಡಿದ ಮತ್ತಿನಲ್ಲಿ ಅಸಭ್ಯ ವರ್ತನೆ: 'ಪುಟ್ಟ ಗೌರಿ ಮದುವೆ' ಮಹಿ ಬಂಧನ.!
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ 'ಪುಟ್ಟ ಗೌರಿ ಮದುವೆ' ಸೀರಿಯಲ್ ನೀವೆಲ್ಲಾ ನೋಡಿರ್ತೀರಾ ಅಲ್ವಾ, ಅದರಲ್ಲಿ ಗೌರಿ ಗಂಡ ಹಾಗು ಹಿಮನ ಲವರ್ ಮಹೇಶನ ಪರಿಚಯನೂ ನಿಮಗೆ ಇದೆ ತಾನೆ.
ಅದೇ ಮಹೇಶ (ರಕ್ಷಿತ್) ಏನು ಮಾಡಿದ್ದಾರೆ ಗೊತ್ತಾ?, ನಿನ್ನೆ ರಾತ್ರಿ (ನವೆಂಬರ್ 30) ಕಂಠ ಪೂರ್ತಿ ಕುಡಿದು ಕಲಾಸಿಪಾಳ್ಯ ಪೊಲೀಸರ ಜೊತೆ ಅಸಭ್ಯವಾಗಿ ವರ್ತಿಸಿ, ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.

ಈಗಾಗಲೇ ಕಲಾಸಿಪಾಳ್ಯ ಪೊಲೀಸರ ವಶದಲ್ಲಿರುವ ಆರೋಪಿ ನಟ ರಕ್ಷಿತ್ ಸೋಮವಾರ ರಾತ್ರಿ ವಿಪರೀತ ಮದ್ಯಪಾನ ಮಾಡಿ ಕಾರು ಚಲಾಯಿಸುತ್ತಿದ್ದರು. ಈ ವೇಳೆ ತಡೆದು ನಿಲ್ಲಿಸಿದ ಪೊಲೀಸರು ರಕ್ಷಿತ್ ಅವರನ್ನು ಮದ್ಯಪಾನ ಮಾಡಿದ ಕುರಿತು ತಪಾಸಣೆ ಮಾಡಲು ಮುಂದಾದರು.
ಈ ಸಂದರ್ಭದಲ್ಲಿ ನಟ ರಕ್ಷಿತ್ ಅಲಿಯಾಸ್ ಮಹೇಶ್ ಅವರು ಕುಡಿದ ಅಮಲಿನಲ್ಲಿ ಪೊಲೀಸರ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ. ಅಲ್ಲದೇ ಕಲಾಸಿಪಾಳ್ಯ ಪೊಲೀಸ್ ಠಾಣೆಯ ಎಸ್ ಐ ನಾಗರಾಜ್ ಅವರೊಂದಿಗೆ 'ರೀ. ನಾನ್ಯಾರು ಅಂತ ಗೊತ್ತೇನ್ರೀ.. ಎಂದು ಆವಾಜ್ ಹಾಕಿದ್ದಲ್ಲದೇ, ವಾಗ್ವಾದ ಬೇರೆ ನಡೆಸಿದ್ದಾರೆ.

ಈ ಬಗ್ಗೆ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದ್ದು, ಸೀರಿಯಲ್ ನಟ ರಕ್ಷಿತ್ ಶೆಟ್ಟಿ ಅವರನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.
ನಟ ರಕ್ಷಿತ್ ವಿರುದ್ಧ ಮದ್ಯಪಾನ ಮಾಡಿ ಕಾರು ಚಾಲನೆ ಮಾಡಿದ ಆರೋಪ ಮತ್ತು ಕರ್ತವ್ಯ ನಿರತ ಪೊಲೀಸ್ ಅಧಿಕಾರಿಯೊಂದಿಗೆ ಅಸಭ್ಯ ವರ್ತನೆ ಕುರಿತಂತೆ ಕಲಾಸಿಪಾಳ್ಯ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಎಲ್ಲರ ಮನೆ-ಮನ ಮೆಚ್ಚಿದ ಮುದ್ದಿನ ಮಹಿ ಅಲಿಯಾಸ್ ಮಹೇಶನಾಗಿದ್ದ ನಟ ರಕ್ಷಿತ್ ಅವರು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.


Click it and Unblock the Notifications










