'ವಿಕ್ರಂ' ರವಿಚಂದ್ರನ್ ಮೊದಲ ಹೆಜ್ಜೆಯಲ್ಲೇ ಸೋಲು: ಮುಂದಿನ ನಡೆ ಏನು?
ಕ್ರೇಜಿಸ್ಟಾರ್ ರವಿಚಂದ್ರನ್ ಕನ್ನಡ ಸಿನಿಮಾರಂಗ ಕಂಡ ಅದ್ಭುತ ಕಲಾವಿದ, ನಿರ್ದೇಶಕ, ನಿರ್ಮಾಪಕ. ಕನ್ನಡ ಚಿತ್ರರಂಗವನ್ನು ಉತ್ತುಂಗಕ್ಕೆ ತೆಗೆದುಕೊಂಡು ಹೋಗುವುದರಲ್ಲಿ ರವಿಚಂದ್ರನ್ ಪಾತ್ರ ಕೂಡ ಅತ್ಯಂತ ಪ್ರಮುಖ. ದಶಕಗಳ ಕಾಲ ಸಿನಿಮಾ ರಂಗವನ್ನು ಆಳಿದ ಕ್ರೇಜಿಸ್ಟಾರ್ ರವಿಚಂದ್ರನ್ ಕ್ರೇಜ್ ಇಂದಿಗೂ ಹಾಗೆ ಇದೆ.
ಇನ್ನು ರವಿಚಂದ್ರನ್ ಬಳಿಕ ಅವರ ಮಕ್ಕಳು ಸಿನಿಮಾರಂಗದಲ್ಲಿ ತಮ್ಮ ಜರ್ನಿಯನ್ನು ಶುರು ಮಾಡಿದ್ದಾರೆ. ಈಗಾಗಲೇ ಮನೋರಂಜನ್ ರವಿಚಂದ್ರನ್ ಕೆಲವು ಸಿನಿಮಾಗಳ ಮೂಲಕ ಕನ್ನಡ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಮನೋರಂಜನ್ ಬಳಿಕ ರವಿಚಂದ್ರನ್ ಎರಡನೇ ಪುತ್ರ ವಿಕ್ರಂ ರವಿಚಂದ್ರನ್ ಕೂಡ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದ್ದಾರೆ.
ಕ್ರೇಜಿಸ್ಟಾರ್ ಅಂತಹ ಸೂಪರ್ ಸ್ಟಾರ್ ಮಕ್ಕಳು ಸಿನಿಮಾರಂಗಕ್ಕೆ ಬರುವುದು ಎಂದರೆ ಸಣ್ಣ ಮಾತಲ್ಲ. ಅಪ್ಪನಂತೆ ಮಕ್ಕಳು ಕೂಡ ಸ್ಟಾರ್ ಗಿರಿಯಲ್ಲಿ ಮಿಂಚುತ್ತಾರೆ ಎನ್ನುವ ಹತ್ತಾರು ನಿರೀಕ್ಷೆಗಳು ಇರುತ್ತೆ. ಆದರೆ ರವಿಚಂದ್ರನ್ ಮಕ್ಕಳ ವಿಚಾರದಲ್ಲಿ ಅದು ಇನ್ನೂ ಸಾಕಾರಗೊಂಡಿಲ್ಲ.

'ತ್ರಿವಿಕ್ರಮ'ನಾಗಿ ಬಂದ ರವಿಮಾಮನ ಪುತ್ರ!
ರವಿಚಂದ್ರನ್ ದ್ವಿತೀಯ ಪುತ್ರ ವಿಕ್ರಂ ರವಿಚಂದ್ರನ್ ಇದೀಗ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. 'ತ್ರಿವಿಕ್ರಮ' ಚಿತ್ರದ ಮೂಲಕ ಭರ್ಜರಿಯಾಗಿ ಬೆಳ್ಳಿ ಪರದೆಗೆ ವಿಕ್ರಮ್ ರವಿಚಂದ್ರನ್ ಬಂದಿದ್ದಾರೆ. ಸಾಕಷ್ಟು ನಿರೀಕ್ಷೆಯ ಜೊತೆಗೆ ಈ ಚಿತ್ರ ರಿಲೀಸ್ ಆಯ್ತು. ಆದರೆ ಅಂದುಕೊಂಡ ಮಟ್ಟಗೆ ಸಿನಿಮಾ ಯಶಸ್ಸು ಕಾಣಲಿಲ್ಲ. ರವಿಚಂದ್ರನ್ ಎರಡನೇ ಮಗ ವಿಕ್ರಮ್ ಕೂಡ ಮೊದಲ ಸಿನಿಮಾದಲ್ಲಿ ಅಪ್ಪನಂತೆ ಮಿಂಚಲು ಸಾಧ್ಯವಾಗಲೇ ಇಲ್ಲ.

ವಿಕ್ರಂ ಮುಂದಿನ ನಡೆ ಏನು?
'ತ್ರಿವಿಕ್ರಮ' ಸಿನಿಮಾ ಅಂದುಕೊಂಡ ಮಟ್ಟಿಗೆ ಯಶಸ್ಸು ಕಾಣುವಲ್ಲಿ ವಿಫಲವಾಗಿದೆ. ಸೂಪರ್ ಸ್ಟಾರ್ ನಟನ ಮಗನ ಮೊದಲ ಸಿನಿಮಾ ಬಾಕ್ಸಾಫೀಸ್ನಲ್ಲಿ ಸದ್ದು ಮಾಡುವಲ್ಲಿ ಸೋತಿದೆ. ಆದರೆ ಈಗ ವಿಕ್ರಂ ಮುಂದಿನ ಹೆಜ್ಜೆಯ ಬಗ್ಗೆ ಸಾಕಷ್ಟು ಕುತೂಹಲ ಹುಟ್ಟಿಕೊಂಡಿದೆ. ವಿಕ್ರಂ ಮೊದಲ ಸಿನಿಮಾ ಸೋತಿದೆ. ಆದರೆ ಮುಂದಿನ ಹೆಜ್ಜೆಯನ್ನು ಹುಷಾರಾಗಿ ಇಡುವ ಅನಿವಾರ್ಯತೆ ಎದುರಾಗಿದ್ದು, ಯಾವ ಸಿನಿಮಾದಲ್ಲಿ, ಯಾವ ಕಥೆಯಲ್ಲಿ ಹೇಗೆ ಕಾಣಿಸಿಕೊಳ್ಳುತ್ತಾರೆ ಎನ್ನುವ ಕುತೂಹಲ ಮೂಡಿದೆ.

ಮನೋರಂಜನ್ 4 ಸಿನಿಮಾಗಳು!
ರವಿಚಂದ್ರನ್ ಮೊದಲ ಪುತ್ರ ಮನೋರಂಜನ್ ರವಿಚಂದ್ರನ್ ಈಗಾಗಲೇ ನಾಯಕ ನಟನಾಗಿ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದ್ದಾರೆ. 'ಸಾಹೇಬ' ಚಿತ್ರದ ಮೂಲಕ ಮನೋರಂಜನ್ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದು ಮೊದಲ ಸಿನಿಮಾ ಅಷ್ಟೇನೂ ದೊಡ್ಡ ಮಟ್ಟಿಗೆ ಸದ್ದು ಮಾಡಲಿಲ್ಲ. ಹಾಗಂತ 'ಸಾಹೇಬ' ಸಿನಿಮಾದ ಮೂಲಕ ಮನೋರಂಜನ್ ದೊಡ್ಡ ಹೆಸರೇನು ಮಾಡಲಿಲ್ಲ. ನಂತರ 'ಬೃಹಸ್ಪತಿ', 'ಮುಗಿಲ್ ಪೇಟೆ', 'ಪ್ರಾರಂಭ' ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಆದರೆ ಮನೋರಂಜನೆಗೆ ಸೂಪರ್ ಹಿಟ್ ಕೊಡುವ ಸಿನಿಮಾ ಇನ್ನೂ ಬಂದಿಲ್ಲ.

ಮಕ್ಕಳಿಗೆ ಕ್ರೇಜಿಸ್ಟಾರ್ ಸಿನಿಮಾ ಮಾಡೋದ್ಯಾವಾಗ?
ವಿಕ್ರಮ್ ರವಿಚಂದ್ರನ್ ಮತ್ತು ಮನೋರಂಜನ್ ರವಿಚಂದ್ರನ್ ಮನಸ್ಸು ಮಾಡಿದರೆ ಅಪ್ಪನ ಕೈಯಲ್ಲಿ ಸಿನಿಮಾ ನಿರ್ದೇಶನ ಮಾಡಿಕೊಳ್ಳಬಹುದಾಗಿತ್ತು. ಆದರೆ ಅಪ್ಪನ ಆಸರೆಯಿಲ್ಲದೆ ಚಿತ್ರರಂಗದಲ್ಲಿ ಸ್ವಂತವಾಗಿ ಬೆಳೆದು ನಿಲ್ಲಬೇಕು ಎನ್ನುವ ಆಸೆ ಇದೆಯಂತೆ. ಹಾಗಾಗಿ ಅಪ್ಪನ ಬಳಿ ನಮಗಾಗಿ ಹಿಟ್ ಸಿನಿಮಾ ಮಾಡು ಎಂದು ಕೇಳದೆ ತಾವೇ ಸ್ವತಂತ್ರರಾಗಿ ಸಿನಿಮಾ ಮಾಡುತ್ತಿದ್ದಾರೆ. ಇದಕ್ಕೆ ರವಿಚಂದ್ರನ್ ಸಹಕಾರ ಕೂಡ ಇದೆ.


Click it and Unblock the Notifications











