twitter
    For Quick Alerts
    ALLOW NOTIFICATIONS  
    For Daily Alerts

    ಮರೆಯಲಾಗದ 'ಮಿಂಚಿನ ಓಟ'ಗಾರ ಶಂಕ್ರಣ್ಣ!

    |

    ಕನ್ನಡಿಗರು ಎಂದೂ ಮರೆಯದ ಹೆಸರು ಶಂಕರ್‌ ನಾಗ್. ರಂಗಭೂಮಿ, ಚಿತ್ರರಂಗಕ್ಕೆ ಶಂಕ್ರಣ್ಣನ ಕೊಡುಗೆ ಅಪಾರ. ಬಹಳ ಚಿಕ್ಕ ವಯಸ್ಸಿನಲ್ಲೇ ಬಾರದ ಲೋಕಕ್ಕೆ ಪಯಣ ಬೆಳೆಸಿದ ಶಂಕ್ರಣ್ಣ ತಮ್ಮ ಕಲಾ ಸೇವೆಯಿಂದ ಸದಾ ಜೀವಂತವಾಗಿ ಇರುತ್ತಾರೆ. ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿದ ಮಹಾನ್ ಚೇತನ ಶಂಕರ್‌ ನಾಗ್ ಹುಟ್ಟುಹಬ್ಬದಂದು ಅಭಿಮಾನಿಗಳು ಅವರನ್ನು ನೆನೆಯುತ್ತಿದ್ದಾರೆ.

    "ಸತ್ತ ಮೇಲೆ ಮಲಗುವುದು ಇದ್ದೇ ಇದೆ, ಬದುಕಿದ್ದಾಗಲೇ ಏನಾದರೂ ಸಾಧಿಸು" ಎನ್ನುತ್ತಿದ್ದ ಶಂಕರ್‌ ನಾಗ್ ನಿಜಕ್ಕೂ ಸಾಧಿಸಿಯೇ ಹೊರಟುಬಿಟ್ಟರು. ನಂದಿ ಬೆಟ್ಟಕ್ಕೆ ರೋಪ್ ವೇ, ಬೆಂಗಳೂರಿಗೆ ಮೆಟ್ರೋ ರೈಲು, ರಂಗಮಂದಿರ ಇವೆಲ್ಲದರ ನೀಲನಕ್ಷೆಯನ್ನು ದಶಕಗಳ ಹಿಂದೆಯೇ ಮುಖ್ಯಮಂತ್ರಿಗಳ ಮುಂದೆ ಇಟ್ಟಿದ್ದರು. ಅವರ ದೂರದೃಷ್ಟಿ, ಕನಸು ಕಾಣುತ್ತಿದ್ದ ಪರಿ, ಕೆಲಸ ಮಾಡುತ್ತಿದ್ದ ವೇಗ ಎಂತಹವರನ್ನು ಬೆರಗುಗೊಳಿಸುತ್ತಿತ್ತು. 12 ವರ್ಷಗಳ ಸಿನಿ ಬದುಕಿನಲ್ಲಿ 90ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು. ಅದರಲ್ಲಿ 9 ಸಿನಿಮಾಗಳನ್ನು ನಿರ್ದೇಶಿಸಿದ್ದರು. ಡಾ. ರಾಜ್‌ಕುಮಾರ್ ನಟನೆಯ 'ಒಂದು ಮುತ್ತಿನ ಕಥೆ' ಹಿಂದಿನ ಸೂತ್ರಧಾರಿ ಕೂಡ ಇದೇ ಶಂಕರ್‌ನಾಗ್. ಸದಾ ಹೊಸತನ್ನು ಕಲಿಯುವ ಹೊಸತನ್ನು ಮಾಡುವ ಹುರುಪು ಶಂಕ್ರಣ್ಣಲ್ಲಿ ಇತ್ತು.

    'ಎಸ್‌. ಪಿ ಸಾಂಗ್ಲಿಯಾನ'- 2 ರೀ ರಿಲೀಸ್ ಡೇಟ್ ಫಿಕ್ಸ್: ಶಂಕ್ರಣ್ಣನ ಸಿನಿಮಾ ಅಂದು ಬರೆದ ದಾಖಲೆಗಳೇನು?'ಎಸ್‌. ಪಿ ಸಾಂಗ್ಲಿಯಾನ'- 2 ರೀ ರಿಲೀಸ್ ಡೇಟ್ ಫಿಕ್ಸ್: ಶಂಕ್ರಣ್ಣನ ಸಿನಿಮಾ ಅಂದು ಬರೆದ ದಾಖಲೆಗಳೇನು?

    ಶಂಕರ್‌ ನಾಗ್ ಕೆಲಸ ಮಾಡುವ ವೇಗ ನೋಡಿ ಅವರೊಟ್ಟಿಗೆ ಕೆಲಸ ಮಾಡಲು ಕೆಲವರು ಭಯಪಡುತ್ತಿದ್ದರು. ಸಿಕ್ಕಾಪಟ್ಟೆ ವರ್ಕ್‌ ಹಾಲಿಕ್ ಆಗಿದ್ದ ಶಂಕ್ರಣ್ಣ ಮಿಂಚಿನ ವೇಗದಲ್ಲಿ ಬಂದು ಮರೆಯಾಗಿಬಿಟ್ಟರು. ಬದುಕಿದ್ದ 36 ವರ್ಷ ವರ್ಷಗಳಲ್ಲಿ ಅವರು ಮಾಡಿದ ಸಾಧನೆ ಅಷ್ಟಿಷ್ಟಲ್ಲ. ನವೆಂಬರ್, 1954 ರಂದು ಹೊನ್ನಾವರ ತಾಲೂಕಿನ ಮಲ್ಲಾಪುರ ಎಂಬ ಪುಟ್ಟ ಹಳ್ಳಿಯಲ್ಲಿ ಶಂಕರ್ ನಾಗ್ ಅವರು ಹುಟ್ಟಿದರು. ಶಂಕರ್‌ ನಾಗ್ ಹುಟ್ಟಿದಾಗ ಮನೆಯಲ್ಲಿ ಇಟ್ಟ ಹೆಸರು ಅವಿನಾಶ್. ಆದರೆ ಪ್ರೀತಿಯಿಂದ ಭವಾನಿ ಶಂಕರ್ ಎಂದು ಕರೆಯುತ್ತಿದ್ದರು. ವಿದ್ಯಾಭ್ಯಾಸ ಮುಗಿಸಿದ ನಂತರ ಅಣ್ಣ ಅನಂತ್‌ನಾಗ್ ಜೊತೆ ಮುಂಬೈಗೆ ತೆರಳಿದರು. ಮರಾಠಿ ರಂಗಭೂಮಿಯಲ್ಲಿ ಗುರ್ತಿಸಿಕೊಂಡ ಅಭಿಮಾನಿಗಳ ಪ್ರೀತಿಯ 'ಆಟೋರಾಜ' ನಿಧಾನವಾಗಿ ಚಿತ್ರರಂಗದತ್ತ ಮುಖ ಮಾಡಿದ್ದರು.

     ಮಿಂಚಿನ ವೇಗದಲ್ಲಿ ಬಂದುಹೋದ ಶಂಕ್ರಣ್ಣ

    ಮಿಂಚಿನ ವೇಗದಲ್ಲಿ ಬಂದುಹೋದ ಶಂಕ್ರಣ್ಣ

    'ಸಂಕೇತ್' ಎನ್ನುವ ಹವ್ಯಾಸಿ ರಂಗತಂಡವನ್ನು ಕಟ್ಟಿಕೊಂಡು 'ಅಂಜುಮಲ್ಲಿಗೆ, 'ಬ್ಯಾರಿಸ್ಟರ್', 'ಸಂಧ್ಯಾ ಛಾಯ', 'ನೋಡಿ ಸ್ವಾಮಿ ನಾವಿರೋದು ಹೀಗೆ', 'ಆಟ ಬೊಂಬಾಟ', 'ನಾಗಮಂಡಲ' ಸೇರಿದಂತೆ ಸಾಕಷ್ಟು ನಾಟಕಗಳ ನಿರ್ಮಾಣ ನಿರ್ವಹಣೆಯಲ್ಲಿ ಕೆಲಸ ಮಾಡಿದರು. ಸಿನಿಮಾಗಳಲ್ಲಿ ನಟಿಸುತ್ತಿದ್ದರೂ ರಂಗಭೂಮಿಯನ್ನು ಮರೆಯಲಿಲ್ಲ. ನಟಿ ಅರುಂಧತಿ ನಾಗ್ ಅವರನ್ನು ಇಷ್ಟಪಟ್ಟು ಶಂಕರ್ ನಾಗ್ ಮದುವೆ ಆಗಿದ್ದರು. ಸೆಪ್ಟೆಂಬರ್ 30, 1990 ರಂದು ಶಂಕರ್‌ ನಾಗ್ ಕಾರು ಅಪಘಾತದಲ್ಲಿ ನಿಧನರಾಗಿದ್ದ ಸುದ್ದಿ ರಾಜ್ಯಕ್ಕೆ ಬರಸಿಡಿಲಿನಂತೆ ಬಂದೆರಗಿತ್ತು. ದಾವಣಗೆರೆಯ ಅನಗೋಡು ಹಳ್ಳಿಯಲ್ಲಿ ಜೋಕುರಸ್ವಾಮಿ ಚಿತ್ರದ ಮುಹೂರ್ತ ನಿಗದಿಯಾಗಿತ್ತು. ರಾತ್ರಿಯೇ ಬೆಂಗಳೂರಿನಿಂದ ಹೊರಟು ಬೆಳಗ್ಗೆ ಮುಹೂರ್ತದಲ್ಲಿ ಭಾಗಿಯಾಗಬೇಕು ಎಂದು ಕೊಂಡಿದ್ದರು. ತಮ್ಮ ಹೆಂಡತಿ, ಮಗಳು ಹಾಗೂ ಕಾರ್‌ ಡ್ರೈವರೊಂದಿಗೆ ಹೋಗುತ್ತಿರುವಾಗ ಆನಗೋಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳಗಿನ ಜಾವ ಸುಮಾರು 3 ಗಂಟೆ ಹೊತ್ತಿಗೆ ಇವರ ಕಾರು ನಿಂತಿದ್ದ ಲಾರಿಗೆ ಗುದ್ದಿದ್ದ ಪರಿಣಾಮ ಸ್ಥಳದಲ್ಲಿ ಶಂಕರ್‌ ನಾಗ್ ಹಾಗೂ ಡ್ರೈವರ್ ಪ್ರಾಣ ಪಕ್ಷಿ ಹಾರಿ ಹೋಗಿತ್ತು.

     ಅದ್ಭುತ ನಿರ್ದೇಶಕ ಶಂಕರ್‌ ನಾಗ್

    ಅದ್ಭುತ ನಿರ್ದೇಶಕ ಶಂಕರ್‌ ನಾಗ್

    ಕರಾಟೆ ಕಿಂಗ್ ಶಂಕರ್ ನಾಗ್ ಒಳ್ಳೆ ನಟ ಅಷ್ಟೇ ಅಲ್ಲ, ಸೃಜನಶೀಲ ನಿರ್ದೇಶಕರು ಆಗಿದ್ದರು. 'ಒಂದು ಮುತ್ತಿನ ಕಥೆ', 'ಜನ್ಮ ಜನ್ಮದ ಅನುಬಂಧ', 'ಮಿಂಚಿನ ಓಟ', 'ನೋಡಿ ಸ್ವಾಮಿ ನಾವಿರೋದೇ ಹೀಗೆ', 'ಆಕ್ಸಿಡೆಂಟ್' ರೀತಿಯ ಅದ್ಭುತ ಸಿನಿಮಾಗಳನ್ನು ನಿರ್ದೇಶಿಸಿದ್ದರು. 'ಒಂದು ಮುತ್ತಿನ ಕಥೆ' ಭಾರತೀಯ ಚಿತ್ರರಂಗದಲ್ಲೇ ಮೊದಲ ಬಾರಿಗೆ ನೀರಿನ ಆಳದಲ್ಲಿ ಚಿತ್ರೀಕರಣ ನಡೆಸಿದ ಸಿನಿಮಾ ಎನ್ನುವ ಹೆಗ್ಗಳಿಕೆ ಪಾತ್ರವಾಗಿದೆ. ಇದಕ್ಕಾಗಿ ಕೆನಡಾಗೆ ಹೋಗಿ ಶಂಕರ್‌ನಾಗ್ ನೀರಿನ ಆಳದಲ್ಲಿ ಶೂಟಿಂಗ್ ಮಾಡುವ ಕ್ಯಾಮರಾ ತಂದಿದ್ದರು.

     'ಮಾಲ್ಗುಡಿ ಡೇಸ್' ಮ್ಯಾಜಿಕ್

    'ಮಾಲ್ಗುಡಿ ಡೇಸ್' ಮ್ಯಾಜಿಕ್

    ಶಂಕರ್‌ ನಾಗ್ ಸಿನಿಮಾಗಳು, ನಾಟಕಗಳು ಅಷ್ಟೇ ಅಲ್ಲ ಕಿರುತೆರೆಯ ಜನಪ್ರಿಯ 'ಮಾಲ್ಗುಡಿ ಡೇಸ್' ಧಾರಾವಾಹಿಯನ್ನು ನಿರ್ದೇಶಿಸಿ ಗೆದ್ದಿದ್ದರು. ಆರ್‌. ಕೆ ನಾರಾಯಣ್ ಅವರ ಸಣ್ಣ ಕಥೆಗಳನ್ನು ಆಧರಿಸಿ ದೂರದರ್ಶನಕ್ಕಾಗಿ ಹಲವು ಸಂಚಿಕೆಗಳನ್ನು ಕಟ್ಟಿಕೊಟ್ಟಿದ್ದರು. ಕರ್ನಾಟಕದ ಆಗುಂಬೆಯನ್ನು 'ಮಾಲ್ಗುಡಿ' ಎನ್ನುವ ಹಳ್ಳಿಯನ್ನಾಗಿ ಮಾಡಿ ಅದ್ಭುತ ದೃಶ್ಯಕಾವ್ಯ ಕಟ್ಟಿಕೊಟ್ಟಿದ್ದರು. ಹಿಂದಿಯಲ್ಲಿ ಬಂದಿದ್ದ ಧಾರಾವಾಹಿ ದೇಶಾದ್ಯಂತ ಸದ್ದು ಮಾಡಿತ್ತು. ಇವತ್ತಿನ ಶಂಕರ್ ನಾಗ್ ಅಂದಾಕ್ಷಣ ಮಾಲ್ಗುಡಿ ಡೇಸ್ ಕೂಡ ಕಣ್ಣ ಮುಂದೆ ಬರುತ್ತೆ.

     'ಎಸ್‌. ಪಿ ಸಾಂಗ್ಲಿಯಾನ- 2' ರೀ ರಿಲೀಸ್

    'ಎಸ್‌. ಪಿ ಸಾಂಗ್ಲಿಯಾನ- 2' ರೀ ರಿಲೀಸ್

    ಕರ್ನಾಟಕದಲ್ಲಿ ಸಾವಿರಾರು ಆಟೋಗಳಿವೆ. ಅದರಲ್ಲಿ ಬಹುತೇಕ ಆಟೋಗಳ ಮೇಲೆ ಶಂಕ್ರಣ್ಣನ ಚಿತ್ರವಿದೆ. ಶಂಕರ್ ನಾಗ್‌ ಮಾಡಿದ 'ಆಟೋ ರಾಜ' ಸಿನಿಮಾ ಅಂತಾದೊಂದು ಅಭಿಮಾನಿ ಬಳಗವನ್ನು ಸೃಷ್ಟಿಸಿಬಿಟ್ಟಿತ್ತು. ಇವತ್ತಿಗೂ ಶಂಕ್ರಣ್ಣನ ಸಿನಿಮಾಗಳನ್ನ ಥಿಯೇಟರ್‌ನಲ್ಲಿ ನೋಡಲು ಹುಡುಗರು ಕೂಡ ಅವರಿಗೆ ಅಭಿಮಾನಿಗಳಾಗಿಬಿಟ್ಟಿದ್ದಾರೆ. 'ಒಂದಾನೊಂದು ಕಾಲದಲ್ಲಿ', 'ಮಿಂಚಿನ ಓಟ', 'ಆಟೋ ರಾಜ', 'ಆರದ ಗಾಯ', 'ಅಪೂರ್ವ ಸಂಗಮ', 'ಎಸ್‌. ಪಿ ಸಾಂಗ್ಲಿಯಾನ' ಶಂಕರ್‌ ನಾಗ್ ನಟನೆಯ ಕೆಲ ಜನಪ್ರಿಯ ಸಿನಿಮಾಗಳು. ಎಸ್‌ಪಿ ಸಾಂಗ್ಲಿಯಾನ ಭಾಗ-2 ಸಿನಿಮಾ ಶೀಘ್ರದಲ್ಲೇ ರೀ ರಿಲೀಸ್ ಆಗಲಿದೆ.

    English summary
    Remembering Shankar nag On His Birth Anniversary. Fans and celebrities took to social media on Today to commemorate the birth anniversary of legendary late actor Shankar Nag. Know More.
    Wednesday, November 9, 2022, 12:24
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X