ನಟ ಕಿಶೋರ್ ಟ್ವಿಟ್ಟರ್ ಖಾತೆ ಬ್ಯಾನ್, ಧ್ವನಿ ಹತ್ತಿಕ್ಕುವ ಯತ್ನವೇ?
ಕಿಶೋರ್ ಅತ್ಯುತ್ತಮ ನಟರಾಗಿರುವ ಜೊತೆಗೆ ತಮ್ಮ ಭಿನ್ನವಾದ ಅಭಿಪ್ರಾಯಗಳು, ಸಾಮಾಜಿಕ ಚಿಂತನೆಗಳಿಂದಲೂ ತಮ್ಮದೇ ಆದ ಗುರುತು ಪಡೆದುಕೊಂಡಿದ್ದಾರೆ. ಆದರೆ ತಮ್ಮ ಅಭಿಪ್ರಾಯಗಳನ್ನು ಹೇಳಿಕೊಳ್ಳಲು ಕಿಶೋರ್ಗೆ ಮಾಧ್ಯಮಾಗಿದ್ದ ಟ್ವಿಟ್ಟರ್ ಖಾತೆ ಹಠಾತ್ತನೆ ಡಿಲೀಟ್ ಆಗಿದೆ.
ನಟ ಕಿಶೋರ್ರ ಟ್ವಿಟ್ಟರ್ ಖಾತೆ ಸರ್ಚ್ ಮಾಡಿದರೆ 'ಅಕೌಂಟ್ ಸಸ್ಪೆಂಡೆಡ್' ಎಂದು ಬರುತ್ತಿದೆ. ಟ್ವಿಟ್ಟರ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕೆ ಈ ಖಾತೆಯನ್ನು ರದ್ದು ಮಾಡಲಾಗಿದೆ ಎಂದು ಟ್ವಿಟ್ಟರ್ ಹೇಳಿದೆ.
ನಟನೆ ಜೊತೆಗೆ ಕೃಷಿ, ಪರಿಸರ ಪರ ಕಾರ್ಯ ಮಾಡುತ್ತಿರುವ ನಟ ಕಿಶೋರ್, ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಖಾಸಗೀಕರಣದ ವಿರುದ್ಧ, ಅಭಿವೃದ್ಧಿ ಹೆಸರಲ್ಲಿ ಮಾಡಲಾಗುತ್ತಿರುವ ಮೋಸ, ಕಾರ್ಪೊರೇಟ್ ಸಂಸ್ಥೆಗಳ ಕೃತ್ರಿಮಗಳ ಕುರಿತು ಜಾಗೃತೆ ಮೂಡಿಸುವ ಕಾರ್ಯ ಮಾಡುತ್ತಿದ್ದರು.
ಸರ್ಕಾರಗಳನ್ನು ಟೀಕಿಸಿ, ಸರ್ಕಾರಗಳ, ಕಾರ್ಪೊರೇಟ್ ಸಂಸ್ಥೆಗಳ ಭ್ರಷ್ಟ ವ್ಯವಸ್ಥೆಯನ್ನು ಜನರನ್ನು ಎಚ್ಚರಿಸುವ ಕಾರ್ಯವನ್ನು ನಟ ಕಿಶೋರ್ ಮಾಡುತ್ತಿದ್ದರು. ಇದೇ ಕಾರಣಕ್ಕೆ ಇವರ ಟ್ವಿಟ್ಟರ್ ಖಾತೆಯನ್ನು ಬ್ಯಾನ್ ಮಾಡಲಾಗಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ.
ಬಲಪಂಥೀಯ ವಾದದ ವಿರುದ್ಧ ದನಿ ಎತ್ತುತ್ತಿರುವವರ ಸಾಮಾಜಿಕ ಜಾಲತಾಣ ಖಾತೆಗಳನ್ನು ಟಾರ್ಗೆಟ್ ಮಾಡಿ ನಿಷ್ಕ್ರಿಯಗೊಳಿಸಲಾಗುತ್ತಿದೆ ಎಂಬ ಮಾತುಗಳು ಇತ್ತೀಚೆಗೆ ಹರಿದಾಡುತ್ತಿವೆ. ರಾಜಕೀಯ ಪಕ್ಷಗಳ ಐಟಿ ಸೆಲ್ಗಳು ತಮ್ಮ ಪಕ್ಷದ ಅಭಿಪ್ರಾಯಕ್ಕೆ ವಿರುದ್ಧವಾದ ಅಭಿಪ್ರಾಯ ಹೊಂದಿರುವ ಸೆಲೆಬ್ರಿಟಿಗಳ ಪಟ್ಟಿಯನ್ನು ಹೊಂದಿದ್ದು ಅದರ ಫಲವೇ ಈಗ ಕಿಶೋರ್ ಖಾತೆ ಬ್ಯಾನ್ ಆಗಿರಬಹುದು ಎಂದು ಸಹ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ.
ಕರ್ನಾಟಕದ ನಂದಿನಿಯನ್ನು ಗುಜರಾತ್ನ ಅಮೂಲ್ ಜೊತೆ ವಿಲೀನ ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ನೀತಿಯನ್ನು ಕಿಶೋರ್ ತೀವ್ರವಾಗಿ ಖಂಡಿಸಲಿದ್ದರು. ಅದೇ ವೇಳೆಗೆ ಈಗ ಅವರ ಟ್ವಿಟ್ಟರ್ ಖಾತೆಯೇ ಬ್ಯಾನ್ ಆಗಿದೆ.

ಮೂರನೇ ಮಹಾಯುದ್ಧ ಎಂಬುದಾದರೆ ಅದಕ್ಕೆ ಸಾಮಾಜಿಕ ಜಾಲತಾಣಗಳೇ ಮುಖ್ಯ ಕಾರಣವಾಗಿರಲಿವೆ ಎನ್ನಲಾಗುತ್ತದೆ. ಇದರರ್ಥ, ಸಾಮಾಜಿಕ ಜಾಲತಾಣ ಎಂಬುದು ಈ ಅತ್ಯಂತ ಪ್ರಭಾವಿ, ಶಕ್ತಿಶಾಲಿ ಮಾಧ್ಯಮ.
ಕೋಟ್ಯಂತರ ಜನರ ಅಭಿಪ್ರಾಯ ತಿದ್ದಲು, ಬದಲಾಯಿಸಲು ಸಾಮಾಜಿಕ ಜಾಲತಾಣಗಳನ್ನು ಬದಲಾಯಿಸಲಾಗುತ್ತಿದೆ. ಶಕ್ತಿಯುತ ದೇಶದ ಚುನಾವಣೆಗಳ ಮೇಲೆ ಸಾಮಾಜಿಕ ಜಾಲತಾಣದ ಮೂಲಕ ಪ್ರಭಾವ ಬೀರಿ ಫಲಿತಾಂಶ ಬದಲಾಯಿಸಲಾಗುತ್ತಿದೆ.


Click it and Unblock the Notifications











