ಕನ್ನಡ ಚಿತ್ರರಂಗದ ಹಿರಿಯಣ್ಣ ಶಿವರಾಮಣ್ಣರ ಬದುಕು-ಬವಣೆ!
ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಂ ಅವರು ನಿಧನ ಹೊಂದಿದ್ದಾರೆ. ಸುದೀರ್ಘವಾದ ತಮ್ಮ ಜೀವನ ಪಯಣ ಮುಗಿಸಿ ಬಾರದ ಲೋಕಕ್ಕೆ ಹೋಗಿದ್ದಾರೆ. ದಿವಂಗತ ಶಿವರಾಂ ಅವರು ತಮ್ಮ ಪ್ರತಿಭೆಯಿಂದ ಗುರುತಿಸಿಕೊಂಡವರು. ಸಿನಿಮಾರಂಗದಲ್ಲಿ ಹಲವು ವಿಶೇಷ ಪಾತ್ರಗಳನ್ನು ಮಾಡಿ ಜನ ಮನ ಗೆದ್ದವರು ಶಿವರಾಂ.
ಕನ್ನಡ ಚಿತ್ರರಂಗದಲ್ಲಿ ಮಾರ್ಗದರ್ಶಕರಾಗಿ ಹಿರಿಯರ ಸ್ಥಾನದಲ್ಲಿ ಇದ್ದ ಶಿವರಾಂ ಅವರು ಈಗ ಇಹಲೋಕ ತ್ಯಜಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಅವರನ್ನು ಎಲ್ಲರೂ ಪ್ರೀತಿ ಇಂದ ಶಿವರಾಮಣ್ಣ ಅಂತಲೇ ಕರೆಯುತ್ತಿದ್ದರು. ಅಂತಹ ಶಿವರಾಮಣ್ಣ ಇಂದು ಎಲ್ಲರನ್ನೂ ಬಿಟ್ಟು ಹೋಗಿದ್ದಾರೆ. ಅಪ್ಪು ಅಗಲಿಕೆ ನೋವಿನಿಂದ ಹೊರ ಬಾರದ ಚಿತ್ರರಂಗಕ್ಕೆ ಶಿವರಾಂ ಅವರು ಇನ್ನಿಲ್ಲ ಎನ್ನುವುದು ಮತ್ತೊಂದು ಆಘಾತ.
ದಶಕಗಳ ಕಾಲದಿಂದಲೂ ಚಿತ್ರರಂಗದಲ್ಲಿ ಹಿರಿಯಣ್ಣನಂತೆ ಇದ್ದ ಶಿವರಾಂ ಅವರ ಜೀವನ ಎಲ್ಲರಿಗೂ ಸ್ಪೂರ್ತಿ. ಅವರ ಜೀವನ ಮತ್ತು ಸಿನಿಮಾ ಬದುಕಿನ ಕುರಿತಾದ ಕುತೂಹಲಕಾರಿ ಸಂಗತಿಗಳು ಇಲ್ಲಿವೆ. ಮುಂದೆ ಓದಿ...

ಮದ್ರಾಸ್ ಪ್ರಾಂತ್ಯದ ಚೂಡಸಂದ್ರ ಗ್ರಾಮದಲ್ಲಿ ಶಿವರಾಂ ಜನನ!
ಮದ್ರಾಸ್ ಪ್ರಾಂತ್ಯದ ಚೂಡಸಂದ್ರ ಗ್ರಾಮದಲ್ಲಿ ಶಿವರಾಂ ಜನಿಸಿದರು. ಪ್ರಾಥಮಿಕ ಶಿಕ್ಷಣ ಮುಗಿಸಿದ ನಂತರ ಅವರು ಬೆಂಗಳೂರಿಗೆ ಬಂದರು. ಗುಬ್ಬಿ ವೀರಣ್ಣ ಅವರ ನಾಟಕಗಳಿಂದ ಶಿವರಾಂ ಅವರು ಪ್ರೇರಣೆಗೆ ಒಳಗಾಗಿದ್ದರು. ಅವರು ನಾಟಕಗಳಲ್ಲಿ ಬಣ್ಣ ಹಚ್ಚೋಕೆ ಆರಂಭಿಸಿದರು. ನಂತರ ಅವರಿಗೆ ಚಿತ್ರರಂಗದ ಕಡೆಗೆ ಮುಖ ಮಾಡಿದರು. 1958ರಲ್ಲಿ ಅವರು ಕು.ರಾ ಸೀತಾರಾಮಶಾಸ್ತ್ರಿ ಅವರ ಜೊತೆಗೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ನಂತರ 1965ರಲ್ಲಿ ಕನ್ನಡ ಚಿತ್ರರಂಗಕ್ಕೆ ಶಿವರಾಂ ಪದಾರ್ಪಣೆ ಮಾಡಿದರು. 'ಬೆರೆತ ಜೀವ' ಅವರ ಮೊದಲ ಚಿತ್ರ.

6 ದಶಕಗಳ ಕಾಲ ನೂರಾರು ಚಿತ್ರಗಳಲ್ಲಿ ಅಭಿನಯ!
6 ದಶಕಗಳ ಕಾಲ ನೂರಾರು ಚಿತ್ರಗಳಲ್ಲಿ ಕೆಲಸ ಮಾಡಿದ ಕೀರ್ತಿ ಶಿವರಾಂ ಅವರದ್ದು. ಕೇವಲ ಸಿನಿಮಾಗಳಲ್ಲಿ ಅಭಿನಯ ಮಾತ್ರವಲ್ಲ, ಅವರು ಹಲವಾರು ಧಾರಾವಾಹಿಗಳಲ್ಲೂ ಅಭಿನಯಿಸಿದ್ದಾರೆ. ಅಷ್ಟೇ ಅಲ್ಲಾ ಶಿವರಾಮಣ್ಣ ಅಂತಲೇ ಕರೆಸಿಕೊಳ್ಳುವ ಅವರು ಪೋಷಕ ನಟನಾಗಿ, ಹಾಸ್ಯನಟನಾಗಿ ಹಲವು ಪಾತ್ರಗಳ ಮೂಲಕ ಗಮನ ಸೆಳೆದಿದ್ದಾರೆ.

ನಟನೆ ಜೊತೆಗೆ ನಿರ್ಮಾಣ, ನಿರ್ಮಾಣದ ಜೊತೆಗೆ ಹಲವು ವಿಭಾಗದಲ್ಲೂ ಕೆಲಸ!
ಸಿನಿಮಾರಂಗದಲ್ಲಿ ಬಣ್ಣ ಹಚ್ಚಿದ ಬಳಿಕ ಚಿತ್ರ ನಿರ್ಮಾಣದಲ್ಲೂ ಶಿವರಾಂ ಸಕ್ರಿಯವಾಗಿದ್ದರು. 'ಗೆಜ್ಜೆ ಪೂಜೆ' 'ಉಪಾಸನೆ', 'ನಾನೊಬ್ಬ ಕಳ್ಳ' ಮೊದಲಾದ ಸಿನಿಮಾಗಳನ್ನು ನಿರ್ಮಾಣ ಮಾಡಿದರು. ಈ ಮೂಲಕ ಸಿನಿಮಾ ನಿರ್ಮಾಣಕ್ಕೂ ಕೊಡುಗೆ ನೀಡಿದ್ದಾರೆ. ಅಷ್ಟೇ ಅಲ್ಲಾ ಸಹಾಯಕ ಛಾಯಗ್ರಾಹಕ, ಸಹಾಯಕ ಛಾಯಗ್ರಾಹಕ, ನಿರ್ದೇಶಕ, ನಟ ಆಗಿ ಗುರುತಿಸಿಕೊಂಡಿದ್ದಾರೆ.

ಶಿವರಾಮ್ ಅವರು ನಟಿಸಿದ ಚಿತ್ರಗಳು!
1965-ಬೆರೆತ ಜೀವ , 1965- ಮಾವನ ಮಗಳು, 1966-ದುಡ್ಡೇ ದೊಡ್ಡಪ್ಪ , 1967-ಲಗ್ನಪತ್ರಿಕೆ, 1971-ಶರಪಂಜರ, 1971- ಮುಕ್ತಿ, 1971-ಭಲೇ ಅದೃಷ್ಟವೋ ಅದೃಷ್ಟ, 1972- ಸಿಪಾಯಿ ರಾಮು, 1972- ನಾಗರಹಾವು, 1972- ನಾ ಮೆಚ್ಚಿದ ಹುಡುಗ, 1972- ಹೃದಯಸಂಗಮ, 1978- ಕಿಲಾಡಿ ಕಿಟ್ಟು , 1979-ನಾನೊಬ್ಬ ಕಳ್ಳ , ಹಾಲುಜೇನು-1982, ಪಲ್ಲವಿ ಅನುಪಲ್ಲವಿ -1983, ಭಜರಂಗಿ- 2013, ಬಂಗಾರ s / O ಬಂಗಾರದ ಮನುಷ್ಯ-2017 ಸೇರಿದಂತೆ ಹಲವು ಸಿನಿಮಾಗಳಲ್ಲಿ ಶಿವರಾಂ ನಟಿಸಿದ್ದಾರೆ. ಮಕ್ಕಳ ಸೈನ್ಯ ಸೇರಿ ಅನೇಕ ಚಿತ್ರಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. 1980ರಲ್ಲಿ 'ಡ್ರೈವರ್ ಹನುಮಂತು' ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದರು. ಇವರ ಸಾಧನೆಗೆ ಹಲವಾರು ಪ್ರಶಸ್ತಿಗಳು ಕೂಡ ಒಲಿದಿವೆ. ಇನ್ನು 'ಗುರು ಶಿಷ್ಯರು' ಸಿನಿಮಾದಲ್ಲಿನ ಅವರ ಅಭಿನಯ ಯಾರೂ ಮರೆಯುವಂತಿಲ್ಲ.

ಕಿರುತೆಯಲ್ಲೂ ಸೈ ಎನಿಸಿಕೊಂಡಿದ್ದರು!
ಗಿರೀಶ್ ಕಾಸರವಳ್ಳಿ ನಿರ್ದೇಶನದ 'ಗೃಹಭಂಗ', ರವಿಕಿರಣ್ ನಿರ್ದೇಶಿಸಿದ 'ಬದುಕು' ಧಾರಾವಾಹಿಯಲ್ಲೂ ಶಿವರಾಂ ಅಭಿನಯಿಸಿದ್ದಾರೆ. ಜೊತೆಗೆ ಶಿವರಾಂ ಅವರು ಸಹೋದರ ಎಸ್.ರಾಮನಾಥನ್ ಅವರ ಜೊತೆ 'ರಾಶಿ ಬ್ರದರ್ಸ್' ಎಂಬ ಸಂಸ್ಥೆ ಕಟ್ಟಿ, ಈ ಮೂಲಕ ಕನ್ನಡ, ಹಿಂದಿ ಚಿತ್ರಗಳನ್ನು ಕೂಡ ನಿರ್ಮಿಸಿದ್ದಾರೆ. ಇವುಗಳ ಪೈಕಿ ಡಾ. ರಾಜ್ ಕುಮಾರ್ ನಟನೆಯ 'ನಾನೊಬ್ಬ ಕಳ್ಳ', ರಜನಿಕಾಂತ್ ನಟನೆಯ 'ಧರ್ಮ ದುರೈ' ಜನ ಮನ್ನಣೆಗೆ ಪಾತ್ರವಾಗಿವೆ.
ಜೊತೆಗೆ ಶಿವರಾಮಣ್ಣ ಕನ್ನಡ ಚಿತ್ರರಂಗದಲ್ಲಿ ಹಿರಿಯರ ಸ್ಥಾನದಲ್ಲಿ ಇದ್ದರು. ಅವರನ್ನೂ ಎಲ್ಲರು ಪೂಜ್ಯ ಭಾವದಿಂದ ಕಾಣುತ್ತಿದ್ದರು. ಈಗ ಅವರು ಇನ್ನೂ ನೆನಪು ಮಾತ್ರ ಎನ್ನುವುದು ಸಿನಿಮಾ ಮಂದಿಯನ್ನು ದುಖಃಕ್ಕೆ ತಳ್ಳಿದೆ. ಆದರೆ ಅವರು ಕೂಡ ಸಿನಿಮಾ ಮಂದಿಗೆ ತಮ್ಮ ಬದುಕನ್ನು ಮಾರ್ಗದರ್ಶನವಾಗಿ ಬಿಟ್ಟು ಹೋಗಿದ್ದಾರೆ.


Click it and Unblock the Notifications











