ಗುಮ್ಮೋಕೆ ಬರ್ತಿದೆ 'ಟಗರು': ಚಿತ್ರೀಕರಣ ಮುಕ್ತಾಯ
ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ನಾಯಕರಾಗಿ ಅಭಿನಯಿಸಿರುವ ಟಗರು' ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಇತ್ತೀಚೆಗಷ್ಟೇ ಟೀಸರ್ ಬಿಡುಗಡೆ ಮಾಡಿದ್ದ 'ಟಗರು' ಈಗ ಶೂಟಿಂಗ್ ಕಂಪ್ಲೀಟ್ ಮಾಡಿದೆ. ಗವಿಪುರಂನ ಬಂಡಿ ಮಹಾಕಾಳಿ ದೇವಸ್ಥಾನದಲ್ಲಿ ಕುಂಬಳಕಾಯಿ ಒಡೆಯುವುದರ ಮೂಲಕ ಚಿತ್ರದ ಚಿತ್ರೀಕರಣ ಪೂರ್ಣ ಮಾಡಿದೆ.
ಶಿವರಾಜ್ ಕುಮಾರ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿರುವ ಈ ಚಿತ್ರದಲ್ಲಿ ಧನಂಜಯ್ ಮತ್ತು ವಸಿಷ್ಠ ಸಿಂಹ ಖಳನಾಯಕರಾಗಿ ಮಿಂಚಲಿದ್ದಾರೆ. ಮಾನ್ವಿತಾ ಹರೀಶ್, ಭಾವನಾ ನಾಯಕಿಯರಾಗಿ ಅಭಿನಯಿಸಿದ್ದಾರೆ. ಇನ್ನುಳಿದಂತೆ ದೇವರಾಜ್, ಅಚ್ಯುತ ಕುಮಾರ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ದುನಿಯಾ ಸೂರಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರವನ್ನು ವೀನಸ್ ಎಂಟರ್ ಟೈನರ್ ಮೂಲಕ ಕೆ.ಪಿ.ಶ್ರೀಕಾಂತ್ ನಿರ್ಮಾಣ ಮಾಡುತ್ತಿದ್ದಾರೆ. ಚರಣ್ ರಾಜ್ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಮಹೇಂದ್ರ ಸಿಂಹ ಅವರ ಛಾಯಾಗ್ರಹಣವಿದೆ. ದೀಪು ಎಸ್ ಕುಮಾರ್ ಸಂಕಲನ, ಸುರೇಶ್ ಕಲಾ ನಿರ್ದೇಶನ, ಸೂರಿ ನೃತ್ಯ ನಿರ್ದೇಶನ ಹಾಗೂ ಸೂರಿ, ಜಾಲಿ ಬಾಸ್ಟಿನ್, ವಿನೋದ್ ಅವರ ಸಾಹಸ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ಯೋಗರಾಜ್ ಭಟ್, ಜಯಂತ ಕಾಯ್ಕಿಣಿ ಹಾಗೂ ನಾಗೇಂದ್ರ ಪ್ರಸಾದ್ ಬರೆದಿದ್ದಾರೆ.
ಎಲ್ಲ ಅಂದುಕೊಂಡಂತೆ ಆಗಿದ್ದರೇ ಇಷ್ಟೋತ್ತಿಗಾಗಲೇ ಟಗರು ರಿಲೀಸ್ ಆಗಬೇಕಿತ್ತು. ಆದ್ರೆ, ಚಿತ್ರೀಕರಣ ಬಾಕಿಯಿದ್ದ ಕಾರಣ ಸಿದ್ದವಾಗಿರಲಿಲ್ಲ. ಈಗ ಯಶಸ್ವಿಯಾಗಿ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಮುಂದಿನ ವರ್ಷದ ಆರಂಭದಲ್ಲೇ ಅಬ್ಬರಿಸುವ ಯೋಚನೆಯಲ್ಲಿದೆ.


Click it and Unblock the Notifications











