ರಕ್ಷಿತ್ ಶೆಟ್ಟಿಗೆ ಕರೆ ಮಾಡಿದ ರಜನೀಕಾಂತ್, '777 ಚಾರ್ಲಿ' ಬಗ್ಗೆ ಹೀಗೆಂದರು
ರಕ್ಷಿತ್ ಶೆಟ್ಟಿ ನಟಿಸಿ, ಕಿರಣ್ ರಾಜ್ ನಿರ್ದೇಶಿಸಿರುವ '777 ಚಾರ್ಲಿ' ಸಿನಿಮಾ ಬಹುದೊಡ್ಡ ಹಿಟ್ ಆಗಿದೆ. ಈ ಸಿನಿಮಾ ಸಾಮಾನ್ಯ ಪ್ರೇಕ್ಷಕರನ್ನು ಮಾತ್ರವಲ್ಲ, ಸಿನಿಮಾ ಕರ್ಮಿಗಳು, ರಾಜಕಾರಣಿಗಳ ಮನಸ್ಸನ್ನೂ ಕರಗಿಸಿಬಿಟ್ಟಿದೆ.
ಜೂನ್ 10 ರಂದು ಬಿಡುಗಡೆ ಆದ ಈ ಸಿನಿಮಾ ನಾಯಿ ಹಾಗೂ ಮನುಷ್ಯನ ನಡುವಿನ ಆಪ್ತ ಸಂಬಂಧದ ಕತೆ ಹೇಳುವ ಜೊತೆಗೆ, ನಾಯಿಗಳ ಸಂರಕ್ಷಣೆ, ಇನ್ಬ್ರೀಡಿಂಗ್ನಿಂದ ಆಗುವ ಸಮಸ್ಯೆ, ಬೀದಿ ನಾಯಿಗಳ ಸಂರಕ್ಷಣೆ ಬಗ್ಗೆಯೂ ಸಂದೇಶ ಸಾರುತ್ತಿದೆ.
ನಟಿ ಸಾಯಿ ಪಲ್ಲವಿ, ರಾಣಾ ದಗ್ಗುಬಾಟಿ, ರಮ್ಯಾ, ಬಾಲಿವುಡ್ನ ನಿರ್ಮಾಪಕ ಬೋನಿ ಕಪೂರ್, ಸೇರಿದಂತೆ ಹಲವು ಸ್ಟಾರ್ ನಟ-ನಟಿಯರು '777 ಚಾರ್ಲಿ' ಸಿನಿಮಾ ನೋಡಿ ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಇದೀಗ ಸೂಪರ್ ಸ್ಟಾರ್ ನಟ ರಜನೀಕಾಂತ್ ಸಹ '777 ಚಾರ್ಲಿ' ಸಿನಿಮಾ ನೋಡಿದ್ದು, ರಕ್ಷಿತ್ ಶೆಟ್ಟಿಗೆ ಕರೆ ಮಾಡಿ ಸಿನಿಮಾದ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ರಕ್ಷಿತ್ ಶೆಟ್ಟಿಗೆ ಕರೆ ಮಾಡಿದ ರಜನೀಕಾಂತ್
ನಟ ರಜನೀಕಾಂತ್ ತಮಗೆ ಕರೆ ಮಾಡಿ ಸಿನಿಮಾ ಬಗ್ಗೆ ಹೇಳಿದ ಮಾತುಗಳನ್ನು ಸ್ವತಃ ರಕ್ಷಿತ್ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ''ಎಂಥಹಾ ಅದ್ಭುತ ಸಂಗತಿಯೊಂದಿಗೆ ಇಂದಿನ ದಿನ ಪ್ರಾರಂಭವಾಗಿದೆ. ರಜನೀಕಾಂತ್ ಸರ್ ಅವರಿಂದ ಕರೆ ಬಂದಿತ್ತು. ನಿನ್ನೆ ರಾತ್ರಿ ಅವರು '777 ಚಾರ್ಲಿ' ಸಿನಿಮಾ ನೋಡಿದ್ದಾರೆ. ಸಿನಿಮಾವನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಸಿನಿಮಾದ ಮೇಕಿಂಗ್ ಗುಣಮಟ್ಟ ಮತ್ತು ಸಿನಿಮಾದ ಡಿಸೈನ್ ಅವರಿಗೆ ಬಹಳ ಇಷ್ಟವಾಗಿದೆ'' ಎಂದಿದ್ದಾರೆ.

ಕ್ಲೈಮ್ಯಾಕ್ಸ್ ಮೆಚ್ಚಿದ ರಜನೀಕಾಂತ್
ಮುಂದುವರೆದು, ''ವಿಶೇಷವಾಗಿ ರಜನೀಕಾಂತ್ ಅವರಿಗೆ ಸಿನಿಮಾದ ಕ್ಲೈಮ್ಯಾಕ್ಸ್ ಬಹಳ ಹಿಡಿಸಿದೆ. ಮತ್ತು ಸಿನಿಮಾ ಒಂದು ಅಧ್ಯಾತ್ಮಕ ಭಾವದಲ್ಲಿ ಅಂತ್ಯವಾಗಿದ್ದು ಅವರಿಗೆ ಬಹಳ ಮೆಚ್ಚುಗೆಯಾಗಿದೆ. ನಮ್ಮ ಸಿನಿಮಾ ಬಗ್ಗೆ ಸೂಪರ್ ಸ್ಟಾರ್ ಅವರಿಂದ ಈ ರೀತಿಯ ಮಾತುಗಳು ಕೇಳಿದ್ದು ಅದ್ಭುತಗಳನ್ನು ಮೀರಿದ ಅನುಭವ ರಜನೀಕಾಂತ್ ಸರ್ ನಿಮಗೆ ಬಹಳ ಧನ್ಯವಾದ'' ಎಂದು ಬರೆದುಕೊಂಡಿದ್ದಾರೆ ನಟ ರಕ್ಷಿತ್ ಶೆಟ್ಟಿ. ನಟ ರಜನೀಕಾಂತ್ ಹಲವು ಕನ್ನಡ ಸಿನಿಮಾಗಳನ್ನು ನೋಡುತ್ತಿರುತ್ತಾರೆ. ಅವರಿಗೆ ಯಾವುದೇ ಸಿನಿಮಾ ಇಷ್ಟವಾದರೂ ಅದರ ನಟ, ನಿರ್ದೇಶಕರಿಗೆ ಕರೆ ಮಾಡಿ ಅಭಿನಂದಿಸುತ್ತಾರೆ. ಬಹಳ ವರ್ಷಗಳ ಹಿಂದೆ ಅವರಿಗೆ ಇಷ್ಟವಾಗಿದ್ದ ಕನ್ನಡ ಧಾರಾವಾಹಿ 'ಗುಪ್ತಗಾಮಿನಿ' ಸೆಟ್ ಭೇಟಿ ನೀಡಿ ಕಲಾವಿದರನ್ನು ಅಭಿನಂದಿಸಿದ್ದರು.

ಸಿನಿಮಾ ನೋಡಿ ಕಣ್ಣೀರು ಹಾಕಿದ ಸಿಎಂ
'777 ಚಾರ್ಲಿ' ಸಿನಿಮಾವನ್ನು ಸಿನಿಮಾ ನಟರು ಮಾತ್ರವಲ್ಲ ರಾಜಕಾರಣಿಗಳು ಸಹ ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಸಿನಿಮಾ ವೀಕ್ಷಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಕಾಳವಾದ ತಮ್ಮ ಮೆಚ್ಚಿನ ನಾಯಿಯನ್ನು ನೆನಪಿಸಿಕೊಂಡು ಕಣ್ಣೀರು ಹಾಕಿದರು. ಅಲ್ಲದೆ, '777 ಚಾರ್ಲಿ' ಸಿನಿಮಾಕ್ಕೆ ಮುಂದಿನ ಆರು ತಿಂಗಳ ಕಾಲ ತೆರಿಗೆ ವಿನಾಯಿತಿಯನ್ನು ಸಹ ನೀಡಿದ್ದಾರೆ. ಸಿಎಂ ಜೊತೆಗೆ ನಟ, ರಾಜಕಾರಣಿ ಜಗ್ಗೇಶ್, ಸಚಿವ ಆರ್.ಅಶೋಕ್, ಸಚಿವ ಸುಧಾಕರ್, ನಾಗೇಶ್ ಇನ್ನು ಹಲವರು ಸಿನಿಮಾವನ್ನು ವೀಕ್ಷಿಸಿದರು.

ಹಲವು ಸೆಲೆಬ್ರಿಟಿಗಳು ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ
'777 ಚಾರ್ಲಿ' ಸಿನಿಮಾವು ನಾಯಿ ಮತ್ತು ಮನುಷ್ಯನ ನಡುವಿನ ಆಪ್ತ ಬಂಧವನ್ನು ಹೇಳುವ ಕತೆಯಾಗಿದೆ. ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಜೊತೆಗೆ ರಾಜ್ ಬಿ ಶೆಟ್ಟಿ, ಸಂಗೀತ ಶೃಂಗೇರಿ, ಬಾಬಿ ಸಿಂಹ, ದಾನಿಶ್ ಸೇಠ್ ಇನ್ನೂ ಕೆಲವರು ನಟಿಸಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ಕಿರಣ್ ರಾಜ್. ಸಿನಿಮಾವನ್ನು ಸಾಯಿ ಪಲ್ಲವಿ, ರಾಣಾ ದಗ್ಗುಬಾಟಿ, ಶ್ರದ್ಧಾ ಶ್ರೀನಾಥ್, ನಟಿ ರಮ್ಯಾ, ಬೋನಿ ಕಪೂರ್, ನೆನಪಿರಲಿ ಪ್ರೇಮ್, ಶಿವರಾಜ್ ಕುಮಾರ್, ರವಿಚಂದ್ರನ್, ಜಗ್ಗೇಶ್, ಜಾನ್ ಅಬ್ರಹಾಂ ಇನ್ನೂ ಹಲವರು ಮೆಚ್ಚಿಕೊಂಡಿದ್ದಾರೆ.


Click it and Unblock the Notifications











