ಭಾರತೀಯ ಚಿತ್ರರಂಗದಲ್ಲಿಯೇ ವಿನೂತನ ಪ್ರಯೋಗ ಮಾಡಿದ ಕನ್ನಡ ಚಿತ್ರ
ಭಾರತೀಯ ಸಿನಿಮಾ ರಂಗದಲ್ಲಿ ಕನ್ನಡ ಚಿತ್ರರಂಗದ ಕೊಡುಗೆ ಸಣ್ಣದೇನಲ್ಲ. ಇಡೀ ಮನರಂಜನಾ ಜಗತ್ತು ತನ್ನೆಡೆಗೆ ಬೆರಗಿನಿಂದ ನೋಡುವಂತೆ ಹೊಸ ಅಲೆಯ ಚಿತ್ರಗಳನ್ನು ನೀಡಿದ್ದ ಚಿತ್ರರಂಗ ನಮ್ಮದು. ಆದರೆ ನಂತರ ಚಿತ್ರರಂಗ ತನ್ನ ಬಿಗುತನ ಕಳೆದುಕೊಳ್ಳತೊಡಗಿತು. ಕಲಾತ್ಮಕ ಸಿನಿಮಾಗಳು ಮಹತ್ವ ಕಳೆದುಕೊಂಡು ವಾಣಿಜ್ಯ ದೃಷ್ಟಿಕೋನದ ಚಿತ್ರಗಳು ಹೆಚ್ಚು ಬರತೊಡಗಿದವು.
Recommended Video
ಇತ್ತೀಚಿನ ಕೆಲವು ವರ್ಷಗಳಲ್ಲಿ ಕಮರ್ಷಿಯಲ್ ಸಿನಿಮಾಗಳಲ್ಲಿಯೇ ವಿವಿಧ ಬಗೆಯ ಪ್ರಯೋಗಗಳು ನಡೆಯುತ್ತಿವೆ. ಹೊಸ ತಲೆಮಾರಿನ ನಿರ್ದೇಶಕರು ವಿಭಿನ್ನ ಕಥೆ, ಚಿತ್ರಕಥೆ, ನಿರೂಪಣೆಯ ಪ್ರಯೋಗಾತ್ಮಕ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಈ ಸಾಲಿಗೆ ಮತ್ತೊಂದು ಸಿನಿಮಾ ಸೇರ್ಪಡೆಯಾಗಿದೆ. ಚಿತ್ರದ ಕಥೆಯಲ್ಲಿ ಹೊಸತನದ ಜತೆಗೆ, ಅದನ್ನು ಚಿತ್ರೀಕರಿಸಿರುವ ಬಗೆಯೂ ವಿಭಿನ್ನವಾಗಿದೆ. ಬಹುಶಃ ಭಾರತೀಯ ಚಿತ್ರರಂಗದಲ್ಲಿ ಇಂತಹ ಪ್ರಯತ್ನ ಯಾರೂ ಮಾಡಿಲ್ಲ ಎನ್ನುತ್ತಾರೆ ಸಿನಿಮಾದ ನಿರ್ಮಾಪಕ ರಾಜಶೇಖರ್. ಮುಂದೆ ಓದಿ.

ಇಬ್ಬರು ನಿರ್ದೇಶಕರು!
'ಬರ್ಫಿ', 'ಪೆರೋಲ್' ಮುಂತಾದ ಚಿತ್ರಗಳನ್ನು ನಿರ್ದೇಶಿಸಿರುವ ರಾಜಶೇಖರ್ 'ತ್ರಿಕೋನ' ಎಂಬ ಸಿನಿಮಾ ಮಾಡಿದ್ದಾರೆ. ಇದು ಕನ್ನಡ, ತಮಿಳು ಮತ್ತು ತೆಲುಗು ಭಾಷೆಯಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಹಲವು ವಿಶೇಷಗಳಿವೆ. ಬಹುತಾರಾಗಣದ ಈ ಚಿತ್ರಕ್ಕೆ ಇಬ್ಬರು ನಿರ್ದೇಶಕರು. ವಿಭಿನ್ನ ಕಥೆ, ಆದರೆ ಚಿತ್ರೀಕರಣ ನಡೆಸಿದ್ದು ಒಂದೇ ಬಾರಿ. ಅದೂ ಚಿತ್ರದಲ್ಲಿನ ಕಲಾವಿದರಿಗೆ ಇದರಲ್ಲಿ ಮೂರು ಸಿನಿಮಾಗಳಿವೆ ಎನ್ನುವುದೇ ಅರಿವಿರಲಿಲ್ಲ!

ಚಿತ್ರಕಥೆ ಬದಲಿಸಿದ ಚಂದ್ರಕಾಂತ್
'ತ್ರಿಕೋನ' ಚಿತ್ರಕ್ಕೆ ಚಿತ್ರಕಥೆ ಸಿದ್ಧಪಡಿಸಿದ್ದ ರಾಜಶೇಖರ್, ಅದಕ್ಕೆ ಸಂಭಾಷಣೆ ಬರೆದುಕೊಡುವಂತೆ ನಿರ್ದೇಶಕ ಚಂದ್ರಕಾಂತ್ ಅವರಿಗೆ ನೀಡಿದ್ದರು. ಚಂದ್ರಕಾಂತ್ ಕನ್ನಡದಲ್ಲಿ '143' ಎಂಬ ವಿಭಿನ್ನ ಪ್ರಯೋಗದ ಚಿತ್ರ ಮಾಡಿದ್ದರು. ಇದು ವಿಮರ್ಶಕರ ಮೆಚ್ಚುಗೆ ಪಡೆದಿದ್ದರೂ, ಪ್ರೇಕ್ಷಕರನ್ನು ಸೆಳೆದಿರಲಿಲ್ಲ. ಈ ಚಿತ್ರಕಥೆ ಓದಿದ ಚಂದ್ರಕಾಂತ್, ಅದನ್ನು ತಮ್ಮದೇ ಶೈಲಿಯಲ್ಲಿ ಸಂಪೂರ್ಣವಾಗಿ ಬದಲಿಸಿ ತಂದಿಟ್ಟರು. ಅದನ್ನು ಕಂಡು ರಾಜಶೇಖರ್ ಅಚ್ಚರಿಗೊಳಗಾದರು. ಮೂರೂ ಭಾಷೆಯಲ್ಲಿ ತಾವೇ ನಿರ್ದೇಶಿಸಬೇಕೆಂದುಕೊಂಡಿದ್ದ ಅವರು, ಕನ್ನಡದ ಚಿತ್ರವನ್ನು ನೀವೇ ನಿರ್ದೇಶಿಸಿ ಎಂದು ಚಂದ್ರಕಾಂತ್ಗೆ ಬಿಟ್ಟುಕೊಟ್ಟರು.

ಕಥೆ ಬಿಟ್ಟುಕೊಡುವುದು ಸುಲಭವಲ್ಲ
ಚಂದ್ರಕಾಂತ್ ಅಷ್ಟು ಅದ್ಭುತವಾಗಿ ಚಿತ್ರಕಥೆ ಸಿದ್ಧಪಡಿಸಿದ್ದರು. ಒಬ್ಬ ನಿರ್ದೇಶಕ ತನ್ನ ಕಥೆಯನ್ನು ಬೇರೆಯವರಿಗೆ ಬಿಟ್ಟುಕೊಡುವುದು ಅತ್ಯಂತ ಸಂಕಷ್ಟದ ಮತ್ತು ಬೇಸರದ ಸಂಗತಿ. ಆದರೆ ಅವರು ಸಿದ್ಧಪಡಿಸಿದ್ದ ಕಥೆಯನ್ನು ಅವರೇ ನಿರ್ದೇಶಿಸಿದರೆ ಚೆನ್ನಾಗಿರುತ್ತದೆ ಎಂದುಕೊಂಡೆ. ಹೇಗೂ ತಮಿಳು ಮತ್ತು ತೆಲುಗಿನಲ್ಲಿ ನಾನೇ ನಿರ್ದೇಶಿಸುವುದಾಗಿ ತೀರ್ಮಾನಿಸಿದ್ದೆ. ಈ ಎರಡು ಭಾಷೆಗಳಿಗೆ ನಾನೇ ಬರೆದಿದ್ದ ಚಿತ್ರಕಥೆ ಬಳಸಿಕೊಂಡೆ ಎಂದು ರಾಜಶೇಖರ್ ತಿಳಿಸಿದರು.

ಕಲಾವಿದರಿಗೂ ತಿಳಿದಿಲ್ಲ
ಈ ಸಿನಿಮಾವನ್ನು 50 ದಿನ ನಾಲ್ಕು ಹಂತಗಳಲ್ಲಿ ಚಿತ್ರೀಕರಿಸಲಾಗಿದೆ. ಅದೇ ಕಲಾವಿದರನ್ನು ಇಟ್ಟುಕೊಂಡು ಮೂರು ಭಾಷೆಗಳಲ್ಲಿ ಮೂರು ಸ್ಕ್ರಿಪ್ಟ್ಗಳಿಗೆ ಒಂದೇ ಸಮಯದಲ್ಲಿ ಚಿತ್ರೀಕರಣ ನಡೆಸಲಾಗಿದೆ. ಇದು ಮೂರು ಭಾಷೆಯಲ್ಲಿ ವಿಭಿನ್ನ ಕಥೆಯನ್ನು ಹೊಂದಿದೆ ಎನ್ನುವುದು ಕಲಾವಿದರಿಗೂ ಅರಿವಾಗಿಲ್ಲ. ಅಚ್ಯುತರಾವ್, ಸುಧಾರಾಣಿ, ಸುರೇಶ್ ಹೆಬ್ಳೀಕರ್, ಲಕ್ಷ್ಮಿ, ಸಾಧುಕೋಕಿಲಾ, ಮಾರುತೇಶ್ ಮುಂತಾದವರು ನಟಿಸಿದ್ದಾರೆ.

ಎಡಿಟಿಂಗ್ನಲ್ಲಿ ಕರಾಮತ್ತು
ಇಡೀ ಸಿನಿಮಾವನ್ನು ಬದಲಿಸಿರುವುದು ಎಡಿಟಿಂಗ್ ಕೊಠಡಿಯಲ್ಲಿ. ಕನ್ನಡದ ಕಥೆಯನ್ನು ಚಂದ್ರಕಾಂತ್ ಎಡಿಟ್ ಮಾಡಿಸಿದ್ದರೆ, ತಮಿಳು ತೆಲುಗಿನ ಕಥೆಯನ್ನು ರಾಜಶೇಖರ್ ಎಡಿಟ್ ಮಾಡಿಸಿದ್ದಾರೆ. ಈ ಮೂರೂ ಭಾಷೆಗಳಿಗೆ ಮೂವರು ಸಂಗೀತ ನಿರ್ದೇಶಕರು, ಸಂಕಲನಕಾರರು, ಡಿಟಿಎಸ್ ತಂತ್ರಜ್ಞರನ್ನು ಬಳಸಲಾಗಿದೆ. ಈ ಮೂರೂ ಸಿನಿಮಾಗಳಲ್ಲಿ ಆದಿ ಮತ್ತು ಅಂತ್ಯ ಒಂದೇ, ಆದರೆ ನಡುವಿನ ಕಥೆ ಬೇರೆ. ವಿಶೇಷವೆಂದರೆ ಕನ್ನಡ ಚಿತ್ರವನ್ನು ರಾಜಶೇಖರ್ ನೋಡಿಲ್ಲ, ಹಾಗೆಯೇ ತಮಿಳು ಮತ್ತು ತೆಲುಗಿನಲ್ಲಿ ಹೇಗೆ ಮೂಡಿದೆ ಎಂಬುದನ್ನು ಚಂದ್ರಕಾಂತ್ ನೋಡಿಲ್ಲವಂತೆ.

ಸೆನ್ಸಾರ್ ಮಂಡಳಿ ಮೆಚ್ಚುಗೆ
ಇದು ಎಡಿಟಿಂಗ್ ಶಾಲೆಯಲ್ಲಿ ಪಾಠ ಮಾಡಿದಂತೆ. ಒಂದೇ ಪಾಠವನ್ನು ಶಿಕ್ಷಕರು ಮೂರು ರೀತಿ ಹಢಳುತ್ತಾರಲ್ಲ ಹಾಗೆ. ಶೂಟಿಂಗ್ ಮಾಡುವಾಗ ಮಾಮೂಲಿ ಮಾಡಿದ್ದೆವು. ಎಡಿಟಿಂಗ್, ಸಂಗೀತದಲ್ಲಿ ಬದಲಾವಣೆಗಳನ್ನು ಮಾಡಿದೆವು. ಇವುಗಳಲ್ಲಿ ಒಂದು ಸಿನಿಮಾ ನೋಡಿದರು ಮತ್ತೊಂದು ಸಿನಿಮಾವನ್ನೂ ನೋಡುತ್ತಾರೆ. ಅಷ್ಟು ಗ್ಯಾರಂಟಿ ಈ ಚಿತ್ರದ ಮೇಲಿದೆ. ಸೆನ್ಸಾರ್ ಮಂಡಳಿಯವರು ಸಿನಿಮಾ ನೋಡಿ ಹೊಗಳಿದ್ದಾರೆ. ಒಂದು ಸಣ್ಣ ಕಟ್, ಮ್ಯೂಟ್ ಕೂಡ ಮಾಡಿಸಿಲ್ಲ. ಒಳ್ಳೆಯ ಇಂಗ್ಲಿಷ್ ಸಿನಿಮಾ ನೋಡಿದ ಅನುಭವ ಆಯ್ತು ಎಂದು ಕೆಲವು ಅಧಿಕಾರಿಗಳು ಕರೆ ಮಾಡಿ ಹೇಳಿದ್ದಾರೆ ಎಂದು ಖುಷಿ ಹಂಚಿಕೊಂಡರು ರಾಜಶೇಖರ್.

ಸಾಧು ಕೋಕಿಲಾ ಜತೆ ಸಿನಿಮಾ
ತಮಿಳಿನಲ್ಲಿ ಈಗಾಗಲೇ ಹಂಚಿಕೆದಾರರು ಸಿನಿಮಾ ಪಡೆದುಕೊಂಡಿದ್ದಾರೆ. ಚಿತ್ರಮಂದಿರಗಳು ತೆರೆಯುವವರೆಗೂ ಬಿಡುಗಡೆಗೆ ಕಾಯುತ್ತೇವೆ. ಇದರ ಜತೆಗೆ ಇನ್ನೂ ಮೂರು ಸಿನಿಮಾಗಳಿವೆ. ಇವುಗಳಲ್ಲಿ ಒಂದು ಕಥೆಯನ್ನು ಸಾಧು ಕೋಕಿಲಾ ಅವರಿಗೆ ಹೇಳಿದ್ದು, ನನ್ನ ನಿರ್ಮಾಣದಲ್ಲಿ ಅವರು ನಿರ್ದೇಶಿಸಲಿದ್ದಾರೆ ಎಂದು ವಿವರಿಸಿದರು.


Click it and Unblock the Notifications











