ಕುಡುಕರಿಗೆ ನಟಿ ತ್ರಿಷಾ ಕೃಷ್ಣನ್ ಕಿವಿಮಾತು
ಕುಡಿತ ಒಳ್ಳೆಯದಲ್ಲ ಎಂಬ ಮಹಾತ್ಮ ಗಾಂಧೀಜಿ ಮಾತನ್ನು ದಕ್ಷಿಣ ಭಾರತದ ಖ್ಯಾತ ನಟಿ ತ್ರೀಷಾ ಕೃಷ್ಣನ್ ಪುನರುಚ್ಚರಿಸಿದ್ದಾರೆ. ಒಂದು ವೇಳೆ ನನ್ನ ಕಾರು ಚಾಲಕ ಕುಡಿದು ವಾಹನ ಚಾಲನೆ ಮಾಡಿದರೆ ಹಿಂದೆ ಮುಂದೆ ನೋಡದೇ ಪೊಲೀಸರಿಗೆ ದೂರು ನೀಡುತ್ತೇನೆ ಎಂದು ಹೇಳಿದ್ದಾರೆ.
ಮದ್ಯ ಸೇವಿಸಿ ವಾಹನ ಚಾಲನೆ ಮಾಡುವುದು ಈಗೀಗ ಸಾಮಾನ್ಯವಾಗಿಬಿಟ್ಟಿದೆ. ತಮ್ಮ ಮತ್ತು ಇತರರ ಪ್ರಾಣಕ್ಕೆ ಕುತ್ತು ತರುವ ಕೆಲಸ ಯಾಕಾದರೂ ಮಾಡುತ್ತಾರೋ? ಇದರ ಅಗತ್ಯವೇನು? ಎಂದು ಪ್ರಶ್ನಿಸಿದ್ದಾರೆ.[ಶ್ರೀದೇವಿಯಾದ ರಾಮ್ ಗೋಪಾಲ್ ವರ್ಮಾ ಸಾವಿತ್ರಿ]

ಅಮಲಿನಲ್ಲಿ ವಾಹನ ಚಲಾಯಿಸುವವರಿಗೆ ಪೊಲೀಸರು ವಿಧಿಸುತ್ತಿರುವ ದಂಡ ಯಾತಕ್ಕೂ ಸಾಲದು. ನೀಡುತ್ತಿರುವ ಶಿಕ್ಷೆ ಪ್ರಮಾಣವೂ ಕಡಿಮೆ. ಇದರಿಂದಲೇ ದೇಶದಲ್ಲಿ ಮದ್ಯ ಸೇವಿಸಿ ವಾಹನ ಚಾಲನೆ ಮಾಡಿದ ಅಪಘಾತ ಪ್ರಕರಣಗಳು ಪ್ರತಿದಿನ ಹೆಚ್ಚುತ್ತಿವೆ ಎಂದು ಹೇಳಿದ್ದಾರೆ.
ಹೆಚ್ಚಿನ ದಂಡ ವಿಧಿಸಿ, ಉಗ್ರ ಶಿಕ್ಷೆ ನೀಡುವುದು ಒಂದು ಬಗೆಯಾದರೆ, ಜನರಲ್ಲಿ ಜಾಗೃತಿ ಮೂಡಿಸುವುದು ಇನ್ನೊಂದು ಬಗೆ. ಎರಡನೆಯದೇ ಉತ್ತಮ ಎಂದು ಕಾಣುತ್ತದೆ. ಹಾಗಾಗಿ ಜಾಗೃತಿ ಮೂಡಿಸುವ ಕೆಲಸ ಎಲ್ಲರಿಂದ ಆಗಬೇಕು ಎಂದು ಸಲಹೆ ನೀಡಿದ್ದಾರೆ. ಇದಕ್ಕೆ ಮಾಧ್ಯಮಗಳ ಸಹಕಾರವನ್ನು ತ್ರಿಷಾ ಬಯಸಿದ್ದಾರೆ.
ನಿಮಗೆ ಕುಡಿಯಲೇಬೇಕು ಎಂದೆನಿಸಿದರೆ ಮನೆಯಲ್ಲೇ ಕುಡಿಯಿರಿ. ಎಲ್ಲೋ ಕುಡಿದು ನಿಮ್ಮ ಮತ್ತು ಅಮಾಯಕರ ಪ್ರಾಣಕ್ಕೆ ಸಂಚಕಾರ ತಂದುಕೊಳ್ಳಬೇಡಿ ಎಂದು ನಟಿ ಕಿವಿಮಾತು ಹೇಳಿದ್ದಾರೆ. ನಟಿಮಣಿಯ ಮಾತಿಗೆ ಬೆಲೆಕೊಟ್ಟು ಅದೆಷ್ಟು ಕುಡುಕರು ಮದ್ಯ ತೊರೆಯುತ್ತಾರೋ?


Click it and Unblock the Notifications











