ವಿಷ್ಣುವರ್ಧನ್ ಪ್ರತಿಮೆ ಧ್ವಂಸ: ಕಿಡಿಗೇಡಿಗಳನ್ನು ಶಿಕ್ಷಿಸಿ ಎಂದ ಅನಿರುದ್ಧ
ಸಾಮಾನ್ಯವಾಗಿ ಶಾಂತವಾಗಿಯೇ ಇರುವ ಅನಿರುದ್ದ ಅವರಿಗೆ ಮತ್ತೆ ಸಿಟ್ಟು ಬಂದಿದೆ. ಕೆಲವು ದಿನಗಳ ಹಿಂದೆ ತೆಲುಗಿನ ನಟನೊಬ್ಬ ವಿಷ್ಣುವರ್ಧನ್ ಬಗ್ಗೆ ಇಲ್ಲ-ಸಲ್ಲದ್ದು ಮಾತನಾಡಿದ್ದಾಗ ಅವರಿಗೆ ಸಿಟ್ಟು ಬಂದಿತ್ತು. ಈಗ ಮತ್ತೆ ಇದೇ ಕಾರಣಕ್ಕೆ ಸಿಟ್ಟಾಗಿದ್ದಾರೆ ಅನಿರುದ್ಧ.
Recommended Video
ಮಾಗಡಿ ರಸ್ತೆಯಲ್ಲಿ ನಟ ವಿಷ್ಣುವರ್ಧನ್ ಪುತ್ಥಳಿಯನ್ನು ಯಾರೊ ಕಿಡಿಗೇಡಿಗಳು ಹಾಳುಗೆಡವಿದ್ದಾರೆ. ವಿಷ್ಣುವರ್ಧನ್ ಪುತ್ಥಳಿಗೆ ಅವಮಾನ ಎಸಗಿದ್ದಾರೆ ಇದು ನಟ ಅನಿರುದ್ಧ ಅವರನ್ನು ಕೆರಳಿಸಿದೆ.
ಮಾವನವರೂ ಆಗಿರುವ ವಿಷ್ಣುವರ್ಧನ್ ಅವರ ಬಗ್ಗೆ ಅಪಾರ ಗೌರವ, ಪ್ರೀತಿ ಹೊಂದಿರುವ ಅನಿರುದ್ಧ ಅವರು, ವಿಷ್ಣುವರ್ಧನ್ ಪುತ್ಥಳಿಗೆ ಮಾಡಲಾಗಿರುವ ಅವಮಾನಕ್ಕೆ ಸಿಟ್ಟಿನಿಂದ, ಬೇಸರದಿಂದ ಪ್ರತಿಕ್ರಿಯಿಸಿದ್ದು, 'ವಿಷ್ಣುವರ್ಧನ್ ಪ್ರತಿಮೆಯನ್ನು ಧ್ವಂಸ ಮಾಡಿದ ಕಿಡಿಗೇಡಿಗಳನ್ನು ಶೀಘ್ರವೇ ಹಿಡಿದು ಕಾನೂನು ರೀತ್ಯಾ ಶಿಕ್ಷಿಸಬೇಕು ಪೊಲೀಸಿನವರು' ಎಂದಿದ್ದಾರೆ.

ಪ್ರತಿಮೆ ಧ್ವಂಸ ಮಾಡಿರುವುದು ದುರಂತ, ಈಗಾಗಲೇ ಸಚಿವ ಸೋಮಣ್ಣ ಅವರು ಕ್ಷಮೆ ಕೋರಿದ್ದಾರೆ. ಅಲ್ಲದೆ ಬೇರೆ ಜಾಗದಲ್ಲಿ ಪ್ರತಿಮೆ ಸ್ಥಳಾಂತರ ಮಾಡೋಣ ಎಂದು ಸೋಮಣ್ಣ ಹೇಳಿದ್ದಾರೆ ಅವರ ಮಾತಿಗೆ ಮನ್ನಣೆ ಕೊಡೋಣ ಎಂದಿದ್ದಾರೆ ಅನಿರುದ್ಧ.
ಅಪ್ಪ (ವಿಷ್ಣು) ಅವರ ಅಭಿಮಾನಿಗಳು ಈಗಾಗಲೇ ಸಾಕಷ್ಟು ನೊಂದಿದ್ದಾರೆ, ಅವರು ಇನ್ನಷ್ಟು ನೊಂದುಕೊಳ್ಳುವುದು ಬೇಡ. ಪ್ರೀತಿಯಿಂದ ಇಡೀಯ ವಿಶ್ವವನ್ನೇ ಗೆಲ್ಲಬಹುದು, ದ್ವೇಷದಿಂದ ಏನನ್ನೂ ಗೆಲ್ಲಲು ಸಾಧ್ಯವಿಲ್ಲ. ವಿಷ್ಣು ಪುತ್ಥಳಿಯನ್ನು ಬೇರೆಡೆ ಇನ್ನೂ ಅದ್ಧೂರಿಯಾಗಿ ಸ್ಥಾಪಿಸುವ, ಸಮಾಜ ಮುಖಿ ಸೇವೆ ಮಾಡುವ ಎಂದಿದ್ದಾರೆ ಅನಿರುದ್ಧ.
ಮಾಗಡಿ ರಸ್ತೆ ಟೋಲ್ ಗೇಟ್ ಬಳಿ ಬಾಲಗಂಗಾಧರ ಸ್ವಾಮೀಜಿ ವೃತ್ತದಲ್ಲಿ ವಿಷ್ಣುವರ್ಧನ್ ಪುತ್ಥಳಿ ನಿರ್ಮಿಸಲಾಗಿತ್ತು. ಇದು ಬಾಲಗಂಗಾಧರ ಸ್ವಾಮೀಜಿ ಸರ್ಕಲ್ ಆಗಿದ್ದರಿಂದ ಇಲ್ಲಿ ಬಾಲಗಂಗಾಧರ ಸ್ವಾಮೀಜಿ ಅವರ ಪುತ್ಥಳಿ ನಿರ್ಮಿಸಬೇಕು, ವಿಷ್ಣುವರ್ಧನ್ ಅವರ ಪ್ರತಿಮೆ ಬೇಡ ಎಂದು ಈ ಹಿಂದೆಯೇ ವಿರೋಧ ವ್ಯಕ್ತವಾಗಿತ್ತು ಅದೇ ಕಾರಣಕ್ಕೆ ವಿಷ್ಣು ಅವರ ಪುತ್ಥಳಿಯನ್ನು ಧ್ವಂಸ ಮಾಡಲಾಗಿದೆ ಎನ್ನಲಾಗುತ್ತಿದೆ. ಈ ಹಿಂದೆಯೂ ಒಮ್ಮೆ ಇದೇ ಜಾಗದಿಂದ ವಿಷ್ಣು ಪುತ್ಥಳಿಯನ್ನು ಹೊತ್ತೊಯ್ಯಲಾಗಿತ್ತು.


Click it and Unblock the Notifications











