ಗಾಂಧಿನಗರಕ್ಕೆ ಹೊಸ ಮಾರ್ಗದಲ್ಲಿ ಬಂದ 'ವಾಸ್ಕೋಡಿಗಾಮ'
ಓದು ಅನ್ನುವುದು ಅದೆಷ್ಟೋ ವಿದ್ಯಾರ್ಥಿಗಳಿಗೆ ಅಲರ್ಜಿ. ವಿದ್ಯೆ ನೈವೇದ್ಯವಾಗಿರುವವರಿಗೆ ಟೆಕ್ಸ್ಟ್ ಬುಕ್ಕೇ ಬಾಂಬ್, ಮಾರ್ಕ್ಸ್ ಅಂದ್ರೆ ಮೆಂಟಲ್ ಟಾರ್ಚರ್. ಕಾಲೇಜು ಜೀವನವನ್ನ ಮಸ್ತ್ ಮಜಾ ಮಾಡುವವರಿಗೆ ರ್ಯಾಂಕ್ ಅನ್ನುವ ರೋಧನೆ ಯಾಕೆ ಬೇಕು ಹೇಳಿ.
ಪುಸ್ತಕದ ಹುಳುವಾಗದೆ, ಬಾವಿಯಾಚೆಗಿನ ಪ್ರಪಂಚವನ್ನ ನೋಡಬೇಕು ಅಂತ ಹಾತೊರೆಯುವ ಹುಡುಗರಿಗೆ ಹೇಳಿ ಮಾಡಿಸಿರುವ ಸಿನಿಮಾ ಕನ್ನಡದಲ್ಲಿ ಸದ್ದಿಲ್ಲದೇ ತಯಾರಾಗಿದೆ. ಆ ಚಿತ್ರವೇ 'ವಾಸ್ಕೋಡಿಗಾಮ'.

ಹಿಸ್ಟರಿ ವಿದ್ಯಾರ್ಥಿಗಳಿಗೆ 'ವಾಸ್ಕೋಡಿಗಾಮ' ಹೆಸರು ನೆನಪಿರಲೇ ಬೇಕು. 14ನೇ ಶತಮಾನದಲ್ಲಿ ಕ್ಯಾಲಿಕಟ್ ಗೆ ಬಂದು ತಲುಪಿದ ವಾಸ್ಕೋ-ಡ-ಗಾಮ ಗೂ ಈ ಚಿತ್ರಕ್ಕೂ ಏನು ಸಂಬಂಧ ಅನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.
ಆದ್ರೆ, ಇದೀಗ ರಿಲೀಸ್ ಆಗಿರುವ ಚಿತ್ರದ ಟೀಸರ್ ಮತ್ತು ಟೈಟಲ್ ಸಾಂಗ್ ನಲ್ಲಿ ಮಾತ್ರ ಕಾಲೇಜು ಹುಡುಗರ ಗೋಳಿದೆ. ''ಕಾಲೇಜೇ ಜೈಲು, ಪ್ರಿನ್ಸಿಪಲ್ಲು ಪುಕ್ಲು, ಹೈಕ್ಳು ತಿಕ್ಲು'' ಅನ್ನುವ ಪಕ್ಕಾ ಲೋಕಲ್ ಲಿರಿಕ್ಸ್ ಇರುವ 'ವಾಸ್ಕೋಡಿಗಾಮ' ಟೈಟಲ್ ಹಾಡು ಪಡ್ಡೆ ಹುಡುಗರ ಸುಪ್ರಭಾತವಾಗಿಬಿಟ್ಟಿದೆ.

ಸದಾ ಓದು, ಮಾರ್ಕ್ಸು, ರ್ಯಾಂಕು ಅಂತ ಪೀಡಿಸುವ ಕಾಲೇಜ್ ನಲ್ಲಿ ಯುವಕರು ಪಡುವ ಪಾಡೇ 'ವಾಸ್ಕೋಡಿಗಾಮ' ಚಿತ್ರದ ಹೂರಣ. ಲೆಕ್ಚರರ್ ಆದರೂ, ಶಿಕ್ಷಣ ವ್ಯವಸ್ಥೆ ವಿರುದ್ಧ ಹೋರಾಡುವ ಕಾಲೇಜ್ ಹುಡುಗರ ಕಣ್ಮಣಿಯಾಗಿ ಕಿಶೋರ್ ಕಾಣಿಸಿಕೊಂಡಿದ್ದಾರೆ.
ಭಿನ್ನ ವಿಭಿನ್ನ ಲುಕ್ ನಲ್ಲಿ ಮಿಂಚಿರುವ ಕಿಶೋರ್ ಗೆ ಜೋಡಿಯಾಗಿ ತಮಿಳು, ತೆಲುಗು ಮತ್ತು ಮಲೆಯಾಳಂ ಚಿತ್ರರಂಗದಲ್ಲಿ ಹೆಸರು ಮಾಡಿರುವ ನಟಿ ಪಾರ್ವತಿ ನಾಯರ್ ಇದ್ದಾರೆ. ಈ ಹಿಂದೆ 'ಸೈಬರ್ ಯುಗದೊಳ್ ನವಯುವ ಮಧುರ ಪ್ರೇಮ ಕಾವ್ಯ' ಚಿತ್ರವನ್ನ ನಿರ್ದೇಶಿಸಿದ್ದ ಉಪೇಂದ್ರ ಶಿಷ್ಯ ಮಧು ಚಂದ್ರ, 'ವಾಸ್ಕೋಡಿಗಾಮ'ಗೆ ಆಕ್ಷನ್ ಕಟ್ ಹೇಳಿದ್ರೆ, ಪೂರ್ಣ ಚಂದ್ರ ತೇಜಸ್ವಿ ತುಂಡಹೈಕ್ಳಿಗೆ ಇಷ್ಟವಾಗುವ ಸಂಗೀತ ನೀಡಿದ್ದಾರೆ.
ಸ್ಟೂಡೆಂಟ್ ಲೈಫ್ ನ ಶಾಂತಿ ಮಾಡೋಕೆ, 'ಕಾಲೇಜು ಸರ್ವವಾಶವಾಗ ನಮಃ' ಅಂತೆಲ್ಲಾ ಮಾರ್ಡನ್ ಸ್ತೋತ್ರ ಇರುವ 'ವಾಸ್ಕೋಡಿಗಾಮ' ಚಿತ್ರ ವಿದ್ಯಾರ್ಥಿಗಳನ್ನ ಎಷ್ಟರಮಟ್ಟಿಗೆ ಆಕರ್ಷಿಸುತ್ತೆ ಅಂತ ಕಾದುನೋಡ್ಬೇಕು. (ಫಿಲ್ಮಿಬೀಟ್ ಕನ್ನಡ)


Click it and Unblock the Notifications












