ಅಣ್ಣಾವ್ರ ಮನೆ ಇಬ್ಭಾಗವಾಗಿದ್ದು ಏಕೆ? ರಾಘವೇಂದ್ರ ರಾಜ್ಕುಮಾರ್ ಕೊಟ್ಟರು ಕಾರಣ
ಡಾ.ರಾಜ್ಕುಮಾರ್ ಮನೆಯೆಂದರೆ ಅದೊಂದು ದೊಡ್ಡ ಆಲಯವಿದ್ದಂತೆ. ಸದಾಶಿವನಗರದ ಆ ದೊಡ್ಡ ಮನೆಯಲ್ಲಿ ಒಟ್ಟಿಗೆ ಹಲವು ಕುಟುಂಬಗಳಿದ್ದವು. ಹಲವು ಮಕ್ಕಳು ಒಟ್ಟಿಗೆ ಬೆಳೆದ ಮನೆಯದು.
Recommended Video
ಆದರೆ, ಅಣ್ಣಾವ್ರು ತೀರಿಕೊಂಡ ಬಳಿಕ ಆ ದೊಡ್ಡ ಮನೆ ಇಬ್ಭಾಗವಾಯಿತು. ಶಿವರಾಜ್ ಕುಮಾರ್ ಸಹ ಬೇರೆ ಮನೆ ಕಟ್ಟಿಸಿಕೊಂಡು ಅಲ್ಲಿ ವಾಸಿಸಲು ಪ್ರಾರಂಭಿಸಿದರು.
ಅಣ್ಣ ತಮ್ಮಂದಿರು ಮೊದಲಿನಂತೆಯೇ ಬಹು ಅನ್ಯೋನ್ಯವಾಗಿಯೇ ಇದ್ದರು, ದೊಡ್ಮನೆ ಒಡೆದು ಎರಡು ಮನೆ ಏಕೆ ಆಯಿತು ಎಂದು ಹಲವರಲ್ಲಿ ಅನುಮಾನ ಇತ್ತು. ಈ ಬಗ್ಗೆ ಹಲವರು ಹಲವು ರೀತಿ ಮಾತುಗಳನ್ನಾಡಿದರು. ಆದರೆ ಈಗ ಇದಕ್ಕೆಲ್ಲ ನಟ ರಾಘವೇಂದ್ರ ರಾಜ್ಕುಮಾರ್ ಉತ್ತರ ನೀಡಿದ್ದಾರೆ.
ಅರ್ಜುನ್ ಜನ್ಯ, ಹಿನ್ನೆಲೆ ಗಾಯಕ ರಾಜೇಶ್ ಕೃಷ್ಣನ್ ಹಾಗೂ ಗೀತ ಸಾಹಿತಿ ನಾಗೇಂದ್ರ ಪ್ರಸಾದ್ ಸೇರಿ ಗೀತೆಯೊಂದನ್ನು ರಚಿಸಿದ್ದು ಆ ಗೀತೆಯನ್ನು ಅಪ್ಪು ಅವರಿಗೆ ಅರ್ಪಿಸಿದ್ದಾರೆ. ಆ ಗೀತೆಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ರಾಘವೇಂದ್ರ ರಾಜ್ಕುಮಾರ್ ಭಾಗವಹಿಸಿದ್ದರು. ಆ ಕಾರ್ಯಕ್ರಮದಲ್ಲಿ ಮೇಲಿನ ವಿಷಯ ಹಂಚಿಕೊಂಡರು.

ರಾಜ್ಕುಮಾರ್ ಇದ್ದಾಗ ಒಂದೇ ಮನೆ ಇತ್ತು
ತಂದೆಯವರಿದ್ದಾಗ ನಮ್ಮದು ಒಂದೇ ಮನೆ ಇತ್ತು. ಬಹಳ ದೊಡ್ಡ ಮನೆ ಅದು. ಅದನ್ನು ಈಗ ಎರಡು ಮನೆ ಮಾಡಿದ್ದೀವಿ. ಅದನ್ನು ನಮ್ಮ ತಾಯಿ ಮಾಡಿಕೊಟ್ಟಿದ್ದು. ನಾನು ಇದ್ದಾಗಲೇ ಇದು ಆಗಿಬಿಡಲಿ, ನಾನು ಹೋದ ಮೇಲೆ ನೀವು ಬೇರೆಯಾದರೆ ಆಸ್ತಿಗೋಸ್ಕರ ಹೀಗೆ ಮಾಡಿದ್ದಾರೆ ಎಂದು ಮಾತನಾಡಿಕೊಳ್ಳುತ್ತಾರೆ ಎಂದು ಹೇಳಿ ಒಂದು ಮನೆಯನ್ನು ಎರಡು ಮನೆಯನ್ನಾಗಿ ಮಾಡಿಕೊಟ್ಟರು. ಒಂದು ನನಗೆಂದು, ಒಂದು ಪುನೀತ್ಗೆಂದು ನೀಡಿದರು'' ಎಂದು ಹಳೆಯ ಘಟನೆ ನೆನಪು ಮಾಡಿಕೊಂಡರು ರಾಘವೇಂದ್ರ ರಾಜ್ಕುಮಾರ್.

ಅಪ್ಪುವನ್ನು ನೋಡಿಕೊ ಎಂದು ಅಮ್ಮ ಹೇಳಿದ್ದರು: ರಾಘಣ್ಣ
ಮನೆಯನ್ನು ಮಾಡಿಕೊಟ್ಟ ಸಂದರ್ಭದಲ್ಲಿ ಅಮ್ಮ ನನಗೆ ಹೇಳಿದ್ದರು. ನಿನ್ನ ಎಡಗಡೆ, ನಿನ್ನ ಹೆಗಲಿಗೆ ನನ್ನ ಮಗುವನ್ನು ಹಾಕಿದ್ದೇನಪ್ಪ ಅವನನ್ನು ನೋಡಿಕೊ ಎಂದರು. ಆದರೆ ನಾನು ಏನು ಮಾಡಿದೆ. ನನ್ನ ಕೈಯಲ್ಲಿ ನೋಡಿಕೊಳ್ಳಲು ಆಗುತ್ತಿಲ್ಲವೆಂದು ನಮ್ಮ ಅಮ್ಮನ ಪಕ್ಕದಲ್ಲಿಯೇ ಮಲಗಿಸಿ ಬಂದುಬಿಟ್ಟೆ. ಇದು ನನ್ನನ್ನು ಬಹಳ ಕಾಡುತ್ತಿದೆ'' ಎಂದು ಭಾವುಕರಾದರು ರಾಘವೇಂದ್ರ ರಾಜ್ಕುಮಾರ್.

ಅಭಿಮಾನಿಗಳಿಗೆ ಹೆಸರು ತರೋ ಕೆಲಸ: ರಾಘಣ್ಣ
ಆದರೆ ಈ ನೋವನ್ನು ಹೇಗೆ ತೀರಿಸಿಕೊಳ್ಳಬೇಕು ಎಂದು ಯೋಚಿಸಿದಾಗ, ನಮ್ಮ ಅಭಿಮಾನಿಗಳಿಗೆ ಒಳ್ಳೆಯ ಹೆಸರು ತಂದುಕೊಟ್ಟು ನಾನು ನೋವು ತೀರಿಸಿಕೊಳ್ಳೋಣ ಎಂದುಕೊಂಡೆ. ಗಿಡ ಬೆಳೆಸಿ, ಮರ ಬೆಳೆಸಿ ನಾನು ಆ ಕಾರ್ಯ ಮಾಡಲಿದ್ದೇನೆ. ಯಾರಪ್ಪ ಈ ಅಭಿಮಾನಿಗಳು ಇಷ್ಟೊಂದು ಮರ, ಗಿಡ ಬೆಳೆಸುತ್ತಿದ್ದಾರೆ. ಎಂದು ವಿಶ್ವದಾದ್ಯಂತ ಜನ ಆಶ್ಚರ್ಯ ಪಡಬೇಕು ಹಾಗೆ ಮಾಡಬೇಕು'' ಎಂದರು ರಾಘವೇಂದ್ರ ರಾಜ್ಕುಮಾರ್.

'ಗಂಧದ ಗುಡಿ' ಟೀಸರ್ ನನಗೆ ತೋರಿಸಿದ್ದ ಅಪ್ಪು: ರಾಘಣ್ಣ
''ಪುನೀತ್ ಕಾಡು ಮೇಡು ಅಲೆದು ಬಂದು 'ಗಂಧದ ಗುಡಿ' ಚಿತ್ರೀಕರಣ ಮಾಡಿಕೊಂಡು ಬಂದು ನನಗೆ ಟೀಸರ್ ತೋರಿಸಿದ್ದ. ಈ ಡಾಕ್ಯುಮೆಂಟರಿ ಮೂಲಕ ಒಂದು ಸಂದೇಶ ಕೊಡಬೇಕೆಂದರೆ ಏನು ಕೊಡಬಹುದು ರಾಘಣ್ಣ ಎಂದು ನನ್ನನ್ನು ಅಪ್ಪು ಕೇಳಿದ್ದ. ನಮ್ಮ ತಂದೆ 'ಗಂಧದ ಗುಡಿ' ಮಾಡಬೇಕಾದರೆ, 'ಈ ಭೂಮಿ ಎಲ್ಲ ಜೀವಿಗಳಿಗೂ ಇರುವಂಥದ್ದು, ಒಂದೊಮ್ಮೆ ಮನುಷ್ಯ ಮಾಡುತ್ತಿರುವ ಅರಾಜಕತೆಯನ್ನು ಪ್ರಶ್ನೆ ಮಾಡಿದರೆ ನಾವು ಏನೆಂದು ಉತ್ತರ ಕೊಡುವುದು'' ಎಂದಿದ್ದರು. ಅದೇ ಸಂದೇಶವನ್ನು ನೀಡೆಂದು ಹೇಳಿದ್ದೆ. ಪುನೀತ್ಗೆ ಸಹ 'ಗಂಧದ ಗುಡಿ' ಸಿನಿಮಾ ಮಾಡಿ ಅದರಿಂದ ಹಣ ಗಳಿಸಬೇಕು ಎಂಬ ಉದ್ದೇಶ ಇರಲಿಲ್ಲ. ಅದರಿಂದ ಯಾವುದಾದರೂ ಒಂದು ಒಳ್ಳೆಯ ಸಂದೇಶ ನೀಡಬೇಕು ಎಂಬುದಷ್ಟೆ ಅವನ ಉದ್ದೇಶವಾಗಿತ್ತು'' ಎಂದಿದ್ದಾರೆ ರಾಘಣ್ಣ.

ಪುನೀತ್-ರಾಘಣ್ಣ ನೆರೆ ಹೊರೆಯವರು
ಪುನೀತ್ ರಾಜ್ಕುಮಾರ್ ಹಾಗೂ ರಾಘವೇಂದ್ರ ರಾಜ್ಕುಮಾರ್ ಅವರು ನೆರೆ-ಹೊರೆಯವರೇ ಆಗಿದ್ದಾರೆ. ಅಣ್ಣಾವ್ರಿದ್ದಾಗ ಇದ್ದ ದೊಡ್ಡ ಮನೆಯನ್ನೇ ಎರಡು ಮನೆ ಮಾಡಿ ಇಬ್ಬರೂ ವಾಸವಿದ್ದಾರೆ. ನಟ ಶಿವರಾಜ್ ಕುಮಾರ್ ಅವರು ಮಾತ್ರ ಹೆಬ್ಬಾಳದ ಬಳಿ ಮನೆ ನಿರ್ಮಾಣ ಮಾಡಿಕೊಂಡು ಅಲ್ಲಿ ವಾಸವಿದ್ದಾರೆ. ಪಾರ್ವತಮ್ಮ ರಾಜ್ಕುಮಾರ್ ಇದ್ದಾಗಲೇ ಈ ಮನೆ ನಿರ್ಮಾಣ ಹಾಗೂ ಗೃಹ ಪ್ರವೇಶ ಕಾರ್ಯ ನೆರವೇರಿತ್ತು.


Click it and Unblock the Notifications











