ರವಿಚಂದ್ರನ್ ಮಾತಿಗೆ ತಲೆಬಾಗುತ್ತಾ 'ವಾಸ್ಕೋಡಿಗಾಮ' ತಂಡ?
ಕ್ರೇಜಿ ಸ್ಟಾರ್ ರವಿಚಂದ್ರನ್ ಬೇಸರದಿಂದ ಆಡಿದ ಮಾತುಗಳಿಗೆ 'ವಾಸ್ಕೋಡಿಗಾಮ' ಚಿತ್ರತಂಡ ತಲೆ ಬಾಗುತ್ತಾ? ಶಿಕ್ಷಣ ವ್ಯವಸ್ಥೆ ಬಗ್ಗೆ ಅವಹೇಳನಕಾರಿಯಾಗಿ ಚಿತ್ರೀಕರಿಸಿದ ದೃಶ್ಯಗಳಿಗೆ ಕತ್ರಿ ಹಾಕುವ ಬಗ್ಗೆ 'ವಾಸ್ಕೋಡಿಗಾಮ' ಟೀಮ್ ಯಾವ ನಿರ್ಧಾರ ಕೈಗೊಳ್ಳುತ್ತೆ ಅನ್ನುವುದು ಸದ್ಯಕ್ಕಿನ್ನೂ ಪ್ರಶ್ನೆಯಾಗಿ ಉಳಿದಿದೆ.
ಆಗಿದಿಷ್ಟು :- ಅದು 'ವಾಸ್ಕೋಡಿಗಾಮ' ಚಿತ್ರದ ಆಡಿಯೋ ರಿಲೀಸ್ ಸಮಾರಂಭ. ಅದಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದವರು ಕ್ರೇಜಿ ಸ್ಟಾರ್ ರವಿಚಂದ್ರನ್. ಅಷ್ಟರಲ್ಲಿ 'ವಾಸ್ಕೋಡಿಗಾಮ' ಚಿತ್ರದ ಟೀಸರ್ ಮತ್ತು ಹಾಡುಗಳು ಎರಡೆರಡು ಬಾರಿ ಪ್ರದರ್ಶನಗೊಂಡಿತ್ತು.

ಹಾಡಿನಲ್ಲಿ ಪಠ್ಯ ಪುಸ್ತಕಕ್ಕೆ ಬೆಂಕಿಹಚ್ಚಿ 'RIP ಎಡ್ಜ್ಯುಕೇಷನ್' ಅಂತ ಬರೆಯಲಾಗಿತ್ತು. ಇದನ್ನ ನೋಡಿದ ರವಿಚಂದ್ರನ್ ವೇದಿಕೆ ಮೇಲೆ ಬಂದ ತಕ್ಷಣ ಮನಸ್ಸಿಗೆ ಅನಿಸಿದ್ದನ್ನ ನೇರವಾಗಿ ಹೇಳಿಬಿಟ್ಟರು. ''ಶಿಕ್ಷಣ ವ್ಯವಸ್ಥೆ ಸರಿಯಿಲ್ಲದಿರಬಹುದು. ಹಾಗಂತ ಪಠ್ಯ ಪುಸ್ತಕಗಳಿಗೆ ಬೆಂಕಿ ಹಚ್ಚೋದಲ್ಲ. ಇವತ್ತು ನಾವು ಏನಾದರೂ ಬರೆಯುತ್ತಾ, ಓದುತ್ತಾ ಇದ್ದರೆ ಅದು ಶಿಕ್ಷಣದಿಂದಾಗಿ''.
''ನಾನು ಹೆಚ್ಚು ಓದ್ಲಿಲ್ಲ. ಅದರ ಪರಿಣಾಮ ಇವತ್ತು ಎದುರಿಸುತ್ತಿದ್ದೇನೆ. ಆದ್ರೆ, ನನ್ನ ಮಕ್ಕಳನ್ನ ನಾನು ಚೆನ್ನಾಗಿ ಓದಿಸಿದ್ದೇನೆ. ಶಿಕ್ಷಣ ಯಾವತ್ತಿದ್ದರೂ ಬೇಕು. ಪುಸ್ತಕಗಳಿಗೆ ಬೆಂಕಿ ಹಚ್ಚಿದ್ದು ನನಗೆ ಇಷ್ಟವಾಗಲಿಲ್ಲ.'' ಅಂತ ರವಿಚಂದ್ರನ್ ಪತ್ರಿಕಾಗೋಷ್ಠಿ ವೇಳೆ ಹೇಳಿದರು.

ಇದರಿಂದ ಎಚ್ಚೆತ್ತುಕೊಂಡಿರುವ ನಿರ್ದೇಶಕ ಮಧುಚಂದ್ರ, ಪುಸ್ತಕಗಳನ್ನ ಸುಡುವ ದೃಶ್ಯಕ್ಕೆ ಕತ್ತರಿ ಹಾಕುವ ಬಗ್ಗೆ ಆಲೋಚಿಸುತ್ತಿದ್ದಾರೆ. ''ಸದ್ಯಕ್ಕಿನ್ನೂ ದೃಶ್ಯಗಳನ್ನ ಕಟ್ ಮಾಡುವ ಬಗ್ಗೆ ನಿರ್ಧಾರ ಮಾಡಿಲ್ಲ. ಆ ಬಗ್ಗೆ ಯೋಚಿಸುತ್ತಿದ್ದೇವೆ. ಸಿನಿಮಾದಲ್ಲಿ ಒಳ್ಳೆ ಮೆಸೇಜ್ ಇದೆ.'' ಅಂತಾರೆ ನಿರ್ದೇಶಕ ಮಧುಚಂದ್ರ. ನಟ ಕಿಶೋರ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ ಚಿತ್ರ 'ವಾಸ್ಕೋಡಿಗಾಮ'.[ಗಾಂಧಿನಗರಕ್ಕೆ ಹೊಸ ಮಾರ್ಗದಲ್ಲಿ ಬಂದ 'ವಾಸ್ಕೋಡಿಗಾಮ']
ಈಗಿನ ಶಿಕ್ಷಣ ವ್ಯವಸ್ಥೆಯಿಂದ ಯುವಕರಿಗೆ ಆಗುತ್ತಿರುವ ಪ್ರೆಶರ್ ಕುರಿತು 'ವಾಸ್ಕೋಡಿಗಾಮ' ಚಿತ್ರಕಥೆ ಹೆಣೆಯಲಾಗಿದೆ. ಕಾಲೇಜು, ಪುಸ್ತಕ, ರ್ಯಾಂಕು ಗಿಂತ ಜೀವನ ಮುಖ್ಯ ಅನ್ನುವ ಸಂದೇಶವನ್ನ ಸಿನಿಮಾ ಸಾರುತ್ತದೆ ಅನ್ನುತ್ತಾರೆ ನಿರ್ದೇಶಕ ಮಧುಚಂದ್ರ.


Click it and Unblock the Notifications











