ಯೋಗರಾಜ್ ಭಟ್ಟರ ಹೊಸ ಚಿತ್ರ ನಟರಾಜ ಸರ್ವೀಸ್
ಚಿತ್ರ ನಿರ್ದೇಶನದ ಜವಾಬ್ದಾರಿಯನ್ನು ತಮ್ಮ ಶಿಷ್ಯ ಪವನ್ ಒಡೆಯರ್ ಅವರ ಹೆಗಲಿಗೆ ಹೊರಿಸಿದ್ದಾರೆ. ಯೋಗರಾಜ್ ಭಟ್ ಹಾಗೂ ಪವನ್ ಒಡೆಯರ್ ಕಾಂಬಿನೇಷನ್ನಲ್ಲಿ ಚಿತ್ರವೊಂದು ಬರಲಿದೆ ಎಂಬ ಬಗ್ಗೆ ಈ ಹಿಂದೆಯೇ ಒನ್ಇಂಡಿಯಾ ಕನ್ನಡ ವರದಿ ಮಾಡಿತ್ತು.
ಗೋವಿಂದಾಯ ನಮಃ ಚಿತ್ರಕ್ಕಿಂತಲೂ ನಟರಾಜ ಸರ್ವೀಸ್ ಚಿತ್ರ ಮೂರು ಪಟ್ಟು ಚೆನ್ನಾಗಿರುತ್ತದೆ ಎಂಬ ವಿಶ್ವಾಸವನ್ನು ಪವನ್ ಒಡೆಯರ್ ನೀಡಿದ್ದಾರೆ. ಈ ಚಿತ್ರಕ್ಕೆ ಹೊಸಮುಖಗಳನ್ನು ಪರಿಚಯಿಸುವ ತುಡಿತ ಒಡೆಯರ್ ಅವರದು.
ಇದೊಂದು ಎಮೋಷನಲ್ ಲವ್ ಸ್ಟೋರಿ ಆಗಿದ್ದು, ಕಾಮಿಡಿಗೂ ಒತ್ತು ನೀಡಲಾಗುತ್ತದೆ ಎನ್ನುತ್ತಾರೆ ಪವನ್. ಗೋವಿಂದಾಯ ನಮಃ ಚಿತ್ರದಂತೆಯೇ ಇಲ್ಲೂ ಹಾಡುಗಳು ಮೋಡಿ ಮಾಡಲಿವೆ ಎಂಬ ವಿಶ್ವಾಸವನ್ನು ಪವನ್ ನೀಡಿದ್ದಾರೆ.
ಚಿತ್ರದ ಕತೆ ಜರ್ನಿಯಲ್ಲೇ ಸಾಗುವುದರಿಂದ ಚಿತ್ರಕ್ಕೆ ನಟರಾಜ ಸರ್ವೀಸ್ ಎಂದು ಇಡಲಾಗಿದೆಯಂತೆ. ಚಿತ್ರದ ಉಳಿದ ತಾರಾಬಳಗ ಹಾಗೂ ತಾಂತ್ರಿಕ ಬಳಗದ ವಿವರಗಳು ಇನ್ನಷ್ಟೇ ಹೊರಬೀಳಬೇಕು. ಈ ಹಿಂದೆ ಚಿತ್ರದ ನಾಯಕ ನಟ ಲೂಸ್ ಮಾದ ಅಲಿಯಾಸ್ ಯೋಗೀಶ್ ಎನ್ನಲಾಗಿತ್ತು. ಆದರೆ ಇನ್ನೂ ಪಕ್ಕಾ ಆಗಿಲ್ಲ.
ಸದ್ಯಕ್ಕೆ 'ಡ್ರಾಮಾ'ದಲ್ಲಿ ಯೋಗರಾಜ್ ಭಟ್ಟರು ಬಿಜಿಯಾಗಿದ್ದಾರೆ. ಆ ಚಿತ್ರ ಮುಗಿದ ಕೂಡಲೆ ತಮ್ಮ ಶಿಷ್ಯ ಪವನ್ ಜೊತೆ ಕೈಜೋಡಿಸಿ ಈ ಚಿತ್ರವನ್ನು ನಿರ್ಮಿಸಲಿದ್ದಾರೆ. ತಮ್ಮ ಚೊಚ್ಚಲ ಚಿತ್ರದ ಮೂಲಕ ಗಮನಸೆಳೆದ ಪವನ್ ಈ ಚಿತ್ರದಲ್ಲೂ ಮೋಡಿ ಮಾಡಲಿದ್ದಾರೆ ಎಂಬ ನಿರೀಕ್ಷೆ ಇದೆ.
ಏತನ್ಮಧ್ಯೆ ಗೋವಿಂದಾಯ ನಮಃ ಚಿತ್ರ ಅರ್ಧ ಸೆಂಚುರಿ ಬಾರಿಸಿ ಸೆಂಚುರಿಯತ್ತ ಮುನ್ನುಗ್ಗಿದೆ. ಭಾರಿ ಬಜೆಟ್ ಚಿತ್ರಗಳಾದ 'ಅಣ್ಣಾಬಾಂಡ್' ಹಾಗೂ 'ಕಠಾರಿವೀರ ಸುರಸುಂದರಾಂಗಿ' ಚಿತ್ರಗಳ ತೀವ್ರ ಸ್ಪರ್ಧೆಯ ನಡುವೆಯೂ ಗೋವಿಂದ ಮುನ್ನುಗ್ಗುತ್ತಿರುವುದು ವಿಶೇಷ.
ಬೆಂಗಳೂರಿನ ತ್ರಿವೇಣಿ ಚಿತ್ರ ಸೇರಿದಂತೆ ರಾಜ್ಯದಾದ್ಯಂತ 30 ಚಿತ್ರಮಂದಿರಗಳಲ್ಲಿ ಗೋವಿಂದ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದಾನೆ. ಪವನ್ ಒಡೆಯರ್ ನಿರ್ದೇಶನದ ಚೊಚ್ಚಲ ಚಿತ್ರ ಬಾಕ್ಸಾಫೀಸ್ ಗಳಿಕೆಯಲ್ಲೂ ಸದ್ದು ಮಾಡಿದ್ದಾನೆ. ಮೂಲಗಳ ಪ್ರಕಾರ ಐವತ್ತು ದಿನಗಳಲ್ಲಿ ಎಂಟು ಕೋಟಿ ಬಾಚಿದ್ದಾನೆ ಗೋವಿಂದ.
ಕೇವಲ ಕರ್ನಾಟದಕದಲ್ಲಷ್ಟೇ ಅಲ್ಲದೆ ಹೊರ ರಾಜ್ಯಗಳಲ್ಲೂ ಗೋವಿಂದ ಪ್ಯಾರ್ಗೆ ಆಗ್ಬಿಟ್ಟವ್ನೆ. ದೆಹಲಿ, ಗೋವಾ, ಹೈದರಾಬಾದ್ ಸೇರಿದಂತೆ ಮುಂಬೈ ಹಾಗೂ ಚೆನ್ನೈನ ಪಿವಿಆರ್ಗಳಲ್ಲಿ ಗೋವಿಂದನಿಗೆ ಒಳ್ಳೆಯ ಕಲೆಕ್ಷನ್ ಆಗಿದೆ ಎನ್ನುತ್ತವೆ ಮೂಲಗಳು. 'ಗೋವಿಂದಾಯ ನಮಃ' ಚಿತ್ರ ಕಳ್ಳತನ ಆರೋಪಕ್ಕೂ ಗುರಿಯಾಗಿತ್ತು. (ಒನ್ಇಂಡಿಯಾ ಕನ್ನಡ)


Click it and Unblock the Notifications












