ಅಪ್ಪು ಪರಂಪರೆಯನ್ನು ಯುವ ಮುಂದುವರಿಸಿಕೊಂಡು ಹೋಗುತ್ತಿದ್ದಾನೆ: ರಮ್ಯಾ ಮೆಚ್ಚುಗೆ
ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಕೊನೆಯ ಚಿತ್ರ 'ಗಂಧದ ಗುಡಿ' ಅಕ್ಟೋಬರ್ 28ರಂದು ತೆರೆಕಾಣಲು ಸಜ್ಜಾಗಿದೆ. ಕರ್ನಾಟಕದಲ್ಲಿ ಈಗಾಗಲೇ 'ಗಂಧದ ಗುಡಿ' ಜಪ ಆರಂಭವಾಗಿದೆ. ನಿನ್ನೆ ಗಂಧದ ಗುಡಿ ಟ್ರೈಲರ್ ಲಾಂಚ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದ್ದು, ಪುನೀತ್ ರಾಜ್ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ನರ್ತಕಿ ಚಿತ್ರಮಂದಿರದಲ್ಲಿ ಟ್ರೈಲರ್ ಬಿಡುಗಡೆ ಮಾಡಿದ್ದಾರೆ.
ನರ್ತಕಿ ಚಿತ್ರಮಂದಿರದಲ್ಲಿ 'ಗಂಧದ ಗುಡಿ' ಟ್ರೈಲರ್ ಲಾಂಚ್ ಕಾರ್ಯಕ್ರಮಕ್ಕೆ ನಿನ್ನೆ ಸಾವಿರಾರು ಪುನೀತ್ ಅಭಿಮಾನಿಗಳು ಭಾಗಿಯಾಗಿದ್ದರು. ಟ್ರೈಲರ್ ಬಿಡುಗಡೆಗೊಂಡಿದ್ದೇ ತಡ ಎಲ್ಲರ ಸೋಶಿಯಲ್ ಮೀಡಿಯಾಗಳಲ್ಲಿ 'ಗಂಧದ ಗುಡಿ' ಟ್ರೈಲರ್ ರಾರಾಜಿಸಿತು. ಹಳ್ಳಿಯಿಂದ ದಿಲ್ಲಿವರೆಗೂ ಎನ್ನುವಂತೆ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೂಡ ಅಪ್ಪು ಅವರ 'ಗಂಧದ ಗುಡಿ' ಟ್ರೈಲರ್ ಬಗ್ಗೆ ಅಭಿಪ್ರಾಯ ಹಂಚಿಕೊಂಡು ಚಿತ್ರತಂಡಕ್ಕೆ ಶುಭಾಶಯ ಕೋರಿದ್ದರು.
ಅಪ್ಪು ಅಗಲಿಕೆಯ ನಂತರ 'ಗಂಧದ ಗುಡಿ' ಡಾಕ್ಯೂಮೆಂಟರಿ ವಿಚಾರ ಬಹಿರಂಗಗೊಂಡಿದ್ದು, ನಿನ್ನೆ ಟ್ರೈಲರ್ನಲ್ಲಿ ಪುನೀತ್ ರಾಜ್ಕುಮಾರ್ ಅವರನ್ನು ನೋಡಿದ ಕೋಟ್ಯಂತರ ಅಭಿಮಾನಿಗಳ ಭಾವುಕರಾದರು. 'ಗಂಧದ ಗುಡಿ' ಟ್ರೈಲರ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದ್ದು, ಈಗಾಗಲೇ ಯೂಟ್ಯೂಬ್ನಲ್ಲಿ 99 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡಿದ್ದು, ಟ್ರೆಂಡಿಂಗ್ನಲ್ಲಿ ಮೊದಲ ಸ್ಥಾನದಲ್ಲಿದೆ. ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ಪಡೆದುಕೊಂಡಿರುವ 'ಗಂಧದ ಗುಡಿ' ಟ್ರೈಲರ್ನಿಂದ ಚಿತ್ರತಂಡದ ಹುಮ್ಮಸ್ಸು ಇನ್ನಷ್ಟು ಹೆಚ್ಚಾಗಿದೆ.

ಅಪ್ಪು ಕೊನೆಯ ಚಿತ್ರದ ಬಿಡುಗಡೆಗೆ ಭರ್ಜರಿ ಸಿದ್ಧತೆ
'ಗಂಧದ ಗುಡಿ' ಡಾಕ್ಯುಮೆಂಟರಿ ಸಿನಿಮಾ ಅಕ್ಟೋಬರ್ 28ರಂದು ಬೆಳ್ಳಿ ತೆರೆ ಮೇಲೆ ಪ್ರದರ್ಶನಗೊಳ್ಳಿದೆ. ಕೆಆರ್ಜಿ ಸ್ಟೂಡಿಯೋಸ್ ಸಂಸ್ಥೆ 'ಗಂಧದ ಗುಡಿ'ಯ ವಿತರಣೆಯ ಹಕ್ಕನ್ನು ಖರೀದಿಸಿದೆ. 'ಗಂಧದ ಗುಡಿ' ಡಾಕ್ಯುಮೆಂಟರಿಯನ್ನು ಬಹುದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡಲು ಸಿದ್ಧತೆ ನಡೆಯುತ್ತಿದ್ದು, ನಿರ್ದೇಶಕ ಅಮೋಘ ವರ್ಷ ಅವರು ಕೂಡ ಈ ಚಿತ್ರವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆ ಮಾಡಲು ಪ್ರಯತ್ನ ನಡೆಸುವುದಾಗಿ ಈಗಾಗಲೇ ಭರವಸೆ ನೀಡಿದ್ದಾರೆ. ಪುನೀತ್ ರಾಜ್ಕುಮಾರ್ ಅವರ ಕೊನೆಯ ಹಾಗೂ ವಿಶೇಷವಾದ ಚಿತ್ರವಾಗಿರುವ 'ಗಂಧದ ಗುಡಿ'ಯನ್ನು ಅದ್ಧೂರಿಯಾಗಿ ತೆರೆ ಮೇಲೆ ತರಲು ಭರದ ಸಿದ್ಧತೆ ಆರಂಭವಾಗಿದೆ.

ಭಾರತೀಯ ಚಿತ್ರರಂಗದ ಗಣ್ಯರ ಸಮಾಗಮ
ಇನ್ನು 'ಗಂಧದ ಗುಡಿ' ಅಕ್ಟೋಬರ್ 28 ರಂದು ಬಿಡುಗಡೆಯಾಗಲಿದ್ದು, ಅದಕ್ಕೂ ಮುನ್ನ ಪ್ರೀ-ರಿಲೀಸ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಕ್ಟೋಬರ್ 21ರಂದು 'ಗಂಧದ ಗುಡಿ' ಪ್ರೀ-ರಿಲೀಸ್ ಕಾರ್ಯಕ್ರಮ ನಡೆಯಲಿದ್ದು, ಈಗಾಗಲೇ ಕಾರ್ಯಕ್ರಮದ ಸಕಲ ಸಿದ್ಧತೆ ಆರಂಭವಾಗಿದೆ. ಕಾರ್ಯಕ್ರಮದಲ್ಲ ಅಶ್ವಿನಿ ಪುನೀತ್ ರಾಜ್ಕುಮಾರ್, ಶಿವರಾಜ್ ಕುಮಾರ್ ರಾಘವೇಂದ್ರ ರಾಜ್ಕುಮಾರ ಹಾಗೂ ಡಾ. ರಾಜ್ಕುಮಾರ್ ಕುಟುಂಬಸ್ಥರು ಭಾಗಿಯಾಗಲಿದ್ದಾರೆ. ಅಲ್ಲದೇ ಕನ್ನಡ ಚಿತ್ರರಂಗದ ಮಾತ್ರವಲ್ಲದೇ ಭಾರತೀಯ ಚಿತ್ರರಂಗದ ಅನೇಕ ಗಣ್ಯರು 'ಗಂಧದ ಗುಡಿ' ಪ್ರೀ-ರಿಲೀಸ್ ಇವೆಂಟ್ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಶ್ರೀಗಂಧದ ತುಂಡಿನ ಮೇಲೆ ಪುನೀತ್ ರಾಜ್ಕುಮಾರ್ ಹಸ್ತಾಕ್ಷರ
'ಗಂಧದ ಗುಡಿ' ಪ್ರೀ-ರಿಲೀಸ್ ಇವೆಂಟ್ಗಾಗಿ ವಿಶೇಷವಾದ ಆಹ್ವಾನ ಪತ್ರಿಕೆ ಸಿದ್ಧಪಡಿಸಲಾಗಿದೆ. ಈ ಆಹ್ವಾನ ಪತ್ರಿಕೆಯನ್ನು ಸಂಪೂರ್ಣ ಮರದಿಂದ ಮಾಡಲಾಗಿದ್ದು, ಪತ್ರಿಕೆ ಜೊತೆಗೆ ಪುನೀತ್ ರಾಜ್ಕುಮಾರ್ ಅವರ ಪುತ್ಥಳಿಯನ್ನು ಸಹ ಇರಿಸಲಾಗಿದೆ. ಜೊತೆಗೆ ಶ್ರೀಗಂಧದ ತುಂಡಿನ ಮೇಲೆ ಪುನೀತ್ ರಾಜ್ಕುಮಾರ್ ಎಂದು ಬರೆದಿರುವ ಹಸ್ತಾಕ್ಷರ ಕೂಡ ಮುದ್ರಣ ಮಾಡಲಾಗಿದೆ. 'ಗಂಧದ ಗುಡಿ' ಪ್ರೀ-ರಿಲೀಸ್ ಇವೆಂಟ್ ಆಹ್ವಾನ ಪತ್ರಿಕೆಗೆ ಅಪ್ಪು ಅಭಿಮಾನಿಗಳು ಫಿದಾ ಆಗಿದ್ದಾರೆ. ಈಗಾಗಲೇ ಅನೇಕರಿಗೆ ಆಹ್ವಾನ ನೀಡಲಾಗಿದ್ದು, ಸದ್ಯ ಪತ್ರಿಕೆ ಮೋಹಕ ತಾರೆ ರಮ್ಯಾ ಅವರ ಕೈಸೇರಿದೆ.

ಯುವ ಜೊತೆ ಫೋಟೋ ಶೇರ್ ಮಾಡಿದ ರಮ್ಯಾ
ಈ ಖುಷಿಯ ವಿಚಾರವನ್ನು ರಮ್ಯಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಯುವ ರಾಜ್ಕುಮಾರ್ ಆಹ್ವಾನ ಪತ್ರಿಕೆ ನೀಡಿ ರಮ್ಯಾ ಅವರನ್ನು 'ಗಂಧದ ಗುಡಿ' ಪ್ರೀ-ರಿಲೀಸ್ ಇವೆಂಟ್ಗೆ ಆಹ್ವಾನಿಸಿದ್ದಾರೆ. ಯುವ ರಾಜ್ ಕುಮಾರ್ ಅವರೊಂದಿಗಿನ ಫೋಟೋ ಹಂಚಿಕೊಂಡಿರುವ ರಮ್ಯಾ, ಮೈ ಸ್ವೀಟ್ ಯುವ ರಾಜ್ಕುಮಾರ್ ಈಗ ಚಿಕ್ಕವನಲ್ಲ. ಅಪ್ಪು ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾನೆ ಎಂದು ಬರೆದುಕೊಂಡಿದ್ದಾರೆ.
ಇನ್ನು ರಮ್ಯಾ ಹಾಗೂ ಡಾ.ರಾಜ್ಕುಮಾರ್ ಅವರ ಕುಟುಂಬಕ್ಕೂ ನಂಟಿದ್ದು, ಪಾರ್ವತಮ್ಮ ರಾಜ್ಕುಮಾರ್ ನಿರ್ಮಾಣದ ಪುನೀತ್ ರಾಜ್ಕುಮಾರ್ ನಟನೆಯ ಅಭಿ ಸಿನಿಮಾ ಮೂಲಕ ರಮ್ಯಾ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು.


Click it and Unblock the Notifications











