‘ಮೈ ಆಟೋಗ್ರಾಫ್’ : ಪ್ರೀತಿಯ ಮೆರವಣಿಗೆಗೆ ನೆನಪುಗಳ ದಿಬ್ಬಣ
ಒಬ್ಬ ನಿರ್ದೇಶಕನಾಗಿ ಗೆದ್ದ ಹೊತ್ತಿನಲ್ಲೇ ಕಲಾವಿದನಾಗಿಯೂ ಸುದೀಪ್, ಈ ಚಿತ್ರದಲ್ಲಿ ಸ್ಕೋರ್ ಮಾಡಿದ್ದಾರೆ. ಅಂದರೆ; ತೆರೆ ಮೇಲೆ ಮಾತ್ರವಲ್ಲ , ಅದರೆ ಹಿಂದೆ ಕೂಡಾ ಸುದೀಪ್ ಕಾಣುತ್ತಾರೆ. ಕಾಡುತ್ತಾರೆ. ಹದಿನೆಂಟರ ಪ್ರೀತಿ, ಇಪ್ಪತ್ತೈದರ ಪ್ರೇಮ, ಮೂವತ್ತರ ಜಗತ್ತು ಅರಿವಾಗಲು ನೀವೊಮ್ಮೆ ಆಟೋಗ್ರಾಫ್ ನೋಡಿದರೆ ಚೆಂದ...
ದೃಶ್ಯ-1
ಆತನ ನವಿಲು ಗರಿ ಮೇಲೆ ಆಕೆಯ ಕಣ್ಣೀರು ಕಲೆ ಮೂಡಿಸುತ್ತದೆ. ಆಕೆಯ ಜಡೆಯ ಕುಚ್ಚು ಆತನ ಪೆಟ್ಟಿಗೆಯಲ್ಲಿ ಮರಿ ಹಾಕುತ್ತದೆ.
ದೃಶ್ಯ-2
ಆತ ಹೂವು ಕೊಟ್ಟು 'ಇದು ಹ್ಯಾಪಿ ದೊಡ್ಡವಳಾದ ದಿನಕ್ಕೆ" ಎಂದಾಗ ಆಕೆ ಹಣೆ ಚಚ್ಚಿಕೊಳ್ಳೋದು ಆತನಿಗೆ ಇಷ್ಟ. ಆತನ ಅಬೋಧ ನಗು ಆಕೆಗೆ ಇಷ್ಟ.
ದೃಶ್ಯ-3
ಹಲವು ವರ್ಷಗಳ ನಂತರ ಆಕೆ ಯಾರನ್ನೊ ಮದುವೆಯಾಗಿರುತ್ತಾಳೆ. ಅವಳನ್ನು ತನ್ನ ಮದುವೆಗೆ ಕರೆಯಲು ಹೋಗುತ್ತಾನೆ. ಎರಡು ಮಕ್ಕಳ ತಾಯಿಯಾಕೆ. ಅವರಲ್ಲಿ ಒಬ್ಬ ಹುಡುಗ ಕೇಳುತ್ತಾನೆ. 'ನಿಮ್ಮ ಹೆಸರು ಶಂಕರ್ ತಾನೇ?" ನನ್ನ ಹೆಸರೂ ಶಂಕರ್. ನಾಯಕನ ಕಣ್ಣಲ್ಲಿ ಹನಿಹನಿ...
ದೃಶ್ಯ-4
ಬಾಲ್ಯದ ಗೆಳತಿಯನ್ನು ಎದೆಯಲ್ಲಿ ಕಾವ್ಯದಂತೆ ಇಟ್ಟುಕೊಂಡು, ಕೇರಳದ ಹುಡುಗಿಯನ್ನು ಪ್ರೀತಿಸುತ್ತಾನೆ. ಬದುಕಿನ ಕಾದಂಬರಿಗೆ ಮತ್ತೊಂದು ಹುಡುಗಿಯನ್ನು ಆರಿಸುತ್ತಾನೆ. ಅವಳೂ ಆತನ ಕೈಗೆ ಸಿಗುವುದಿಲ್ಲ. ಅವಳನ್ನು ಮದುವೆಗೆ ಕರೆಯಲು ಹೋದರೆ ಅಲ್ಲೇನಿದೆ ? ಆಕೆ ಒಂಟಿಯಾಗಿದ್ದಾಳೆ ! ಇದೇನಿದು ವಿಚಿತ್ರ ? ಪ್ರೀತಿಸಿದ್ದು ಇಬ್ಬರನ್ನು. ಮದುವೆ ಮತ್ತೊಬ್ಬಳ ಜತೆ...ಇದನ್ನು ಪ್ರೇಮ ಆಂತಾರಾ? ಅಸಲಿಗೆ ಆತನದು ಪ್ರೇಮವಾ ? ಒಂಟಿಯಾದಾಕೆಯನ್ನೇ ಆತ ಮದುವೆ ಆಗಬಹುದಿತ್ತಲ್ವಾ ? ಈ ಪ್ರಶ್ನೆಗಳನ್ನು ಇಟ್ಟುಕೊಂಡು ನೀವು 'ಮೈ ಆಟೋಗ್ರಾಫ್" ನೋಡ ಬೇಕು. ಅಲ್ಲಿ ಏನಿದೆ ಎಂದು ಹೇಳುವುದಕ್ಕಿಂತ ಏನಿಲ್ಲ ಎಂದು ಕೇಳೋದು ಉತ್ತಮ.
ಇದು ಬರಿ ಸಿನಿಮಾ ಅಲ್ಲ, ಎರಡೂವರೆ ಗಂಟೆ ನಂತರವೂ ಗುಂಗಿ ಹುಳದಂತೆ ಮನಸನ್ನು ಕಾಡುವ ಕತೆ ಇಲ್ಲಿದೆ. ಬದುಕನ್ನು ಹತ್ತಿರದಿಂದ, ಮತ್ತು ಇಂಟಿಮೇಟ್ ಆಗಿ ಅನುಭವಿಸಿದ ಮನಸೊಂದು ಕಾಳಜಿಯಿಂದ ಕೆಲಸ ಮಾಡಿದೆ. ಬಾಲ್ಯದ ನೆನಪು, ಅಲ್ಲಿಯ ಎಳೆಯ ಪ್ರೀತಿ, ಅದನ್ನು ಮರೆಸುವಂತೆ ಮಾಡುವ ಹರೆಯದ ಪ್ರೇಮ, ಅದೂ ಸಿಗಲಾರದೆ ದೇಹವನ್ನೇ ದಂಡಿಸುವಾಗ ಬದುಕಿಗೆ ಗುರಿ ತೋರಿಸುವ ಮತ್ತ್ತೊಬ್ಬ ಗೆಳತಿಯ ಜೀವನ ಪ್ರೀತಿ. ಈ ಪ್ರೀತಿಪ್ರೇಮದ ಅರಿವಿಲ್ಲದೆ ತಮ್ಮದೇ ನಾಡಿನಲ್ಲಿ ಬದುಕುವ ಅಂಧ ಮಕ್ಕಳ ಲೋಕವೂ ಇದೆ.... ಇದು 'ಮೈಆಟೋಗ್ರಾಫ್" ಚಿತ್ರಕ್ಕೆ ಅರೆ ಮುನ್ನ್ನುಡಿ.
ಸುದೀಪ್ ನಿರ್ದೇಶನದ ಮೊದಲ ಚಿತ್ರವಿದು. ಒಬ್ಬ ನಿರ್ದೇಶಕ ತನ್ನ ಮೊದಲ ಚಿತ್ರಕ್ಕೆ ಇಂಥ ವಿಲಕ್ಷಣ ಮತ್ತು ಸೆನ್ಸಿಟಿವ್ ಕತೆಯನ್ನು ಆಯ್ಕೆ ಮಾಡಿಕೊಂಡಿರುವುದು ಅವರ ಅಭಿರುಚಿಗೆ ಸಾಕ್ಷಿ. ಹಾಗೆಯೇ ಭವಿಷ್ಯದಲ್ಲಿ ಇಂಥ ಅನೇಕ ಕಲ್ಪನೆಗಳ ಕತೆ ಸಿಗುತ್ತವೆ ಎಂಬುದಕ್ಕೆ ಭರವಸೆ. ಅದೆಲ್ಲವನ್ನು ಬದಿಗಿಟ್ಟು ನೋಡಿದರೆ ಸುದೀಪ್ ಮೊದಲ ಹೊಡೆತಕ್ಕೇ ಬಾಲ್ ಮೈದಾನ ದಾಟಿ ಹೋಗಿದೆ. ಅದನ್ನು ಸಿಕ್ಸ್ರ್ ಅಂದರೆ ಕಡಿಮೆ, ಅದಕ್ಕಿಂತ ಹೆಚ್ಚು ಎನ್ನಲು ನಿಯಮ ಅಡ್ಡ. ಇವೆರಡರ ನಡುವೆ ಸುದೀಪ್ ನಿಂತಿದ್ದಾರೆ.
ಒಂದು ಸಿನಿಮಾ ಕತೆಯನ್ನು ಎರವಲು ತಂದರೂ ಹೇಗೆ ಅದನ್ನು ಮೂಲಕ್ಕಿಂತ ಮಿಗಿಲಾಗಿ ಮುಗಿಲು ಮುಟ್ಟಿಸಬಹುದೆಂದು ತೋರಿಸಿದ್ದಾರೆ. ಪ್ರತಿ ಫ್ರೇಮ್, ಒಂದೊಳ್ಳೆ ಲೈಟಿಂಗು, ದೃಶ್ಯವನ್ನು ಸಂಕಲಿಸಿದ ಶೈಲಿ, ಕತ್ತಲು ಮತ್ತು ಮೌನಕ್ಕೆ ಅರ್ಥ ಮೂಡಿಸುವ ಪರಿ, ಹಸಿರನ್ನು ಮನಸ ತುಂಬಾ ಹರಡುವ ಹಸಿ ಹಸಿ ಯತ್ನ, ಕಲಾವಿದರ ಆಯ್ಕೆಯ ಪಕ್ಕಾತನ, ಸಂಗೀತವನ್ನೂ ಪಾತ್ರ ಮಾಡುವ ಉಮ್ಮೇದಿ, ಕ್ಯಾಮೆರಾಕ್ಕೆ ಕಾಡಿ ಕಾಡಿ ಕೆಲಸ ತೆಗೆದ ಚಡಪಡಿಕೆ...ಎಲ್ಲವೂ ತೆರೆ ಮೇಲೆ ತೆರೆದ ಬಾಗಿಲು... ಒಬ್ಬ ನಿರ್ದೇಶಕನಾಗಿ ಗೆದ್ದ ಹೊತ್ತಿನಲ್ಲೇ ಕಲಾವಿದನಾಗಿಯೂ ಸ್ಕೋರ್ ಮಾಡಿದ್ದಾರೆ ಸುದೀಪ್.
ಹತ್ತು ಮಾತು ಹೇಳುವುದನ್ನು ಒಂದು ಮೌನ ಅರ್ಥ ಮಾಡಿಸುತ್ತದೆ ಎಂಬುದು ಅವರಿಗೆ ಗೊತ್ತು. ಅದಕ್ಕಾಗಿ ಮಾತಿಗಿಂತ ಮೌನ, ಮೌನಕ್ಕೊಂದು ಸಂಗೀತ, ಅದರಲ್ಲೊಂದು ಪದಗಳ ಪಲ್ಲವಿ...ಎಲ್ಲದಕ್ಕೂ ಅಭಿನಯವೆಂಬ ಅಗ್ಗಿಷ್ಟಿಕೆ. ತೆರೆ ಮೇಲೆ ಮಾತ್ರವಲ್ಲ, ಅದರ ಹಿಂದೆ ಕೂಡಾ ಸುದೀಪ್ ಕಾಣುತ್ತಾರೆ, ಕಾಡುತ್ತಾರೆ. ಅವರಿಗೆ ಸಾಥ್ ನೀಡಿದ್ದು ಕೆ.ಕಲ್ಯಾಣ್ ಸಾಹಿತ್ಯ.
'ಸವಿ ಸವಿ ನೆನಪು ಸಾವಿರ ನೆನಪು... ಗೀತೆಯಾಂದೇ ಸಾಕು. ಕತೆಗೊಂದು ಚಿನ್ನದ ಚೌಕಟ್ಟು ಹಾಕುತ್ತದೆ. 'ಅರಳುವ ಹೂವುಗಳೆ ಆಲಿಸಿರಿ ಹಾಡಿಗೆ ಷಂಡ ಮನಸಿಗೂ ಕೋಟಿ ವೀರ್ಯ ತುಂಬುವ ತಾಕತ್ತಿದೆ. ವೆಂಕಟ್ ಛಾಯಾಗ್ರಹಣ, ರಾಜೇಶ್ ಸಂಗೀತ...ವಂಡರ್ಫುಲ್. ಬಾಲ್ಯದ ಗೆಳತಿ ದೀಪು, ಮಲಯಾಳಿ ಪ್ರೇಮಿ ಶ್ರೀದೇವಿಕಾ, ಆಪ್ತ ಗೆಳತಿ ಮೀನಾ...ನಿಮ್ಮ ಹಳೆಯ ದಿನಗಳಿಗೆ ಹಾದಿ ಮೂಡಿಸುವಂತೆ ನಟಿಸಿದ್ದಾರೆ.
ಚರಂಡಿಯಲ್ಲಿ ಬಿದ್ದು ಬಂದ ಮಗನಿಗೆ ಸ್ನಾನ ಮಾಡಿಸಲು ತಂದೆ ಶ್ರೀನಿವಾಸಮೂರ್ತಿ ಕೊಡ ಹಿಡಿದು ಓಡಿ ಬರುತ್ತಾರೆ. ಅದೊಂದೆ ದೃಶ್ಯ ಸಾಕು, ಅವರು ಪಾತ್ರದಲ್ಲಿ ಒಂದಾದ ರೀತಿಗೆ ನಿದರ್ಶನವಾಗಲು.
ಪತ್ರಕರ್ತ ಯತಿರಾಜ್ ಅಚ್ಚರಿ ಹುಟ್ಟಿಸುವಷ್ಟು ಖುಷಿ ಕೊಡುತ್ತಾರೆ. ಬಾಲಕ ಸುದೀಪ್, ಆತನ ಗೆಳೆಯರು, ಹಳ್ಳಿ ಗೆಳೆಯ...ಹೀಗೆ ಎಲ್ಲರೂ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ.
ಒಂದು ಚೆಂದದ ಕತೆಗೆ ರಂಗೋಲಿ ಹಾಕಿದ್ದಾರೆ. ಅದಕ್ಕೆ ಸುದೀಪ್ ಬಣ್ಣ ತುಂಬಿದ್ದಾರೆ. ಅದು ನೆನಪುಗಳ ಬಣ್ಣ, ಸವೆಯದ ನೆನಪುಗಳ ರಂಗು ರಂಗಿನ ಬಣ್ಣ, ಹದಿನೆಂಟರ ಪ್ರೀತಿ, ಇಪ್ಪತ್ತೈದರ ಪ್ರೇಮ, ಮೂವತ್ತರ ಜಗತ್ತು ಅರಿವಾಗಲು ನೀವೊಮ್ಮೆ ಆಟೋಗ್ರಾಫ್ ನೋಡಿದರೆ ಚೆಂದ... ಮನಸಿನಲ್ಲಿ ಮಂದಾರ ಗಾಳಿ ಬೀಸುತ್ತದೆ...


Click it and Unblock the Notifications











