ವಿಜಲ್ ಚಿತ್ರ ವಿಮರ್ಶೆ: ಪಿಜ್ಜಾ ತಿನ್ನುತ್ತಾ ಶಿಳ್ಳೆ ಹೊಡೀರಿ
ತಮಿಳಿನಲ್ಲಿ ವ್ಯಾವಹಾರಿಕವಾಗಿ ಸಕ್ಸಸ್ ಆದ ಹಾಗೂ ವಿಮರ್ಶಕರ ಮೆಚ್ಚುಗೆಗೂ ಪಾತ್ರವಾದ ಚಿತ್ರ 'ಪಿಜ್ಜಾ'. ಕಾರ್ತಿಕ್ ಸುಬ್ಬರಾಜ್ ತಮ್ಮ ಚೊಚ್ಚಲ ನಿರ್ದೇಶನದಲ್ಲೇ ತಮಿಳು ಚಿತ್ರರಂಗದ ಗಮನಸೆಳೆದಿದ್ದರು. ಈಗ ಅದೇ 'ಪಿಜ್ಜಾ'ದ ತಾಜಾತನವನ್ನು ಉಳಿಸಿಕೊಂಡು ಮತ್ತಷ್ಟು ಬಿಸಿಬಿಸಿಯಾಗಿ ಕನ್ನಡ ಪ್ರೇಕ್ಷಕರ ಮುಂದಿಟ್ಟಿದ್ದಾರೆ ಪ್ರಶಾಂತ್ ರಾಜ್.
ಇನ್ಫಿಟಿ ಎಂಬ ಪಿಜ್ಜಾ ಕಂಪನಿಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿರುವ ರಾಮ್ (ಚಿರಂಜೀವಿ ಸರ್ಜಾ), ಅನು (ಪ್ರಣೀತಾ) ಎಂಬ ಹುಡುಗಿ ಜೊತೆ ಲಿವ್ ಇನ್ ಸಂಬಂಧ ಹೊಂದಿರುತ್ತಾನೆ. ಇಬ್ಬರೂ ಮೈಮರೆತು ಮಾಡಿದ ತಪ್ಪಿಗೆ ಅನು ಗರ್ಭಿಣಿ ಆಗಿರುತ್ತಾಳೆ.
ಅನುಗೆ ದೆವ್ವ ಭೂತ ಪಿಶಾಚಿಗಳ ಮೇಲೆ ಎಲ್ಲಿಲ್ಲದ ಆಸಕ್ತಿ. ಆಕೆ ಇವುಗಳ ಬಗ್ಗೆ ಅಧ್ಯಯನವನ್ನೂ ಮಾಡುತ್ತಿರುತ್ತಾಳೆ. ಹಾಗಾಗಿ ಮನೆಯಲ್ಲಿ ಎಲ್ಲಿ ನೋಡಿದರೂ ದೆವ್ವ ಭೂತಗಳಿಗೆ ಸಂಬಂಧಿಸಿದ ಪುಸ್ತಕಗಳೇ ಕಾಣುತ್ತವೆ. ದೆವ್ವಗಳ ಬಗ್ಗೆ ರಾಮ್ ಗೆ ನಂಬಿಕೆ ಇರಲ್ಲ, ಆದರೆ ಭಯ ಇರುತ್ತದೆ.
ಚಿತ್ರ: ವಿಜಲ್
ನಿರ್ಮಾಪಕರು: ನವೀನ್/ಪ್ರಸಾದ್ (ಕಾಕೋಳು)
ನಿರ್ದೇಶನ: ಪ್ರಶಾಂತ್ ರಾಜ್
ಛಾಯಾಗ್ರಹಣ: ಸಂತೋಷ್ ರೈ ಪತಾಜೆ
ಸಂಗೀತ: ಜೋಶ್ವಾ ಶ್ರೀಧರ್
ಸಂಕಲನ: ದೀಪು ಎಸ್ ಕುಮಾರ್
ಸಾಹಸ: ರವಿವರ್ಮ
ಸಂಭಾಷಣೆ: ಗುರುಪ್ರಸಾದ್
ಕಲೆ: ಮೋಹನ್ ಬಿ ಕೆರೆ
ತಾರಾಗಣ: ಚಿರಂಜೀವಿ ಸರ್ಜಾ, ಪ್ರಣೀತಾ, ಗುರುಪ್ರಸಾದ್, ಚಿ.ಗುರುದತ್ ಮುಂತಾದವರು.
ಪಿಜ್ಜಾ ಡೆಲಿವರಿಗೆ ಹೋದವನಿಗೆ ಏನಾಗುತ್ತದೆ?
ಒಂದಲ್ಲ ಒಂದು ದಿನ ನಿನ್ನ ಅನುಭವಕ್ಕೂ ಬರುತ್ತದೆ your moment will come ಎನ್ನುತ್ತಾಳೆ. ಅಲ್ಲಿವರೆಗೂ ಕಾಯ್ತಾ ಇರು ಎನ್ನುತ್ತಾಳೆ ನಾಯಕಿ. ಒಂದು ದಿನ ಪಿಜ್ಜಾ ಡೆಲಿವರಿಗೆ ಹೋದವನಿಗೆ ಅಂಥಹಾ ಒಂದು 'ಭೂತ' ಕಾಲ ಎದುರಾಗುತ್ತದೆ.
ಆ ಭೂತ ಬಂಗಲೆಯಲ್ಲಿ ದೆವ್ವಗಳ ಪ್ರತ್ಯಕ್ಷ
ರಾತ್ರಿ ಬಂದ ಪಿಜ್ಜಾ ಆರ್ಡರ್ ಡೆಲಿವರಿ ಮಾಡಲು ಹೋಗುತ್ತಾನೆ. ಅದೋ ಮೊದಲೇ ಭೂತಬಂಗಲೆ. ಪಿಜ್ಜಾ ಕೊಡಲು ಹೋದವನಿಗೆ ಕಣ್ಣ ಮುಂದೆ ದೆವ್ವಗಳು ಪ್ರತ್ಯಕ್ಷವಾಗುತ್ತವೆ. ಅವು ನಿಜವಾಗಿಯೂ ದೆವ್ವಗಳೋ ಅಥವಾ ಕಲ್ಪನೆಯೋ ಎಂಬುದೇ ಇಲ್ಲಿನ ಟ್ವಿಸ್ಟ್.
ವಿಜಲ್ ಶೀರ್ಷಿಕೆ ಅಷ್ಟು ಸೂಕ್ತ ಅನ್ನಿಸುವುದಿಲ್ಲ
ಈ ಟ್ವಿಸ್ಟ್ ನೋಡಬೇಕಾದರೆ ಖಂಡಿತ ನೀವೊಮ್ಮೆ 'ವಿಜಲ್' ಚಿತ್ರವನ್ನು ನೋಡಲೇಬೇಕು. ತಮಿಳಿನಲ್ಲಿ 'ಪಿಜ್ಜಾ' ಶೀರ್ಷಿಕೆಯೇನೋ ಸೂಕ್ತವಾಗಿತ್ತು. ಆದರೆ ಇಲ್ಲಿ 'ವಿಜಲ್' ಎಂಬ ಶೀರ್ಷಿಕೆಯೇ ಯಾಕೋ ಅಷ್ಟು ಸೂಕ್ತ ಅನ್ನಿಸುವುದಿಲ್ಲ. ಉಳಿದಂತೆ ಚಿತ್ರ ಬಿಗಿ ನಿರೂಪಣೆ ಹಾಗೂ ಹಲವು ತಿರುವುಗಳಿಂದ ಪ್ರೇಕ್ಷಕರನ್ನು ಸೀಟಿಗೆ ಅಂಟಿ ಕುಳಿತುಕೊಳ್ಳುವಂತೆ ಮಾಡುತ್ತದೆ.
ಕ್ಯಾಮೆರಾ ವರ್ಕ್, ಹಿನ್ನೆಲೆ ಸಂಗೀತ ಹೈಲೈಟ್
ಸಂತೋಷ್ ರೈ ಪತಾಜೆ ಅವರ ಛಾಯಾಗ್ರಹಣ, ಜೋಶ್ವಾ ಶ್ರೀಧರ್ ಅವರ ಹಿನ್ನೆಲೆ ಸಂಗೀತ ಚಿತ್ರದ ಎರಡು ಗಮನಾರ್ಹ ಅಂಶಗಳು. ಅದರಲ್ಲೂ ಕ್ಯಾಮೆರಾ ಕೈಚಳಕವಂತೂ ಪ್ರೇಕ್ಷಕರನ್ನು ಬೆಚ್ಚಿ ಬೀಳಿಸುವಲ್ಲಿ ಸಂಪೂರ್ಣ ಯಶಸ್ವಿಯಾಗಿದೆ. ಇದಕ್ಕೆ ಹಿನ್ನೆಲೆ ಸಂಗೀತ ಜೊತೆಯಾಗಿ ಪ್ರೇಕ್ಷಕರು ಕುಳಿತಲ್ಲೇ ಬೆವರುವಂತಾಗುತ್ತದೆ.
ಫಳ ಫಳ ಕಂಗಳ ಹಾಡು ಕಿವಿಗೆ ಇಂಪು
ಧನಂಜಯ್ ಅವರ ಸಾಹಿತ್ಯ ಇರುವ "ಫಳ ಫಳ ಕಂಗಳ..." ಹಾಡು ಕಿವಿಗೆ ಇಂಪು ಕಣ್ಣಿಗೆ ತಂಪು. ದೀಪು ಎಸ್ ಕುಮಾರ್ ಅವರ ಸಂಕಲನವೂ ಚಿತ್ರದ ಮತ್ತೊಂದು ಪ್ರಮುಖ ಅಂಶ. ಕೊನೆಗೆ ಚಿತ್ರದ ನಿರ್ದೇಶಕರು ದೆವ್ವ ಭೂತಗಳ ಮೇಲಿನ ನಂಬಿಕೆಯನ್ನು ಪ್ರೇಕ್ಷಕರ ವಿವೇಚನೆಗೆ ಬಿಟ್ಟು ಫುಲ್ ಸ್ಟಾಪ್ ಇಟ್ಟಿದ್ದಾರೆ.
ಬಿಗಿಯಾದ ನಿರೂಪಣೆ, ಕುತೂಹಲಭರಿತ ಕಥೆ
ಚಿತ್ರ ಕೊನೆಯಾದರೂ ಪ್ರೇಕ್ಷಕರು ಅಯ್ಯೋ ಇಷ್ಟು ಬೇಗ ಮುಗಿಯಿತೇ ಎಂಬ ಗೊಂದಲದಲ್ಲಿ ಸೀಟಿನಿಂದ ಮೇಲೇಳುತ್ತಾರೆ. ಬಿಗಿಯಾದ ನಿರೂಪಣೆ, ಕುತೂಹಲಭರಿತ ಚಿತ್ರಕಥೆ, ಅಲ್ಲಲ್ಲಿ ಪಡೆದುಕೊಳ್ಳುವ ತಿರುವುಗಳ ಮೂಲಕ ಚಿತ್ರ ಪ್ರೇಕ್ಷಕರನ್ನು 'ಶ್' ಚಿತ್ರದಂತೆ ಭಾಸವಾಗುತ್ತದೆ.
ಪಿಜ್ಜಾ ತಿನ್ನುತ್ತಾ ಶಿಳ್ಳೆ ಹೊಡೆಯಲು ಹೊರಡಿ
ಪಿಜ್ಜಾ ಡೆಲಿವರಿ ಬಾಯ್ ರಾಮ್ ಆಗಿ ಚಿರಂಜೀವಿ ಸರ್ಜಾ ಹಾಗೂ ಅನು ಪಾತ್ರವನ್ನು ಪ್ರಣೀತಾ ಸೊಗಸಾಗಿ ಮಾಡಿದ್ದಾರೆ. ಇನ್ನು ಪೋಷಕ ಪಾತ್ರವರ್ಗದಲ್ಲಿರುವ ಚಿ.ಗುರುದತ್, ಗುರುಪ್ರಸಾದ್, ಧನಂಜಯ್ ಅವರ ಪಾತ್ರಗಳೂ ಸಂದರ್ಭೋಚಿತವಾಗಿವೆ. ಪಿಜ್ಜಾ ತಿನ್ನುತ್ತಾ ವಿಜಲ್ ಹೊಡೆಯಲು ಹೊರಡಿ.


Click it and Unblock the Notifications











