ಶಸ್ತ್ರಚಿಕಿತ್ಸೆಗೆ ಲಂಡನ್ಗೆ ತೆರಳಿದ ನಟ ಸಿದ್ಧಾರ್ಥ್
ಬಹುಭಾಷಾ ನಟ ಸಿದ್ಧಾರ್ಥ್ ಲಂಡನ್ಗೆ ತೆರಳಿದ್ದಾರೆ. ಯಾವುದೇ ಸಿನಿಮಾದ ಚಿತ್ರೀಕರಣಕ್ಕಾಗಿ ಸಿದ್ಧಾರ್ಥ್ ಲಂಡನ್ಗೆ ಹೋಗಿಲ್ಲ ಬದಲಿಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಹೋಗಿದ್ದಾರೆ.
ನಟ ಸಿದ್ಧಾರ್ಥ್ ಕೆಲವು ದಿನಗಳ ಹಿಂದೆಯಷ್ಟೆ ಲಂಡನ್ಗೆ ತೆರಳಿದ್ದು, ಅಲ್ಲಿ ಸಣ್ಣ ಮಟ್ಟಿನ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಸಿದ್ಧಾರ್ಥ್ ಆರೋಗ್ಯದಲ್ಲಿ ಗಂಭೀರ ಸಮಸ್ಯೆಗಳೇನೂ ಇಲ್ಲ ಎಂದು ಹೇಳಲಾಗಿದೆ.
ಸಿದ್ಧಾರ್ಥ್ ನಟನೆಯ 'ಮಹಾ ಸಮುದ್ರಂ' ಸಿನಿಮಾ ಕೆಲವೇ ದಿನಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಪ್ರಚಾರ ನಡೆಯುತ್ತಿದ್ದು, ಸಿದ್ಧಾರ್ಥ್ ಗೈರಾಗಿದ್ದಾರೆ. ಈ ಬಗ್ಗೆ ಚಿತ್ರತಂಡವನ್ನು ಪ್ರಶ್ನೆ ಮಾಡಿದ ಮಾಧ್ಯಮಗಳಿಗೆ, ''ಸಿದ್ಧಾರ್ಥ್ ಲಂಡನ್ಗೆ ತೆರಳಿದ್ದು, ಆದಷ್ಟು ಬೇಗ ಮರಳುತ್ತಾರೆ'' ಎಂಬ ಉತ್ತರ ಸಿಕ್ಕಿದೆ.

ಕೆಲ ತಿಂಗಳ ಹಿಂದೆ ಸಿನಿಮಾದ ಆಕ್ಷನ್ ದೃಶ್ಯಗಳ ಚಿತ್ರೀಕರಣದ ಸಂದರ್ಭದಲ್ಲಿ ಬಿದ್ದು ಸಿದ್ಧಾರ್ಥ್ ಭುಜಕ್ಕೆ ಪೆಟ್ಟಾಗಿತ್ತು, ಆಗ ಹಲವು ವಾರಗಳು ಸಿದ್ಧಾರ್ಥ್ ಚಿಕಿತ್ಸೆ ಹಾಗೂ ವಿಶ್ರಾಂತಿ ಪಡೆದಿದ್ದರು. ಭುಜದ ಗಾಯಕ್ಕೆ ಸಂಬಂಧಿಸಿದಂತೆಯೇ ಸಿದ್ಧಾರ್ಥ್ ಈಗ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದಾರೆ.
ತಮ್ಮ ಮೋದಿ ವಿರೋಧಿ ಟ್ವೀಟ್ಗಳಿಂದ ಸಿದ್ಧಾರ್ಥ್ ಇತ್ತೀಚೆಗೆ ಬಹಳ ಸುದ್ದಿಯಲ್ಲಿದ್ದಾರೆ. ತಮ್ಮ ಖಾರವಾದ ಟ್ವೀಟ್ಗಳ ಮೂಲಕ, ಮೋದಿ, ಬಿಜೆಪಿ, ಆರ್ಎಸ್ಎಸ್ ಅನ್ನು ಆಗಾಗ್ಗೆ ಟೀಕಿಸುತ್ತಲೇ ಇರುತ್ತಾರೆ ಸಿದ್ಧಾರ್ಥ್. ಇದೇ ಏಪ್ರಿಲ್ ತಿಂಗಳಲ್ಲಿ ಬಿಜೆಪಿ ಐಟಿ ಸೆಲ್ ಮೇಲೆ ಆರೋಪ ಮಾಡಿದ್ದ ಸಿದ್ಧಾರ್ಥ್, ''ಬಿಜೆಪಿ ಐಟಿ ಸೆಲ್ ನನ್ನ ಮೊಬೈಲ್ ನಂಬರ್ ಅನ್ನು ಲೀಕ್ ಮಾಡಿದೆ ನನಗೆ ಜೀವ ಬೆದರಿಕೆ ಕರೆಗಳು ಬರುತ್ತಿವೆ. ನನ್ನ ಕುಟುಂಬದವರನ್ನು ಅತ್ಯಾಚಾರ ಮಾಡುವುದಾಗಿಯೂ ಬೆದರಿಕೆ ಸಂದೇಶಗಳು ಬಂದಿವೆ'' ಎಂದಿದ್ದರು. ಇದಕ್ಕೆ ಪ್ರತಿಯಾಗಿ ತಮಿಳುನಾಡು ಸರ್ಕಾರ ಸಿದ್ಧಾರ್ಥ್ಗೆ ಭದ್ರತೆ ಒದಗಿಸಲು ಮುಂದಾಗಿತ್ತು, ಆದರೆ ಭದ್ರತೆಯನ್ನು ನಿರಾಕರಿಸಿದರು ಸಿದ್ಧಾರ್ಥ್.
ಸಿನಿಮಾ ವಿಷಯಕ್ಕೆ ಮರಳುವುದಾದರೆ, ಸಿದ್ಧಾರ್ಥ್ ನಟಿಸಿರುವ ತೆಲುಗು ಸಿನಿಮಾ 'ಮಹಾಸಮುದ್ರಂ' ಅಕ್ಟೋಬರ್ 14ಕ್ಕೆ ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ಸಿದ್ಧಾರ್ಥ್ ಜೊತೆಗೆ ಶರ್ವಾನಂದ್ ಸಹ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ನಟಿಯರಾಗಿ ಅದಿತಿ ರಾವ್ ಹೈದಿರಿ, ಅನು ಇಮ್ಮಾನ್ಯುಯೆಲ್ ನಟಿಸಿದ್ದಾರೆ. ವಿಲನ್ ಪಾತ್ರದಲ್ಲಿ ಜಗಪತಿ ಬಾಬು, ರಾವ್ ರಮೇಶ್ ಮತ್ತು 'ಕೆಜಿಎಫ್'ನ ಗರುಡ ಖ್ಯಾತಿಯ ರಾಮಚಂದ್ರ ರಾಜು ನಟಿಸಿದ್ದಾರೆ. ಅಜಯ್ ಭೂಪತಿ ನಿರ್ದೇಶನ ಮಾಡಿದ್ದಾರೆ.
ತಮಿಳಿನ 'ಟಕ್ಕರ್' ಹಾಗೂ 'ಇಂಡಿಯನ್ 2' ಸಿನಿಮಾಗಳಲ್ಲಿಯೂ ಸಿದ್ಧಾರ್ಥ್ ನಟಿಸುತ್ತಿದ್ದಾರೆ. 'ಇಂಡಿಯನ್ 2' ಸಿನಿಮಾದಲ್ಲಿ ಕಮಲ್ ಹಾಸನ್ ಪ್ರಮುಖ ಪಾತ್ರದಲ್ಲಿದ್ದು, ಶಂಕರ್ ನಿರ್ದೇಶನ ಮಾಡುತ್ತಿದ್ದಾರೆ. ಆದರೆ ಈ ಸಿನಿಮಾದ ಚಿತ್ರೀಕರಣ ಸದ್ಯಕ್ಕೆ ಸ್ಥಗಿತವಾಗಿದೆ.


Click it and Unblock the Notifications











