ಪಕ್ಷ ಘೋಷಣೆಗೂ ಮುನ್ನಾ ಚಿತ್ರೀಕರಣ ಮುಗಿಸಲಿದ್ದಾರೆ ರಜನೀಕಾಂತ್
ನಟ ರಜನೀಕಾಂತ್, ತಾವು ರಾಜಕೀಯ ಪ್ರವೇಶಿಸುವುದಾಗಿ ಕೆಲವು ದಿನಗಳ ಹಿಂದಷ್ಟೆ ಘೋಷಿಸಿದ್ದಾರೆ. ಪಕ್ಷದ ಹೆಸರನ್ನು ಡಿಸೆಂಬರ್ 31 ರಂದು ಘೋಷಿಸಿ, ಪಕ್ಷದ ಅಧಿಕೃತ ಉದ್ಘಾಟನೆಯನ್ನು ಜನವರಿಯಲ್ಲಿ ಮಾಡುವುದಾಗಿ ಈಗಾಗಲೇ ಹೇಳಿದ್ದಾರೆ.
ರಜನೀಕಾಂತ್, ಸಂಪೂರ್ಣವಾಗಿ ರಾಜಕೀಯದಲ್ಲಿ ತೊಡಗಿಕೊಳ್ಳುವುದಕ್ಕೆ ಮುನ್ನಾ ಒಪ್ಪಿಕೊಂಡಿರುವ ಸಿನಿಮಾ ಮುಗಿಸುವ ದಾವಂತದಲ್ಲಿದ್ದಾರೆ. ರಜನೀಕಾಂತ್ ನಟಿಸುತ್ತಿರುವ ಮುಂದಿನ ಚಿತ್ರ 'ಅನ್ನಾತೆ'ಯ ಚಿತ್ರೀಕರಣದಲ್ಲಿ ಅವರು ಡಿಸೆಂಬರ್ 15 ರಿಂದ ಪಾಲ್ಗೊಳ್ಳಲಿದ್ದಾರೆ.
ನಿನ್ನೆ (ಡಿಸೆಂಬರ್ 12) ರಂದು 70ನೇ ಹುಟ್ಟುಹಬ್ಬ ಆಚರಿಸಿಕೊಂಡಿರುವ ರಜನೀಕಾಂತ್, ಇಂದು ಚೆನ್ನೈನಿಂದ ಹೈದರಾಬಾದ್ ಗೆ ಬಂದಿದ್ದು, ಹೈದರಾಬಾದ್ನ ರಾಮೋಜಿ ಫಿಲಂ ಸಿಟಿಯಲ್ಲಿ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ.

ಅನ್ನಾತೆ ಸಿನಿಮಾವನ್ನು ಶಿವ ನಿರ್ದೇಶಿಸುತ್ತಿದ್ದಾರೆ. ಕೊರಿಯಾಗ್ರಫರ್ ಆಗಿದ್ದ ಶಿವ ನಂತರ ನಿರ್ದೇಶಕರಾಗಿ ಬದಲಾಗಿ ಹಲವಾರು ಮಾಸ್ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಅಜಿತ್ ನಟನೆಯ 'ವಿಸ್ವಾಸಂ, ವೇದಾಲಂ, ವೀರಂ, ವಿವೇಗಂ ಸಿನಿಮಾಗಳನ್ನು ನಿರ್ದೇಶಿಸಿರುವುದು ಇದೇ ಶಿವ.
ಅನ್ನಾತೆ ಸಿನಿಮಾದಲ್ಲಿ ರಜನೀಕಾಂತ್ ಜೊತೆಗೆ, ಖುಷ್ಬು, ಮೀನಾ, ಕೀರ್ತಿ ಸುರೇಶ್, ನಯನತಾರಾ ಅವರುಗಳು ಸಹ ಇರಲಿದ್ದಾರೆ. ಜಾಕಿ ಶ್ರಾಫ್, ಪ್ರಕಾಶ್ ರೈ ಅವರುಗಳು ವಿಲನ್ ಪಾತ್ರದಲ್ಲಿ ನಟಿಸಲಿದ್ದಾರೆ. ಇತ್ತೀಚೆಗಷ್ಟೆ ನಿಧನರಾದ ತಮಿಳು ನಟ ತವಸಿ ಸಹ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಇದೇ ಅವರ ಕೊನೆಯ ಸಿನಿಮಾ.
ರಜನೀಕಾಂತ್ ಅವರು 'ಅನ್ನಾತೆ' ಸಿನಿಮಾದ ನಂತರ ಚಂದ್ರಮುಖಿ 2 ಸಿನಿಮಾದಲ್ಲಿ ಸಹ ನಟಿಸಲಿದ್ದಾರೆ. ಚಂದ್ರಮುಖಿ 2 ಸಿನಿಮಾದಲ್ಲಿ ರಜನೀಕಾಂತ್ ಜೊತೆಗೆ ರಾಘವ್ ಲಾರೆನ್ಸ್ ಸಹ ನಟಿಸಲಿದ್ದಾರೆ. ಪಿ ವಾಸು ಈ ಸಿನಿಮಾ ನಿರ್ದೇಶಿಸಲಿದ್ದಾರೆ.


Click it and Unblock the Notifications











