ರಶ್ಮಿಕಾ-ರಕ್ಷಿತ್ ಶೆಟ್ಟಿ ದೂರವಾಗಲು ಕಾರಣ ಈ ಜ್ಯೋತಿಷಿ
ನಟಿ ರಶ್ಮಿಕಾ ಮಂದಣ್ಣ ಇಂದು ದೊಡ್ಡ ಸ್ಟಾರ್. 'ಕಿರಿಕ್ ಪಾರ್ಟಿ' ಸಿನಿಮಾ ಮೂಲಕ ನಟನೆಗೆ ಎಂಟ್ರಿ ಕೊಟ್ಟ ರಶ್ಮಿಕಾ, ಅದೇ ಸಿನಿಮಾದ ನಾಯಕ ರಕ್ಷಿತ್ ಶೆಟ್ಟಿಯ ಜೊತೆ ಮದುವೆಯಾಗಲಿದ್ದರು. ಎಂಗೇಜ್ಮೆಂಟ್ ಸಹ ಆಗಿತ್ತು. ಆದರೆ ಹಠಾತ್ತನೆ ಮದುವೆ ಮುರಿದುಬಿತ್ತು.
ಮದುವೆ ಮುರಿದು ಬಿದ್ದ ಬಳಿಕ ರಶ್ಮಿಕಾ ಮಂದಣ್ಣ ತಮ್ಮ ಕರಿಯರ್ ಕಡೆ ಹೆಚ್ಚು ಗಮನ ನೀಡಿದರು. ಅಂತೆಯೇ ಬಹಳ ಬೇಗ ಎತ್ತರೆತ್ತರಕ್ಕೆ ಏರಿದ ರಶ್ಮಿಕಾ ಮಂದಣ್ಣ ಇಂದು ದಕ್ಷಿಣ ಭಾರತದ ಟಾಪ್ ನಟಿಯರಲ್ಲಿ ಒಬ್ಬರು. ಇದೀಗ ಬಾಲಿವುಡ್ನಲ್ಲೂ ಚಾಪು ಮೂಡಿಸುತ್ತಿದ್ದಾರೆ.
ಆದರೆ, ಮದುವೆಯಾಗಿ ಸಿನಿಮಾದಿಂದ ದೂರ ಉಳಿಯಲು ನಿಶ್ಚಯಿಸಿದ್ದ ರಶ್ಮಿಕಾಗೆ ಮದುವೆ ಮುರಿದುಕೊಳ್ಳುವಂತೆ ಹಾಗೂ ವೃತ್ತಿಯ ಕಡೆ ಗಮನ ಕೊಡುವಂತೆ ಸಲಹೆ ಕೊಟ್ಟಿದ್ದು ಒಬ್ಬ ಜ್ಯೋತಿಷಿ. ಸ್ವತಃ ಆ ಜ್ಯೋತಿಷಿಯೇ ಇದೀಗ ಈ ವಿಷಯವನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.
ತೆಲುಗು ರಾಜ್ಯಗಳ ಜನಪ್ರಿಯ ಜ್ಯೋತಿಷಿ ವೇಣು ಸ್ವಾಮಿ ಯೂಟ್ಯೂಬ್ ಸಂದರ್ಶನವೊಂದರಲ್ಲಿ ಮಾತನಾಡಿ, ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಎಂಗೇಜ್ಮೆಂಟ್ ಮುರಿದು ಹೋಗಲು ನಾನೇ ಕಾರಣ ಎಂದು ಹೇಳಿಕೊಂಡಿದ್ದಾರೆ. ಅದಕ್ಕೆ ಸಾಕ್ಷಿಯಾಗಿ, ರಶ್ಮಿಕಾ ಮಂದಣ್ಣರ ಮನೆಯಲ್ಲಿ ವೇಣು ಸ್ವಾಮಿ ಪೂಜೆ ಮಾಡಿಸುತ್ತಿರುವ ಕೆಲವು ಚಿತ್ರಗಳು ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಬ್ರೇಕ್ ಅಪ್ ಮಾಡಿಕೊಳ್ಳುವಂತೆ ಹೇಳಿದ್ದೆ: ವೇಣು ಸ್ವಾಮಿ
ಡೈಲಿ ಕಲ್ಚರ್ ಹೆಸರಿನ ಯೂಟ್ಯೂಬ್ ಚಾನೆಲ್ಗೆ ನೀಡಿರುವ ಸಂದರ್ಶನದಲ್ಲಿ ರಶ್ಮಿಕಾ ಮಂದಣ್ಣ ಬಗ್ಗೆ ಮಾತನಾಡಿರುವ ಜ್ಯೋತಿಷಿ ವೇಣು ಸ್ವಾಮಿ, ''ರಶ್ಮಿಕಾ ಮಂದಣ್ಣ ಆಗ ಸ್ವಲ್ಪ ಗೊಂದಲದಲ್ಲಿದ್ದರು ರಕ್ಷಿತ್ ಶೆಟ್ಟಿ ಜೊತೆ ಅವರ ಎಂಗೇಜ್ಮೆಂಟ್ ಆಗಿತ್ತು. ಆದರೆ ಅವರ ಜಾತಕ ನೋಡಿದ ನಾನು ಅವರೊಟ್ಟಿಗೆ ಬ್ರೇಕ್ ಅಪ್ ಮಾಡಿಕೊಳ್ಳಿ ಎಂದು ಸಲಹೆ ನೀಡದೆ. ಮದುವೆ ಆದರೆ ಇಬ್ಬರಿಗೂ ಒಳ್ಳೆಯದಲ್ಲ ಎಂದು ಹೇಳಿದೆ. ಹಾಗಿದ್ದರೆ ನಾನು ಅವರೊಟ್ಟಿಗೆ ಮಾತನಾಡುತ್ತೇನೆ. ಅವರನ್ನು ಕನ್ವಿನ್ಸ್ ಮಾಡುತ್ತೇನೆ ಎಂದು ಹೇಳಿ ಬ್ರೇಕ್ ಅಪ್ ಮಾಡಿಕೊಂಡು, ಸುದ್ದಿಗೋಷ್ಠಿ ನಡೆಸಿ ಹೈದರಾಬಾದ್ಗೆ ರಶ್ಮಿಕಾ ಬಂದುಬಿಟ್ಟರು'' ಎಂದು ಜ್ಯೋತಿಷಿ ವೇಣು ಸ್ವಾಮಿ ಹೇಳಿದ್ದಾರೆ.

ಹೈದರಾಬಾದ್ನಲ್ಲಿ ಪೂಜೆ ಮಾಡಿದ್ದ ಜ್ಯೋತಿಷಿ
''ಆ ಬಳಿಕ ರಾಜಶಾಮಲ ಯೋಗದಲ್ಲಿ ಅತ್ಯುತ್ತಮ ಪೂಜೆಯನ್ನು ನಾವು ಅವರಿಗಾಗಿ ಹೈದರಾಬಾದ್ನ ಅವರ ಮನೆಯಲ್ಲಿ ಮಾಡಿದೆವು. ಯಾರೂ ಊಹಿಸದ ಎತ್ತರಕ್ಕೆ ನೀವು ಏರುತ್ತೀರಿ ಎಂದು ನಾನು ರಶ್ಮಿಕಾಗೆ ಹೇಳಿದೆ. ಅಂತೆಯೇ ನೋಡಿ ಇಂದು ಆಕೆ ಬಹಳ ಎತ್ತರಕ್ಕೆ ಏರಿದ್ದಾರೆ. ಒಂದು ಸಿನಿಮಾಕ್ಕೆ ಆರೇಳು-ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ. ಯಾರೂ ಊಹಿಸದ ಎತ್ತರಕ್ಕೆ ಅವರಿಂದು ಏರಿದ್ದಾರೆ'' ಎಂದಿದ್ದಾರೆ.

ಎಲ್ಲರಿಗೂ ಪೂಜೆ ಮಾಡುವುದಿಲ್ಲ
''ರಶ್ಮಿಕಾ ಮಂದಣ್ಣಗೆ ಆ ಯೋಗ ಇತ್ತು. ಆದರೆ ಕೆಲವು ಸಣ್ಣ ಮಾರ್ಪಾಟುಗಳು ಬೇಕಿದ್ದವು ಅದನ್ನು ನಾವು ಮಾಡಿದೆವು. ಎಲ್ಲರಿಗೂ ಯೋಗ ಇರುವುದಿಲ್ಲ. ಯೋಗ ಇರುವವರು ಪೂಜೆ ಮಾಡಿದರಷ್ಟೆ ಉತ್ತಮ. ಹಲವು ನಟಿಯರು ನಮ್ಮನ್ನು ಸಂಪರ್ಕ ಮಾಡುತ್ತಿರುತ್ತಾರೆ. ಪೂಜೆ ಮಾಡುವಂತೆ ಒತ್ತಾಯ ಮಾಡುತ್ತಿರುತ್ತಾರೆ. ನಾವು ಎಲ್ಲರಿಗೂ ಪೂಜೆ ಮಾಡಿಕೊಡುವುದಿಲ್ಲ. ಕೆಲವು ನಿರ್ದಿಷ್ಟ ಜಾತಕ ಇರುವವರಿಗೆ ಮಾತ್ರವೇ ಪೂಜೆ ಮಾಡಿಕೊಡುತ್ತೇವೆ. ಕೆಲವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತೇವೆ, ಕೆಲವನ್ನು ಹಂಚಿಕೊಳ್ಳುವುದಿಲ್ಲ'' ಎಂದಿದ್ದಾರೆ.

2017 ರಲ್ಲಿ ಎಂಗೇಜ್ಮೆಂಟ್ ಆಗಿತ್ತು
ನಟಿ ರಶ್ಮಿಕಾ ಮಂದಣ್ಣ ಹಾಗೂ ರಕ್ಷಿತ್ ಶೆಟ್ಟಿ 2017 ರಲ್ಲಿ ಎಂಗೇಜ್ ಆದರು. ವಿರಾಜಪೇಟೆಯಲ್ಲಿ ಅದ್ಧೂರಿಯಾಗಿ ಅವರ ನಿಶ್ಚಿತಾರ್ಥ ನೆರವೇರಿತು. ಆದರೆ 2018 ಸೆಪ್ಟೆಂಬರ್ನಲ್ಲಿ ರಶ್ಮಿಕಾ ಮಂದಣ್ಣ ರಕ್ಷಿತ್ ಶೆಟ್ಟಿ ಜೊತೆಗಿನ ಎಂಗೇಜ್ಮೆಂಟ್ ಮುರಿದುಕೊಂಡರು. ಸಿನಿಮಾ ವೃತ್ತಿಯ ಮೇಲೆ ಹೆಚ್ಚು ಗಮನ ವಹಿಸಬೇಕಾಗಿರುವ ಕಾರಣ ನಿಶ್ಚಿತಾರ್ಥ ಮುರಿದುಕೊಂಡಿದ್ದಾಗಿ ರಶ್ಮಿಕಾ ಹೇಳಿದ್ದರು. ಆಗಿನಿಂದ ರಶ್ಮಿಕಾ ಹಾಗೂ ರಕ್ಷಿತ್ ಇಬ್ಬರೂ ವಿವಾಹವಾಗಿಲ್ಲ. ಇಬ್ಬರೂ ಸಹ ತಮ್ಮ-ತಮ್ಮ ವೃತ್ತಿ ಜೀವನದಲ್ಲಿ ಎತ್ತರಕ್ಕೆ ಏರುತ್ತಿದ್ದಾರೆ.


Click it and Unblock the Notifications











