ನರೇಶ್ ಮದುವೆ ಮುರಾಬಟ್ಟೆ ಎಂಬುದು ಮೊದಲೇ ಗೊತ್ತಿತ್ತು! ಆದರೂ...
ತೆಲುಗು ನಟ ನರೇಶ್ ಹಾಗೂ ಕನ್ನಡತಿ ಪವಿತ್ರಾ ಲೋಕೇಶ್ ಸಂಬಂಧದ ಸುದ್ದಿ ಇನ್ನೂ ತಣ್ಣಗಾಗಿಲ್ಲ. ನರೇಶ್-ಪವಿತ್ರಾ-ರಮ್ಯಾ ಕುರಿತಾದ ಸುದ್ದಿಗಳು ಹೊರಬೀಳುತ್ತಲೇ ಇವೆ.
ನರೇಶ್ ತಮ್ಮ ಮೂರನೇ ಪತ್ನಿ ರಮ್ಯಾ ರಘುಪತಿಗೆ ವಿಚ್ಛೇಧನ ನೀಡದೆಯೇ ಪವಿತ್ರಾ ಲೋಕೇಶ್ ಅನ್ನು ವಿವಾಹವಾಗಿದ್ದಾರೆ ಎಂಬ ಸುದ್ದಿ ಮೊದಲಿಗೆ ಹರಿದಾಡಿತು. ಬಳಿಕ ರಮ್ಯಾ, ಕನ್ನಡದ ಮಾಧ್ಯಮವೊಂದರ ಮುಖೇನ ನರೇಶ್ ವಿರುದ್ಧ ಸಮರ ಸಾರಿದರು. ನರೇಶ್-ಪವಿತ್ರಾರದ್ದು ಅಕ್ರಮ ಸಂಬಂಧವೆಂದು, ನರೇಶ್ ವಂಚಕನೆಂದು ದೂರಿದರು.
ನರೇಶ್ ಹಾಗೂ ಪವಿತ್ರಾ ಲೋಕೇಶ್ ಮೈಸೂರಿನ ಹೋಟೆಲ್ ಒಂದರಲ್ಲಿ ತಂಗಿದ್ದಾಗ ಅಲ್ಲಿಗೆ ಭೇಟಿ ನೀಡಿದ ರಮ್ಯಾ, ನರೇಶ್ ಹಾಗೂ ಪವಿತ್ರಾ ರನ್ನು ಅಡ್ಡಗಟ್ಟಿ, ಚಪ್ಪಲಿಯಲ್ಲಿ ಹೊಡೆಯಲು ಹೋಗಿದ್ದು ಮಾಧ್ಯಮಗಳಲ್ಲಿ ಪ್ರಸಾರವಾಗಿ ದೊಡ್ಡ ಸುದ್ದಿಯಾಯಿತು. ಆ ನಂತರ ತೆಲುಗಿನ ಕೆಲವು ನಟ-ನಟಿಯರು ನರೇಶ್ ಪರ-ವಿರೋಧ ಹೇಳಿಕೆಗಳನ್ನು ನೀಡುತ್ತಾ ಸುದ್ದಿ ತಣಿಯದಂತೆ ನೋಡಿಕೊಂಡರು. ಇದೀಗ ನರೇಶ್ ವಿವಾಹ ವೈಫಲ್ಯದ ಬಗ್ಗೆ ತೆಲುಗು ರಾಜ್ಯಗಳ ಸೆಲೆಬ್ರಿಟಿ ಜ್ಯೋತಿಷಿ ಒಬ್ಬರು ಮಾತನಾಡಿದ್ದಾರೆ.

ತೆಲುಗು ರಾಜ್ಯಗಳ ಸೆಲೆಬ್ರಿಟಿ ಜ್ಯೋತಿಷಿ
ಜ್ಯೋತಿಷಿ ವೇಣು ಸ್ವಾಮಿ ತೆಲುಗು ರಾಜ್ಯಗಳ ಸೆಲೆಬ್ರಿಟಿ ಜ್ಯೋತಿಷಿಗಳಲ್ಲಿ ಒಬ್ಬರು. ಸಮಂತಾ-ನಾಗ ಚೈತನ್ಯ ಪರಸ್ಪರ ದೂರಾಗುತ್ತಾರೆ ಎಂದು ಬಹು ವರ್ಷಗಳ ಹಿಂದೆಯೇ ಜ್ಯೋತಿಷಿ ನುಡಿದಿದ್ದರಂತೆ ವೇಣು ಸ್ವಾಮಿ. ಇದೀಗ ಸಮಂತಾ-ನಾಗ ಚೈತನ್ಯ ದೂರಾದ ಮೇಲೆ ಇವರಿಗೆ ಬೇಡಿಕೆ ಇನ್ನಷ್ಟು ಹೆಚ್ಚಾಗಿದೆ. ತೆಲುಗಿನ ಸ್ಟಾರ್ ನಟರು, ಉದ್ಯಮಿಗಳು, ರಾಜಕಾರಣಿಗಳು ಇವರ ದಿನವಹಿ ಗ್ರಾಹಕರು.

ನರೇಶ್-ರಮ್ಯಾ ಜಾತಕ ಹೊಂದಾಣಿಕೆ ಇರಲಿಲ್ಲ
ಇತ್ತೀಚೆಗೆ ತೆಲುಗು ಸಿನಿಮಾ ಉದ್ಯಮಗಳಲ್ಲಿ ನಡೆದ ಮದುವೆಗಳಿಗೆ ಮುಹೂರ್ತ ಇಟ್ಟಿರುವುದು ಇದೇ ವೇಣು ಸ್ವಾಮಿಯೇ ಅಂತೆ. ವೇಣು ಸ್ವಾಮಿ, ನರೇಶ್ ಹಾಗೂ ರಮ್ಯಾ ರಘುಪತಿ ಬಗ್ಗೆ ಯೂಟ್ಯೂಬ್ ಸಂದರ್ಶನವೊಂದರಲ್ಲಿ ಮಾತನಾಡಿದ್ದು, ತಾವು ನರೇಶ್ ಹಾಗೂ ರಮ್ಯಾ ರಘುಪತಿಗೆ ಮದುವೆ ಮಾಡದಂತೆ ಬಹು ವರ್ಷಗಳ ಹಿಂದೆಯೇ ಸಲಹೆ ನೀಡಿದ್ದಾಗಿ ಹೇಳಿದ್ದಾರೆ.

ವಿವಾಹ ಮಾಡಬೇಡಿ ಎಂದಿದ್ದರಂತೆ!
ತಾವು ನರೇಶ್ ಹಾಗೂ ರಮ್ಯಾ ರಘುಪತಿಯ ಜಾತಕಗಳನ್ನು ನೋಡಿದ್ದಾಗಿಯೂ ಅವರಿಬ್ಬರ ಜಾತಕ ಪರಸ್ಪರ ವಿರುದ್ಧವಾಗಿದ್ದವು, ತುಸುವೂ ಹೊಂದಾಣಿಕೆ ಆಗುತ್ತಿರಲಿಲ್ಲ ಎಂದು ಜ್ಯೋತಿಷಿ ವೇಣು ಸ್ವಾಮಿ ಹೇಳಿದ್ದಾರೆ. ನಾನು ಅವರ ಕುಟುಂಬವನ್ನು ಆಗಲೇ ಎಚ್ಚರಿಸಿದ್ದೆ, ಆದರೆ ಅವರು ನನ್ನ ಮಾತನ್ನು ಕೇಳಲಿಲ್ಲ ಎಂದಿದ್ದಾರೆ ವೇಣು ಸ್ವಾಮಿ. ನರೇಶ್ ಹಾಗೂ ರಮ್ಯಾ ರಘುಪತಿ 2014 ರಲ್ಲಿ ಮದುವೆಯಾದರು. ಆದರೆ ಹೆಚ್ಚು ಸಮಯ ಅವರು ಒಟ್ಟಿಗಿರಲಿಲ್ಲ. ಇಬ್ಬರಿಗೂ ಒಂದು ಮಗುವಿದೆ.

ಮಹೇಶ್ ಬಾಬು ತಂದೆಗೂ ಭವಿಷ್ಯ ಹೇಳಿದ್ದರಂತೆ
ಅಷ್ಟು ಮಾತ್ರವೇ ಅಲ್ಲದೆ, ಮಹೇಶ್ ಬಾಬು ತಂದೆ ಸೂಪರ್ ಸ್ಟಾರ್ ಕೃಷ್ಣ ಜಾತಕವನ್ನೂ ಓದಿದ್ದು, ಅವರಿಗೂ ಎಚ್ಚರಿಕೆ ನೀಡಿದ್ದೆ. 2020 ಕ್ಕೆ ಕೃಷ್ಣ ಆಗಲಿ ಅಥವಾ ಅವರ ಪತ್ನಿ ವಿಜಯ ನಿರ್ಮಲಾ ಆಗಲಿ ಮರಣ ಹೊಂದುತ್ತಾರೆ ಎಂದು ಹೇಳಿದ್ದೆ ಅಂತೆಯೇ 2019 ರಲ್ಲಿ ವಿಜಯ ನಿರ್ಮಲಾ ಅಸುನೀಗಿದರು. ವಿಜಯ್ ನಿರ್ಮಲಾ ನರೇಶ್ರ ತಾಯಿಯೂ ಹೌದು.


Click it and Unblock the Notifications











