ಮಾ ಚುನಾವಣೆ: ಗಲಾಟೆಗೆ ಇಳಿದ ನಟರು, ಮತದಾನ ಸ್ಥಗಿತ
ತೆಲುಗು ಚಿತ್ರರಂಗದ ಕಲಾವಿದರ ಸಂಘ 'ಮಾ' (ಮೂವಿ ಆರ್ಟಿಸ್ಟ್ ಅಸೋಸಿಯೇಷನ್)ಗೆ ಚುನಾವಣೆ ನಡೆಯುತ್ತಿದ್ದು, ಇಂದು ಬೆಳಿಗ್ಗಿನಿಂದ ಮತದಾನ ಪ್ರಕ್ರಿಯೆ ಚಾಲ್ತಿಯಲ್ಲಿದೆ.
ಪ್ರಕಾಶ್ ರೈ ಹಾಗೂ ಮಂಚು ವಿಷ್ಣು ಪರಸ್ಪರ ಎದುರಾಳಿಗಳಾಗಿ ಸ್ಪರ್ಧಿಸಿದ್ದು, ಚುನಾವಣೆ ಬಹಳ ರಂಗೇರಿದೆ. ಇಂದು ಬೆಳಿಗ್ಗೆ 8 ಗಂಟೆಗೆ ಮತದಾನ ಆರಂಭವಾಗಿದ್ದು ಮಧ್ಯಾಹ್ನ 2 ಗಂಟೆ ವರೆಗೆ ಮತದಾನ ನಡೆಯಲಿದೆ.
ಮತದಾನ ಶಾಂತವಾಗಿಯೇ ಆರಂಭವಾಯಿತಾದರೂ 10 ಗಂಟೆ ವೇಳೆಗೆ ಬಿರುಸು ಪಡೆದುಕೊಂಡು ನಟರ ನಡುವೆ ಗಲಾಟೆಗಳೇ ನಡೆದು ಹೋದವು.

ತೆಲುಗಿನ ಜನಪ್ರಿಯ ಪೋಷಕ ನಟ ಬ್ಯಾನರ್ಜಿ ಪೋಲಿಂಗ್ ಬೂತ್ ಹೊರಗಡೆ ಹಿರಿಯ ನಟ ಮೋಹನ್ಬಾಬು ಎದುರು ಜಗಳ ಮಾಡಿದ್ದಾರೆ. ಮೋಹನ್ ಬಾಬು ಕೆಟ್ಟದಾಗಿ ಬ್ಯಾನರ್ಜಿಗೆ ಬೈದಿದ್ದಲ್ಲದೆ, ನಿನ್ನನ್ನು ಕೊಂದು ಹಾಕುತ್ತೇನೆ ಎಂದು ಹೊಡೆಯಲು ಹೋಗಿದ್ದಾರೆ ಕೂಡಲೇ ಅಲ್ಲಿಯೇ ಇದ್ದ ಇತರ ನಟರು ಮೋಹನ್ ಬಾಬು ಅನ್ನು ತಡೆದಿದ್ದಾರೆ.
ಪ್ರಕಾಶ್ ರೈ ಸಿಂಡಿಕೇಟ್ನಿಂದ ಸ್ಪರ್ಧೆ ಮಾಡಿರುವ ಹೇಮಾ ಹಾಗೂ ನಟ ಶಿವ ಬಾಲಾಜಿ ಮಧ್ಯೆ ತೀವ್ರ ವಾಗ್ವಾದಗಳು ನಡೆದವು. ಇಬ್ಬರು ಜೋರಾಗಿಯೇ ಜಗಳ ಮಾಡಿದರು. ಆ ನಂತರ ಶಿವ ಬಾಲಾಜಿ ಹಾಗೂ ಸಮೀರ್ ಸಹ ಪರಸ್ಪರ ಕಿತ್ತಾಡಿಕೊಂಡರು. ನಂತರ ಶಿವ ಬಾಲಾಜಿ, ನಟ ಸಮೀರ್ ವಿರುದ್ಧ ಚುನಾವಣಾ ಅಧಿಕಾರಿಗೆ ದೂರು ನೀಡಿದರು.
ಈ ನಡುವೆ ಕಲಾವಿದರ ಸಂಘದಲ್ಲಿ ಇಲ್ಲದ ವ್ಯಕ್ತಿಯೊಬ್ಬ ಚುನಾವಣೆಯಲ್ಲಿ ಮತದಾನ ಮಾಡಿದ್ದಾನೆ ಎಂಬುದು ದೊಡ್ಡ ಜಗಳಕ್ಕೆ ಕಾರಣವಾಯ್ತು. ಯಾವುದೋ ಅನ್ಯವ್ಯಕ್ತಿ ಮತದಾನ ಮಾಡಿದ್ದಾನೆ ಎಂದು ಮಂಚು ವಿಷ್ಣು ಕಡೆಯವರು ದೊಡ್ಡದಾಗಿ ಗಲಾಟೆ ಆರಂಭಿಸಿದರು. ಮತದಾನ ವ್ಯಕ್ತಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರು. ಗಲಾಟೆ ಜೋರಾದ ಕಾರಣ ಮತದಾನ ಪ್ರಕ್ರಿಯೆಯನ್ನು ಕೆಲ ಕಾಲ ತಡೆ ಹಿಡಿಯಲಾಯಿತು. ಚುನಾವಣೆಯಲ್ಲಿ ದೊಡ್ಡ ಮಟ್ಟದಲ್ಲಿ ರಿಗ್ಗಿಂಗ್ ನಡೆಯುತ್ತಿದೆ ಎಂದು ಮಂಚು ವಿಷ್ಣು ತಂದೆ ಮೋಹನ್ ಬಾಬು ಆರೋಪಿಸಿದರು. ಮತದಾನ ಸ್ಥಗಿತಗೊಳಿಸಿದ ನಂತರ ಪ್ರಕಾಶ್ ರೈ ಹಾಗೂ ಮಂಚು ವಿಷ್ಣು ಬಣದ ಸದಸ್ಯರನ್ನು ಕರೆಸಿಕೊಂಡು ಚುನಾವಣಾ ಅಧಿಕಾರಿ ಮಾತನಾಡಿ, ಸಂಧಾನ ನಡೆಸಿ ನಂತರ ಮತದಾನ ಪ್ರಾರಂಭಿಸಿದರು. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಚುನಾವಣೆ ಅಧಿಕಾರಿ ಹೇಳಿದರು.
ಮಂಚು ವಿಷ್ಣು ಸಿಂಡಿಕೇಟ್ ಸದಸ್ಯರು ಗಲಾಟೆ ಮುಂದುವರೆಸಿ ನಾವು ನ್ಯಾಯಾಲಯಕ್ಕೆ ಹೋಗುವುದಾಗಿ ಹೇಳಿದರು. ಪ್ರಕಾಶ್ ರೈ, ಈಗಲೂ ಚುನಾವಣೆ ಪ್ರಚಾರ ಮಾಡುತ್ತಿದ್ದಾರೆ ಎಂದು ಮಂಚು ವಿಷ್ಣು ಸಿಂಡಿಕೇಟ್ನ ಸದಸ್ಯರು ಕೆಲವರು ಚುನಾವಣಾಧಿಕಾರಿಗೆ ದೂರು ನೀಡಿದರು. ಒಟ್ಟಿನಲ್ಲಿ ತೆಲುಗು ಕಲಾವಿದರ ಸಂಘ ಮಾನ ಚುನಾವಣೆ ರಣರಂಗವೇ ಆಗಿದೆ. ಮತದಾನ 2 ಗಂಟೆಗೆ ಮುಗಿಯಲಿದ್ದು 3 ಗಂಟೆಗೆ ಮತ ಎಣಿಕೆ ಆರಂಭವಾಗಲಿದೆ. ಸಿಂಡಿಕೇಟ್ ಮಾದರಿ ಚುನಾವಣೆ ಆಗಿರುವ ಕಾರಣ ಮತ ಎಣಿಕೆ ಮುಗಿದು ಫಲಿತಾಂಶ ಬರುವುದು ಮಧ್ಯ ರಾತ್ರಿ ಆಗಲಿದೆ.
ಮಾ ಚುನಾವಣೆಗೆ ಈಗಾಗಲೇ ಹಲವು ಸ್ಟಾರ್ ನಟ-ನಟಿಯರು ಮತದಾನ ಮಾಡಿದ್ದಾರೆ. ನಟ ಚಿರಂಜೀವಿ, ಪವನ್ ಕಲ್ಯಾಣ್, ಬಾಲಕೃಷ್ಣ, ನಾಗಬಾಬು, ನಟಿ ರೋಜಾ, ರಾಮ್ ಚರಣ್ ತೇಜ, ಅಲ್ಲು ಅರ್ಜುನ್, ವರುಣ್ ತೇಜ್ ಇನ್ನೂ ಹಲವರು ಮಾ ಚುನಾವಣೆಗೆ ತಮ್ಮ ಮೆಚ್ಚಿನ ಅಭ್ಯರ್ಥಿಗಳಿಗೆ ಮತದಾನ ಮಾಡಿದ್ದಾರೆ. ಪ್ರಕಾಶ್ ರೈ ಬಣಕ್ಕೆ ಚಿರಂಜೀವಿ ಕುಟುಂಬದ ಬೆಂಬಲವಿದೆ. ಅದೇ ಮಂಚು ವಿಷ್ಣು ಬಣಕ್ಕೆ ಬಾಲಕೃಷ್ಣ ಬೆಂಬಲವಿದೆ. ಎರಡೂ ಬಣದಲ್ಲಿ ಕೆಲವು ಹೆಸರಾಂತ ನಟರಿದ್ದು ಯಾರು ಗೆಲ್ಲುತ್ತಾರೆ, ಯಾರು ಸೋಲುತ್ತಾರೆ ಎಂಬುದು ಮಧ್ಯಾರಾತ್ರಿ ಮೇಲೆಯೇ ಗೊತ್ತಾಗಲಿದೆ.


Click it and Unblock the Notifications











