'ಪವನ್ ಕಲ್ಯಾಣ್, ಕೂದಲು ಸಹ ಕೀಳಲಾರ, ಅವನಿಗೆ ಧೈರ್ಯವಿದ್ದರೆ...': ನಟಿ ರೋಜಾ ಸವಾಲು
ಸಿನಿಮಾಗಳಲ್ಲಿ ವಿಲನ್ಗಳ ವಿರುದ್ಧ ಕೊಲ್ಲುವ, ಕೊಚ್ಚುವೆ ಎಂದು ಉದ್ದುದ್ದ ಡೈಲಾಗ್ ಹೊಡೆವ. ಹಿರೋಯಿಕ್ ಎಂಟ್ರಿಗಳನ್ನು ಕೊಡುವ ಪವನ್ ಕಲ್ಯಾಣ್, ರಾಜಕೀಯದಲ್ಲಿಯೂ ಅದನ್ನೇ ಮುಂದುವರೆಸಿದ್ದಾರೆ.
ಜಗನ್ ಸರ್ಕಾರದ ವಿರುದ್ಧ ಆಡಳಿತ ಪಕ್ಷದ ಕಾರ್ಯಕರ್ತರ ವಿರುದ್ಧ ತೊಡೆ ತಟ್ಟಿದ್ದು, ನೇರಾ-ನೇರಾ ಹೋರಾಟಕ್ಕೂ ಸೈ ಎಂದಿದ್ದಾರೆ. ಹೋದಲ್ಲಿ ಬಂದಲ್ಲೆಲ್ಲ ಸರ್ಕಾರದ ವಿರುದ್ಧ ಪ್ರತಿಭಟನೆಗಳನ್ನು, ಜಗನ್ ವಿರುದ್ಧ ನಿಂದನೆ, ಟೀಕೆಗಳನ್ನು ಮಾಡುತ್ತಿದ್ದಾರೆ.
ಅದಕ್ಕೆ ಪ್ರತಿಯಾಗಿ ಜಗನ್ ಪರವಾಗಿಯೂ ಪವನ್ ವಿರುದ್ಧ ಹಲವರು ಟೀಕಾ ಪ್ರಹಾರ ಮಾಡುತ್ತಿದ್ದಾರೆ. ಆಂಧ್ರ ರಾಜಕೀಯದಲ್ಲಿ ಪರಸ್ಪರ ಟೀಕೆಗಳು ಸಭ್ಯತೆಯ ಎಲ್ಲೆಯನ್ನು ಮೀರಿ ಬಹುದಿನಗಳಾಗಿದ್ದು ಈಗೇನಿದ್ದರೂ ರೌಡಿ ಭಾಷೆಯಲ್ಲಿಯೇ ಟೀಕಿಸಿಕೊಳ್ಳುತ್ತಿದ್ದಾರೆ. ಇದೀಗ ಪವನ್ ಕಲ್ಯಾಣ್ ವಿರುದ್ಧ ನಟಿ, ರಾಜಕಾರಣಿ ರೋಜಾ ಇದೇ ಮಾದರಿಯ ವಾಗ್ದಾಳಿ ಮಾಡಿದ್ದಾರೆ.

ಇಪ್ಪಟಂ ಗ್ರಾಮದ ವಿಷಯದಲ್ಲಿ ರಾಜಕೀಯ
ಇಪ್ಪಟಂ ಗ್ರಾಮದಲ್ಲಿ ಹೈವೆ ನಿರ್ಮಾಣಕ್ಕಾಗಿ ಗ್ರಾಮಸ್ಥರ ಮನೆಗಳನ್ನು ಕೆಡವಿರುವ ವಿಷಯ ಇಟ್ಟುಕೊಂಡು ಪವನ್ ಕಲ್ಯಾಣ್, ಜಗನ್ ವಿರುದ್ಧ ಟೀಕಾಪ್ರಹಾರ ನಡೆಸುತ್ತಿದ್ದಾರೆ. ಮನೆಗಳನ್ನು ಕಳೆದುಕೊಂಡ ಕೆಲವರು ಹೈಕೋರ್ಟ್ ಮೆಟ್ಟಿಲೇರಿದ್ದು ಅಲ್ಲಿ ಸರ್ಕಾರಕ್ಕೆ ಮೇಲುಗೈ ಆಗಿದೆ. ಪಿಟಿಷನರ್ಗಳಿಗೆ ಒಂದು ಲಕ್ಷ ಮೊತ್ತದ ಜುಲ್ಮಾನೆಯನ್ನು ಸಹ ನ್ಯಾಯಾಲಯ ವಿಧಿಸಿದೆ. ಹಾಗಿದ್ದರೂ ಪವನ್ ಕಲ್ಯಾಣ್, ಇಪ್ಪಟಂ ವಿಷಯ ಇಟ್ಟುಕೊಂಡು ಜಗನ್ ಸರ್ಕಾರದ ಮೇಲೆ ವಾಗ್ದಾಳಿ ಮುಂದುವರೆಸಿದ್ದಾರೆ.

ಕೂದಲು ಸಹ ಪವನ್ ಕೀಳಲಾರ: ರೋಜಾ
ಈ ವಿಷಯವಾಗಿ ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ನಟಿ, ಶಾಸಕಿ ರೋಜಾ, ''ಪವನ್ ಕಲ್ಯಾಣ್ ನಾಲಗೆ ಬಿಗಿ ಹಿಡಿದುಕೊಂಡು ಮಾತನಾಡಬೇಕು. ಸಿಎಂ ಜಗನ್ ಅವರನ್ನು ಮುಟ್ಟುವುದಿರಲಿ, ಅವರ ಎಡಗಾಲ ಕಿರುಬೆರಳ ಮೇಲಿರುವ ಕೂದಲನ್ನು ಸಹ ಕೀಳಲಾರ. ಪವನ್ ಕಲ್ಯಾಣ್ಗೆ ನಿಜಕ್ಕೂ ಧಮ್ಮು, ಧೈರ್ಯ ಇದ್ದರೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಆಂಧ್ರದ ಎಲ್ಲ ಕ್ಷೇತ್ರಗಳಿಂದಲೂ ತನ್ನ ಜನಸೇನಾ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿ ನೋಡೋಣ'' ಎಂದು ಸವಾಲು ಹಾಕಿದ್ದಾರೆ.

'ಪವನ್ ಕಲ್ಯಾಣ್ ಅನ್ನು ಮೂರ್ಖನನ್ನಾಗಿ ಮಾಡಲಾಗುತ್ತಿದೆ'
'ಇಪ್ಪಟಂ ಗ್ರಾಮದಲ್ಲಿ ಸಮಸ್ಯೆ ಉದ್ಭವಿಸಲು ಈ ಹಿಂದಿನ ಚಂದ್ರಬಾಬು ನಾಯ್ಡು ಸರ್ಕಾರ ಕಾರಣ. ಅಲ್ಲಿ ಸಮಸ್ಯೆ ಆಗಿದ್ದರೆ ಅಲ್ಲಿಗೆ ಹೋಗಬೇಕಾಗಿರುವುದು ಚಂದ್ರಬಾಬು ನಾಯ್ಡು ಹಾಗೂ ಅವರ ಪುತ್ರ ಲೋಕೇಶ್. ಅದನ್ನು ಬಿಟ್ಟು ಪವನ್ ಕಲ್ಯಾಣ್ ಅನ್ನು ಕಳಿಸಿ ಜಗನ್ ವಿರುದ್ಧ ವಾಗ್ದಾಳಿ ಮಾಡಿಸಲಾಗುತ್ತಿದೆ. ಪವನ್ ಕಲ್ಯಾಣ್ ಅನ್ನು ಮೂರ್ಖನನ್ನಾಗಿ ಚಂದ್ರಬಾಬು ನಾಯ್ಡು ಮಾಡುತ್ತಿದ್ದಾರೆ. ಇಪ್ಪಟಂನಲ್ಲಿ ಸಮಸ್ಯೆ ಸೃಷ್ಟಿಸಿರುವ ಚಂದ್ರಬಾಬು ನಾಯ್ಡು ಬಿಟ್ಟು ಜಗನ್ ವಿರುದ್ಧ ವಾಗ್ದಾಳಿ ಮಾಡುತ್ತಿರುವುದು ನೋಡಿದರೆ ಪವನ್ ಕಲ್ಯಾಣ್ ತನ್ನ ಅಸ್ಥಿತ್ವ ಉಳಿಸಿಕೊಳ್ಳಲು ಹೀಗೆ ನಾಟಕ ಮಾಡುತ್ತಿದ್ದಾರೆ ಎನಿಸುತ್ತಿದೆ'' ಎಂದಿದ್ದಾರೆ ರೋಜಾ.

ಕಾರಿನ ತಾರಸಿ ಮೇಲೆ ಕೂತು ಬಂದಿದ್ದ ಪವನ್ ಕಲ್ಯಾಣ್
ಪವನ್ ಕಲ್ಯಾಣ್, ಫುಲ್ ಫಿಲ್ಮಿ ಸ್ಟೈಲ್ನಲ್ಲಿ ಕಾರಿನ ಮೇಲ್ಚಾವಣಿ ಮೇಲೆ ಕೂತು ಇಪ್ಪಟಂ ಗ್ರಾಮಕ್ಕೆ ಭೇಟಿ ನೀಡಿದ್ದರು. ಪವನ್, ಗ್ರಾಮಕ್ಕೆ ಭೇಟಿ ನೀಡುತ್ತಿದ್ದಂತೆ ಅಲ್ಲಿದ್ದ ವೈಎಸ್ ರಾಜಶೇಖರ ರೆಡ್ಡಿ ಪ್ರತಿಮೆಗೆ ಪೊಲೀಸರ ಭದ್ರತೆ ಹಾಕಲಾಗಿತ್ತು. ಇಪ್ಪಟಂನಲ್ಲಿ ವೀರಾವೇಷದ ಭಾಷಣ ಮಾಡಿದ್ದ ಪವನ್ ಕಲ್ಯಾಣ್, ಜಗನ್ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ಮಾಡಿದ್ದರು ಹಾಗೂ ಮನೆ ಕಳೆದುಕೊಂಡ ಕುಟುಂಬಗಳಿಗೆ ಒಂದು ಲಕ್ಷ ಪರಿಹಾರವನ್ನು ಸಹ ಜನಸೇನಾ ಪಕ್ಷದ ವತಿಯಿಂದ ಘೋಷಿಸಿದ್ದರು. ಚಂದ್ರಬಾಬು ನಾಯ್ಡು ಹಾಗೂ ಪವನ್ ಕಲ್ಯಾಣ್ ಕೈ ಜೋಡಿಸಿದ್ದು, ಇಬ್ಬರೂ ಒಗ್ಗಟ್ಟಾಗಿ ಜಗನ್ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಿದ್ದಾರೆ.


Click it and Unblock the Notifications











