'ಗಾಡ್ಫಾದರ್' ಕಹಾನಿಯಲ್ಲಿ ಮೆಗಾ ಟ್ವಿಸ್ಟ್? ಆ ಪಾತ್ರದಲ್ಲಿ ಪವರ್ ಸ್ಟಾರ್ ಪವನ್ ಕಲ್ಯಾಣ್ ?
ಮೆಗಾಸ್ಟಾರ್ ಚಿರಂಜೀವಿ ನಟನೆಯ 'ಗಾಡ್ಫಾದರ್' ಸಿನಿಮಾ ರಿಲೀಸ್ಗೆ ಕೆಲವೇ ಗಂಟೆಗಳು ಬಾಕಿಯಿದೆ. ಇಂತಾ ಹೊತ್ತಲ್ಲೇ ಸಿನಿಮಾ ಬಗ್ಗೆ ಒಂದು ಕ್ರೇಜಿ ನ್ಯೂಸ್ ವೈರಲ್ ಆಗಿದೆ. ಚಿತ್ರದಲ್ಲಿ ಪವನ್ ಕಲ್ಯಾಣ್ ಕೂಡ ಗೆಸ್ಟ್ ಅಪಿಯರೆನ್ಸ್ ಮಾಡಿದ್ದಾರೆ ಎನ್ನಲಾಗ್ತಿದ್ದು, ಇದನ್ನು ಚಿತ್ರತಂಡ ಸೀಕ್ರೆಟ್ ಆಗಿ ಇಟ್ಟಿದೆ ಎನ್ನಲಾಗ್ತಿದೆ. ಈ ಸುದ್ದಿ ಕೇಳಿ ಮೆಗಾ ಫ್ಯಾನ್ಸ್ ಥ್ರಿಲ್ಲಾಗಿದ್ದಾರೆ.
ಮಲಯಾಳಂನ 'ಲೂಸಿಫರ್' ತೆಲುಗು ರೀಮೆಕ್ 'ಗಾಡ್ಫಾದರ್'. ಮೋಹನ್ ರಾಜಾ ನಿರ್ದೇಶನದ ಈ ಚಿತ್ರದಲ್ಲಿ ಮೋಹನ್ ಲಾಲ್ ಮಾಡಿದ್ದ ಪಾತ್ರವನ್ನು ಚಿರಂಜೀವಿ ಮಾಡಿದ್ದಾರೆ. ಪೃಥ್ವಿರಾಜ್ ಪಾತ್ರದಲ್ಲಿ ಸಲ್ಮಾನ್ ಖಾನ್ ಬಣ್ಣ ಹಚ್ಚಿದ್ದಾರೆ. ಇಬ್ಬರೂ ಮೆಗಾಸ್ಟಾರ್ಸ್ ಒಂದೇ ಸಿನಿಮಾದಲ್ಲಿ ನಟಿಸಿರೋದು ಕುತೂಹಲ ಕೆರಳಿಸಿದೆ. ಇಂತಹ ಹೊತ್ತಲ್ಲೆ ಪವರ್ ಸ್ಟಾರ್ ಕೂಡ 'ಗಾಡ್ಫಾದರ್' ಬೆನ್ನಿಗೆ ನಿಂತಿದ್ದಾರೆ ಎನ್ನುವ ಚರ್ಚೆ ನಡೀತಿದೆ. ಈ ಬಗ್ಗೆ ಚಿತ್ರತಂಡ ಅಫೀಷಿಯಲ್ ಆಗಿ ಅನೌನ್ಸ್ ಮಾಡಿಲ್ಲ. ಆದರೂ ಇಂತಾದೊಂದು ಸುದ್ದಿ ಹರಿದಾಡ್ತಿದೆ.
ಕಮಲ್ ಹಾಸನ್ ನಟನೆಯ 'ವಿಕ್ರಂ' ಚಿತ್ರದಲ್ಲಿ ಸೂರ್ಯ ನಟಿಸಿರುವ ವಿಚಾರವನ್ನು ಕೊನೆ ಕ್ಷಣದವರೆಗೂ ಚಿತ್ರತಂಡ ರಹಸ್ಯವಾಗಿ ಇಟ್ಟಿತ್ತು. ಕ್ಲೈಮ್ಯಾಕ್ಸ್ನಲ್ಲಿ ರೋಲೆಕ್ಸ್ ಆಗಿ ಕಾಲಿವುಡ್ ನಡಿಪಿನ್ ನಾಯಗನ್ ಧೂಳೆಬ್ಬಿಸಿದ್ದರು. ಇದೀಗ 'ಗಾಡ್ಫಾದರ್' ಚಿತ್ರದಲ್ಲೂ ಅಂಥದ್ದೇ ಪ್ರಯತ್ನ ನಡೆಯುತ್ತಿರುವಂತೆ ಕಾಣ್ತಿದೆ.

ಟೊವಿನೊ ಥಾಮಸ್ ಪಾತ್ರದಲ್ಲಿ ಪವನ್?
'ಲೂಸಿಫರ್' ಸಿನಿಮಾ ನೋಡಿದವರಿಗೆ ಟೊವಿನೊ ಥಾಮಸ್ ಮಾಡಿದ್ದ ಜತಿನ್ ರಾಮ್ದಾಸ್ ಪಾತ್ರ ನೆನೆಪಿರುತ್ತದೆ. ವಿದೇಶದಲ್ಲಿರುವ ಈತ ತಂದೆ ಮರಣದ ನಂತರ ತಂದೆ ಕಟ್ಟಿದ ಪಕ್ಷದ ಜವಾಬ್ದಾರಿ ವಹಿಸಿಕೊಳ್ಳಲು ತನ್ನ ಬಾವ ಹಾಕಿದ ಸ್ಕೆಚ್ನಂತೆ ಭಾರತಕ್ಕೆ ಬರ್ತಾನೆ. ಇದೇ ಪಾತ್ರವನ್ನು ಪವನ್ ಕಲ್ಯಾಣ್ ಮಾಡಿದ್ದಾರೆ ಅನ್ನಲಾಗ್ತಿದ್ದು, ಕ್ಲೈಮ್ಯಾಕ್ಸ್ನಲ್ಲಿ ನಾನು, ನಮ್ಮಣ್ಣ ಒಂದೇ ಎಂದು ಪವರ್ ಸ್ಟಾರ್ ಟ್ವಿಸ್ಟ್ ಕೊಡುವ ಸಾಧ್ಯತೆ ಇದೆ ಎನ್ನಲಾಗ್ತಿದೆ.

ಚಿರು- ಪವನ್ ಮಧ್ಯೆ ಭಿನ್ನಾಭಿಪ್ರಾಯ?
ಅಣ್ಣ ಚಿರಂಜೀವಿ ಹಾದಿಯಲ್ಲೇ ಪವನ್ ಕಲ್ಯಾಣ್ ಕೂಡ ಚಿತ್ರರಂಗಕ್ಕೆ ಬಂದರು. ಆದರೆ ತಮ್ಮದೇ ಸ್ವಂತ ಪರಿಶ್ರಮದಿಂದ ಪವರ್ ಸ್ಟಾರ್ ಆಗಿ ಗೆದ್ದರು. ಚಿರಂಜೀವಿ ಪ್ರಜಾರಾಜ್ಯಂ ಪಕ್ಷ ಕಟ್ಟಿದ್ದು, ಸೋತಿದ್ದು ಪಕ್ಷವನ್ನು ಕಾಂಗ್ರೆಸ್ ಜೊತೆ ವಿಲೀನ ಮಾಡಿದ್ದು ಎಲ್ಲವೂ ಹಳೇ ಸುದ್ದಿ. ಇದು ಪವನ್ಗೆ ಇಷ್ಟವಿರಲಿಲ್ಲ. ಚಿರು- ಪವನ್ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವ ಮಾತುಗಳು ಕೇಳಿಬರ್ತಿದೆ. ಇನ್ನು ಪವನ್ ಕಟ್ಟಿರುವ ಜನಸೇನಾ ಪಕ್ಷದಿಂದಲೂ ಚಿರು ದೂರ ಇದ್ದಾರೆ. ಅದನ್ನೆಲ್ಲಾ ಮೀರಿ ಇಬ್ಬರು 'ಗಾಡ್ಫಾದರ್' ಚಿತ್ರದಲ್ಲಿ ನಟಿಸಿದ್ದಾರಾ ಎನ್ನುವುದನ್ನು ಕಾದು ನೋಡಬೇಕಿದೆ.

ಮಲಯಾಳಂಗೂ 'ಗಾಡ್ಫಾದರ್' ಡಬ್
'ಲೂಸಿಫರ್' ಸಿನಿಮಾ ದೊಡ್ಡಮಟ್ಟದಲ್ಲಿ ಸದ್ದು ಮಾಡಿದ್ದು ಗೊತ್ತೇಯಿದೆ. ತೆಲುಗಿಗೂ ಡಬ್ ಆಗಿ ಸಿನಿಮಾ ರಿಲೀಸ್ ಆಗಿತ್ತು. ಈಗಾಗಲೇ ಎಲ್ಲರೂ ನೋಡಿರುವ ಚಿತ್ರವನ್ನು ಚಿರು ಯಾಕೆ ರೀಮೆಕ್ ಮಾಡ್ತಿದ್ದಾರೆ ಎಂದು ಕೆಲವರು ತಲೆಕೆಡಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಈ ಚಿತ್ರವನ್ನು ಮಲಯಾಳಂಗೂ ಡಬ್ ಮಾಡಿ ರಿಲೀಸ್ ಮಾಡ್ತಿರೋದು ನೋಡಿ ನಗುತ್ತಿದ್ದಾರೆ. ಆದರೆ ನಿರ್ದೇಶಕ ಮೋಹನ್ ರಾಜ ಮೂಲ ಚಿತ್ರಕ್ಕಿಂತ ಸಾಕಷ್ಟು ಬದಲಾವಣೆ ಮಾಡಿಕೊಂಡಿದ್ದು, ಸಿನಿಮಾ ಹೊಸದಾಗಿ ಎಲ್ಲರಿಗೂ ಇಷ್ಟವಾಗುತ್ತದೆ ಎಂದಿದ್ದಾರೆ.

ಈ ಬಾರಿ ಚಿರು- ಚರಣ್ಗೆ ಸಕ್ಸಸ್ ಸಿಗುತ್ತಾ?
ರಾಮ್ಚರಣ್ ನಿರ್ಮಿಸಿ ಚಿರು ಹಾಗೂ ಚರಣ್ ಇಬ್ಬರೂ ನಟಿಸಿದ್ದ 'ಆಚಾರ್ಯ' ಸಿನಿಮಾ ಅಟ್ಟರ್ ಫ್ಲಾಪ್ ಆಗಿತ್ತು. ಸೂಪರ್ ಗುಡ್ ಫಿಲ್ಮ್ಸ್ ಬ್ಯಾನರ್ ಜೊತೆ ಸೇರಿ ಚರಣ್ 'ಗಾಡ್ಫಾದರ್' ಚಿತ್ರವನ್ನು ನಿರ್ಮಿಸಿದ್ದಾರೆ. ಸಲ್ಮಾನ್ ಖಾನ್ ಕೂಡ ಚಿರು ಜೊತೆ ಕೈ ಜೋಡಿಸಿದ್ದಾರೆ. ಈ ಸಿನಿಮಾ ಸಕ್ಸಸ್ ಕಂಡು ಚಿರು ಹಾಗೂ ಚರಣ್ ಇಬ್ಬರಿಗೂ ಬ್ರೇಕ್ ಕೊಡುತ್ತಾ ಕಾದು ನೋಡಬೇಕಿದೆ. ನಾಳೆ(ಅಕ್ಟೋಬರ್ 05) ದಸರಾ ಸಂಭ್ರಮದಲ್ಲಿ ವಿಶ್ವದಾದ್ಯಂತ 'ಗಾಡ್ಫಾದರ್' ಆರ್ಭಟ ಶುರುವಾಗಲಿದೆ.


Click it and Unblock the Notifications











