ರಾಮ್ ಗೋಪಾಲ್ ವರ್ಮಾ ಕಚೇರಿಗೆ ನುಗ್ಗಿದ ಪವನ್ ಕಲ್ಯಾಣ್ ಅಭಿಮಾನಿಗಳು
ರಾಮ್ ಗೋಪಾಲ್ ವರ್ಮಾ ಮತ್ತು ಪವನ್ ಕಲ್ಯಾಣ್ ಅಭಿಮಾನಿಗಳು ನಡುವೆ ನಡೆಯುತ್ತಿದ್ದ ಸೋಷಿಯಲ್ ಮೀಡಿಯಾ ಜಗಳ ಈಗ ದೈಹಿಕ ಜಗಳದ ಮಟ್ಟಕ್ಕೆ ಇಳಿದಿದೆ.
Recommended Video
ಪವನ್ ಕಲ್ಯಾಣ್ ಬಗ್ಗೆ ಸಿನಿಮಾ ನಿರ್ಮಿಸಿರುವ ರಾಮ್ ಗೋಪಾಲ್ ವರ್ಮಾ ಅದರ ಬಿಡುಗಡೆಗೆ ತಯಾರಾಗುತ್ತಿದ್ದಾರೆ. ಈ ಸಿನಿಮಾವನ್ನು ಪ್ರಾರಂಭದಿಂದಲೂ ವಿರೋಧಿಸುತ್ತಿದ್ದ ಪವನ್ ಕಲ್ಯಾಣ್ ಅಭಿಮಾನಿಗಳು ಇಂದು ರಾಮ್ ಗೋಪಾಲ್ ವರ್ಮಾ ಕಚೇರಿಗೆ ನುಗ್ಗಿ ಗಲಾಟೆ ಮಾಡಿದ್ದಾರೆ.
ರಾಮ್ ಗೋಪಾಲ್ ವರ್ಮಾ ಅವರ ಹೈದರಾಬಾದ್ ಕಚೇರಿ ಮೇಲೆ ಸಂಜೆ ವೇಳೆ ದಾಳಿ ನಡೆದಿದ್ದು, ಪವನ್ ಕಲ್ಯಾಣ್ ಅಭಿಮಾನಿಗಳು, 'ಜನಸೈನಿಕ' ಎಂದು ಕರೆದುಕೊಂಡ ಕೆಲ ಜನರು ಗುಂಪು ದಾಳಿ ಮಾಡಿ, ಪೀಠೋಪಕರಣಗಳನ್ನು ಧ್ವಂಸ ಮಾಡಿದೆ.

ಈ ಮುಂಚೆಯೂ ಬೆದರಿಕೆ ಬಂದಿತ್ತು
ರಾಮ್ ಗೋಪಾಲ್ ವರ್ಮಾ ಕಳೆದ ಒಂದು ವರ್ಷದಿಂದಲೂ ಪವನ್ ಕಲ್ಯಾಣ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹೀಗಳೆಯುತ್ತಾ, ಕಾಲೆಳೆಯುತ್ತಾ, ವ್ಯಂಗ್ಯ ಮಾಡುತ್ತಲೇ ಬಂದಿದ್ದರು. ಆಗಲೂ ವರ್ಮಾ ಅವರಿಗೆ ಬೆದರಿಕೆ ಸಂದೇಶಗಳು, ಎಚ್ಚರಿಕೆಗಳು ಬಂದಿದ್ದವು.

ಕೆಲವು ದಿನಗಳ ಹಿಂದಷ್ಟೆ ಟ್ರೇಲರ್ ಬಿಡುಗಡೆ ಆಗಿತ್ತು
ಇದೀಗ ಪವನ್ ಕಲ್ಯಾಣ್ ಬಗ್ಗೆ 'ಪವರ್ ಸ್ಟಾರ್' ಸಿನಿಮಾವನ್ನು ವರ್ಮಾ ನಿರ್ದೇಶಿಸಿದ ಬಳಿಕ ಇದು ಹೆಚ್ಚಾಗಿತ್ತು. ಅಲ್ಲದೆ ಕೆಲ ದಿನಗಳ ಮುಂಚೆಯಷ್ಟೆ ಪವರ್ ಸ್ಟಾರ್ ಸಿನಿಮಾದ ಟ್ರೇಲರ್ ಸಹ ಬಿಡುಗಡೆ ಆಗಿತ್ತು ಅದಕ್ಕೂ ಭಾರಿ ವಿರೋಧ ಕೇಳಿಬಂದಿತ್ತು. ಈಗ ಏಕಾ-ಏಕಿ ವರ್ಮಾ ಕಚೇರಿ ಮೇಲೆ ದಾಳಿ ನಡೆದಿದೆ.

ಪೊಲೀಸ್ ದೂರು ನೀಡಿರುವ ಪವನ್
ವರ್ಮಾ ಕಚೇರಿಯ ಭದ್ರತಾ ಸಿಬ್ಬಂದಿ ಹಾಗೂ ಕಚೇರಿಯ ಒಳಗೆ ಇದ್ದ ಕೆಲವರ ಮೇಲೆ ಹಲ್ಲೆ ಆಗಿದೆ ಎನ್ನಲಾಗಿದೆ. ಕಚೇರಿಯ ಒಳಗೆ ಏನು ಹಾಗೂ ಎಷ್ಟು ಹಾನಿಯಾಗಿದೆ ಎಂಬ ಬಗ್ಗೆ ಮಾಹಿತಿ ಸ್ಪಷ್ಟವಿಲ್ಲ. ಆದರೆ ಇದರ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ವರ್ಮಾ ಹೇಳಿದ್ದಾರೆ. ಅಲ್ಲದೆ, ದಾಳಿ ಬಂದವರನ್ನು ಭದ್ರತಾ ಸಿಬ್ಬಂದಿ ಮತ್ತು ಪೊಲೀಸರು ಹೊರಗೆಳೆದು ಬಿಸಾಡಿದ್ದಾರೆ ಎಂದು ಸಹ ಹೇಳಿದ್ದಾರೆ.

'ದಾಳಿ ಮಾಡಿದವರಿಗೆ ಮುತ್ತಿಡಬೇಕು ಎನಿಸುತ್ತಿದೆ'
ಘಟನೆ ಬಗ್ಗೆ ಟ್ವೀಟ್ ಮಾಡಿರುವ ವರ್ಮಾ, ನನ್ನ ಕಚೇರಿ ಮೇಲೆ ದಾಳಿ ಆಗಿದೆ. ಆದರೆ ಈ ದಾಳಿ ಮಾಡಿದ್ದಕ್ಕೆ ಪವನ್ ಕಲ್ಯಾಣ್ ಅಭಿಮಾನಿಗಳಿಗೆ ಮುತ್ತಿಕ್ಕಬೇಕು ಎನಿಸುತ್ತಿದೆ. ಏಕೆಂದರೆ ನನ್ನ ನಿರ್ದೇಶನದ 'ಪವರ್ ಸ್ಟಾರ್' ಸಿನಿಮಾಕ್ಕೆ ಇನ್ನಷ್ಟು ಪ್ರಚಾರ ಸಿಕ್ಕಂತಾಯಿತು ಎಂದಿದ್ದಾರೆ.


Click it and Unblock the Notifications











