ನಿಮ್ಮ 'ಉದಯ ಟಿವಿ'ಯಲ್ಲಿ ಎರಡು ಹೊಚ್ಚ ಹೊಸ ಧಾರಾವಾಹಿಗಳು!
ಪ್ರಸಿದ್ಧ ಮನರಂಜನಾ ವಾಹಿನಿ ಉದಯ ಟಿವಿಯಲ್ಲಿ ಇಂದಿನಿಂದ 'ಅರಮನೆ' ಹಾಗೂ 'ಸುಂದರಿ' ಎಂಬ ಎರಡು ಹೊಸ ಧಾರಾವಾಹಿಗಳು ಪ್ರಸಾರವಾಗಲಿದೆ.
ಅರಮನೆ : ಸಂಜಯ್ ಪ್ರಧಾನ್ ಅನ್ನೋ ಸಿನಿಮಾ ನಟನ ವೈಯಕ್ತಿಕ ಬದುಕಿನ ಅವಘಡವೊಂದು ಆತನನ್ನು ಒಂಟಿಯಾಗಿಸಿದೆ. ಒಂಟಿಯಾಗಿರೋ ಅಪ್ಪನಿಗೆ ಮದುವೆ ಮಾಡಿಸಲು ಮಗಳು ಹಿತಾ ಪ್ರಯತ್ನಿಸುತ್ತಿದ್ದಾಳೆ. ಇನ್ನೊಂದೆಡೆ ದೂರ ಊರೊಂದರಲ್ಲಿರುವ ಭರತನಾಟ್ಯ ಕಲಾವಿದೆ ಯಮುನಾ, ಗಂಡನಿಂದ ದೂರವಿದ್ದು ಬದುಕುತ್ತಿದ್ದಾಳೆ.
ಎಲ್ಲಿಯೋ ಬದುಕಿರಬಹುದಾದ ಅಪ್ಪನನ್ನು ಹುಡುಕಿ, ಅಮ್ಮನ ಬದುಕನ್ನು ಸರಿಮಾಡುತ್ತೇನೆಂದುಕೊಂಡು ಮಗಳು ಸ್ಮಿತಾ ಹೊರಟಿದ್ದಾಳೆ. ಈ ಎರಡು ಹುಡುಕಾಟಗಳ ನಡುವೆ ಕಥಾ ನಾಯಕ ಆರ್. ಜೆ. ಅವಿನಾಶ್ ನ ಪ್ರೀತಿಯ ಪಯಣ...ಈ 'ಅರಮನೆ'.

ಇಂದಿನಿಂದ ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 7.30ಕ್ಕೆ 'ಅರಮನೆ' ಧಾರಾವಾಹಿ ಪ್ರಸಾರವಾಗಲಿದೆ. ಜೈ ಜಗದೀಶ್, ಸುಧಾರಾಣಿ, ಯಮುನಾ ಶ್ರೀನಿಧಿ ಮುಂತಾದ ಖ್ಯಾತ ಕಲಾವಿದರು ತಾರಾಗಣದಲ್ಲಿದ್ದಾರೆ. ಜೊತೆಗೆ ಹೊಸ ಕಲಾವಿದರುಗಳಾದ ಅಪೂರ್ವ, ಶ್ರೇಯಾ ಅಂಚನ್ ಅಭಿನಯಿಸುತ್ತಿದ್ದಾರೆ. ಜಯಶ್ರಿ ರಾಜ್ ಈ ಧಾರಾವಾಹಿಯನ್ನು ನಿರ್ಮಿಸುತ್ತಿದ್ದು, ಎಂ. ಎನ್. ಜಯಂತ್ ನಿರ್ದೇಶಿಸುತ್ತಿದ್ದಾರೆ. ಗಣೇಶ್ ಹೆಗಡೆ ಛಾಯಾಗ್ರಹಣವಿದೆ.

ಸುಂದರಿ : ಮನೆಯಿಂದ ಹೊರಗಿನ ಪ್ರಪಂಚದಲ್ಲಿ ಮಕ್ಕಳು ಹೇಗೆ ಕಳೆಯುತ್ತಾರೆ? ಅಲ್ಲಿ ಅವರ ಜೀವನ ಯಾವ ದಿಕ್ಕಿಗೆ ಹೊರಳುತ್ತದೆ ಎಂಬುದು ಈ ವಿಭಿನ್ನ ಕಥೆಯ ಹಂದರ. ಸುಂದರಿ, ನವೀನ್, ಜೀವನ್ ಕೇಂದ್ರ ಪಾತ್ರಗಳು. ಸುಂದರಿಯ ಸುಂದರ ಬದುಕಿನಲ್ಲಿ ಹುಡುಗಾಟಕ್ಕೆಂದು ಯಾರೋ ಆಡುವ ಸಣ್ಣ ಆಟ ಅವಳ ಬದುಕಿನ ದಾರಿಯನ್ನೇ ಬದಲಾಯಿಸಿ ಬಿಡುತ್ತದೆ. ಸಾಗರ ಪ್ರಾಂತ್ಯದ ಮಲೆನಾಡಿನ ಸುಂದರ ಹಿನ್ನೆಲೆಯಲ್ಲಿ ಈ ಸುಂದರ ಕಥಾನಕ ನಡೆಯಲಿದೆ.
ಇಂದಿನಿಂದ ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8.00ಗಂಟೆಗೆ ಸುಂದರಿ ಪ್ರಸಾರವಾಗಲಿದೆ. ಮಂಜುನಾಥ್ ಹೆಗಡೆ, ವಿನಯಾಪ್ರಸಾದ್, ಸಿತಾರಾ ಮುಂತಾದವರು ತಾರಾಗಣದಲ್ಲಿದ್ದಾರೆ. ಸುಂದರೇಶ್ ಈ ಧಾರಾವಾಹಿಯನ್ನು ನಿರ್ಮಿಸುತ್ತಿದ್ದರೆ, ರವಿಕಿಶೋರ್ ನಿರ್ದೇಶನದ ಜತೆಗೆ ಛಾಯಾಗ್ರಹಣದ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದಾರೆ.


Click it and Unblock the Notifications











