BBK 09: ಬಿಗ್ಬಾಸ್ ಮನೆಯಿಂದ ಮತ್ತೊಂದು ಅಚ್ಚರಿಯ ಎಲಿಮಿನೇಶನ್
ಬಿಗ್ಬಾಸ್ ಕನ್ನಡ ಸೀಸನ್ ಒಂಬತ್ತರ ಮತ್ತೊಂದು ವಾರು ಇಂದು (ನವೆಂಬರ್ 27) ಮುಗಿದಿದ್ದು ವಾಡಿಕೆಯಂತೆ ಒಬ್ಬ ಸ್ಪರ್ಧಿ ಮನೆಯಿಂದ ಹೊರಗೆ ಹೋಗಿದ್ದಾರೆ.
ಬಿಗ್ಬಾಸ್ ಮನೆಯೇ ಹಾಗೆ. ದಿನಗಳ ಕಳೆದಂತೆ ಗಟ್ಟಿ ಎನಿಸಿಕೊಂಡ, ಅಭಿಮಾನಿಗಳನ್ನು ಹೊಂದಿರುವ ಸ್ಪರ್ಧಿಗಳೇ ಮನೆ ಬಿಟ್ಟು ಹೊರಹೋಗುವ ಅನಿವಾರ್ಯತೆ ಎದುರಾಗುತ್ತದೆ. ಈ ವಾರವೂ ಸಹ ಹಾಗೆಯೇ ಆಗಿದೆ. ನಿರೀಕ್ಷೆ ಮಾಡದಿದ್ದ ಸ್ಪರ್ಧಿಯೊಬ್ಬರು ಮನೆಯಿಂದ ಹೊರಗೆ ಹೋಗಿದ್ದಾರೆ.
ವಾರದ ಪಮಚಾಯಿತಿ ಆರಂಭಿಸಿದ ಸುದೀಪ್ ತಮ್ಮ ಎಂದಿನ ಶೈಲಿಯಲ್ಲಿ ಸ್ಪರ್ಧಿಗಳನ್ನು ನಗಿಸುತ್ತಾ, ಕಾಲೆಳೆಯುತ್ತಾ, ಸರಿಯಾಗಿ ಆಡದವರನ್ನು ಗದರುತ್ತಾ, ಬುದ್ಧಿಮಾತು ಹೇಳುತ್ತಾ, ಪಂಚಾಯಿತಿಯ ಕೊನೆಯ ಘಟ್ಟವಾದ ಎಲಿಮಿನೇಶನ್ಗೆ ಬಂದರು.
ನಾಮಿನೇಟ್ ಆಗಿದ್ದ ಸ್ಪರ್ಧಿಗಳಲ್ಲಿ ಅರುಣ್ ಸಾಗರ್, ರೂಪೇಶ್ ರಾಜಣ್ಣ, ಪ್ರಶಾಂತ್ ಸಂಬರ್ಗಿ, ದೀಪಿಕಾ ದಾಸ್ ಅವರುಗಳು ಮೊದಲೇ ಸೇಫ್ ಆಗಿಬಿಟ್ಟರು. ಕೊನೆಯದಾಗಿ ದಿವ್ಯಾ ಉರುಡುಗ, ಅನುಪಮಾ ಹಾಗೂ ವಿನೋದ್ ಗೊಬ್ರಗಾಲ ನಡುವೆ ಅಂತಿಮ ಫೈಟ್ ಏರ್ಪಟ್ಟಿತು. ಕೊನೆಗೆ ಸುದೀಪ್ ಅವರು ಈ ವಾರ ಎಲಿಮಿನೇಶನ್ ಆಗುತ್ತಿರುವವರು ವಿನೋದ್ ಗೊಬ್ರಗಾಲ ಎಂದು ಘೋಷಿಸಿದರು.
ಚೆನ್ನಾಗಿಯೇ ಆಡುತ್ತಿದ್ದ ವಿನೋದ್ ಗೊಬ್ರಗಾಲ, ಬಿಗ್ಬಾಸ್ ಶೋ ಗೆಲ್ಲಬೇಕೆಂಬ ಅದಮ್ಯ ಆಸೆ ಹೊಂದಿದ್ದರು. ಈ ಬಗ್ಗೆ ಕೆಲವು ಬಾರಿ ಹೇಳಿಕೊಂಡಿದ್ದರು ಸಹ. ಆದರೆ ಬಿಗ್ಬಾಸ್ ಮನೆಯಲ್ಲಿ ಅವರ ಪಯಣ ಒಂಬತ್ತು ವಾರಕ್ಕೆ ಮುಕ್ತಾಯವಾಗಿದೆ.

ವಿನೋದ್ ಹೆಸರು ಘೋಷಣೆ ಆಗುತ್ತಿದ್ದಂತೆ, ಬೇಸರದಲ್ಲಿ ವಿನೋದ್ ಅತ್ತುಬಿಟ್ಟರು. ಅರುಣ್ ಸಾಗರ್ ಹಾಗೂ ಇನ್ನಿತರ ಸ್ಪರ್ಧಿಗಳನ್ನು ತಬ್ಬಿಕೊಂಡು ಭಾವುಕರಾದರು. ಮನೆಯ ಸದಸ್ಯರು ಸಹ ವಿನೋದ್ ಅವರನ್ನು ಕಣ್ಣೀರು ಹಾಕಿ ಕಳಿಸಿಕೊಟ್ಟರು. ಸುದೀಪ್ ಜೊತೆ ವೇದಿಕೆ ಹಂಚಿಕೊಂಡಾಗಲೂ ಸಹ ಭಾವುಕವಾದರು ವಿನೋದ್.
ನಿಮ್ಮ ಪ್ರಕಾರ ಬಿಗ್ಬಾಸ್ನ ಈ ಸೀಸನ್ನ ಟಾಪ್ ಮೂವರು ಯಾರಾಗಬಹುದು ಎಂಬ ಸುದೀಪ್ರ ಪ್ರಶ್ನೆಗೆ ರಾಕೇಶ್ ಅಡಿಗ, ಅಮೂಲ್ಯ ಗೌಡ ಹಾಗೂ ಅರುಣ್ ಸಾಗರ್ ಎಂದು ವಿನೋದ್ ಉತ್ತರಿಸಿದರು. ಮುಂದಿನ ವಾರ ಮನೆಯಿಂದ ಹೊರಗೆ ಬರಬಹುದು ಎಂಬ ಪ್ರಶ್ನೆಗೆ ದಿವ್ಯಾ ಉರುಡುಗ ಎಂದು ವಿನೋದ್ ಉತ್ತರಿಸಿದರು.


Click it and Unblock the Notifications











