500 ಸಂಚಿಕೆ ದಾಟುತ್ತಿವೆ ಉದಯ ಟಿವಿಯ ನಾಲ್ಕು ಧಾರಾವಾಹಿ!
ಧಾರಾವಾಹಿಯೊಂದು 500 ಸಂಚಿಕೆ ದಾಟುವುದು ಹೊಸದಲ್ಲವಾದರೂ ತೀರ ಸಾಮಾನ್ಯವೂ ಅಲ್ಲ. ಇದೀಗ ಉದಯ ಟಿವಿಯ ನಾಲ್ಕು ಧಾರಾವಾಹಿಗಳು ಅಲ್ಪ ದಿನಗಳ ಅಂತರದಲ್ಲಿ ಐದು ನೂರು ಎಪಿಸೋಡ್ಗಳನ್ನು ಪೂರೈಸುತ್ತಿವೆ.
'ಸುಂದರಿ', 'ನಯನತಾರಾ' ಧಾರಾವಾಹಿಗಳು ಇತ್ತೀಚೆಗಷ್ಟೇ 500 ಸಂಚಿಕೆ ದಾಟಿದ್ದರೆ, 'ನೇತ್ರಾವತಿ' ಹಾಗೂ ಗೌರಿಪುರದ ಗಯ್ಯಾಳಿಗಳು 500 ಸಂಚಿಕೆಯ ಸನಿಹದಲ್ಲಿವೆ. ಈ ನಾಲ್ಕೂ ಧಾರಾವಾಹಿಗಳು 2021 ರ ಶುರುವಿನಲ್ಲಿ ಪ್ರಸಾರ ಪ್ರಾರಂಭಿಸಿದ್ದವು. ಈಗ ಬಹುತೇಕ ಒಟ್ಟಿಗೆ ಐನೂರು ಸಂಚಿಕೆ ದಾಟುತ್ತಿವೆ. ಉದಯ ಟಿವಿಯಲ್ಲಿಯೇ ಪ್ರಸಾರವಾಗುವ 'ಸೇವಂತಿ' ಧಾರಾವಾಹಿ ಈಗಾಗಲೇ 1000 ಸಂಚಿಕೆಗಳನ್ನು ದಾಟಿರುವುದು ಗಮನಾರ್ಹ.
ಇದರ ನಡುವೆ ಉದಯ ಧಾರಾವಾಹಿಗಳಲ್ಲಿ ದೀಪಾವಳಿ ಸಡಗರ ಸಹ ಜೋರಾಗಿದೆ. ಸಂಜೆ 7 ಗಂಟೆಗೆ ಪ್ರಸಾರವಾಗುವ 'ಅಣ್ಣತಂಗಿ' ಧಾರಾವಾಹಿಯಲ್ಲಿ ತಂಗಿ ತುಳಸಿಯ ಮದುವೆ ನಂತರ ಆಕೆಯದ್ದು ಮೊದಲ ದೀಪಾವಳಿ. ಅಣ್ಣ ಶಿವಣ್ಣ, ತಂಗಿ-ಭಾವ ಇಬ್ಬರನ್ನೂ ಆಹ್ವಾನಿಸಿ ಸಂಭ್ರಮಿಸುತ್ತಾನೆ. ಕಾಣಿಕೆ ನೀಡುತ್ತಾನೆ. ಇದೇ ಕಾಣಿಕೆ ಮುಂದೆ ಊಹಿಸಲಾಗದ ಘಟನೆಗಳಿಗೆ ಕಾರಣವಾಗುತ್ತದೆ.

'ನಯನತಾರಾ' ಧಾರಾವಾಹಿಯಲ್ಲಿ ಏನಾಗಲಿದೆ?
ರಾತ್ರಿ 9:30 ಕ್ಕೆ ಪ್ರಸಾರವಾಗುವ 'ನಯನತಾರಾ' ಧಾರಾವಾಹಿಯಲ್ಲಿ ಅವ್ವೆ ಭಗವತಿಯ ಮೈಮೇಲೆ ದೇವಿಯ ಆವಾಹನೆಯಾಗಿ ನಾಯಕಿ ನಯನಾಳ ಮನೆಯಲ್ಲಿ ಅವಳ ಅತ್ತೆ ಇಂದ್ರಾಣಿ ನಡೆಸುತ್ತಿರುವ ಅಕ್ರಮಗಳ ಬಗ್ಗೆ ಕಾರಣಿಕ ನುಡಿಯುತ್ತದೆ. ಪಾದಪೂಜೆ ಮಾಡಲು ನಿರಾಕರಿಸುವ ಇಂದ್ರಾಣಿಯ ಅಹಂಕಾರ ದಮನ ಮಾಡುತ್ತಾಳೆ ಭಗವತಿ.

'ಸೇವಂತಿ' ಧಾರಾವಾಹಿಯಲ್ಲಿ ಏನಾಗುತ್ತಿದೆ?
ಇನ್ನು 'ಸೇವಂತಿ' ಧಾರಾವಾಹಿಯಲ್ಲಿ ನಾಯಕಿ ಸೇವಂತಿ, ಬದುಕಿಲ್ಲ ಎಂದು ತಿಳಿದುಕೊಂಡಿದ್ದ ತಾಯಿ ಸಿಕ್ಕಿಬಿಟ್ಟಿದ್ದಾಳೆ ಆಕೆಗೆ ಸಡಗರವೋ ಸಡಗರ. ಆದರೆ ತಾಯಿ ಶಾಂತಾ ಮಗಳನ್ನು ಗುರುತಿಸುತ್ತಿಲ್ಲ. ಬದಲಿಗೆ ದುಷ್ಟೆ ಪ್ರಿಯಾಳನ್ನು ಮಗಳು ಅಂತ ನಂಬಿಬಿಟ್ಟಿದ್ದಾಳೆ. ಈ ಸಿಕ್ಕನ್ನು ಬಿಡಿಸಿ ಪತಿ ಲಾಯರ್ ಅರ್ಜುನ್ ನೆರವಿನಿಂದ ಅಡೆತಡೆ ದಾಟಿ ತಾನೇ ನಿಜವಾದ ಮಗಳು ಎಂಬುದನ್ನು ಸಾಬೀತುಪಡಿಸುವುದು ಸೇವಂತಿ ಮುಂದಿರುವ ಸವಾಲು.

ಮನರಂಜಿಸುತ್ತಿರುವ ಧಾರಾವಾಹಿಗಳು
ಉದಯ ಟಿವಿಯ ಇನ್ನೂ ಕೆಲವು ಧಾರಾವಾಹಿಗಳು ವೀಕ್ಷಕರನ್ನು ಸೆಳೆಯುತ್ತಿವೆ. ಸಂಜೆ 6 ಗಂಟೆಗೆ 'ಗೌರಿಪುರದ ಗಯ್ಯಾಳಿಗಳು', ಸಂಜೆ 6:30 ಗೆ ಕನ್ಯಾದಾನ, ಸಂಜೆ 7 ಕ್ಕೆ ಅಣ್ಣತಂಗಿ, ರಾತ್ರಿ 7:30ಕ್ಕೆ ನೇತ್ರಾವತಿ, ರಾತ್ರಿ 8 ಕ್ಕೆ ಸುಂದರಿ, ರಾತ್ರಿ 8:30ಕ್ಕೆ ರಾಧಿಕಾ, ರಾತ್ರಿ 9 ಕ್ಕೆ ಜನನಿ, ರಾತ್ರಿ 9:30 ಕ್ಕೆ ನಯನತಾರಾ ಹಾಗೂ ರಾತ್ರಿ 10 ಗಂಟೆಗೆ ಸೇವಂತಿ ಧಾರಾವಾಹಿಗಳು ಅತಿರಂಜಿತವಲ್ಲದ ನೈಜ ನಿರೂಪಣೆಯೊಂದಿಗೆ ಜನಮನ ಗೆಲ್ಲುತ್ತಿವೆ.


Click it and Unblock the Notifications











