ಅಕ್ಕನ ಮದುವೆ ಮಾಡಬೇಕೆನ್ನುವ ಈ ಪೋರನ ಆಸೆ ಕೋಟ್ಯಧಿಪತಿಯಿಂದಲೂ ಈಡೇರಲಿಲ್ಲ
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಡೆಸಿಕೊಡುವ ಕನ್ನಡ ಕೋಟ್ಯಧಿಪತಿ 37ನೇ ಸಂಚಿಕೆ ಯಶಸ್ವಿಯಾಗಿ ಮುಗಿದೆ. ಕಳೆದ ವಾರದ ಕನ್ನಡ ಕೋಟ್ಯದಿಪತಿ ವಿಶೇಷ ಸಂಚಿಕೆ ಏರ್ಪಡಿಸಲಾಗಿತ್ತು. ಕನ್ನಡ ರಾಜ್ಯೋತ್ಸವದ ಅಂಗವಾಗಿ ಸರ್ಕಾರಿ ಶಾಲೆಯ ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ಮಕ್ಕಳಿಗೆ ವಿಶೇಷ ಅವಕಾಶ ನೀಡಲಾಗಿತ್ತು.
ದೊಡ್ಡ ದೊಡ್ಡ ಕನಸುಗಳನ್ನು ಕಟ್ಟಿಕೊಂಡು ಕಷ್ಟಪಟ್ಟು ಓದುತ್ತಿರುವ ಸರ್ಕಾರಿ ಶಾಲೆಯ ಮಕ್ಕಳು, ಕೋಟಿ ಗೆಲ್ಲುವ ಆಸೆಯನ್ನು ಹೊತ್ತು ಕನ್ನಡದ ಕೋಟ್ಯಧಿಪತಿಯಲ್ಲಿ ಭಾಗಿಯಾಗಿದ್ದರು. ಕರ್ನಾಟಕದ ಬೇರೆ ಬೇರೆ ಸ್ಥಳಗಳಿಂದ ಬಂದ ಆರು ಸರ್ಕಾರಿ ಶಾಲೆ ಮಕ್ಕಳು ಭಾಗಿಯಾಗಿದ್ದರು. ಇದರಲ್ಲಿ ಮೂರು ಮಕ್ಕಳು ಪವರ್ ಸ್ಟಾರ್ ಮುಂದೆ ಹಾಟ್ ಸೀಟಿನಲ್ಲಿ ಕೂರುವ ಅವಕಾಶ ಗಿಟ್ಟಿಸಿಕೊಂಡಿದ್ದರು.

ಈ ಆರು ಜನ ಮಕ್ಕಳಲ್ಲಿ ರಾಯಚೂರಿನಿಂದ ಬಂದಿದ್ದ ಪೋರ ರಮೇಶ್ ಹಾಟ್ ಸೀಟಿನಲ್ಲಿ ಕೂರುವ ಅವಕಾಶ ಕಳೆದುಕೊಂಡರೂ, ವೀಕ್ಷಕರ ಮನಗೆದಿದ್ದಾನೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರಮೇಶ್ ನನ್ನು ವೇದಿಕೆ ಮೇಲೆ ಕರೆದು "ಗೆದ್ದ ಹಣವನ್ನು ಏನು ಮಾಡುತ್ತೀಯಾ" ಅಂತ ಕೇಳಿದ ತಕ್ಷಣ ರಮೇಶ್ "ನನ್ನ ಅಕ್ಕಂದಿರನ್ನು ಮದುವೆ ಮಾಡುತ್ತೇನೆ, ಅಪ್ಪ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ" ಎಂದು ಹೇಳಿದ್ದಾನೆ. ಪುಟ್ಟ ಪೋರನ ಬಾಯಲ್ಲಿ ಬಂದ ಈ ಮಾತನ್ನು ಕೇಳಿ ಅಪ್ಪು ಸಹ ಸಂತಸ ಪಟ್ಟರು.

ರಮೇಶ್ ನನ್ನು ತಬ್ಬಿಕೊಂಡು ಮುದ್ದಾಡಿದರು. "ಇಲ್ಲಿ ಗೆದ್ದ ಹಣದಿಂದ ಇಷ್ಟೆಲ್ಲಾ ಮಾಡುತ್ತೀಯಾ, ಹಾಗಾದರೆ ಚೆನ್ನಾಗಿ ಆಡಬೇಕು" ಎಂದು ಧೈರ್ಯ ಹೇಳಿದರು. ಆದರೆ ರಮೇಶ್ ಗೆ ಹಾಟ್ ಸೀಟ್ ಏರುವ ಅವಕಾಶ ಲಭಿಸಿಲ್ಲ. ಕೋಟಿ ಆಟದಲ್ಲಿ ಗೆದ್ದ ಹಣದಲ್ಲಿ ಅಕ್ಕನ ಮದುವೆ ಮಾಡಬೇಕು ಎನ್ನುವ ಕನಸು ಕೂಡ ಈಡೇರಿಲ್ಲ. ಪುಟ್ಟ ಪೋರ ರಮೇಶ್ ಬಾಯಲ್ಲಿ ಇಂತಹ ಮಾತನ್ನು ಕೇಳಿ ವೀಕ್ಷಕರು ಒಮ್ಮೆ ಅಚ್ಚರಿ ಪಟ್ಟಿದ್ದಲ್ಲದೆ ರಮೇಶ್ ಮಾತಿಗೆ ಮನಸೋತಿದ್ದಾರೆ.


Click it and Unblock the Notifications











