ಎನ್ಡಿಟಿವಿಯನ್ನು ಕೈಬಿಟ್ಟ ಹಾಥ್ವೇ: ಮಾಧ್ಯಮದ ದನಿ ಅಡಗಿಸುವ ಯತ್ನ?
ಆಳುವ ಪಕ್ಷವನ್ನು ಪ್ರಶ್ನಿಸಬೇಕಾದ ಮಾಧ್ಯಮದ ಜವಾಬ್ದಾರಿಯನ್ನು ನಿರ್ವಹಿಸಿಕೊಂಡು ಬರುತ್ತಿರುವ ಎನ್ಡಿಟಿವಿ ದ್ವೇಷ ರಾಜಕಾರಣದಿಂದ ಸಂಕಷ್ಟಕ್ಕೆ ಸಿಲುಕಿದೆ. ಎನ್ಡಿಟಿವಿಯನ್ನು ಹಾಥ್ವೇ ಕೇಬಲ್ ನೆಟ್ವರ್ಕ್ ತನ್ನ ಪಾಪ್ಯುಲರ್ ಚಾನೆಲ್ ಲಿಸ್ಟ್ನಿಂದ ಕೈಬಿಟ್ಟಿದೆ.
ಎನ್ಡಿಟಿವಿಯನ್ನು ಹಾಥ್ವೇ ಕೇಬಲ್ ಕೈಬಿಟ್ಟಿರುವುದು ರಾಜಕೀಯ ದುರುದ್ದೇಶಪೂರಿತ ನಡೆ ಎನ್ನಲಾಗುತ್ತಿದ್ದು, ಎನ್ಡಿಟಿವಿ ಹಿಂದಿಯ ಹಿರಿಯ ಪತ್ರಕರ್ತ, ಸುದ್ದಿ ವಾಚಕ ಹಾಗೂ ಮ್ಯಾಗ್ಸಸೆ ಪ್ರಶಸ್ತಿ ಪುರಸ್ಕೃತ ರವೀಶ್ ಕುಮಾರ್ ಹಾಥ್ವೇ ಕೇಬಲ್ನ ಈ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಈ ಬಗ್ಗೆ ವಿಡಿಯೋ ಪ್ರಕಟಿಸಿರುವ ರವೀಶ್ ಕುಮಾರ್, ''ಬಹಳ ಕಷ್ಟಪಟ್ಟು ತಯಾರು ಮಾಡಲಾಗುವ ನಮ್ಮ ಕಾರ್ಯಕ್ರಮವನ್ನು ಜನರಿಗೆ ತಲುಪದಂತೆ ಮಾಡಲಾಗುತ್ತಿದೆ. ನಾನು ಪ್ರೈಂ ಟೈಮ್ ಕಾರ್ಯಕ್ರಮವನ್ನು ಸುಳ್ಳುಗಳನ್ನು ಸೇರಿಸಿ ಮಾಡುವುದಿಲ್ಲ. ಕಚೇರಿಗೆ ಬಂದು, ಯಾರೊ ಇಬ್ಬರನ್ನು ಎಳೆದುಕೊಂಡು ಬಂದು ಡಿಬೇಟ್ನಲ್ಲಿ ಕೂರಿಸಿ ಇಬ್ಬರ ನಡುವೆ ಜಗಳ ಮಾಡಿಸುವ ಕಾರ್ಯ ನಾನು ಮಾಡುವುದಿಲ್ಲ'' ಎಂದು ಪರೋಕ್ಷವಾಗಿ ಕೆಲವು ಮಾಧ್ಯಮಗಳಿಗೆ ಟಾಂಗ್ ನೀಡಿದ್ದಾರೆ ರವೀಶ್ ಕುಮಾರ್.
''ನಾವು ಪ್ರೈಂ ಟೈಮ್ಗಾಗಿ ಸಾಕಷ್ಟು ಶ್ರಮ ಹಾಕುತ್ತೇವೆ. ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಸಾವಿರಾರು ಪದಗಳನ್ನು ಟೈಪ್ ಮಾಡುತ್ತೇವೆ. ಖುದ್ದು ನಾನೇ ಸುದ್ದಿಗಳನ್ನು ಬರೆಯುತ್ತೇನೆ. ಸಣ್ಣ ತಂಡವುಳ್ಳ ನಾವು ಬಹಳ ಕಷ್ಟಪಟ್ಟು ಕೆಲಸ ಮಾಡುತ್ತೇವೆ'' ಎಂದಿದ್ದಾರೆ ರವೀಶ್ ಕುಮಾರ್.

ಬಿಕರಿಯಾದ ಮಾಧ್ಯಮಗಳ ಜನರ ಕನಸು ಕೊಲ್ಲುತ್ತಿವೆ: ರವೀಶ್ ಕುಮಾರ್
''ಇಷ್ಟು ಕಷ್ಟಪಟ್ಟು ನಾವು ತಯಾರಿಸಿದ ಕಾರ್ಯಕ್ರಮವನ್ನು ಜನರಿಗೆ ತಲುಪದೇ ಇರುವಂತೆ ಮಾಡಲು ಇಷ್ಟೆಲ್ಲ ಷಡ್ಯಂತ್ರ ನಡೆಸುತ್ತಿದ್ದಾರೆ. ಇದು ಒಳ್ಳೆಯದಲ್ಲ. ನಾವಂತೂ ನಮ್ಮ ಕೆಲಸವನ್ನು ಮಾಡುತ್ತಲೇ ಇರುತ್ತೇವೆ. ಈ ಸಮಯದಲ್ಲಿ ದೇಶದ ಕೆಲವು ಬಿಕರಿಯಾದ ಮಾಧ್ಯಮಗಳು ದೇಶದ ಕೋಟ್ಯಂತರ ಜನರ ಪ್ರಜಾಪ್ರಭುತ್ವದ ಕನಸುಗಳನ್ನು ಕೊಲ್ಲುತ್ತಿವೆ. ನಾವು ಇದರ ದಾಖಲೆಗಳನ್ನು ಪ್ರತಿದಿನ ಸಂಗ್ರಹಿಸುತ್ತಲೇ ಇರುತ್ತೇವೆ. ಮತ್ತು ಜನರ ಮುಂದೆ ಇಡುತ್ತಲೇ ಇರುತ್ತೇವೆ'' ಎಂದಿದ್ದಾರೆ ರವೀಶ್ ಕುಮಾರ್.

ಇತಿಹಾಸ ನಮ್ಮನ್ನು ನೆನಪಿಟ್ಟುಕೊಳ್ಳುತ್ತದೆ: ರವೀಶ್ ಕುಮಾರ್
''ಇಂದಿನ ನಮ್ಮ ಕಾರ್ಯಕ್ರಮ ನಿಮ್ಮನ್ನು ತಲುಪದೇ ಇರಬಹುದು. ಆದರೆ ಯಾರಾದರೂ ಎಂದಾದರೂ ಇತಿಹಾಸವನ್ನು ಹಿಂದೆ ತಿರುಗಿ ನೋಡಿದಾಗ ಹೇಳಿಯೇ ಹೇಳುತ್ತಾರೆ, ನಾವು ಆಗ ನೋಡಬೇಕಾಗಿದ್ದುದ್ದು ಇದೇ ಕಾರ್ಯಕ್ರಮವನ್ನೆಂದು'' ಎಂದು ಆತ್ಮವಿಶ್ವಾಸದಿಂದ ನುಡಿದಿದ್ದಾರೆ ರವೀಶ್ ಕುಮಾರ್.

ಹಾಥ್ವೇ ಅನ್ನು ಪ್ರಶ್ನೆ ಮಾಡಿರಿ: ರವೀಶ್ ಕುಮಾರ್
''ನಮ್ಮ ಶ್ರಮ ಜನರಿಗೆ ತಲುಪದೇ ಇರಲು ಬಿಡದಿರಿ. ಈಗಲೇ ನಿಮ್ಮ ಹಾಥ್ವೇ ಕೇಬಲ್ ಆಪರೇಟರ್ಗೆ ಕರೆ ಮಾಡಿ, ಹಾಥ್ವೇಗೆ ಟ್ವಿಟ್ಟರ್ ಮೂಲಕ ಪ್ರಶ್ನೆ ಮಾಡಿ, ಎನ್ಡಿಟಿವಿಯನ್ನು ಚಾನೆಲ್ಗಳ ಪಟ್ಟಿಯಲ್ಲಿ ಸೇರಿಸುವಂತೆ ಒತ್ತಾಯ ಮಾಡಿ'' ಎಂದು ರವೀಶ್ ಕುಮಾರ್ ಮನವಿ ಮಾಡಿದ್ದಾರೆ.

ಹಲವು ಬಾರಿ ಸಂಕಷ್ಟಕ್ಕೆ ಸಿಲುಕಿರುವ ಎನ್ಡಿಟಿವಿ
ಎನ್ಡಿಟಿವಿಯು ಕೇಂದ್ರ ಸರ್ಕಾರವನ್ನು ಪ್ರಶ್ನಿಸುತ್ತಾ ಬಂದಿದೆ. ಇದೇ ಕಾರಣಕ್ಕೆ ಹಲವು ಬಾರಿ ಕೇಂದ್ರ ಸರ್ಕಾರದ ಅಧೀನ ತನಿಖಾ ಸಂಸ್ಥೆಗಳಿಂದ ಸಮಸ್ಯೆಯನ್ನು ಎನ್ಡಿಟಿವಿ ಎದುರಿಸಿದೆ. 2016 ರಲ್ಲಿ ರವೀಶ್ ನೇತೃತ್ವದ ಎನ್ಡಿಟಿವಿ ಹಿಂದಿಯನ್ನು ಕೇಂದ್ರ ಸರ್ಕಾರ ಬ್ಯಾನ್ ಮಾಡಿತ್ತು. ಸುಪ್ರೀಂಕೋರ್ಟ್ಗೆ ಮೊರೆಹೋದ ಎನ್ಡಿಟಿವಿ ಅಲ್ಲಿ ಜಯಗಳಿಸಿತ್ತು. ಸಿಬಿಐ, ಜಾರಿ ನಿರ್ದೇಶನಾಲಯಗಳು ಸಹ ಎನ್ಡಿಟಿವಿ ವಿರುದ್ಧ ಪ್ರಕರಣಗಳನ್ನು ದಾಖಲಿಸಿವೆ. ಅಲ್ಲದೆ ಕೇಂದ್ರ ಸರ್ಕಾರವು ಎನ್ಡಿಟಿವಿಯನ್ನು ತನ್ನ ಜಾಹೀರಾತು ಪಟ್ಟಿಯಿಂದಲೂ ಹೊರಗಿಟ್ಟಿದೆ.

ರವೀಶ್ ಕುಮಾರ್ಗೆ ಜೀವ ಬೆದರಿಕೆ
ಪತ್ರಕರ್ತ ರವೀಶ್ ಕುಮಾರ್ ಮೇಲಂತೂ ಬಿಜೆಪಿ ಕಾರ್ಯಕರ್ತರಿಂದ ಬಹಳಷ್ಟು ದಾಳಿಗಳಾಗಿವೆ. ಸಾಮಾಜಿಕ ಜಾಲತಾಣ ಮೂಲಕ ಹಲವು ಬಾರಿ ರವೀಶ್ ಕುಮಾರ್ಗೆ ಕೊಲೆ ಬೆದರಿಕೆಗಳು ಬಂದಿದ್ದು, ಈ ಬಗ್ಗೆ ಅವರು ದೂರು ಸಹ ನೀಡಿದ್ದಾರೆ. ಬೆದರಿಕೆ ಕರೆಗಳು, ಸಂದೇಶ ಬರುತ್ತಿರುವ ಬಗ್ಗೆ ಮೋದಿಗೆ ಬಹಿರಂಗ ಪತ್ರ ಬರೆದ ರವೀಶ್ ಕುಮಾರ್ ಕೆಲವು ಕಠು ಪ್ರಶ್ನೆಗಳನ್ನು ಮೋದಿಗೆ ಕೇಳಿದ್ದರು. ಬಿಜೆಪಿ ಬೆಂಬಲಿಗರು ರವೀಶ್ ಕುಮಾರ್ಗೆ ದೇಶದ್ರೋಹಿ ಪತ್ರಕರ್ತ ಎಂಬ ಹಣೆಪಟ್ಟಿ ಕಟ್ಟಿದರು ಆದರೆ ರವೀಶ್ಕುಮಾರ್ಗೆ ಅಂತರಾಷ್ಟ್ರೀಯ ರಮೊನ್ ಮ್ಯಾಗ್ಸಸೆ ಪ್ರಶಸ್ತಿ ದಕ್ಕಿ ಅವರ ಪ್ರತಿಭೆ ವಿಶ್ವಕ್ಕೆ ತಿಳಿಯುವಂತಾಯಿತು.


Click it and Unblock the Notifications











