ರಾಜ್ ಕುಟುಂಬದಲ್ಲಿ ಹೆಣ್ಣುಮಕ್ಕಳದ್ದೇ ಕಾರುಬಾರು: ಶಿವಣ್ಣ
ಚೆನ್ನೈನಲ್ಲಿ ಹುಟ್ಟಿ, ಬೆಳೆದು, ಪದವಿಪೂರ್ವ ಶಿಕ್ಷಣ ಅಲ್ಲೇ ಮುಗಿಸಿದ ವರನಟ ಮುತ್ತುರಾಜ್ ಅವರ ಪ್ರಥಮ ಮುತ್ತು ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಶನಿವಾರ ಮತ್ತು ಭಾನುವಾರದ (ಸೆ 28) ಅತಿಥಿಯಾಗಿ ಕಾಣಿಸಿ ಕೊಂಡಿದ್ದರು.
ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ತಮ್ಮ ಅಚ್ಚುಕಟ್ಟು ನಿರೂಪಣೆಯಿಂದ ಮನೆಮಾತಾಗಿರುವ ರಮೇಶ್ ಅರವಿಂದ್ ಅವರಿಗೆ ಶಿವಣ್ಣ ಮೊದಲು ಅಭಿನಂದನೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಎಂದಿನಂತೆ ತನ್ನ ಡೌನ್ ಟು ಅರ್ಥ್ ಸರಳತೆಯಿಂದ ಮಾತನಾಡಲು ಕೂತ ಶಿವಣ್ಣ ತಮ್ಮ ಅಂದಿನ ಮತ್ತು ಇಂದಿನ ಜೀವನವನ್ನು ಎಲ್ಲೂ ಹಳಿ ತಪ್ಪದಂತೆ ಮಾತನಾಡಿಕೊಂಡು ಬಂದು ಭೇಷ್ ಅನಿಸಿಕೊಂಡರು.
ಮದುವೆಯ ಮುನ್ನ ಮತ್ತು ಮದುವೆಯ ನಂತರದ ಜೀವನದ ಬಗ್ಗೆ ಮಾತನಾಡುತ್ತಿದ್ದ ಶಿವಣ್ಣ, ಅಪ್ಪಾಜಿ ಇದ್ದಾಗಲೂ ಮತ್ತು ಈಗಲೂ ನಮ್ಮ ಕುಟುಂಬದಲ್ಲಿ ಹೆಣ್ಣುಮಕ್ಕಳದ್ದೇ ಕಾರುಬಾರು. ಅವರು ಹೇಳಿದ್ದೇ ಅಂತಿಮ, ದೂಸ್ರಾ ಮಾತೇ ಇಲ್ಲ ಎನ್ನುವ ಸತ್ಯವನ್ನು ಶಿವಣ್ಣ ಹೊರಹಾಕಿದ್ದಾರೆ. (ಜನಮನ ಸೂರೆಗೊಂಡ ವೀಕೆಂಡ್ ವಿತ್ ರಮೇಶ್)
ಅಪ್ಪಾಜಿ ಇದ್ದಾಗ ಅವರ ಸಹೋದರಿಯರು, ನಮ್ಮಮ್ಮನ ಕುಟುಂಬದವರೆಲ್ಲಾ ಜೊತೆಗಿದ್ದ ತುಂಬಿದ ಸಂಸಾರ ನಮ್ಮದಾಗಿತ್ತು. ನಾವೆಲ್ಲಾ ಸುಮಾರು 24 ಜನ ಕಸಿನ್ ಗಳು ಜೊತೆಯಾಗಿ ಇರುತ್ತಿದ್ದೆವು. ನಮ್ಮ ಮನೆಯಲ್ಲಿ ರಾಜ್ ಮಕ್ಕಳು, ನಾಗತ್ತೆಯ ಮಕ್ಕಳು, ಇನ್ನೊಬ್ಬರ ಮಕ್ಕಳು ಎನ್ನುವ ತಾರತಮ್ಯವಿರುತ್ತಿರಲಿಲ್ಲ.
ನಾವೆಲ್ಲಾ, ಹೊರಗಡೆ ಸುತ್ತಾಡಿ, ಹೊಟ್ಟೆ ತಾಳ ಹಾಕುತ್ತಿದ್ದಾಗ ಮನೆಗೆ ಬರುತ್ತಿದ್ದೆವು. ಹಾಗಾಗಿ, ಮನೆಯಲ್ಲಿ ನಡೆಯುತ್ತಿದ್ದದ್ದು ಹೆಣ್ಣುಮಕ್ಕಳದ್ದೇ ಕಾರುಬಾರು.

ನನ್ನ ಮನೆಯಲ್ಲೂ ಗೀತಾ ಹೇಳಿದ್ದೇ ಫೈನಲ್
ನನ್ನ ಮನೆಯಲ್ಲೂ ಕೂಡಾ ಗೀತಾ (ಶಿವಣ್ಣ ಪತ್ನಿ) ಹೇಳಿದ್ದೇ ಅಂತಿಮ ಮಾತು, ಮನೆಯಲ್ಲಿ ಯಾರೂ ಅದಕ್ಕೆ ವಿರೋಧವಾಗಿ ನಡೆದುಕೊಳ್ಳುವುದಿಲ್ಲ. ನಾವು ಕಲಾವಿದರು, ನಾಯಕಿಯರ ಜೊತೆ ಅಭಿನಯದ ವೇಳೆ ಕೆಲವೊಮ್ಮೆ ಗೀತಾ ನನ್ನ ಮೇಲೆ ಸಿಟ್ಟಾಗಿದ್ದೂ ಉಂಟು ಎಂದು ಶಿವಣ್ಣ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಅಪ್ಪಾಜಿ ಹೇಳಿದ್ದನ್ನು ನೆನಪಿಸಿಕೊಂಡ ಶಿವಣ್ಣ
ನಾನು ನಟನೆ ಆರಂಭಿಸಿದ ನಂತರ ಅಪ್ಪಾಜಿ ನನಗೆ ಏನೂ ಹೇಳುತ್ತಿರಲಿಲ್ಲ. ಡೈಲಾಗುಗಳನ್ನು ಸ್ವಲ್ಪ ಸ್ಪೀಡ್ ಆಗಿ ಹೇಳುತ್ತಿದ್ದೀಯಾ ಕಂದಾ, ನಿಧಾನವಾಗಿ ಹೇಳು. ಆಗ ಅದರಲ್ಲಿ ಸ್ಪಷ್ಟತೆ ಇರುತ್ತದೆ ಎಂದು ಮಾತ್ರ ಆವಾಗಾವಗ ಹೇಳುತ್ತಿದ್ದರು. ನಮ್ಮಮ್ಮನ ಬಳಿ ಶಿವು ಕಣ್ಣಲ್ಲಿ ಏನೋ ಶಕ್ತಿಯಿದೆ ಎಂದು ಹೇಳುತ್ತಿದ್ದರು. ಉಪೇಂದ್ರ ಕೂಡಾ ಈ ಮಾತನ್ನು ಒಮ್ಮೆ ಹೇಳಿದ್ದರು - ಶಿವರಾಜ್ ಕುಮಾರ್

ಶಿವಣ್ಣ ಸಹೋದರ ಸಂಬಂಧಿಗಳು ಹೇಳಿದ್ದು
ನಮ್ಮ ಬಾಲ್ಯದ ಜೀವನ ನೆನೆಸಿಕೊಂಡರೆ ಸಂತೋಷವಾಗುತ್ತದೆ. ಕಾಲೇಜಿಗೆ ಸರಕಾರೀ ಬಸ್ಸಿನಲ್ಲೇ ಶಿವು ಹೋಗುತ್ತಿದ್ದ. ಬಸ್ಸಿನಲ್ಲಿ ಸೀಟು ಖಾಲಿ ಇದ್ದರೂ ಫುಟ್ ಪಾತಿನಲ್ಲೇ ಇವನದ್ದು ಓಡಾಟ. ನೋಟ್ ಬುಕ್ಕನ್ನು ಸುಮ್ನೆ ಸುಮ್ನೆ ಬಸ್ಸಿನಲ್ಲಿ ಹುಡುಗಿಯರಿಗೆ ಕೊಡುವವನು. ಶಾಲಾ, ಕಾಲೇಜಿಗೆ ರಜೆ ಸಿಕ್ಕಿದ ಕೂಡಲೇ ನಾವೆಲ್ಲಾ ಗಾಜನೂರಿಗೆ ಹೋಗುತ್ತಿದ್ದೆವು. ದನ ಮೇಯಿಸುವುದು ಶಿವಣ್ಣನಿಗೆ ಬಹಳ ಇಷ್ಟ ಎಂದು ಶಿವಣ್ಣನ ಸಂಬಂಧಿಗಳು ಕಾರ್ಯಕ್ರಮದಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಕಮಲ್ ಹಾಸನ್ ಮನೆಗೆ ಬಂದಿದ್ದಾಗ
ಕಮಲ್ ಹಾಸನ್ ಒಂದು ಸಲ ನಮ್ಮ ಮನೆಗೆ ಬಂದಿದ್ದರು. ಅಪ್ಪಾಜಿ ಮತ್ತು ಕಮಲ್ ಸರ್ ಮಾತನಾಡುತ್ತಿದ್ದಾಗ ನಾನು ಅಲ್ಲಿಗೆ ಹೋದೆ. ಕಮಲ್ ಯಾರಿವನು ಎಂದು ಕೇಳಿದಾಗ ಅಪ್ಪಾಜಿ ನನ್ನ ಮೊದಲ ಮಗ ಎಂದರು. ನಾನು ಕಮಲ್ ಸರ್ ಬಳಿ ಒಂದು ಸರಿ ನಾನು ನಿಮ್ಮನ್ನು ತಬ್ಬಿಕೊಳ್ಳಬಹುದಾ ಎಂದು ಕೇಳಿದೆ. ಅವರನ್ನು ತಬ್ಬಿಕೊಂಡರು, ಅದಾದ ಮೇಲೆ ನಾನು ಎರಡು ದಿನ ಸ್ಥಾನ ಮಾಡರಿಲಿಲ್ಲ.

ಕಮಲ್ ಹಾಸನ್ ಈಸ್ ದಿ ಲೆಜೆಂಡ್
ಕಮಲ್ ಹಾಸನ್ ಚಿತ್ರವನ್ನು ಮೊದಲ ದಿನ ಮೊದಲ ಶೋ ನೋಡುತ್ತಿದ್ದೆ. ಅಪ್ಪಾಜಿಯವರ ಮಗ ಎಂದು influence ಮಾಡಿ ಟಿಕೆಟ್ ತೆಗೆದುಕೊಳ್ಳುತ್ತಿದ್ದೆ. ಭಾರತೀಯ ಚಿತ್ರರಂಗದಲ್ಲಿ ಕಮಲ್ ಹಾಸನ್ ನಂತಹ ನಟ ಇನ್ನೊಬ್ಬರಿಲ್ಲ. ಅವರ dedication ಗೆ ನನ್ನದೊಂದು ಸಲಾಂ. ಅಪ್ಪಾಜಿ ಮತ್ತು ಕಮಲ್ ಒಂದು ದಿನ ಎವಿಎಂ ಸ್ಟುಡಿಯೋದಲ್ಲಿ ಭೇಟಿಯಾದರು. ಇಬ್ಬರೂ ನಿಂತುಕೊಂಡೇ ಮಾತನಾಡಿದ್ದರು, ಇದು ಅಪ್ಪಾಜಿ ಮತ್ತು ಕಮಲ್ ಒಬ್ಬರೊನ್ನಬ್ಬರಿಗೆ ನೀಡುತ್ತಿದ್ದ ಗೌರವ - ಶಿವಣ್ಣ

ಗುರುದತ್ ಬಗ್ಗೆ ಹೇಳಿದ ಶಿವಣ್ಣ
ಗುರುದತ್ ಗೆ ಇಂಗ್ಲಿಷ್ ವ್ಯಾಮೋಹ ಹೆಚ್ಚು. ಅವನ ಕಾಲೇಜಿಗಿಂತ ಹೆಚ್ಚಾಗಿ ನನ್ನ ಕಾಲೇಜಿನಲ್ಲೇ ಗುರು ಇರುವವನು. ನಾವಿಬ್ಬರೂ ಒಳ್ಳೆ ಮಿಮಿಕ್ರಿ ಮಾಡುವವರು. ಗಾಜನೂರಿನಲ್ಲಿ ನಾವು ಕಳೆದ ದಿನ ತುಂಬಾ ಮಿಸ್ ಮಾಡ್ಕೋತೀವಿ - ಶಿವಣ್ಣ.


Click it and Unblock the Notifications











