"ಕೆಲಸ ನಿಲ್ಲಿಸೋಕೆ ಸಾಧ್ಯವಿಲ್ಲ.. ರಾಮೋಜಿ ಫಿಲ್ಮ್ಸಿಟಿ ಇದೆ ಎನ್ನುವ ಧೈರ್ಯ ಇದೆ": ಆರೂರು ಜಗದೀಶ್
ದೇಶದಲ್ಲಿ ಮತ್ತೆ ಕೊರೊನಾ ಭೀತಿ ಆವರಿಸಿದ್ದು, ಚೀನಾದಲ್ಲಿ ಸೋಂಕಿನ ಪ್ರಮಾಣ ಹೆಚ್ಚುತ್ತಿರುವುದು ಆತಂಕ ತಂದಿದೆ. ಈಗಾಗಲೇ ರಾಜ್ಯ ಸರ್ಕಾರ ಕೊರೊನಾ ಹರಡುವುದನ್ನು ತಡೆಯಲು ಕಠಿಣ ಕ್ರಮಗಳನ್ನು ಕೈಗೊಂಡಿದೆ. ಇನ್ನು ಚಿತ್ರರಂಗ ಹಾಗೂ ಕಿರುತೆರೆ ಉದ್ಯಮಕ್ಕೂ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ.
ಕೊರೊನಾ ಮೊದಲ 3 ಅಲೆಗಳ ಸಮಯದಲ್ಲಿ ಮನರಂಜನಾ ಕ್ಷೇತ್ರಕ್ಕೆ ಭಾರೀ ಪೆಟ್ಟು ಬಿದ್ದಿತ್ತು. ಲಾಕ್ಡೌನ್ನಿಂದ ಸಿನಿಮಾ ಚಿತ್ರೀಕರಣ, ಪ್ರದರ್ಶನಕ್ಕೆ ಸಮಸ್ಯೆ ಆಗಿತ್ತು. ಇನ್ನು ಕಿರುತೆರೆ ಕಾರ್ಯಕ್ರಮಗಳ ಚಿತ್ರೀಕರಣಕ್ಕೂ ಸಮಸ್ಯೆ ಎದುರಾಗಿ ಸಂಕಷ್ಟ ಎದುರಿಸುವಂತಾಯಿತು. ಸಿನಿಮಾ ರಿಲೀಸ್ ತಡವಾದರೂ ಕಾಯಬಹುದು. ಆದರೆ ಧಾರಾವಾಹಿಯ ಕಥೆ ಹಾಗಲ್ಲ. ಪ್ರತಿದಿನ ಎಪಿಸೋಡ್ಗಳು ಪ್ರಸಾರ ಆಗಬೇಕು. ಇಲ್ಲದಿದ್ದರೆ ವೀಕ್ಷಕರು ಮರೆತುಬಿಡುತ್ತಾರೆ. ಕಳೆದ ವರ್ಷ ಇದೇ ಕಾರಣಕ್ಕೆ ಮನರಂಜನಾ ವಾಹಿನಿಗಳು ಪರ್ಯಾಯ ಮಾರ್ಗ ಹುಡುಕಿಕೊಂಡಿದ್ದವು.
ಇದೀಗ ಮತ್ತೆ ಕೊರೊನಾ ಹಾವಳಿಯ ಭೀತಿ ಶುರುವಾಗಿರುವುದರಿಂದ ಮತ್ತೆ ಲಾಕ್ಡೌನ್ ಆಗಬಹುದಾ ? ಎನ್ನುವ ಪ್ರಶ್ನೆ ಕೂಡ ಕೆಲವರನ್ನು ಕಾಡುತ್ತಿದೆ. ಮನರಂಜನಾ ವಾಹಿನಿಗಳು ಅದಕ್ಕೆ ಸಿದ್ಧತೆ ನಡೆಸಿಕೊಳ್ಳುತ್ತಿದೆ. ಈ ಬಗ್ಗೆ ಕಿರುತೆರೆ ನಿರ್ದೇಶಕ, ನಿರ್ಮಾಪಕ ಆರೂರು ಜಗದೀಶ್ ಫಿಲ್ಮಿಬೀಟ್ ಜೊತೆ ಎಕ್ಸ್ಕ್ಲೂಸಿವ್ ಆಗಿ ಮಾತನಾಡಿದ್ದಾರೆ.

ಬ್ಯಾಂಕಿಂಗ್ ಒಂದೇ ದಾರಿ
"ಈ ಹಿಂದೆ ಕೊರೊನಾ ಲಾಕ್ಡೌನ್ ಆದಾಗ ಏನೆಲ್ಲಾ ಆಯಿತು ಗೊತ್ತೇಯಿದೆ. ಅದೇ ಅನುಭವದಿಂದ ಈ ಬಾರಿ ಒಂದಷ್ಟ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಬ್ಯಾಂಕಿಂಗ್ ಒಂದೇ ನಮಗೆ ಇರುವ ಮುಖ್ಯವಾದ ಮಾರ್ಗ. ಲಾಕ್ಡೌನ್ ಯಾವಾಗ ಆಗಬಹುದು ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಸ್ಕ್ರೀನ್ಪ್ಲೇ ಎಲ್ಲಾ ಬ್ಯಾಂಕಿಂಗ್ ಮಾಡಿಕೊಂಡರೆ ಉತ್ತಮ. ಇಲ್ಲದಿದ್ದರೆ ಸಮಸ್ಯೆ ಸಿಲುಕಿಬಿಡುತ್ತೇವೆ. ಒಂದು ವೇಳೆ ಅಗತ್ಯ ಬಿದ್ದರೆ ಕಳೆದ ಬಾರಿ ಮಾಡಿದಂತೆ ಹೈದರಾಬಾದ್ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಶೂಟಿಂಗ್ ಮಾಡುತ್ತೇವೆ"

ಹೊಸ ಧಾರಾವಹಿ ಶುರು ಮಾಡಬೇಕು
"ನಮ್ಮದು 'ಪುಟ್ಟಕ್ಕನ ಮಕ್ಕಳು', 'ಜೊತೆ ಜೊತೆಯಲಿ' ಧಾರಾವಾಹಿಗಳು ಪ್ರಸಾರ ಆಗುತ್ತಿದೆ. ಹೊಸದಾಗಿ 'ಭೂಮಿಗೆ ಬಂದ ಭಗವಂತ' ಅನ್ನೋ ಧಾರಾವಾಹಿ ಶುರು ಮಾಡುತ್ತಿದ್ದೇವೆ. ಜನವರಿ ಒಂದನೇ ತಾರೀಖಿನಿಂದ ಅದರ ಚಿತ್ರೀಕರಣ ಆರಂಭಿಸಲು ಸಿದ್ಧತೆ ನಡೀತಿದೆ. ಈಗಾಗಲೇ ವಾಹಿನಿಗಳ ಕಡೆಯಿಂದಲೂ ಎಲ್ಲದ್ದಕ್ಕೂ ಸಿದ್ಧತೆ ಮಾಡಿಕೊಳ್ಳುವಂತೆ ಹೇಳಿದ್ದಾರೆ. ಈ ಹಿಂದೆ ಯಾವ ರೀತಿ ಸಂಕಷ್ಟದಿಂದ ಪಾರಾದೆವೋ ಅದೇ ರೀತಿ ಸಿದ್ಧತೆ ನಡೆಸಿಕೊಳ್ಳುತ್ತೇವೆ"

ಕೆಲಸ ನಿಲ್ಲಿಸಲು ಸಾಧ್ಯವಿಲ್ಲ
"ಕೆಲವರು ಹೇಳುವ ಪ್ರಕಾರ ಭಾರತದಲ್ಲಿ ಈ ವೈರಸ್ ಅಷ್ಟಾಗಿ ಪರಿಣಾಮ ಬೀರಲ್ಲ ಎನ್ನುತ್ತಿದ್ದಾರೆ. ಒಮ್ರಿಕಾನ್ ಒಮ್ಮೆ ಎಲ್ಲರಿಗೂ ಬಂದು ಹೋಗಿರುವುದರಿಂದ ಇಮ್ಯುನಿಟಿ ಪವರ್ ಇದೆ ಅಂತಾರೆ. ಆದರೆ ಏನು ಆಗುತ್ತೋ ಗೊತ್ತಿಲ್ಲ. ಬಂದಮೇಲೆ ತಾನೆ ಗೊತ್ತಾಗುತ್ತದೆ. ಆದರೆ ಯಾರು ಕೂಡ ಅದಕ್ಕೆ ಭಯಪಡದೇ ಎದುರಿಸಬೇಕು. ಸೈನಿಕರ ರೀತಿ ಹೋರಾಡಬೇಕು. ಕೆಲಸ ನಿಲ್ಲಿಸಲು ಸಾಧ್ಯವಿಲ್ಲ. ಕೆಲಸ ನಿಂತರೆ ಕೊರೋನಾ ಅಲ್ಲ, ಇದೇ ನಮ್ಮನ್ನು ಕರೆದುಕೊಂಡು ಹೋಗಿಬಿಡುತ್ತೆ"

ರಾಮೋಜಿ ಫಿಲ್ಮ್ ಸಿಟಿ ಇದೆ
"ಬ್ಯಾಂಕಿಂಗ್ ಒಂದೇ ನಮಗೆ ಇರುವ ದಾರಿ. ಒಂದು ದಿನಕ್ಕೆ ಒಂದು, ಒಂದು ಕಾಲು ಎಪಿಸೋಡ್ ಚಿತ್ರೀಕರಣ ನಡೆಯುತ್ತದೆ. ವಾರದಲ್ಲಿ ಒಂದು ದಿನ ರಜೆ ಇರುತ್ತದೆ. ಆದರೆ ಬ್ಯಾಂಕಿಂಗ್ ಅಂತ ಬಂದಾಗ ರಜೆ ಬಿಟ್ಟು ಎಲ್ಲರೂ ಕೆಲಸ ಮಾಡಬೇಕಾಗುತ್ತದೆ. ಅದಕ್ಕೆ ಕಲಾವಿದರ ಸಹಕಾರವೂ ಬೇಕು. ಎಲ್ಲರೂ ಕೈಜೋಡಿಸಿದರೆ ಕೆಲಸ ನಡೆಯುವುದು. ನಮಗೆ ಕೊನೆಯದಾಗಿ ರಾಮೋಜಿ ಫಿಲ್ಮ್ ಸಿಟಿ ಇದೆ ಎನ್ನುವ ಧೈರ್ಯ ಇದೆ" ಎಂದು ಆರೂರು ಜಗದೀಶ್ ಹೇಳಿದ್ದಾರೆ.


Click it and Unblock the Notifications











