ಲಾಕ್ಡೌನ್ ಆತಂಕ: ಕನ್ನಡ ಧಾರಾವಾಹಿಗಳ ಕತೆಯೇನು?
ಕೊರೊನಾ ಪ್ರಕರಣಗಳು ರಾಜ್ಯದಂದ ಹೆಚ್ಚಳವಾಗುತ್ತಿದ್ದು, ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಹೊಸ ಮಾರ್ಗಸೂಚಿ ಹೊರಡಿಸಿ ರಾಜ್ಯದಾದ್ಯಂತ ರಾತ್ರಿ ಹಾಗೂ ವೀಕೆಂಡ್ ಕರ್ಫ್ಯೂ ವಿಧಿಸಿದೆ.
ಸರ್ಕಾರದ ಹೊಸ ಆದೇಶದಂತೆ ಚಿತ್ರಮಂದಿರಗಳು ಈಗಾಗಲೇ ಬಂದ್ ಆಗಿವೆ. ಇನ್ನು ಕೌಟುಂಬಿಕ ಮನರಂಜನೆಗೆ ಉಳಿದಿರುವ ಮಾಧ್ಯಮವೆಂದರೆ ಟಿವಿಯಲ್ಲಿ ಪ್ರಸಾರವಾಗುವ ಧಾರಾವಾಹಿಗಳು.
ಇದೀಗ ಕರ್ಫ್ಯೂ ಜಾರಿ ಮಾಡಿರುವ ಸರ್ಕಾರವು ಲಾಕ್ಡೌನ್ ಸಹ ಘೋಷಿಸುವ ಸಾಧ್ಯತೆ ಇರುವುದಾಗಿ ಊಹಾಪೋಹಗಳು ಹರಿದಾಡುತ್ತಿದ್ದು, ಒಂದೊಮ್ಮೆ ಹಾಗಾದಲ್ಲಿ ಧಾರಾವಾಹಿ ಚಿತ್ರೀಕರಣಗಳು ಸಹ ಬಂದ್ ಆಗಲಿವೆ.
ಹಾಗಾಗಿ ಕನ್ನಡದ ಕೆಲವು ಧಾರಾವಾಹಿಗಳು 'ಎಪಿಸೋಡ್ ಬ್ಯಾಂಕ್' ಮಾಡಿಕೊಳ್ಳುವತ್ತ ಗಮನ ಹರಿಸಿವೆ. ಇನ್ನು ಕೆಲವು ಧಾರಾವಾಹಿಗಳು ಹಳೆಯ ಎಪಿಸೋಡ್ಗಳನ್ನು ಪುನಃ ಪ್ರದರ್ಶನ ಮಾಡುವ ಯೋಚನೆಯಲ್ಲಿವೆ.

ನಾಗಿಣಿ 2 ನಿರ್ದೇಶಕ ಮಹೇಶ್ ರಾವ್ ಮಾತು
'ಫಿಲ್ಮೀಬೀಟ್' ಜೊತೆಗೆ ಮಾತನಾಡಿದ 'ನಾಗಿಣಿ 2' ಧಾರಾವಾಹಿ ನಿರ್ದೇಶಕ ಮಹೇಶ್ ರಾವ್. ಲಾಕ್ಡೌನ್ ಮಾಡಿ ಚಿತ್ರೀಕರಣದ ಮೇಲೆ ನಿರ್ಬಂಧ ಹೇರುವುದಿಲ್ಲ ಎಂಬ ನಂಬಿಕೆಯಲ್ಲಿ ನಾವು ಹೆಚ್ಚುವರಿ ಎಪಿಸೋಡ್ಗಳ ಚಿತ್ರೀಕರಣ ಮಾಡುತ್ತಿಲ್ಲ' ಎಂದರು.

ಕತೆಯ ಗುಣಮಟ್ಟದೊಂದಿಗೆ ರಾಜಿ ಮಾಡಿಕೊಳ್ಳಬೇಕಾಗುತ್ತದೆ: ಮಹೇಶ್ ರಾವ್
'ಚಿತ್ರೀಕರಣ ಸೆಟ್ಗಳಲ್ಲಿ ಇಂತಿಷ್ಟೆ ಜನರಿರಬೇಕೆಂಬ ನಿಯಮಗಳು ಇವೆ. ಜೊತೆಗೆ ನೈಟ್ ಕರ್ಫ್ಯೂ ಇರುವ ಕಾರಣದಿಂದಾಗಿ ತಡರಾತ್ರಿ ಚಿತ್ರೀಕರಣಗಳು ಮಾಡಲಾಗುತ್ತಿಲ್ಲ. ಜೊತೆಗೆ ವೀಕೆಂಡ್ನಲ್ಲಿ ಸಂಪೂರ್ಣ ಕರ್ಫ್ಯೂ ಸಹ ಇದೆ ಇಂಥ ಕ್ಲಿಷ್ಟಕರ ಸಮಯದಲ್ಲಿ ಹೆಚ್ಚುವರಿ ಎಪಿಸೋಡ್ಗಳ ಚಿತ್ರೀಕರಣ ಸಹ ಬಹಳ ಕಷ್ಟಕರ. ಎಪಿಸೋಡ್ ಬ್ಯಾಂಕ್ ಮಾಡುವುದರಿಂದ ಧಾರಾವಾಹಿಯ ಗುಣಮಟ್ಟದೊಂದಿಗೆ ರಾಜಿಯಾಗಬೇಕಾಗುತ್ತದೆ' ಎಂದರು ಮಹೇಶ್ ರಾವ್.

ಉತ್ತಮ ಧಾರಾವಾಹಿಗಳು ಎಪಿಸೋಡ್ ಬ್ಯಾಂಕ್ ಮಾಡಿಕೊಳ್ಳುವುದು ಕಷ್ಟ
ಉತ್ತಮ ಧಾರಾವಾಹಿಗಳು ಹೆಚ್ಚು ಎಪಿಸೋಡ್ ಬ್ಯಾಂಕ್ ಮಾಡಿಕೊಳ್ಳುವುದು ಕಷ್ಟ ಸಹ. ಎಪಿಸೋಡ್ ಚಿತ್ರೀಕರಣ ಮಾಡಲು ಹಾಗೂ ಅದರ ಪೋಸ್ಟ್ ಪ್ರೊಡಕ್ಷನ್ಗೆ ಹೆಚ್ಚು ಸಮಯ ಹಿಡಿವ ಕಾರಣ ಒಳ್ಳೆಯ ಧಾರಾವಾಹಿಗಳು ಎಪಿಸೋಡ್ ಬ್ಯಾಂಕ್ ಮಾಡಿಕೊಳ್ಳುವುದಿಲ್ಲ.

ಕಳೆದ ವರ್ಷ ಏನಾಗಿತ್ತು?
ಕಳೆದ ವರ್ಷ ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಲಾಕ್ಡೌನ್ ಆಗಿದ್ದಾಗ ಹಲವು ಧಾರಾವಾಹಿಗಳು ಎಪಿಸೋಡ್ ಬ್ಯಾಂಕ್ ಮಾಡಿಕೊಂಡಿರಲಿಲ್ಲ ಹಾಗಾಗಿ ಹಳೆಯ ಎಪಿಸೋಡ್ಗಳನ್ನು ಪುನಃ ಪ್ರದರ್ಶನ ಮಾಡಲಾಗಿತ್ತು. ಕೆಲವು ಧಾರಾವಾಹಿಗಳು ಮಾಮೂಲಿಯಾಗಿಯೇ ಹೆಚ್ಚು ಎಪಿಸೋಡ್ ಚಿತ್ರೀಕರಣ ಮಾಡಿಕೊಂಡಿದ್ದ ಕಾರಣ ತುಸು ಹೆಚ್ಚು ದಿನ ಪ್ರಸಾರ ಮಾಡಿದ್ದವು.


Click it and Unblock the Notifications











